ಸೋಮವಾರ, ಜುಲೈ 24, 2017

ಶ್ರೀಮತಿ ಕಿಶೋರಿ ಅಮೋಣಕರ


ಎಪ್ರಿಲ್ ೪ 
ಬೆಂಗಳೂರು

ನಮ್ಮ ದಾದಾ (ತಂದೆ), ರೇಡಿಯೋದಲ್ಲಿ ಬರುವ ಹಿಂದುಸ್ತಾನಿ ಗಾಯನಕ್ಕೆ ತಲೆದೂಗುತ್ತಾ ನಮ್ಮನ್ನೂ(ಅಕ್ಕ,ಅಣ್ಣ) ಅಲೆಯಾಗಿ ಬರುತ್ತಿರುವ ಧ್ವನಿಯನ್ನು ಕೇಳಲೂ ಹೇಳುತ್ತಿದ್ದಾಗ, ಒಲ್ಲದ ಮನಸಿಂದಲೇ ರೇಡಿಯೋ ಮುಂದೆ ಕೂಡುತ್ತಿದ್ದೆವು. 

ಆದರೆ ನಮ್ಮ ಕಣ್ಣು ಗಡಿಯಾರದ ಕಡೆ ಆಗಾಗ ನೋಡುತ್ತಿತ್ತು. ತಂದೆಯವರ ರೇಡಿಯೋ ಕೇಳುವ ಸಮಯ ಮುಗಿದ ತಕ್ಷಣ, ನಾವು ಮುಂದಿನ ಕಾರ್ಯಕ್ರಮವಾಗಿರುತ್ತಿದ್ದ “ನಿಮ್ಮ ಮೆಚ್ಚಿನ ಕನ್ನಡ ಚಿತ್ರಗೀತೆಗಳು” ಕೇಳಲು ಉತ್ಸುಕರಾಗಿರುತ್ತಿದ್ದೆವು. 

ರೇಡಿಯೋದಲ್ಲಿ ಚಿತ್ರಗೀತೆಗಳ ಮೊದಲು ಬರುತ್ತಿದ್ದ ಹಿಂದುಸ್ತಾನಿ ಗಾಯನದ ಸಂಗೀತ ದಿಗ್ಗಜರಾದ ಶ್ರೀ ಭೀಮಸೇನ ಜೋಷಿ, ಶ್ರೀಮತಿ ಗಂಗೂಬಾಯಿ ಹಾನಗಲ್ಲ, ಶ್ರೀ ಮಲ್ಲಿಕಾರ್ಜುನ ಮನ್ಸೂರ್, ಶ್ರೀ ಕುಮಾರ ಗಂಧರ್ವ ಅವರ ಗಾಯನದ ಜೊತೆ ಆಗಾಗ ಶ್ರೀಮತಿ ಪರ್ವಿನ್ ಸುಲ್ತಾನ್, ಶ್ರೀಮತಿ ಪ್ರಭಾ ಅತ್ರೆ ಮತ್ತು ಶ್ರೀಮತಿ ಕಿಶೋರಿ ಅಮೋಣಕರ, ಶ್ರೀಮತಿ ಎಂ ರಾಜಮ್ಮರವರ ಹೆಸರುಗಳೂ ಕೇಳಿ ಬರುತ್ತಿದ್ದವು. ಗಾಯನವನ್ನು ಕೇಳುವಾಗ ನಮ್ಮ ತಂದೆ ಅವತ್ತಿನ ರಾಗದ ಪರಿಚಯ ಮಾಡಿ ಕೊಡುತ್ತಿದ್ದರು. ಅದಕ್ಕೆ ಸಂಭಂದಿಸಿದ ಕಲಾವಿದರ ಬಗ್ಗೆ ಹೇಳುತ್ತಿದ್ದರು. ತಬಲಾದ ತಾಳದ ಬಗ್ಗೆ ನಮ್ಮ ಗಮನ ಸೆಳೆಯುತ್ತಿದ್ದರು. ಒಟ್ಟಾರೆ ನಮಗೆ ಸಂಗೀತವನ್ನು ಆಸ್ವಾದಿಸುವ ಮನಸನ್ನು ಹದಗೊಳಿಸುತ್ತಿದ್ದರು. ಆ ಸಮಯದಲ್ಲಿ ನನಗೆ ಕಿಶೋರಿ ಅಮೋಣಕರ ಅವರ ಅಭಂಗ ಇಷ್ಟವಾಗುತ್ತಿತ್ತು. 

