ಮಂಗಳವಾರ, ಡಿಸೆಂಬರ್ 25, 2012

ಮದುವೆಯ ಅನುಬಂಧಾ....


 ಮದುವೆಯ ಅನುಬಂಧಾ....

- ಗುರುರಾಜ ಕುಲಕರ್ಣಿ (ನಾಡಗೌಡ)

“ಮದುವೆಗಳು ಸ್ವರ್ಗದಾಗ ನಡಿತಾವ”, ಅನ್ನೋದು ಪಾಶ್ಚಿಮಾತ್ಯರ ನಂಬಿಕೆ. ಗಂಡ-ಹೆಂಡತಿ ಸಂಬಂಧ ಏಳೇಳು ಜನ್ಮದ ಸಂಬಂಧ ಅಂತ ನಾವು ಸನಾತನಿಗಳು ನಂಬೊ ಮಾತು.

ಅದ್ರೂನು ಈ ಮದುವಿ ಅನ್ನೊ ಸಿಸ್ಟಮ್ ಹ್ಯಾಂಗ ಕೆಲಸ ಮಾಡ್ತದ ಅನ್ನೊದು, ಇಡೀ ಯುನಿವರ್ಸ ಸೃಷ್ಟಿ ಮಾಡಿರೋ ಪರಬ್ರಹ್ಮಗೂ ತಿಳಿಲಾರ್ದದ ಮಾತು ಇರಬೇಕು ಅಂತ ನನ್ನ ಅಭಿಪ್ರಾಯ. ಅಲ್ಲಾ ನೀವೆ ಸ್ವಲ್ಪ ಸುತ್ತ-ಮುತ್ತ ಕಣ್ಣಾಡಿಸಿ ನೋಡ್ರಿ, ಆಜುಬಾಜುನವರು ತಮ್ಮ ಸಂಸಾರಗೊಳು ಹ್ಯಾಂಗ ತೂಗಿಸಿಕೊಂಡು ಹೊಗ್ತಾರ ಅಂತ...ಎಂಥಾ ನಾಸ್ತಿಕನಿಗೂ ದೇವರ ಮ್ಯಾಲ ನಂಬುಕೆ ಹುಟ್ಟಲ್ಲಿಲ್ಲಾ ಅಂದ್ರ ..ನನಗ ನೀವು ಕೇಳ್ರಿ...

...ಆಮ್ಯಾಲೆ ಇನ್ನೊಂದು ಮಾತು..ಆಜುಬಾಜು ಸಂಸಾರ ಮಾತ್ರ ನೊಡ್ರಿ...ನಿಮ್ಮ ನಿಮ್ಮ ಸಂಸಾರ ನೋಡಕೊ ಬ್ಯಾಡ್ರಿ....ಅದರ ಮುಂದಿನ ಜವಾಬ್ದಾರಿ ನಂದಲ್ಲಾ....ಏನ್ರೆಪಾ?

ಮದುವೆ ಅಂತ ಅಂದ ಕೂಡ್ಲೇ ನನಗ, ಸುಮಾರು ೧೯೯೯ರ ಸುಮಾರು ನಾವು (ಮತ್ತ್ಯಾರು....?... ನಾನು ನನ್ನ ಹೆಂಡತಿ ಪಲ್ಲವಿ) ಆಮೇರಿಕಾದಾಗ ಇದ್ದಾಗ, ಅದರ ಬಗ್ಗೆ ನಡಿತ್ತಿದ್ದ ಮಾತು-ಕಥಿ ನೆನಪಾಗ್ತದ.

