ಭಾನುವಾರ, ಏಪ್ರಿಲ್ 20, 2014

ಹೀಗಿದೆ ಭಟ್ಟರ (ಬಗ್ಗೆ, ನಮ್ಮ) ಉವಾಚ

ಅದು ಇಸವಿ ೨೦೦೬ ಕೊನೆ ಮತ್ತು ೦೭ ಶುರುವಾತು ಇರಬೇಕು, ಓತಪ್ರೋತವಾಗಿವಾಗಿ ಹರಿದು ಬರುತ್ತಿದ್ದ ಏಕತಾನತೆಯ ಸಿನಿಮಾಗಳ ಬೇಗೆಯಲ್ಲಿ ಬೇಯುತ್ತಿದ್ದ ಕನ್ನಡ ಸಿನಿಮಾ ಪ್ರೇಕ್ಷಕನ ಬೇಗುದಿಗೆ “ಮುಂಗಾರು ಮಳೆಯ” ಸಿಂಚನವಾಯಿತು.ಮನೆಯ ಅಂಗಳದಲ್ಲಿ ಹನಿಯುತ್ತಿದ್ದ ಮಳೆಯಲ್ಲಿ ಕುಣಿದು ಕುಪ್ಪಳಿಸುವ ಮಕ್ಕಳಂತೆ ಪ್ರೇಕ್ಷಕ ಪ್ರಭು ಸಿನೆಮಾ ನೋಡಿ ಕುಣಿದಾಡಿದ. ರಾತ್ರೋರಾತ್ರಿ ಸಿನೆಮಾಕ್ಕೆ ಸಂಭಂದಿಸಿದವರು, ಮೆಜೆಸ್ಟಿಕ್-ನಿಂದ ಹೊರಟು ನೇರ ಚಂದ್ರನಾಚೆಗಿರುವ ಲೋಕದಲ್ಲಿ ತಾರೆಗಳಾಗಿ ಮಿಂಚಲಾರಂಭಿಸಿದರು.

ಭೋರ್ಗರೆಯುವ “ಮುಂಗಾರು ಮಳೆ”ಯ ಪರಿಣಾಮ ನೋಡಿ ಯೋಗರಾಜ ಭಟ್ಟರು “...ಏನು ನಿನ್ನ ಹನಿಗಳ ಲೀಲೆ?” ಎಂದು ಗುನುಗಿದರು. ಈ ಹಾಡು ಅವರನ್ನು ಸಿನೆಮಾ-ಕವಿಯಾನ್ನಾಗಿ ಮಾಡಿದರೂ, ಅವರ ಕಾವ್ಯದ ಚಂಡೆ ಸದ್ದು, ಇನ್ನೂ ಕನ್ನಡ ಚಿತ್ರರಂಗದ ಹೊಸ್ತಿಲಾಚೆಯೇ ನಿಂತಿತ್ತು. ಮುಂದೆ ಬಂದ ಅವರ ಸಿನೆಮಾಗಳಲ್ಲಿ, ಪಾತ್ರಗಳ ಮೂಲಕ ಅವರಾಡಿಸುವ ತುಸು ಪೋಲಿತನ ಬೆರೆತ ಉಡಾಫೆಯ- ವೇದಾಂತದ ಮಾರುದ್ದನೆಯ ಮಾತುಗಳು, ಕನ್ನಡಿಗರ ಮನದಲ್ಲಿ ಚಿತ್ರ ನಿರ್ದೇಶಕ ಭಟ್ಟರಿಗೊಂದು ಬೆಚ್ಚನೆಯ ಜಾಗ ಮಾಡಿಕೊಟ್ಟವು. ಸಿಕ್ಕಾಪಟ್ಟೆ ಮಾತಾಡುವ ನಾಯಕನ ನಿರೀಕ್ಷೆಯಲ್ಲಿ ಜನ, ಭಟ್ಟರ ಸಿನಿಮಾ ನೋಡಲು ಸೇರುತಿದ್ದರು.ಇದರ ಮಧ್ಯೆ ನಿಧಾನವಾಗಿ ಏರುವ ನಶೆಯಂತೆ, ಭಟ್ಟರ ಸಿನೆಮಾದಲ್ಲಿನ ಅವರೇ ಬರೆದ ಹಾಡುಗಳು ಕೇಳುಗರ ಕಿವಿಯಲ್ಲಿ ರಿಂಗಣಿಸತೊಡಗಿದವು. ಭಟ್ಟರನ್ನ ಕುರಿತು ಅವರ ಪತ್ನಿ “ಅವರು ಕವಿಯಾಗಿಯೇ ನನಗೆ ಹೆಚ್ಚು ಇಷ್ಟ” ಎಂದದ್ದು ಕಿರು ಸುದ್ದಿಯಾಗಿ, ಪತ್ರಿಕೆಯ ಮೂಲೆಯಲ್ಲಿ ಪ್ರಕಟವಾಯಿತು.