ನಿನ್ನೆ ಶ್ರೀಮತಿ ಅಮೋಣಕರ  ತಮ್ಮ ಸಂಗೀತದ ಅಪಾರವಾದ ಗಾಯನ ಮುದ್ರಿಕೆಗಳನ್ನು ಕೇಳಲು ಮುಂದಿನ ಪೀಳಿಗೆಗೆ ಬಿಟ್ಟು, ಸಂಗೀತ ಸರಸತಿ ಸೇವೆಗೆ ಹೊರಟು ನಿಂತಾಗ, ಅವರಿಗೆ ೮೪ ರ ಹರಯ. ಅವರು ಹಾಡಿದ ಒಂದು ಅಭಂಗ ಇಲ್ಲಿದೆ. 

ಅಂದ ಹಾಗೆ, ಅವರ ಕೇಶ ಶೈಲಿಯೂ ಚಿಕ್ಕ ವಯಸ್ಸಿನಲ್ಲಿ ನನಗೆ ಒಂದು ಕೌತಕದ ವಿಷಯವಾಗಿತ್ತು.

ಸೋಮವಾರ, ಜುಲೈ 10, 2017

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು


ಮತ್ತ ಇನ್ನೊಮ್ಮ ಭೆಟ್ಟಿಯಾಗುಣು

ಜುಲೈ ೭ ೨೦೧೭

 

ಆಡ್ಕೊತ್, ಹಾಡ್ಕೋತ, ಮಾತಾಡ್ಕೊತ್

ಇಷ್ಟೊತ್ತು ರಸ್ತಾ ಕಳದಿದ್ದು ಗೊತ್ತ ಆಗ್ಲಿಲ್ಲ, ನೋಡು;

ಇನ್ನ, ನಾ ನನ್ನ ಹಾದಿ ಹಿಡೀತೀನಿ,

ನೀ ನಿನ್ನ ದಾರಿ ಹಿಡಿಯುವಂತಿ

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;

ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ;

 

ಸಧ್ಯಕ್ಕ, ಸತರಂಗಿ ಬಿಲ್ಲ ಹಿಡಿಲಿಕ್ಕಿ ಹೋಂಟೀನಿ

ಹಾರೂ ಕುದರಿ ಕಟ್ಟಲಿಕ್ಕಿ ಹೋಂಟೀನಿ

ಕಂಡ ಕನಸಿನ ಹಿಂದ ಹಿಂದ ಹೋಂಟೀನಿ

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;

ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ;

 

ಮುಂಜಾನೆ ದರ್ಶನಿಯೊಳಗ ಇಡ್ಲಿ ತಿನ್ನುವಾಗ,

ಮಧ್ಯಾನ್ಹದ ಟ್ರಾಫಿಕ್ ಜಂಕ್ಷನ್ -ನಾಗ,

ಸಂಜಿ ಹೊತ್ತ, ದೇವರಗುಡಿ ಮುಂದ ಚಪ್ಪಲಿ ಬಿಡುವಾಗ,

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;

ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ

 

ಫೇಸಬುಕನಾಗ ಸಂಸಾರ ಫೋಟೋ ಹಾಕಿದಾಗ,

ಹಬ್ಬ-ಹುಣ್ಣಿವಿಗಿ ಕಳಿಸೋ ವಾಟ್ಸಪ್ ಮೆಸೇಜ್ನಾಗ್,

ಮಕ್ಕಳು ದೊಡ್ದೋರಾಗಿ ಕೈ ಖಾಲಿ ಆದಾಗ

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;

ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ

 

ಸಂಜಿ ಕೆಂಪು ರಂಗ ರಂಗ ಆದಾಗ,

ಗುಲ್ ಮೊಹರ್ ಗಿಡದಾಗ ಹೂ ಬಿಟ್ಟಾಗ,

ಮಣ್ಣಿನ ರಸ್ತಾದಾಗ ಹನಿ ಮಳಿ ಬಿದ್ದಾಗ

ನಾವು ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;
ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ

