ಶನಿವಾರ, ಮಾರ್ಚ್ 28, 2015

ಸಿಂದಗಿಯ ಮಣ್ಣೂರ ಸರ್


ಸಿಂದಗಿಯ ಮಣ್ಣೂರ ಸರ್
ನಾಕನೆತ್ತೆ ಪರೀಕ್ಷಾ ಮುಗಿಸಿ, ಬ್ಯಾಸಗಿ ಸೂಟಿಯೊಳಗ ನಾ ಮಾಡು ಧಾಂಧಲೆ ಮಾಡುದನ್ನ ತಾಳಲಾರದೆ ಅಮ್ಮ ಆಗಾಗ ನನಗ ಬೈಕೋತ ಅಂತಿದ್ಲು, “ಸಾಲಿ ಸುರು ಆಗ್ಲಿ, ಈ ಸರ್ತಿ ಐದನೆತ್ತೆಕ ಮಣ್ಣೂರ ಸರ್ ನಿನಗ ಬರೋಬರಿ ಮಾಡ್ತಾರ”   ಬಹುಶಃ ಆ ವರ್ಷ ೫ನೆತ್ತೆಕ್ಕ ಸೇರೋ ಸಿಂದಗಿಯಾಗಿನ ಮಕ್ಕಳ ಎಲ್ಲಾ ಅಮ್ಮಂದ್ರು, ತಮ್ಮ ಮಕ್ಕಳಿಗಿ ಇದೇ ಮಾತು ಹೇಳಿರ್ತಿದ್ದರು ಅಂತ ನನ್ನ ಅಂಬೋಣ.

ಊರಾಗಿನ್ನ ಮಕ್ಕಳನ್ನ ಓದ್ಸಿ, ಅವರನ್ನ ಮನುಶ್ಯಾರನ್ನ ಮಾಡೋ ಜವಾಬ್ದಾರಿ  ಆಗಿನ ಕನ್ನಡಾ ಸಾಲಿ ಮಾಸ್ತರರಿಗೆ ಇರ್ತಿತ್ತು. ಆವಾಗಿನ ವ್ಯಾಳ್ಯಾದಾಗ ನಮ್ಮ ದಾದಾ-ಅಮ್ಮನಂಗ, ಸಿಂದಗಿ ಊರಾಗಿನ ಅಪ್ಪ-ಅಮ್ಮಂದಿರಿಗೆಲ್ಲಾ ಮಕ್ಕಳು ಸಾಲಿ ಕಲ್ತು ಶ್ಯಾಣೆ ಆಗ್ಲಿಕ್ಕಿ ಇದ್ದ ಏಕೈಕ ಆಸರೆ ಅಂದ್ರ “ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ” ಯ ಮಣ್ಣೂರ ಸರ್ ಒಬ್ಬರೇ. ಅದೂ ಅಲ್ದೆ ಅಷ್ಟೊತ್ತಿಗೆ ಆಗ್ಲೇ ನಮ್ಮ ಅಣ್ಣ ಮತ್ತ ಅಕ್ಕ ಅವರ ಕೈಯಾಗ ಕಲ್ತು “ಡಾಕ್ಟರ್ ಮಕ್ಕಳು ಭಾಳ ಶ್ಯಾಣೆ ಇದ್ದಾರ ” ಅಂತ ಮಣ್ಣೂರ ಸರ್ ಕಡಿಯಿಂದ ಶಭಾಷಗಿರಿ ತೊಗೊಂಡಿದ್ದರು. ಸಿಂದಗಿ ಅಷ್ಟೇ ಅಲ್ದೆ,  ಬ್ಯಾರೆ ಊರಿಂದಲೂ ೫ನೆತ್ತೆ ಓದು ಮಕ್ಕಳು ಮಣ್ಣೂರ ಸರ್ ಕೈಯಾಗ ಕಲ್ತು ಶ್ಯಾಣ್ಯಾ ಆಗ್ಲಿಕ್ಕಿ ಬರತಿದ್ದರು.