ಪಡ್ಡೆ ಹುಡುಗರ ಆಡುವ ಮಾತುಗಳನ್ನೇ ಹಾಡುಗಳನ್ನಾಗಿಸಿವ ಭಟ್ಟರ ಕಲೆಗೆ, ಹರಿಕೃಷ್ಣರ ಪಕ್ಕವಾದ್ಯಗಳು ಸರಿಯಾಗಿಯೇ ಸಾಥ ಕೊಟ್ಟವು. “ಹಳೇ ಪಾತ್ರೆ...ಹಳೇ ಕಬ್ಬಿಣ”, “ಖಾಲಿ ಕ್ವಾಟರ್ ಹಂಗೆ ಲೈಫು”, ಅಥವಾ “ಬೋಲ್ಡು ಇರದ ಬಸ್” ..ಎನ್ನುವ ಅತಿ ಸಾಧಾರಣ, ಆದರೆ ಅತ್ಯಂತ ಜನಪ್ರಿಯ ಹಾಡುಗಳ ಮಧ್ಯೆಯೇ... “ಸೌಂದರ್ಯ ಸಮರ, ಸೋತವನೆ ಅಮರ” ಬೆರಗುಗೊಳಿಸುವಂತಹ  ಸಾಲುಗಳ ಸೃಷ್ಟಿ ನಡೆಯಿತು. “ಗಂಡ-ಹೆಂಡತಿ ಇಬ್ಬರೂ ದುಡಿದು, ಸಾಲಾ ಮಾಡಿ ಮನೆಯ ಕಟ್ಟಿ ಮಕ್ಕಳು ಎಲ್ಲಿ ಹೋದರೂ ಅಂತ ಹುಡುಕಿ, ..ಲೈಫು ಇಷ್ಟೇನೇ”  ಎಂಬ ಸಾಲುಗಳ ಮೂಲಕ ನಗರ ಜೀವನಕ್ಕೆ ಒಂದು ಚೌಕಟ್ಟು ಕಟ್ಟಿ ಕೊಟ್ರೆ, “ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲಮ್...ಹುಡುಗರ ನೋವಿಗೆ ಇಲ್ಲಾ ಮುಲಾಮು” ಎನ್ನುತ್ತಾ ಪ್ರತಿ ಭಗ್ನ ಪ್ರೇಮಿಗಳ(?) ಪ್ರತಿನಿಧಿಯಾದರು. “ನಿನ್ನ ಮೂತಿ ನೋಡಬೇಕು..ಸ್ವಲ್ಪಾ ಗಡ್ಡ ಬೋಳ್ಸ್-ಯ್ಯ” ಹುಡುಗೀರ ಬಾಯಲ್ಲಿ ಹೇಳಿಸಿ ಹುಡುಗರನ್ನ ಸಮಾಧಾನ ಮಾಡಿದ್ರು. ಪವರ್ ಸ್ಟಾರ್ ಬಾಯಲ್ಲಿ “ಹುಡುಗೀರೇ ಸ್ಟ್ರಾಂಗ್ ಗುರೂ...” ಎಂದು ಹೇಳಿಸಿ, ಮಹಿಳಾ ದಿನಾಚಾರಣೆ ಮಾಡಿದ್ರು. “ಹಳೇ ಹುಬ್ಬಳಿ ಬಸ್ಟ್ಯಾ೦ಡನಾಗ ನಿಂತಿದ್ದೆ...ಮಿರ್ಚಿ ಮಂಡಕ್ಕಿನಾ ತಿಂದು ನಾ ಚಹಾ ಕುಡಿದೆ” ಅಂತಾ ತಮ್ಮ ಹಳೇ ಪುರಾಣ ಬಿಚ್ಚಿಟ್ಟರು. ಒಂದ ಕಡೆ “ಚಿಟ್ಟೆಗೆ ಚಡ್ಡಿ ಹಾಕಿದ್ರೆ” ಹೆಂಗೆ ಅಂತ ಯೋಚನೆ ಮಾಡಿದ್ರೆ, ಇನ್ನೊಂದ ಕಡೆ “ಸೈಕಲಲ್ಲಿ ತೆಂಗಿನ ಮರ ಹತ್ಲಾ ?” ಅಂತಾ ನಮ್ಮಂತಹವರ ಹತ್ರ ಕೇಳದ್ರು. ಮೂಗ-ನತ್ತು ಆಗಿ ಹುಟ್ಟಿದ್ರೆ “ಅವಳ” ಹತ್ರಾನೆ ಇರಬಹುದಾಗಿತ್ತು ಅನ್ನೋ ಹೊಸಾ ವಿಚಾರ ಮಾಡಿದ್ರು.  “ಒಬ್ಬಳನ್ನೇ ಲವ್ ಮಾಡಿ ಚೆನ್ನಾಗಿರಿ” ಅಂತಾ ವಯಸ್ಸಿಗೆ ಬಂದ ಹುಡುಗರಿಗೆ ಆಶೀರ್ವಾದ ಮಾಡಿದ್ರೂನೂ, ಅದೇ ಉಸಿರಲ್ಲಿ “ಇನ್ನೊಬ್ಬಳ ಫೋನ್ ನಂಬರ್ ಇಟ್ಕೊಂಡಿರೀ” ಅಂತ ಕಿವೀಲಿ ಹಿತವಚನ ಹೇಳಿದ್ರು. ಒಟ್ಟಿನಲ್ಲಿ, ಹದಿಹರಿಯದ ಹುಡುಗ ಹುಡುಗಿಯರಿಗೆ ಪ್ರೀತಿ-ಪ್ರೇಮಗಳ ಹೊಸ ಹೊಸ ವಾಖ್ಯಾನ ಕೊಟ್ರು, ಅಂತಹವರನ್ನ ಮತ್ತೆ ಕನ್ನಡ ಸಿನೆಮಾ ನೋಡೋಕೆ ಕರ್ಕೊಂಡು ಬಂದ್ರು. ಪತ್ರಕರ್ತರ ಹತ್ತಿರ “ಸಿನಿಮಾ ನೋಡುವವರೆ ನಲವತ್ತರ ಕೆಳಗಿನವರು, ನಾನು ಅಂತಹವರಿಗೆ ಸಿನಿಮಾ ಮಾಡೋದು” ಅಂತ ಅಲವತ್ತುಕೊಂಡರು.