ಶನಿವಾರ, ಜೂನ್ 24, 2017

ಮಣ್ಣೇತ್ತಿನ ಅಮಾವಾಸ್ಯೆ

ನಾ ಈಗ ನಿಮ್ಮ ಜೊತಿ ಹಂಚೋಕೊಳುದು, ಪ್ರತಿವರ್ಷದ ವಾಡಿಕೆಯ ಬಗ್ಗೆ. ಆಯಾ ವರ್ಷದ ಮಣ್ಣೇತ್ತಿನ ಅಮವಾಸಿ ಹಿಂದಿನ ದಿನ ನಮ್ಮ ಅಮ್ಮ ಫೋನ್-ನಾಗ “ಗುರಾಜಾ ನಾಳೆ ಮಣ್ಣೇತ್ತಿನ ಅಮಾಸಿ ನೆನಪ ಅದನ ಇಲ್ಲ?” ಅಂತ ನೆನಪ ಮಾಡೋದು, ಮಾತಾಡಿ ಆದ ಮ್ಯಾಲ ಫೋನ್ ಇಟ್ಟ ನನ್ನ ಮನಸು, ನನಗ ೧೧ -೧೨ ವಯಸ್ಸಿನ ಹುಡುಗನ್ನ್ ಮಾಡಿ ಸಿಂದಗಿ ಚೌಡಮ್ಮ ಗುಡಿ ಮುಂದ ಇರೋ ಕುಂಬಾರ ಓಣಿಗೆ ಕರ್ಕೊಂಡು ಹೋಗೋದು. ಇದು ವರ್ಷದ ವಾಡಿಕಿ.
ಊರ ಬಿಟ್ಟು ೩೦ ವರ್ಷದ ಮ್ಯಾಲ್ ಆದ್ರೂನು ನಮ್ಮ ಅಮ್ಮ ನನಗ ನೆನಪು ಮಾಡೋದು ಬಿಟ್ಟಿಲ್ಲ ಮತ್ತ ನಾನು ಕೂತ ಖುರ್ಚಿಗಿ, ತಲಿ ಆನಸ್ಕೊಂಡು ಆ ನೆನಪು ಚಪ್ಪರಸುದು ಬಿಟ್ಟಿಲ್ಲ.
ಸಣ್ಣಾವ ಇದ್ದಾಗ, ಮಣ್ಣೇತ್ತಿನ ಆಮಾಸಿಗೆ ವಾರದ ಮೊದಲೇ, ದಿನಾಗ್ಲೂ ಸಾಲಿಯಿಂದ ಬಂದ ಕೂಡ್ಲೇ ಪಾಟಿ ಚೀಲ ಮೂಲ್ಯಾಗ ಒಗದು, ನಾನು, ರವಿ, ಉಮೇಶ ಪತ್ತಾರ, ಸಂಜು, ಚನ್ನು ಬ್ಯಾರೆ ಗೆಳೆಯಂದರ ಜೋಡಿ ಕುಂಬಾರ ಓಣಿ ಕಡೆ ಓಡಿದರ, ಮನಿಗಿ ಬರೋದು ದೀಪ ಹತ್ತಿದ ಮ್ಯಾಲೆ.