ಮಣ್ಣೂರ ಸರ್ ತಮ್ಮ  ಘೋಷ್ ವಾಕ್ಯ “ಛಡಿ ಛಂ ಛಂ...ವಿದ್ಯಾ ಘಂ ಘಂ” ಅನ್ಕೊತ ಎಡಗೈನೊಳಗ ಹಸಿ ಜ್ಹಬರಿ (ಬಡಿಗಿ-ಬೆತ್ತ) ಆಡಿಸಿದರ ನನ್ನಂತಾ ಉಡಾಳ ಹುಡುಗರ ಚಡ್ಡಿ ಒದ್ದಿ ಆಗೋದು ಪಕ್ಕಾ ಇರ್ತಿತ್ತು. ಅವರು ಬೋರ್ಡ್ ಮ್ಯಾಲ ಬರಿಯೋ ಗಣಿತ, ಕನ್ನಡ ವ್ಯಾಕರಣ ಮತ್ತ ಇಂಗ್ಲಿಷ್ ಪದಗೋಳು ಎಲ್ಲಾ, ಹಂಗೆ-ಹಂಗೆ ಗಾಳ್ಯಾಗ ತೆಲ್ಯಾಡಕೊತ ಬಂದು ಎಲ್ಲಾ ಹುಡುಗರ ತಲಿಯೋಳಗ ಕೂಡತ್ತಿದ್ವು, ಅವು ಏನರೆ ಹುಡುಗರು ತಲ್ಯಾಗ ಕೂತಿಲ್ಲ ಅಂತ ಮಣ್ಣೂರ ಸರ್-ಗಿ ಗೊತ್ತ ಆಯಿತು  ಅಂದ್ರ ಆ ಹುಡುಗರ ಕುಂಡಿ ಮ್ಯಾಲಿನ ಚಡ್ಡಿ ಹರಿಯೋ ಹಂಗ ಬಿಗಿತಿದ್ದರು. ಹಿಂಗಾಗಿ ಅವರ ಕೈಯಾಗ ಕಲ್ತ ಹುಡುಗರಿಗೆ ಮುಂದ ಮೂವತ್ತು ವರ್ಷ ಆದ್ರೂ ಕನ್ನಡದ ವ್ಯಾಕರಣದಾಗಿನ “ಸಂಧಿ ಸಮಾಸಗಳು ”, ಗಣಿತದಾಗಿನ “ವಿಷಮ ಭಿನ್ನರಾಶಿ” ಮರ್ತಿದ್ದರ ದೇವರ ಆಣಿ ತೊಗೋರಿ.

  ಕೂಡುಸು-ಕಳಿಯೋ ಲೆಕ್ಕ ಹೇಳಿ ಕೊಡುದ್ರೋಳಗ ಅಂತೂ ಮಣ್ಣೂರ ಸರ್-ದು ಎತ್ತಿದ ಕೈ. ಹುಡುಗರಿಗೆ ಮಗ್ಗಿ ಕೇಳಲಿಕ್ಕಿ ಅವರದೇ ಆದ ಒಂದು ಶೈಲಿ ಇತ್ತ್ತು. ನೆಲದ ಮ್ಯಾಲ ಕೂತ ಹುಡುಗರ ಸಾಲಿನ ನಡುವ ಸಾವಕಾಶ ಹೆಜ್ಜಿ ಇಟಕೊತ್, ಜ್ಹಬರಿ ಗುಂಡಕ (ವೃತ್ತಾಕಾರವಾಗಿ) ತಿರಗಸಕೊತ, “ಎಷ್ಟ ಎಷ್ಟಲೆ ಅರವತ್ನಾಲ್ಕು” ಅಂತಾನೋ “ಎಷ್ಟ ಆರಲೇ ಎಪ್ಪತ್ತೆಂಟು” ಅಂತಾನೋ ಕೇಳೋರು. ಅವರ ಬಾಯಿಂದ ಬರೂ ಪ್ರಶ್ನೆ ಮುಗಿದರಲ್ಲಿಕ್ಕಿಲ್ಲ ನಾವು ಎಲ್ಲಾ ಹುಡುಗರು ಒಂದೇ ಧನಿಯೊಳಗ ಉತ್ತರ ಹೇಳಬೇಕಿತ್ತು. ಯಾವ ಹುಡುಗನ ಧ್ವನಿ ಬಂದಿಲ್ಲ ಅಂತ ಸೂಕ್ಷ್ಮವಾಗಿ ಕೆಳಸ್ಕೊತ್ತಿದ ಸರ್ ಅವನಿಗೆ ಬರೋಬ್ಬರಿ ಬಿಗಿತಿದ್ದರು. ಏಟ ತಿಂದ ಆ ಹುಡುಗ ಮುಂದ ತಪ್ಪ ಮಗ್ಗಿ ಹೇಳುವಂತಾ, ತನ್ನ ತಪ್ಪ ಜೀವನ ಪೂರ್ತಿ ಮಾಡ್ತ ಇರಲ್ಲಿಲ್ಲ.