ಆ ಟೈಮ್ನಾಗ ಕಂಪ್ಯೂಟರ್ ಕೀ ಬೋರ್ಡ್ ಗೊತ್ತಿದ್ದವರಿಗೆಲ್ಲಾ, ನ್ಯೂಯಾರ್ಕ್ ಸ್ವಾತಂತ್ರ್ಯ ದೇವತೆ ಕೈ ಬೀಸಿ ಕರಿತ್ತಿದ್ದಳು. ಹಿಂಡ ಹಿಂಡಗಟ್ಟಲೆ ಕಾಲೇಜ್ ಮುಗಿಸಿದ ಹುಡುಗರು ನೌಕರಿಗಿ ಹೋಗತ್ತಿದ್ದರು ಮತ್ತ ವರ್ಷ ಕಳಿದರೊಳಗ ವಾಪಸ್ಸ್ ತಮ್ಮ ತಮ್ಮ ಊರಿಗಿ ಬಂದು ಮದುವಿ ಮಾಡಕೊಂಡು ಆಮೇರಿಕಾಕ್ಕ ಹೆಂಡತಿ ಜೊಡಿ ಕುಕ್ಕರನೂ ತೊಗೊಂಡು ಬರ್ತಿದ್ದರು. ಈ ಭಾರತದದ ಹುಡುಗರು ಮಾಡಕೊಳೊ ಮದುವಿ ಕಾರ್ಯಕ್ರಮ ಅಲ್ಲಿ ಮಂದಿಗಿ ಭಾಳಾ ಆಶ್ಚರ್ಯ ತರಿಸೊದು.

ಅಲ್ರಿ ತಿಂಗಳಾನಾಗ ಹುಡುಗಿನ ಹುಡ್ಕೊಂಡು..ಮದುವಿನೂ ಮಾಡ್ಕೊಂಡು..ಬಂದು ಬಿಡ್ತಿರಲ್ಲಾ...ಇದು ಹ್ಯಾಂಗ..? ಅಂತ ಹುಬ್ಬ ಮತ್ತ ಗೋಣ ಹಾರ್ಸೊಕೊತ ನಮ್ಮಂತೊರಿಗಿ ಕೇಳೊರು.

ನಮಗ ಸಿಕ್ಕಿದೆ ಛಾನ್ಸ್ ಅಂತ ನಮ್ಮ ಪರಂಪರಾ..ನಮ್ಮ ಸಂಸ್ಕೃತಿ ಬಗ್ಗೆ.... , ತಲಿ ಮ್ಯಾಲ ಕೋಡು ಇಟ್ಕೊಂಡು, ಎದಿ ಉಬ್ಬಸ್ಕೊಂಡು ಉತ್ತರಾ ಹೇಳಿದ್ದೆ ಹೇಳಿದ್ದು...ಅವರು ಬಿಟ್ಟ ಕಣ್ಣ ಬಿಟ್ಟಕೊಂಡು ಕೇಳಿದ್ದೆ ಕೇಳಿದ್ದು...

ಈಗ ಟೈಮ್ ಬದ್ಲಾಗ್ಯದ. ಜಗತ್ತಾನಗ ಎಲ್ಲಾರಿಗೂ..ನಮ್ಮ "ಪರಂಪರಾ".."ಪರಾಕ್ರಮ"..ಗೊತ್ತಾಗೆದ.

ಆದ್ರ ಈಗ ನಾ ಹೇಳು ಖರೆ ಖರೆ ಘಟನಾಗೊಳು ಕೇಳಿದ ಮ್ಯಾಲ...ಮದುವಿ ಹೀಂಗೂ ನಡಿತಾವಾ? ಅಂತ ನಿಮಗೂ ಅನ್ನಸ್ಲಿಲ್ಲಾ ಅಂದ್ರ..ನನಗ ಕೇಳ್ರಿ..

ಮದುವೆ ಅನುಬಂಧ ೧


ಇದು ನಡೆದ್ದದ್ದು, ಸುಮಾರು ೩೦-೩೫ ವರ್ಷದ ಹಿಂದೆ. "ವರ" ನಮ್ಮೂರ ಹತ್ತರ ಹಳ್ಳಿಯವರು. ಕೆಲಸ ಬೆಂಗಳೂರನಾಗ.. ಉತ್ತರ ಕರ್ನಾಟಕದ ನಮ್ಮ ಮಂದಿಗಿ, ಬೆಂಗಳೂರನಾಗ ಕೆಲಸ ಮಾಡೊದು ಒಂದೇ.. Onsite ನಾಗ ಕೆಲಸ ಮಾಡೊದು ಒಂದೇ.