ನಮ್ಮ ಕಣ್ಣೆದುರಿಗೆನೇ “ಮಣ್ಣಿನ ಮುದ್ದಿ”, ಕುಂಬಾರನ ಕೈಯೊಳಗ ಹಂಗ ಹಂಗೇ ಆಕಾರ ತಾಳಕೊತ್ "ಮಣ್ಣೇತ್ತ" ಆಗೂ ಜಾದೂ ನಮಗ ಎಷ್ಟ ನೋಡಿದರೂ ತೃಪ್ತಿ ಆಗ್ತಿರಲಿಲ್ಲ. ಯಾವ ಮಣ್ಣೇತ್ತ ಎಲ್ಲಿ ತೊಗೋಬೇಕು ಅನ್ನು ಚರ್ಚಾದ ನಡುವ ಊಟಾ, ನಿದ್ದಿ ಸಾಲಿ ಎಲ್ಲಾ ಮರಿತಿತ್ತು. ಹಬ್ಬದ ದಿವಸ ಮೈಬುಬನ (ಮೈಹಿಬೂಬ್) ಜೋಡಿ ಹೋಗಿ, ಜೋಡ ಮಣ್ಣೇತ್ತ ತೊಗೊಂಡು ಬರೋ ಸಂಭ್ರಮ ಹೇಳ್-ಲಿಕ್ಕಿ ಶಬ್ದಗಳೇ ಇಲ್ಲ. ಭೀಮ ಭಟ್ಟರು ಮುಂಜಾನೆ ಪೂಜಾಕ್ಕ್ ಬರುದ್ರಾಗ, ಅಮ್ಮ ದೇವರ ಮುಂದ ಜೋಡಿ ಮಣ್ಣೇತ್ತು ಇಟ್ಟು ಅವಕ್ಕ ಅರಿಶಿಣ-ಕುಂಕುಮ ಇಟ್ಟು, ಮುಂದ ಚಂದ ರಂಗೋಲಿ ಹಾಕಿ ತಯಾರಿ ಮಾಡತಿದ್ಲು. ಭೀಮ ಭಟ್ರು ಬಂದವರೇ ಮಣ್ಣೇತ್ತು ನೋಡಿ, “ಹುಂ ಮಣ್ಣೇತ್ತು ಬಂದಾವ?" ಅನ್ಕೊತ ನನ್ನ ಕಡಿ ನೋಡಿ "ಗುರಾಜಾ, ನಿನ್ನು ಎತ್ತು ಭಾಳ ಭರ್ಜರಿ ಅವ” ಅಂತ ತಾರೀಫ್ ಮಾಡಿ ದೇವರ ಪೂಜಾ ಶುರು ಮಾಡ್ತ ಇದ್ದರು. ನಾನೋ ಆರಾಧನಾ ಭಾವದಿಂದ ಅವರು ಮಾಡೋ ಪೂಜಾ ನೋಡ್ತಾ ಇದ್ದೆ. ಘಂಟಿ ಬಾರ್ಸ್ಕೊತ್ ಮಣ್ಣೇತ್ತಿಗು ಮಂಗಳಾರತಿ ಮಾಡೋವಾಗ ಮುಖದ ಮ್ಯಾಲ್ ಹಿಗ್ಗು ಹಿರಿತಿತ್ತು. “ಹಾಂ ಪೂಜಾ ಆಯಿತು, ನೀ ಒಂದು ಎತ್ತು ತೊಗೋ ಬೇಕಾದ್ರ” ಅಂದದ್ದೇ ತಡ ಒಂದು ಎತ್ತು ತೊಗೊಂಡು, ಗೆಳೆಯಂದರ ಜೊತಿ ಆಡಲಿಕ್ಕಿ ಹೊರಗ ಹಾರಿದರ ಮುಗಿತು, ಹಿಂದ ಅಮ್ಮ “ಶಾವಿಗಿ ಪಾಯಸ ಮಾಡಿರ್ತೀನಿ ಲಗುನೇ ಬಾ” ಅನ್ನೋದು ಕಿವಿಗಿ ಬೀಳತಿರಲ್ಲಿಲ್ಲ. ಚುರುಮುರಿಲೇ ಸರ ಮಾಡಿ, ಮಣ್ಣೇತ್ತಿನ ಹಣಿಗಿ ಕುಂಕಮ ಇಟ್ಟು ಸಂಗಪ್ಪನ್ನ ಗುಡಿ ಮುಂದಿನ ಶಡಿಕಿನ (ಟಾರ್ ರೋಡ) ಮ್ಯಾಲ್ ಎತ್ತು ಇಟ್ಕೊಂಡು ಓಡೋಡಿ ಆಟ ಮುಗಿಸಿ ಮನಿಗಿ ಬರುದ್ರಾಗ ಮಧ್ಯಾನ್ಹ ಮೂರೂವರಿ ಆಗಿರ್ತ್ತಿತ್ತು. ದಾದಾನ ಕೈಲಿ ಏಟು, ಅಮ್ಮನ ಕೈಲಿ ಬೈಗಳು ತಿಂದು, ಶಾವಿಗಿ ಪಾಯಸಕ್ಕ ಕೈ ಹಾಕತಿದ್ದೆ. ಮಣ್ಣೇತ್ತಿನ ಅಮಾಸಿ ನಿಮಗ ಶುಭ ತರಲಿ. ಮನ್ಯಾಗ ಆಕಳ-ಎತ್ತು. ಕಟ್ಟು ಶಕ್ತಿ ಆ ದೇವರು ನಿಮಗ ಎಲ್ಲಾರಿಗೂ ಕೊಡಲಿ.

ಬುಧವಾರ, ಜನವರಿ 4, 2017

ಅಮ್ಮನ ಪ್ರೀತಿ ಅಂದ್ರ











ಅಮ್ಮನ ಪ್ರೀತಿ ಅಂದ್ರ

 

ಅಮ್ಮನ ಪ್ರೀತಿ ಅಂದ್ರ

ಹಗಲನಾಗ, ಕಣ್ಣಿಗಿ ಕಾಣಸು ತನ ಇರು ನೀಲಿ ಮುಗಿಲ,

ರಾತ್ರಿ ಆದಾಗ, ಅದೇ ಮುಗಿಲನಾಗ ಚಲ್ಲಾಡಿರೋ ಚುಕ್ಕಿ ಸಾಲ;

ಸುಡು ಬಿಸಿಲಾಗ ಸಿಗು ಬೇವಿನ ಗಿಡದ ನೆರಳ,

ಅದರ ಕೆಳಗ ಕೂತಾಗ ಸೂಸಿ ಬರು ತಣ್ಣಗನ ಗಾಳಿ;
 