ಸಾಲಿಗಿ ಹೋಗೋ ಹುಡುಗರಿಗಿ ಮೂವತ್ತರ ತನಕ ಮಗ್ಗಿ ಬರಲ್ಲಿಲ್ಲ ಅಂದ್ರ ಊರಾಗಿನ ಮಂದಿ, “ಏಯ್ ಮಾಸ್ತರಗ ಸಾಲಿ ಕಲಸಲ್ಲಿಕ್ಕಿ ಬರಂಗಿಲ್ಲ್ಲ” ಅಂತಿದ್ದರು.ಆದ್ರ ಮಣ್ಣೂರ ಸರ್ ಕೈಯಾಗ ಕಲ್ತ ಹುಡುಗರಿಗಿ ಮಂದಿ ಮುಂದ ಮರ್ಯಾದಿ ಇರ್ತಿತ್ತು. ಬಜಾರಕ ಸಾಮಾನ ತರಲಿಕ್ಕಿ ಹೋದ ಹುಡುಗಗ ಅಂಗಡಿಯಾಂವ ತನ್ನ ಲೆಕ್ಕಾನೂ “ಮಣ್ಣೂರ ಸರ್ ಹುಡುಗ” ಕೈಲೇ ಮಾಡಿಸ್ಕೊಂಡು, ಕೈಯಾಗ ಬೆಲ್ಲಾ ಕೊಟ್ಟು ಕಳಸ್ತಿದ್ದ.

ಇಂಥಾ ಸರ್ ಕೈಯಾಗ ೫ನೆತ್ತೆ ಓದು ಮುಂದಾಗ, ಒಂದು ಕಥಿ ನಡೀತು. ಆದ್ರ ಆ ಕಥಿ ಹೇಳೋ ಮೊದ್ಲು ಇಲ್ಲಿ ನನ್ನ ಬಗ್ಗೆ ನಿಮಗೊಂದು ವಿಷ್ಯ ಹೇಳಬೇಕು. ಆಕ್ಷರ ಓದಲಿಕ್ಕಿ ಬಂದಾಗಿಂದ ನನಗ ಸಾಲಿ ಪುಸ್ತಕ ಒಂದ ಬಿಟ್ಟು, ಕೈ ಸಿಕ್ಕದ್ದೆಲ್ಲಾ ಓದು ಚಟ ಹತ್ತಿತ್ತು, ಕಥಿ,ಕಾದಂಬರಿ, ಪ್ರಜಾಮತ, ಕಸ್ತೂರಿ, ಕರ್ಮವೀರ, ಚಂದಮಾಮ ಹಿಂಗೆ ಒಂದ- ಎರಡ?... ಎಲ್ಲಾ ಓದತಿದ್ದೆ ಮತ್ತ ಎಲ್ಲಿ ಅಂದ್ರ ಅಲ್ಲಿ ಕೂತು ಓದತಿದ್ದೆ. ಯಾರದರ ಮನ್ಯಾಗ, ಅಂಗಡಿಯಾಗ, ಇಲ್ಲಾ ನಮ್ಮ ಸಾಲಿ ಮುಂದಿನ ಬಸ್ –ಸ್ಟಾಂಡನಾಗಿರೋ ಬುಕ್ –ಸ್ಟಾಲನಾಗ, ಹೋದಲ್ಲಿ, ಬಂದಲ್ಲಿ ಎಲ್ಲಿ ಬೇಕೋ ಅಲ್ಲಿ ಓದ್ಕೋತ ಕೂಡತಿದ್ದೆ. ಇದರ ಸಲುವಾಗಿ ಅಮ್ಮನ ಕೈಲಿ, ದಾದಾನ ಕೈಲಿ ಬೇಕಾದಷ್ಟು ಏಟು ತಿಂತಿದ್ದೆ.