ಆ ಕಾಲದಾಗ ನಮಗ ಬೆಂಗಳೂರ ನಿಲುಕದ ನಕ್ಷತ್ರ, ಯಾಕಂದ್ರ ಬೆಂಗಳೂರಿಗೆ ಹೊಗಲಿಕ್ಕಿ ಬಸ್, ಟ್ರೈನ್, ಇಲ್ಲಾ ಒಂದು ಸರಳ ರೋಡ್ನೂ ಇರಲ್ಲಿಲ್ಲ. ಹೀಂಗಾಂಗಿ ಈ ಹುಡುಗ ಬೆಂಗಳೂರನಾಗ ಒಬ್ಬನೇ ಪರದೇಶಿಯಂಗ ಇದ್ದ.

ಒಬ್ಬನೇ ಇದ್ದನಾ..? ಹೀಂಗಾಗಿ, ವಯಸ್ಸಿಗೆ ತಕ್ಕಂತೆ...ದಿನಕ್ಕೆ ಒಂದ ನಾಲ್ಕು ಜ಼ುರುಕಿ ಹೋಡಿಯೊದು, ಆವಾಗಾವಗ ತಣ್ಣಗಂದು ಮಲ್ಲ್ಯ ಸ್ಪೇಶಿಯಲ್ ಕುಡಿಯೊದು ಮಾಡ್ತಿದ್ದ..ಇಂಥಾ ಸುದ್ದಿ ಮನ್ಯಾಗಿನ ಹಿರ್ಯಾರಿಗಿ ಮುಟ್ಟಿಸಲ್ಲಿಕ್ಕಿಂತಾನೇ ಇರೋರು, ಸ್ವಲ್ಪ ಹೆಚ್ಚಿಗೆ ಖಾರ ಉಪ್ಪ ಹಚ್ಚಿ, ಊರಾಗಿರೊ ಈ ಹುಡುಗನ ಅಣ್ಣಗ ಹೇಳಿದರು. ಅಪ್ಪ-ಅಮ್ಮ ಇಲ್ಲದ ಈ ಹುಡುಗಗ, ಹಿರಿ ಅಣ್ಣನೇ ಎಲ್ಲಾ. ಅಣ್ಣನ ಪ್ರಕಾರ ಇವನಿಗೊಂದು ಮದುವಿ ಮಾಡಿದ್ರ ಎಲ್ಲಾ ಸರಿ ಹೊಗ್ತಾನ ಅಂತ..ಮದುವಿ ಮಾಡ್ಲಿಕ್ಕಿ ನಿಶ್ಚಯ ಮಾಡಿದ್ರು.

ಈ ಕಡೇ ಬೆಂಗಳೂರನಾಗ, ಮುಂಜಾನೆ ನೌಕರಿಗಿ ಹೊಗಲಿಕ್ಕಿ ತಯಾರಿ ನಡಿಸಿದ್ದ ಹುಡುಗನಿಗೆ, ಊರಿಂದ ಕಾರ್ಡ (ಪತ್ರ- ೧೫ ಪೈಸಾದ್ದು) ಬಂತು.


ಅಣ್ಣ ಪತ್ರ ಬರದ್ದಿದ್ದರು.



ಚಿ|| "ಹುಡುಗನ ಹೆಸರು"

ನಿನ್ನ ಹಿರಿಯ ಅಣ್ಣ ಮಾಡು ಆಶೀರ್ವಾದಗಳು,

ಇತ್ತ ಸಕಲವೂ ಕುಶಲ. ನಾವೆಲ್ಲರೂ ಕ್ಷೇಮವಾಗಿದ್ದೇವೆ. ನಿನ್ನ ಕ್ಷೇಮ ಸಮಚಾರ ತಿಳಿಸುತ್ತ ಇರಬೇಕು. ನಿನ್ನ ಆರೋಗ್ಯದ ಕಡೆ ಗಮನವಿರಲಿ.ಮಳೆ ಸಮಯಕ್ಕ ಸರಿಯಾಗಿ ಆಗಿದ್ದು, ಬಿತ್ತನೆ ಕೆಲ್ಸ ಚೆನ್ನಾಗಿ ನಡೆದಿದೆ. ಕೆರೆಯ ಬಾಜು ಇರುವ ಹೊಲದಲ್ಲಿ ಈ ಬಾರಿ ಶೇಂಗಾ ಹಾಕುವ ಯೋಚನೆ ಇದೆ. ಅಮಲ್ದಾರ ಮಾಮನ ಮಗಳಿಗೆ ಗಂಡು ಮಗು ಹುಟ್ಟಿದೆ. ತಾಯಿ ಮತ್ತು ಮಗು ಇಬ್ಬರೂ ಆರಾಮಾವಾಗಿ ಇದ್ದಾರೆ. ಬಾಳಣ್ಣನ ಮಗ ಬಿಜಾಪುರದಲ್ಲಿ ಐ ಟಿ ಐ ಕಾಲೇಜ ಸೇರಿದ್ದಾನೆ.