ಅಮ್ಮನ ಪ್ರೀತಿ ಅಂದ್ರ

ಬಿಜಾಪುರದಿಂದ “ನನಗ ಅಂತ ತಂದ” ಕೆಂಪನ ಅಂಗಿ,

ಕುಂದಾ ಮೌಶಿ ಕೈಲಿ ಮುದ್ದಾಂ ಹೇಳಿ ತರಿಸಿದ ರಾಪಿಡೆಕ್ಸ್ ಪುಸ್ತಕ

ಧಾಂದಲಿ ಮಾಡಿದ್ದಕ್ಕ ಎರಡೂ ಕಪಾಳಿಗೆ ಕೊಟ್ಟ ಏಟ

ಓದ್ಲಿಕ್ಕಿ ಕೈಗಿ ಕೊಟ್ಟ ಸಾನೆ ಗುರೂಜಿಯವರ “ಶ್ಯಾಮನ ತಾಯಿ” ಪುಸ್ತಕ
 

ಅಮ್ಮನ ಪ್ರೀತಿ ಅಂದ್ರ

ಮುಂಜಾನೆ ನಾಷ್ಟಾಕ ಮಾಡೋ ಅವಲಕ್ಕಿ ಸುಸಲ,

ಅದರ ಮ್ಯಾಲ ಹಾಕೋ “ಇನ್ನಾ ಒಂದು ಚಮಚ” ತುಪ್ಪ;

ಸಂಜಿಗಿ ಸಾಲಿ ಬಿಟ್ಟು ಬಂದಾಗ ತಿನ್ಲಿಕ್ಕಿ ಕೊಡೊ ಹುರುದಿದ್ದ ಶೇಂಗಾ ಬೆಲ್ಲಾ;

ಮುಂಜವಿಯೊಳಗ ತುತ್ತ ಮಾಡಿ ತಿನಿಸಿದ ಮಾತೃ ಭೋಜನ;

 
ಅಮ್ಮನ ಪ್ರೀತಿ ಅಂದ್ರ

ನಸುಕನಾಗ ಎದ್ದು ನಳದ ಮುಂದ ಇಡತಿದ್ದ ಕೊಡದ ಸಾಲ

ಬಕಿಟ್ಟನಾಗ ಸ್ನಾನಕ್ಕ ಇಡು ಬಂಬನಾಗಿನ ಬಿಸಿ ನೀರ

ಮನಿ ಮುಂದ ಮುಂಜಾನೆ ಅರಳಿ ನಿಂತ ಮುಳು ಜಾಜಿಗಿ ಹೂವ,

ಮಳಿ ಬಂದು ನಿಂತರೂ, ಪನ್ನೋಳಗಿಯಿಂದ ಬೀಳತಿರು ನೀರ;


ಅಮ್ಮನ ಪ್ರೀತಿ ಅಂದ್ರ

ಶುಕ್ರವಾರ ಸಂಜಿಗಿ ಹಾಡೋ ಕೊಲ್ಹಾಪೂರದ ಮಹಾಲಕ್ಷ್ಮೀ ಹಾಡ,

ಆರತಿ ಮಾಡಿ, ಪ್ರಸಾದಕ್ಕ ನನ್ನ ಕೈಗಿ  ಹಾಕೋ ಪುಠಾಣಿ ಸಕ್ಕರಿ;

ಗಣಪತಿ ಹಬ್ಬ, ದೀಪಾವಳಿ ಆರತಿ, ನವರಾತ್ರಿ ದೀಪ,

ಹಬ್ಬದ ಊಟಕ್ಕ ಬಡ್ಸೋ ಕೋಸಂಬರಿ, ಬುರುಬುರಿ, ಮತ್ತ ಹೂರಣ

 

ಅಮ್ಮನ ಪ್ರೀತಿ ಅಂದ್ರ

ಕಾರ್ತಿಕನಾಗ ಸಂಗಪ್ಪಗ ಹಚ್ಚು ಕಾಕಡಾರತಿ,

ಸಿಂದಗಿ ಸದ್ಗುರು ಭೀಮಾಶಂಕರನ ಪಾದ ಪೂಜಾ;

ಯಲಗೂರದಪ್ಪನ ಹೋಳಿಗಿ ಪ್ರಸಾದ, ಗೊಲ್ಲಾಳಪ್ಪನ ಅಭಿಷೇಕ,

ಕಾಶಿಲಿಂಗನ ಕಲಸಕ್ಕರಿ, ಎಲ್ಲಮ್ಮನ ನೈವೇದ್ಯ;

 




