ಶನಿವಾರ, ಜೂನ್ 24, 2017

ಮಣ್ಣೇತ್ತಿನ ಅಮಾವಾಸ್ಯೆ

ನಾ ಈಗ ನಿಮ್ಮ ಜೊತಿ ಹಂಚೋಕೊಳುದು, ಪ್ರತಿವರ್ಷದ ವಾಡಿಕೆಯ ಬಗ್ಗೆ. ಆಯಾ ವರ್ಷದ ಮಣ್ಣೇತ್ತಿನ ಅಮವಾಸಿ ಹಿಂದಿನ ದಿನ ನಮ್ಮ ಅಮ್ಮ ಫೋನ್-ನಾಗ “ಗುರಾಜಾ ನಾಳೆ ಮಣ್ಣೇತ್ತಿನ ಅಮಾಸಿ ನೆನಪ ಅದನ ಇಲ್ಲ?” ಅಂತ ನೆನಪ ಮಾಡೋದು, ಮಾತಾಡಿ ಆದ ಮ್ಯಾಲ ಫೋನ್ ಇಟ್ಟ ನನ್ನ ಮನಸು, ನನಗ ೧೧ -೧೨ ವಯಸ್ಸಿನ ಹುಡುಗನ್ನ್ ಮಾಡಿ ಸಿಂದಗಿ ಚೌಡಮ್ಮ ಗುಡಿ ಮುಂದ ಇರೋ ಕುಂಬಾರ ಓಣಿಗೆ ಕರ್ಕೊಂಡು ಹೋಗೋದು. ಇದು ವರ್ಷದ ವಾಡಿಕಿ.
ಊರ ಬಿಟ್ಟು ೩೦ ವರ್ಷದ ಮ್ಯಾಲ್ ಆದ್ರೂನು ನಮ್ಮ ಅಮ್ಮ ನನಗ ನೆನಪು ಮಾಡೋದು ಬಿಟ್ಟಿಲ್ಲ ಮತ್ತ ನಾನು ಕೂತ ಖುರ್ಚಿಗಿ, ತಲಿ ಆನಸ್ಕೊಂಡು ಆ ನೆನಪು ಚಪ್ಪರಸುದು ಬಿಟ್ಟಿಲ್ಲ.
ಸಣ್ಣಾವ ಇದ್ದಾಗ, ಮಣ್ಣೇತ್ತಿನ ಆಮಾಸಿಗೆ ವಾರದ ಮೊದಲೇ, ದಿನಾಗ್ಲೂ ಸಾಲಿಯಿಂದ ಬಂದ ಕೂಡ್ಲೇ ಪಾಟಿ ಚೀಲ ಮೂಲ್ಯಾಗ ಒಗದು, ನಾನು, ರವಿ, ಉಮೇಶ ಪತ್ತಾರ, ಸಂಜು, ಚನ್ನು ಬ್ಯಾರೆ ಗೆಳೆಯಂದರ ಜೋಡಿ ಕುಂಬಾರ ಓಣಿ ಕಡೆ ಓಡಿದರ, ಮನಿಗಿ ಬರೋದು ದೀಪ ಹತ್ತಿದ ಮ್ಯಾಲೆ.