 ನಿಜ ಹೇಳಬೇಕೂಂದ್ರೆ, ಒಬ್ಬ ಸಿನಿಮಾ ನಿರ್ದೇಶಕ ಕೇವಲ ತಾನು ಬರೆದ ಹಾಡಿನಿಂದಲೇ ಬೇರೆಯವರ ಸಿನೆಮಾಗಳನ್ನೂ ಗೆಲ್ಲಿಸಿಕೊಟ್ಟ ದಾಖಲೆ ಭಟ್ಟರದಾಯಿತು. ಬೇರೆ-ಬೇರೆ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ಅನೇಕ ಕಲಾವಿದರು, ಹೆಸರಿನ ಮುಂದೆ ಅಭಿಮಾನಿಗಳು(?) ಕೊಟ್ಟ “ಸ್ಟಾರ್” ಅಂಟಿಸಿಕೊಂಡಿರುವವರು, ಪತ್ರಿಕಾಗೋಷ್ಠಿಯಲ್ಲಿ “ಭಟ್ಟರು ನಮ್ಮ ಸಿನೆಮಾಗೆ ಹಾಡು ಬರೆದಿದ್ದಾರೆ” ಎಂದು ಬಣ್ಣಿಸಿ ಸುದ್ದಿ ಹೇಳುವ ವಾತವರಣ ನಿರ್ಮಾಣವಾಯಿತು.ಎಲ್ಲಕ್ಕಿಂತಾ ಹೆಚ್ಚಾಗಿ ಸಿನಿಮಾ ಪತ್ರಕರ್ತರು ಭಟ್ಟರ ಕಾವ್ಯ ವಿಮರ್ಶೆಗೆ ತಮ್ಮ ತುಸು ಸಮಯ ಮತ್ತು ಪತ್ರಿಕೆಯ ಪುಟದಲ್ಲಿ ಒಂಚೂರು ಜಾಗ ಕೊಡತೊಡಗಿದರು. ಉತ್ಸಾಹಿ ನಿರ್ದೇಶಕರೊಬ್ಬರು ತಮ್ಮ ಹೊಸಾ ಸಿನೆಮಾಗೆ  “ಯೋಗರಾಜ” ಎಂಬ ಹೆಸರಿಟ್ಟು, ಕಳೆದು ಹೋದ ತಮ್ಮ ಯಶಸ್ಸನ್ನ ಹುಡುಕಲು ನೋಡಿದರು. ಕನ್ನಡ ಚಿತ್ರರಂಗದಲ್ಲಿ ನಡೆದ ಇದೆಲ್ಲಾ ಬೆಳವಣಿಗೆ ಭಟ್ಟರಿಗೆ ಕಿರೀಟ ಇಟ್ಟಂಗಾಯಿತು.