ಬುಧವಾರ, ಅಕ್ಟೋಬರ್ 26, 2016

ಕೊಟ್ಟದ್ದು ತನಗೆ – ಬಚ್ಚಿಟ್ಟಿದ್ದು ಪರರಿಗೆ



ರಾಮಾಪುರ ಅಂತ ಒಂದು ಊರು ಇತ್ತು. ಊರಾಚೆ ಸ್ವಲ್ಪ ದೂರದಲ್ಲಿ ಒಂದು ಮಕ್ಕಳಿಗೆ ವಿದ್ಯೆ-ಬುದ್ಧಿ ಕಲಿಸೋ ಒಂದು ಶಾಲೆ ಇತ್ತು. ಶಾಲೆಗೆ ಹೋಗೋ ರಸ್ತೆಯಲ್ಲಿ ಒಂದು ದೊಡ್ಡ ಆಲದ ಮರ ಇತ್ತು. ಅಲ್ಲೇ ಪಕ್ಕದಲ್ಲಿ ಒಂದು ಪುಟಾಣಿ ಕೆರೆನೂ ಇತ್ತು. ಮರದ ಕೆಳಗಡೆ ಒಬ್ಬ ಅಜ್ಜಿ ಒಂದು ಗೂಡಂಗಡಿ ಇಟ್ಟಕೊಂಡು ವ್ಯಾಪಾರ ಮಾಡ್ತಾ ಇದ್ದಳು. ಶಾಲೆಗೆ ಹೋಗೋ ಮಕ್ಕಳು ಅಜ್ಜಿ ಅಂಗಡಿಯಲ್ಲಿ ಪೆನ್-ನೋಟ್ ಬುಕ್ ಮತ್ತು ಕಥೆ ಪುಸ್ತಕ ತೊಗೋತಿದ್ದರು. ಅವಳ ಅಂಗಡಿಯಲ್ಲಿ ಸಿಗುತ್ತಿದ್ದ ಕೊಬ್ಬರಿ ಮಿಠಾಯಿ ಮಕ್ಕಳಿಗೆ ಅಚ್ಚುಮೆಚ್ಚಿನ ಸಿಹಿ ತಿಂಡಿಯಾಗಿತ್ತು. ಮಕ್ಕಳು ಶಾಲೆ ವಿರಾಮದ ವೇಳೆಗೆ ಕೊಬ್ಬರಿ ಮಿಠಾಯಿ ತಿನ್ನಲು ಬರುತ್ತಿದ್ದರು.

ಒಂದಿನ ಪಕ್ಕದ ಊರಿನಿಂದ ಸೋಮನಗೌಡರು, ರಾಮಾಪುರಕ್ಕೆ ಬರುತ್ತಿದ್ದರು. ಬಿಸಿಲಿನ ತಾಪಕ್ಕೆ ಅಲ್ಲಿಯೇ ಇದ್ದ ಕೆರೆಯ ತಣ್ಣನೆ ನೀರಿನಲ್ಲಿ  ಕೈ ಕಾಲು ಮುಖ ತೊಳೆದು, ಮರದ ಕೆಳಗಿದ್ದ ಅಜ್ಜಿಯ ಅಂಗಡಿಗೆ ಮಜ್ಜಿಗೆ ಕುಡಿಯಲು ಬಂದರು.

ಅಷ್ಟರಲ್ಲಿ ಕೆಲ ಮಕ್ಕಳು ಅಲ್ಲಿಗೆ ಮಿಠಾಯಿ ಕೊಳ್ಳಲು ಬಂದರು. ಒಂದು ಹುಡುಗ ಮಿಠಾಯಿ ಕೊಳ್ಳುವಾಗ “ಅಜ್ಜಿ ನಂಗೆ ಎರಡು ಮಿಠಾಯಿ, ಗಿಣಿಮರಿಗೊಂದು ಮಿಠಾಯಿ” ಎಂದು ದುಡ್ಡು ಕೊಟ್ಟು, ಎರಡು ತಾನು ಇಟ್ಟುಕೊಂಡು, ಇನ್ನೊಂದು ಪಕ್ಕದಲ್ಲಿಯೇ ಇಟ್ಟಿದ್ದ ಗಾಜಿನ ಭರಣಿಗೆ ಹಾಕಿ ಹೋದನು. ಇನ್ನೊಬ್ಬ ವಿದ್ಯಾರ್ಥಿನಿ ಕೂಡ ತಾನೊಂದು ಮಿಠಾಯಿ ತೊಗೊಂಡು ಇನ್ನೊಂದು ಮಿಠಾಯಿ “ಗಿಣಿಮರಿ”ಗೋಸ್ಕರ ಭರಣಿಯಲ್ಲಿ ಹಾಕಿಟ್ಟು ಎರಡು ಮಿಠಾಯಿ ದುಡ್ಡು ಕೊಟ್ಟು ಹೋದಳು.