ನಮ್ಮ ಕಣ್ಣೆದುರಿಗೆನೇ “ಮಣ್ಣಿನ ಮುದ್ದಿ”, ಕುಂಬಾರನ ಕೈಯೊಳಗ ಹಂಗ ಹಂಗೇ ಆಕಾರ ತಾಳಕೊತ್ "ಮಣ್ಣೇತ್ತ" ಆಗೂ ಜಾದೂ ನಮಗ ಎಷ್ಟ ನೋಡಿದರೂ ತೃಪ್ತಿ ಆಗ್ತಿರಲಿಲ್ಲ. ಯಾವ ಮಣ್ಣೇತ್ತ ಎಲ್ಲಿ ತೊಗೋಬೇಕು ಅನ್ನು ಚರ್ಚಾದ ನಡುವ ಊಟಾ, ನಿದ್ದಿ ಸಾಲಿ ಎಲ್ಲಾ ಮರಿತಿತ್ತು. ಹಬ್ಬದ ದಿವಸ ಮೈಬುಬನ (ಮೈಹಿಬೂಬ್) ಜೋಡಿ ಹೋಗಿ, ಜೋಡ ಮಣ್ಣೇತ್ತ ತೊಗೊಂಡು ಬರೋ ಸಂಭ್ರಮ ಹೇಳ್-ಲಿಕ್ಕಿ ಶಬ್ದಗಳೇ ಇಲ್ಲ. ಭೀಮ ಭಟ್ಟರು ಮುಂಜಾನೆ ಪೂಜಾಕ್ಕ್ ಬರುದ್ರಾಗ, ಅಮ್ಮ ದೇವರ ಮುಂದ ಜೋಡಿ ಮಣ್ಣೇತ್ತು ಇಟ್ಟು ಅವಕ್ಕ ಅರಿಶಿಣ-ಕುಂಕುಮ ಇಟ್ಟು, ಮುಂದ ಚಂದ ರಂಗೋಲಿ ಹಾಕಿ ತಯಾರಿ ಮಾಡತಿದ್ಲು. ಭೀಮ ಭಟ್ರು ಬಂದವರೇ ಮಣ್ಣೇತ್ತು ನೋಡಿ, “ಹುಂ ಮಣ್ಣೇತ್ತು ಬಂದಾವ?" ಅನ್ಕೊತ ನನ್ನ ಕಡಿ ನೋಡಿ "ಗುರಾಜಾ, ನಿನ್ನು ಎತ್ತು ಭಾಳ ಭರ್ಜರಿ ಅವ” ಅಂತ ತಾರೀಫ್ ಮಾಡಿ ದೇವರ ಪೂಜಾ ಶುರು ಮಾಡ್ತ ಇದ್ದರು. ನಾನೋ ಆರಾಧನಾ ಭಾವದಿಂದ ಅವರು ಮಾಡೋ ಪೂಜಾ ನೋಡ್ತಾ ಇದ್ದೆ. ಘಂಟಿ ಬಾರ್ಸ್ಕೊತ್ ಮಣ್ಣೇತ್ತಿಗು ಮಂಗಳಾರತಿ ಮಾಡೋವಾಗ ಮುಖದ ಮ್ಯಾಲ್ ಹಿಗ್ಗು ಹಿರಿತಿತ್ತು. “ಹಾಂ ಪೂಜಾ ಆಯಿತು, ನೀ ಒಂದು ಎತ್ತು ತೊಗೋ ಬೇಕಾದ್ರ” ಅಂದದ್ದೇ ತಡ ಒಂದು ಎತ್ತು ತೊಗೊಂಡು, ಗೆಳೆಯಂದರ ಜೊತಿ ಆಡಲಿಕ್ಕಿ ಹೊರಗ ಹಾರಿದರ ಮುಗಿತು, ಹಿಂದ ಅಮ್ಮ “ಶಾವಿಗಿ ಪಾಯಸ ಮಾಡಿರ್ತೀನಿ ಲಗುನೇ ಬಾ” ಅನ್ನೋದು ಕಿವಿಗಿ ಬೀಳತಿರಲ್ಲಿಲ್ಲ. ಚುರುಮುರಿಲೇ ಸರ ಮಾಡಿ, ಮಣ್ಣೇತ್ತಿನ ಹಣಿಗಿ ಕುಂಕಮ ಇಟ್ಟು ಸಂಗಪ್ಪನ್ನ ಗುಡಿ ಮುಂದಿನ ಶಡಿಕಿನ (ಟಾರ್ ರೋಡ) ಮ್ಯಾಲ್ ಎತ್ತು ಇಟ್ಕೊಂಡು ಓಡೋಡಿ ಆಟ ಮುಗಿಸಿ ಮನಿಗಿ ಬರುದ್ರಾಗ ಮಧ್ಯಾನ್ಹ ಮೂರೂವರಿ ಆಗಿರ್ತ್ತಿತ್ತು. ದಾದಾನ ಕೈಲಿ ಏಟು, ಅಮ್ಮನ ಕೈಲಿ ಬೈಗಳು ತಿಂದು, ಶಾವಿಗಿ ಪಾಯಸಕ್ಕ ಕೈ ಹಾಕತಿದ್ದೆ. ಮಣ್ಣೇತ್ತಿನ ಅಮಾಸಿ ನಿಮಗ ಶುಭ ತರಲಿ. ಮನ್ಯಾಗ ಆಕಳ-ಎತ್ತು. ಕಟ್ಟು ಶಕ್ತಿ ಆ ದೇವರು ನಿಮಗ ಎಲ್ಲಾರಿಗೂ ಕೊಡಲಿ.