ಆದರೆ ಇನ್ನೊಂದು ಕಡೆ, ಪಡ್ಡೆ ಹುಡುಗರ ಮೊಬೈಲ್ ಗಳು ಸಾರ್ವಜನಿಕ ಸ್ಥಳಗಳಲ್ಲಿ , “ಎಕ್ಕ ರಾಜ ರಾಣಿ ನನ್ನ ಕೈಯೊಳಗೆ..ಹಿಡಿ ಮಣ್ಣು ನಿನ್ನ ಬಾಯೊಳಗೆ” ಎಂಬಂಥಾ ಹಾಡುಗಳು ಅರಚತೊಡಗಿದಾಗಲೋ, ಇಲ್ಲಾ, ಕೇವಲ ಇಂಗ್ಲಿಷ್-ಹಿಂದಿ ಸಿನೆಮಾಗಳನ್ನೇ ನೋಡುವ ಕನ್ನಡ FM ರೇಡಿಯೋ ಜಾಕಿ ಲಲನಾಮಣಿ  "ತನ್ನ ಇಂಗ್ಲೀಷ್ ಕನ್ನಡದಲ್ಲಿ “ಎಂಥಾ ಅಧ್ಭುತ ಹಾಡು ಗೊತ್ತಾ... ನಮ್ಮ ಭಟ್ಟರು ಬರೆದಿದ್ದು”  ಎಂದು ವರ್ಣನೆ ಮಾಡುತ್ತಾ “ಶಿವಾ ಅಂತ ಹೋಗುತಿದ್ದೆ...” ಎಂಬಂಥಾ ಹಾಡುಗಳನ್ನ ಕೇಳಿಸತೊಡಗಿದಾಗಲೋ, ಹಿರಿಯರು ಅಸಹನೆಯಿಂದ ಬೈದ ಬೈಗುಳಗಳನ್ನ ತಮ್ಮ ಎಂದಿನ ನಗುವಿನಲ್ಲಿಯೇ ಭಟ್ಟರು ಸ್ವೀಕರಿಸಿದರು, ಅದರ ಜೊತೆಯಲ್ಲಿಯೇ ಮಂಡಕ್ಕಿ ತಿನ್ನುತ್ತಾ, ಸಿಗರೇಟ್ ಹೊಗೆ ಹಾರಿಸುತ್ತಾ ತಮ್ಮ ಕಾವ್ಯ ರಚನೆ ಮುಂದುವರಿಸಿದರು,...”ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನ್ಸೋಕೆ ಹೋಗ್ಬಾರ್ದೂರಿ..” ಎಂಬ ಹೊಸ ವೇದಾಂತ ಹೇಳಿದರು.