ಇದು ಸೋಮನಗೌಡರಿಗೆ ಆಶ್ಚರ್ಯ ತಂದಿತು. ಕೆಲ ಮಕ್ಕಳು ತಾವು ದುಡ್ಡು ಕೊಟ್ಟು ತೆಗೆದುಕೊಂಡ ಮಿಠಾಯಿ ಒಂದು ಭಾಗವನ್ನು “ಗಿಣಿಮರಿ” ಗೋಸ್ಕರ ಇಟ್ಟು ಹೋಗುತ್ತಿದ್ದಾರಲ್ಲ, ಇದು ಯಾವ ಗಿಣಿ ಮರಿಗೆ ಎಂದು ಯೋಚನೆ ಮಾಡಿದರು.

ಅಷ್ಟರಲ್ಲಿ ಅಲ್ಲಿಯೇ ಹೋಗುತ್ತಿದ್ದ ಅಕ್ಕ ಮತ್ತು ತಮ್ಮ ಇಬ್ಬರು ಪುಟ್ಟ ಬಡ ಮಕ್ಕಳು ಅಂಗಡಿಗೆ ಬಂದರು. ಅಕ್ಕ ತನ್ನ ತಮ್ಮನಿಗೋಸ್ಕರ ಗಾಜಿನ ಭರಣಿಯತ್ತ ಕೈ ತೋರಿಸುತ್ತ, ಅಜ್ಜಿಯನ್ನು “ಗಿಣಿಮರಿಗೋಸ್ಕರ ಇಟ್ಟಿದ್ದ ಮಿಠಾಯಿ, ನಂಗೆ ಮತ್ತು ನನ್ನ ತಮ್ಮನಿಗೆ, ಕೊಡಿ”. ಎಂದು ಕೇಳಿದಳು ಅಜ್ಜಿ ನಗು ನಗುತಾ ಭರಣಿಯಿಂದ ಎರಡು ಮಿಠಾಯಿ ತೆಗೆದು ಕೊಟ್ಟಳು. ಸೋಮನಗೌಡರಿಗೆ ಇದನ್ನು ನೋಡಿ ತುಂಬಾ ಸಂತೋಷವಾಯಿತು. ಶಾಲಾ ಮಕ್ಕಳು, ತಮ್ಮ ತಿಂಡಿಯನ್ನು ಈ ರೀತಿಯಲ್ಲಿ ಹಂಚುವದನ್ನು ತಿಳಿದು ಮಕ್ಕಳ ಬಗ್ಗೆ ಪ್ರ್ರೀತಿಯುಂಟಾಯಿತು.

ಅಜ್ಜಿ ಸೋಮನಗೌಡರಿಗೆ ಹೇಳಿದಳು, “ಇಲ್ಲಿ ಮಿಠಾಯಿ ಕೊಳ್ಳಲು ಆಗದ ಮಕ್ಕಳಿಗೆ ಎಂದು ಈ ಗಾಜಿನ ಭರಣಿಯಲ್ಲಿ ಮಿಠಾಯಿ ಬೇರೆ ಮಕ್ಕಳು ಕೊಂಡು ಇಟ್ಟಿರುತ್ತಾರೆ. ಇಲ್ಲಿ ಎಲ್ಲರಿಗೂ ಮಿಠಾಯಿ ದೊರೆಯುತ್ತದೆ. ಈ ಥರದ ತಿಳುವಳಿಕೆಯನ್ನು ನಮ್ಮ ಶಾಲೆ ಮೇಷ್ಟ್ರು ಹೇಳಿಕೊಟ್ಟಿದ್ದಾರೆ ”


“ಇಂಥಾ ಮೇಷ್ಟ್ರು ಮತ್ತು ಮಕ್ಕಳನ್ನು ಪಡೆದ ರಾಮಾಪುರವೇ ಧನ್ಯ” ಎಂದು ಉದ್ಗರಿಸಿದರು 



ಶನಿವಾರ, ಜುಲೈ 9, 2016

ನೀ ಪುಣ್ಯಾತ್ಮ



ಎಲ್ಲಾ ಇದ್ದೂ ಏನೂ ಇಲ್ಲದಂಗ ಇದ್ದಿ,
ಏನೂ ಇಲ್ಲಾರ್ದೆನೂ, ಎಲ್ಲಾರಗೂ ಹಂಚಿದಿ
ನೀ ಪುಣ್ಯಾತ್ಮ;