ಇಂಥಾ ಪ್ರಚಂಡ ಬುದ್ಧಿ ಇರೋ ನನ್ನಂತೋನಿಗಿ ಸಾಲಿಗಿ ಹೋಗೋ ಹಾದಿಯೋಳಗ ಇದ್ದ ಪುಸ್ತಕದ ಅಂಗಡಿಯಾಂವ, “ಏ ಗುರಾಜಾ..ಈ ತಿಂಗಳದ್ದು ಚಂದಾಮಾಮ ಬಂದದ ತೊಗೊಂಡು ಹೋಗು” ಅಂದ. ಬಾಲ ಹನುಮಾನ ಕೆಂಪನ ಸೂರ್ಯಾನ ಕಡೆ ಹಾರೋ ಚಿತ್ರ ಇರೋ “ಚಂದಾಮಾಮ” ಕೈಗಿ ಕೊಟ್ಟ, ನಾನು ಅದನ್ನು ಪಾಟಿ-ಚೀಲನಾಗ ಸೇರಿಸಕೊಂಡು ಓಡಿದೆ. ಸಾಲಿಗಿ ಹೋದೆ, ಪ್ರಾರ್ಥನಾ ಮುಗಿತು, ನನ್ನ ಜಾಗದಾಗ ಹೋಗಿ ಕೂತೆ. ಮಣ್ಣೂರ ಸರ್ ಬಂದ್ರು, ಕನ್ನಡ ವ್ಯಾಕರಣದ  ಅಭ್ಯಾಸ ಸುರು ಆಯಿತು. ಆದ್ರ ಚೀಲದಾಗ ಕೂತ “ಚಂದಮಾಮ” ಸುಮ್ಮನ  ಕೂಡ್ಲಿಲ್ಲ, ನನಗ ಕೈ ಮಾಡಿ ಕರಿಲಿಕ್ಕಿ ಹತ್ತಿದ. ನಾನು ಸಾವಕಾಶ ಅದನ್ನ ಹೊರಗ ತಗದು ನನ್ನ ನೋಟಬುಕ್ಕ ನಡುವ ಇಟ್ಟು ಅದರಾಗಿನ “ವೀರ ಹನುಮಾನ” ಓದ್ಲೀಕ್ಕಿ ಸುರು ಮಾಡಿದೆ. ಮುಗಿಲನಾಗ ತೇಲೋ ಹನುಮಾನ ಕಥಿ ಓದೋಕೊತ  ನಾನು ನಂದೇ ಲೋಕದಳೋಗ ಮುಳುಗಿದ್ದೆ. ಒಮ್ಮಿಂದೊಮ್ಮೆಲೆ “ಎ...ಲೇ....” ಅನ್ನೋ ಭಯಾನಕ ಆವಾಜ್ ಕಿವಿಯಿಂದ ಸಾವಕಾಶ ಹೋಗಿ ಮೆದುಳಿಗಿ ಮುಟ್ಟುದರೋಳಗ, ಮಣ್ಣೂರ ಸರ್ ಕೈಯೊಳಗಿನ ಜ್ಹಬರಿ ನನ್ನ ದೇಹದ ಹಿಂಭಾಗಿನ ಸೂಕ್ಷ ಭಾಗಗಳ ಮ್ಯಾಲೆಲ್ಲಾ ಕುಣಿದಾಡುತ್ತಿತ್ತು. ಏಟಿನಿಂದ ತಪ್ಪಸ್ಕೋಳಿಕ್ಕಿ ನಾನು ಸಾಲಿ ತುಂಬಾ ಓಡಾಡಿದೆ, ಸರಿಯಾದ ಜಾಗಗಳಿಗಿ ಹೊಡಿಲಿಕ್ಕಿ ಸರ್ ನನ್ನ ಹಿಂದಿಂದೆನೇ ಬಂದ್ರು ಮತ್ತ ಜ್ಹಬರಿ ಮುರಿಯೋತನಕ ಹೊಡದರು. ಅವತ್ತ ಮನಿಗಿ ಹೋಗೋತನ ಬಿಕ್ಕಳಿಸಿ ಅಳಕೊತ ಹೋಗಿದ್ದೆ. ಆದ್ರ ಮಣ್ಣೂರ ಸರ್ ಅವತ್ತ ಹೇಳಿಕೊಡ್ತಿದ್ದ “ವಿಭಕ್ತಿ ಪ್ರತ್ಯಯ” ಇವತ್ತಿಗೂ ಮರ್ತಿಲ್ಲ,

ಉಪಸಂಹಾರ
ಮಣ್ಣೂರ ಸರ್ ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಹುಡುಗರಿಗೆಲ್ಲಾ ಇಷ್ಟವಾದವರು. ಗೌರವರ್ಣದ, ನೆಟ್ಟಗಿನ ಮೂಗಿನ, ಹಣೆ ತುಂಬಾ ವಿಭೂತಿ, ಶುದ್ಧ ಬೆಳ್ಳಗಿನ ಧೋತರ, ನೆಹುರು ಶರ್ಟ ತೊಟ್ಟ ಮಣ್ಣೂರ ಸರ್ ನಡೆದು ಬರುತಿದ್ದರೆ ಎಂತಹವರಿಗೂ ಗೌರವ ಭಾವನೆ ಬರುತ್ತಿತ್ತು. ಶುದ್ಧ ಕನ್ನಡ ಭಾಷೆಯ ಬಳಕೆ, ಶರಣರ ಜೀವನ ಶೈಲಿ ಅವರದಾಗಿತ್ತು.