ಒಮ್ಮೆ ಕನ್ನಡ ಚಿತ್ರರಂಗದ ಯುವ ನಿರ್ದೇಶಕರೊಬ್ಬರು ಭಟ್ಟರ ಬಳಿ ಹೋಗಿ ವಿಚಿತ್ರ ಶಬ್ದಗಳಲ್ಲಿ, ಅರ್ಥವೇ ಆಗದ ಸಾಲುಗಳನ್ನ ಬರೆದು, ಒಂದು ಹಾಡು ಸೃಷ್ಟಿ ಮಾಡಿ ಕೊಡಿ ಎಂದಾಗ, ಅವನ ಬೆನ್ನು ಚಪ್ಪರಿಸಿ ಸರಿಯಾದ ಜಾಗಕ್ಕೆ ಬಂದಿದಿಯಾ ಬಾರಯ್ಯಾ ಎಂದು ಕರೆದು ತಮ್ಮನ್ನೇ ಗೇಲಿ ಮಾಡಿಕೊಂಡು “ತಲೆ ಕೆಟ್ಟ ಭಟ್ಟ ಎಬಡಾ ತಬಡಾ” ಎಂದು ಬರೆದರಂತೆ. ಈ ಹಾಡಿನ ಪ್ರಯೋಗ ಒಂದು ರೀತಿ ಅಪರೂಪದ್ದು ಎನ್ನುವ ಅಭಿಪ್ರಾಯ ನನ್ನದು. ಬಹುಶಃ ಬೇರೆ ಭಾಷೆಯ ಸಿನೆಮಾಗಳಲ್ಲಿ ಈ ಥರದ ಪ್ರಯೋಗ ಆಗಿದೆಯೇ, ಎಂಬುದನ್ನ ನನ್ನ ಓದುಗ/ನೋಡುಗ ಮಿತ್ರರೇ ಹೇಳಬೇಕು.

ಭಟ್ಟರ ಕಾವ್ಯ ಸೃಷ್ಟಿ ಮುಂದುವರೆಯಲಿ... ಆಗಾಗಲಾದರೂ, ನಮ್ಮಂತ ಕಾವ್ಯ ಪ್ರೇಮಿಗಳಿಗೊಸ್ಕೊರ ಅಂದ್ರೆ ನಲವತ್ತರ ಮೇಲಿನವರಿಗೂ ಸಹ,  ಖಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ....” ಎನ್ನುವಂತಹ ಸಾಲುಗಳನ್ನ ಬರೆಯಲಿ ಎಂದು ಆಶಿಸುತ್ತಾ ಅವರೇ ಬರೆದು, ಓದಿದ ಒಂದು ಸಿನೆಮಾ ಕವನ ನಿಮಗಾಗಿ,

 

ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ? ಬರಿ ಪೋಲಿ ಕನಸ?
ಮಾಮೂಲಿ ಕೋತಿಯ-ತಾರುಣ್ಯ ಗೀತೆಯಲ್ಲಿ ಉತ್ತರ ಕಮ್ಮಿ ಪ್ರಶ್ನೆಯೇ ಜಾಸ್ತಿ
ದಾರೀಲಿ ಕೈಕಟ್ಟಿ ನಿಂತಿರಲೇ? ಹೃದಯಾನ ಸಂಪೂರ್ಣ ಬಿಚ್ಚಿಡಲೇ?
ಮುಂಗುರುಳ ಸ್ಪ್ರಿಂಗಲ್ಲಿ ಜೋತಾಡಲೇ? ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ?
ಆಸೆಗಳ ನೆನೆಸಿ ಕೈ ಬೆರಳು ಸವೆದಿದೆ, ಎಲ್ಲ ಹೇಳಿದರೂ ಇನ್ನೇನೋ ಉಳಿದಿದೆ
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ? ಬರಿ ಪೋಲಿ ಕನಸ?

 ಎಲ್ಲಿಯೂ ಹೋಗದ ನಿಂತ ಬಸಲ್ಲಿ ಸೀಟ-ಒಂದ ಹಿಡಿದವನು ನಾನು,
ಇಳಿ ಸಂಜೆಯಲ್ಲಿ ನನ್ನ ನಂಬರಿಗೆ ನಾನೇ ಮಾಡುವೆನು ಪೋನು
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು ಎಲ್ಲಿಗೋ ಹೋಗುವೇನು, ಏನ್ನನ್ನೋ ಕಾಯುವೆನು
ನೀ ಸಿಕ್ಕರೂ, ಸಿಗದಿದ್ದರೂ, ಎದೆ ತುಂಬಾ ಹಾಡು
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ? ಬರಿ ಪೋಲಿ ಕನಸ?