 
ಹಕ್ಕಿ ಮರಿಗೋಳಿಗಿ ಹಾರಲಿಕ್ಕಿ ಮುಗಿಲ ಕೊಟ್ಟಿ,
ನೀ ಕನಸ ಕಂಡು, ನಮಗ ನನಸ ಹಂಚಿದಿ,
ನೀ ಪುಣ್ಯಾತ್ಮ;

ನಿಂದು ಕೂಸಿನಂತಾ ಮನಸ, ಸಿಂಹದಂತಾ ತಾಕತ್,
ದೇಶಕ್ಕೇ ಹಾದಿ ತೋರಿಸಲ್ಲಿಕ್ಕಿ ದೀಪಾ ಹಚ್ಚಿದಿ,
ನೀ ಪುಣ್ಯಾತ್ಮ;

 
ಹೆಚ್ಚಿಗಿ ಮಾತಾಡ್ಲಿಲ್ಲ ಕೆಲ್ಸಾ ಮಾಡೂದು ಬಿಡ್ಲಿಲ್ಲ,
ಫಕೀರನಂಗ ಇದ್ದಿ,  ಹಾಂ ಹಾಂ ಅನ್ನೋದ್ರಾಗ ಹೊಂಟೆ ಬಿಟ್ಟಿ,

ನೀ ಪುಣ್ಯಾತ್ಮ;
 
(ಮನಿಯೋಳಗಿನ ಹಿರಯಾರಂಗ ಇದ್ದ ನಮ್ಮ ಅಬ್ದುಲ್ ಕಲಾಮ್ ರಿಗಿ ನನ್ನ ಅಕ್ಷರ ನಮನ, ಕಲಾಮ್ ರ ಮ್ಯಾಲೊಂದು ಕವನ) 
-ಗುರುರಾಜ ಕುಲಕರ್ಣಿ  (ನಾಡಗೌಡ) ಜುಲೈ ೨೭ ೨೦೧೫
 
        
 


 

ಬುಧವಾರ, ಜೂನ್ 29, 2016

ಸಧ್ಯಕಿದು ಸಿಂದಗಿ ಸಂತಿ


ಇಲ್ಲಿ ಕೊಟ್ಟವಾ ತೊಗೋಬೇಕು,
ತೊಗೊಂಡಾವ ಕೊಡಬೇಕು;

ಯಾಕಂದ್ರ ಬದುಕೊಂದು ಸಂತಿ,
ನೀ ಖರೆವಂದ್ರೂ ಸಂತ್ಯಾಗ ನಿಂತಿ;

ಇಲ್ಲಿ ಸಂತಿಗಿ ಮಂದಿ ದೂರ ದೂರದಿಂದ ಬಂದಾರ
ತಮ್ಮ ಜೋಡಿ, ಚೀಲ – ಚಂಗಟಿ ತಂದಾರ;

ಮ್ಯಾಲ ಒಬ್ಬಾಂವ ಕೂತಾನ,
ತಕ್ಕಡಿ ಕೈಯಾಗ ಹಿಡದಾನ;

ಅಳದು ಸುರದು ತೂಗ್ಯಾನ
ಅಂವ ಹಿಡಿ ಹಿಡಿ, ಹಿಡದು ಕೊಡತಾನ;

ನಿನ್ನ ಲೆಕ್ಕಾ ಬರೋಬ್ಬರಿ ಇಟ್ಟಾನ
ತನ್ನ ವ್ಯಾಪಾರ ಬಲು ಜೋರ ನಡಿಸ್ಯಾನ;

ಉಪಸಂಹಾರ : ನಾನೂ ಮತ್ತು ನನ್ನ ಮಗ ಶೌರಿ ಸಿಂದಗಿಗೆ ಹೋದಾಗ, ಅವನ್ನ ಕರಕೊಂಡು ಸಂತಿಗಿ ಹೋದೆ. ಸಂತಿ  ಅಂದ್ರ ಹ್ಯಾಂಗ್ ಇರತದ ಅಂತ ಮಗನಿಗಿ ತೋರಿಸೋ ಉತ್ಸಾಹ ಭಾಳ ಇತ್ತು . ಹಂಗೆ ಅದರ ಜೊತಿ "ಸದ್ಯಕಿದು ಹುಲುಗೂರ ಸಂತಿ " ಅನ್ನೂ ಷರೀಫರ ಪದ (ಸುಬ್ಬಣ್ಣ ಹಾಡಿರೋ "ಬಿದ್ದಿಯಬ್ಬೇ ಮುದುಕಿ") ಕಿವಿಯೊಳಗ ಗುಂಯಿಗುಡುತ್ತಿತ್ತು