ಹುಡುಗರ ಜೊತೆ ತುಂಟತನವೂ ಇತ್ತು. ತುಂಬಾ ತೆಳ್ಳಗಿದ್ದ ನನ್ನನ್ನು “ವಿಭೂತಿ ಉಂಡಿ” (ಬೇಯಿಸಿದ ಮೊಟ್ಟೆ) ತಿಂದರೆ ದಪ್ಪಗಾಗುತ್ತಿ ಎಂದು ರೇಗಿಸುತ್ತಿದ್ದರು. ಯಾರಾದರೂ ಶಾಲೆ ತಪ್ಪಿಸಿದರೆ, ಆ ಹುಡುಗನಿಗೆ “ಹೊಡಿ ಚೈನಿ” (ಮಜಾ ಉಡಾಯಿಸು) ಎಂದು ಉಪದೇಶ ಮಾಡುತ್ತಿದ್ದರು.

 

ಸೋಮವಾರ, ಮಾರ್ಚ್ 16, 2015


बाल दिवस

कभी  हम  भी  बच्चे हुवा  करते थे,
कभी  हमारे  मन भी सच्चा हुवा करता था ॥

कभी हमको भी माँ की आँचल में छुपने की जग मिलता था,
कभी हमको भी चन्दा , मामा हुवा करता  था ॥

कभी हम  भी पेड़ पर लटके , बन्दर हुवा करते थे,
कभी हम भी कुंवे के पानी छलांग मारते  थे ॥

कभी हम भी टीचर से डर -डर  के स्कूल जाते थे ॥
कभी हमारी हाथ में भी शायी की नीला  निशान हुवा करता था ॥

कभी हम को भी बहुत सारे  दोस्त हुआ करते थे ॥
कभी  हम भी बड़े होने सपने देखा करते थे ॥

कभी  हम  भी  बच्चे हुवा  करते थे,
कभी  हमारे मन भी सच्चा हुवा करता था ॥


ಉಪಸಂಹಾರ
ಸುಮಾರು ೨೦೧೩ರ ಮಕ್ಕಳ ದಿನಾಚರಣೆ ದಿವಸ ಫೇಸ್ ಬುಕ್-ನಲ್ಲಿ ನನ್ನ ಮಿತ್ರ ಪರಮೇಶ್ವರ ನಾಯಕ ಹಾಕಿದ್ದ ಮಕ್ಕಳ ಫೋಟೋ ನೋಡಿ, ನನಗೆ ನೆನಪಾಗಿದ್ದು ಚಿಕ್ಕವರಾಗಿದ್ದಾಗ ನಾವು ಆಚರಿಸುತ್ತಿದ್ದ ದಿನಾಚರಣೆ ಮತ್ತು ಚಾಚಾನೆಹರುನ ಸ್ಮರಣೆ.

ಆ ಘಳಿಗೆಯಲ್ಲಿ ಅದ್ಯಾಕೋ ತಟ್ಟನೆ ಮನಸ್ಸಿಗೆ ಬಂದ ಸಾಲು “ಕಭಿ ಹಮ್ ಭಿ ಬಚ್ಚೆ ಹುವಾ ಕರ್ತೆ ಥೇ”, ಅದೇ ಸಾಲಿನ ಬೆನ್ನು ಹತ್ತಿ ಹೋದೆ ಈ ಕವನ ಸಿಕ್ಕಿತು. ಎಂದೂ ಹಿಂದಿಯಲ್ಲಿ ಬರೆಯದ ಓದದ ನಾನು ಈ ಸಾಲುಗಳನ್ನು ಕೆಲವೇ ನಿಮಿಷಗಳಲ್ಲಿ ಬರೆದಿದ್ದು ಹೈಸ್ಕೂಲಲ್ಲಿ ನಂಗೆ ಹಿಂದಿ ಹೇಳಿಕೊಟ್ಟ ಶ್ರೀಯುತ ಹುನಗುಂದ ಸರ್ ಆಶೀರ್ವಾದವೇ ಕಾರಣವಿರಬೇಕು ಎಂದು ನನ್ನ ಭಾವನೆ.