ಉಪಸಂಹಾರ

ಆಕಾಶ ಸ್ಟುಡಿಯೋನಲ್ಲಿ ನಾನು ನಿರ್ದೇಶಿಸಿದ ಚುಟುಕು ದೃಶ್ಯಗಳ ಡಬ್ಬಿಂಗ್ ಗೆ ಹೋದಾಗ ಭಟ್ಟರು ತಮ್ಮ “ಪಂಚರಂಗಿ” ಸಿನೆಮಾದ ಡಬ್ಬಿಂಗ್ ನಲ್ಲಿದ್ದರು. ಅವರ ಕೆಲಸ ಮುಗಿದ ಮೇಲೆ ನಮ್ಮ ಡಬ್ಬಿಂಗ್ ಇತ್ತು. ನಾನು, ರಾಜೇಂದ್ರ ಕಾರಂತ ಮತ್ತು ಇತರ ಸ್ನೇಹಿತರು ಕಾಯುತ್ತಿರುವಾಗ, ಆ ಸಿನೆಮಾದ ನಾಯಕ ತಾರಾ ಗತ್ತಿನ ಓರೇನೋಟಿನಲ್ಲಿ ಕೂತಿದ್ದ ನಮ್ಮಲ್ಲರನ್ನುಅಳೆದು ಮುಂದಿನ ಕೋಣೆಗೆ ಹೋದರೆ, ಆಮೇಲೆ ಬಂದ ಭಟ್ಟರು ನನ್ನನ್ನು ಮಾತಾಡಿಸಿ ನಾನು ಚಿತ್ರಿಸಿರುವ ದೃಶ್ಯಗಳ ಬಗ್ಗೆ ಕುತೂಹಲ ವ್ಯಕ್ತ ಪಡಿಸಿದರು. ಸಂಕೋಚದಿಂದ ದೂರ ನಿಂತಿದ್ದ ರಾಜೇಂದ್ರ ಕಾರಂತರನ್ನು ಪರಿಚಯ ಮಾಡಿಸಿದಾಗ, “ಅಯ್ಯೋ ನಂಗೊತ್ತು ಅಧ್ಭುತ ನಟ ಮತ್ತೆ ನಿರ್ದೇಶಕ..” ಎಂದೆಲ್ಲಾ  ಸೌಹಾರ್ದದ ಮಾತಾಡಿ, ಮತ್ತೆ ಎಂದಿನ ಶೈಲಿಯಲ್ಲಿ ಸಿಗರೇಟ್ ಅಂಟಿಸಿಕೊಂಡು ಹೊರಟು ಹೋದರು.
ಅಂದಂಗೆ, ರಾಜೇಂದ್ರ ಕಾರಂತ ಮತ್ತು ನಾನು, ಅಚಾನಕ್ ಆಗಬಹುದಾದ ಭಟ್ಟರ ಆ ಇನ್ನೊಂದು ಭೇಟಿಗೆ ಕಾಯುತ್ತಿದ್ದೇವೆ.

4 ಕಾಮೆಂಟ್‌ಗಳು:

arunkumar ಹೇಳಿದರು...

supar lekana sir

ಬೋಜನಾಥ್ ಹೇಳಿದರು...

ಚಹಾ ಚೂಡಾ.....ತುಂಬಾ ಮಜಭೂತ್ ಆಗಿದೆ ಇಂತೆಯೇ ಇನ್ನಷ್ಟು ವಿಚಾರಧಾರೆಯ ವಿನಿಮಯವಾಗಲಿ ಎಂದು ಆಸೆಯ..

ಬೋಜನಾಥ್ ಹೇಳಿದರು...

ಚಹಾ ಚೂಡಾ.....ತುಂಬಾ ಮಜಭೂತ್ ಆಗಿದೆ ಇಂತೆಯೇ ಇನ್ನಷ್ಟು ವಿಚಾರಧಾರೆಯ ವಿನಿಮಯವಾಗಲಿ ಎಂದು ಆಸೆಯ..

ಗುರುರಾಜ ಕುಲಕರ್ಣಿ(ನಾಡಗೌಡ) ಹೇಳಿದರು...

Thank you; Than you; :-)