ಬರುವ ೧೭ ತಾರೀಖಿಗೆ ನಿನ್ನ ಮದುವೆ ತೇರದಾಳ ಸಂಗಮೇಶ್ವರ ಗುಡಿಯಲ್ಲಿ ನಡೆಸಲು ನಿಶ್ಚಯಲಿಸಲಾಗಿದೆ. ತಪ್ಪದೆ ಬರಬೇಕು.


ಇತಿ ಆಶೀರ್ವಾದಗಳೊಂದಿಗೆ.



ಕಡಿ ವಾಕ್ಯಕ್ಕ ಜಾಗ ಸಾಕಾಗಲಾರ್ದಕ್ಕ, ಹ್ಯಾಂಗ ಹ್ಯಾಂಗೋ ಬರದಿದ್ದರು. ಇವನು ಕಷ್ಟ ಪಟ್ಟು ಓದಿ ಅರ್ಥ ಮಾಡ್ಕೊಳ್ಳಿಕ್ಕಿ ನಾಲ್ಕು ನಾಲ್ಕು ಸರ್ತಿ ಓದಿದ ಪತ್ರ ಓದ್ದಿದ್ದೇ ತಡ...ಹುಡುಗ ಆಫೀಸಿಗೆ ಓಡಿದ...ಹೆಡ ಕ್ಲರ್ಕ ಹತ್ರ ಕಾಡಿ ಬೇಡಿ ರಜಾ ಹಾಕಿದ.. ಪತ್ರದಾಗ ಬರದ್ದಿದ್ದ ಪ್ರಕಾರ ೧೭ ತಾರೀಖಿಗಿ ಊರಿಗೆ ಹೋಗಿ ಮದುವಿ ಆದ.. ಇದನ್ನ ಭಾತೃ ಪ್ರೇಮ ಅಂತಿರೊ..ಅಥವಾ ಆವಾಗಿನ ರೀತಿ ರೀವಾಜ಼್ ಅಂತಿರೊ.. ಅಂತು ಮದುವಿ ಮಾಡ್ಕೊಂಡ್ರು, ಸಂಸಾರನೂ ನಡಿಸಿದ್ರು.

ಇದನ್ನ ಖುದ್ದು ಆ "ಹುಡುಗ".. ತಮ್ಮದೇ ಮಗನ ಮದುವಿ ದಿವ್ಸ ನಮಗೆಲ್ಲಾ ಹೇಳಿದ್ರು. ನಾನು ಬಿಟ್ಟ ಕಣ್ಣ ಬಿಟ್ಟಕೊಂಡು ಈ ಮದುವಿ ಕಥಿ ಕೇಳಿದೆ.ಕಡೀಕ ತಡಿಲಾರ್ದೆ ಒಂದು ಮಾತು ಕೇಳಿದೆ..

"ಅಲ್ರಿ ಕಾಕಾ..ಆ ಕಾರ್ಡ ನಿಮಗ ಮುಟ್ಟಿರದ್ದಿದ್ದರ...ಇಲ್ಲಾ…. ನೀವು ಒಲ್ಲೆ ಅಂದ್ರಿದ್ರ..."

ಅದಕ ಅವರು ನಕ್ಕೊತ ಅಂದ್ರು

"ನಾ ಲಗ್ನಕ್ಕ ಹೋಗ್ಲಿ... ಹೋಗಲಾರದೆ ಇರ್ಲಿ.... ನಂದು ಲಗ್ನ ಅಂತೂ ಆಗಿರ್ತಿತ್ತು..ಹೆಂಡತಿ ಮನಿಗಿ ಬಂದಿರ್ತಿದ್ದಲು"

ನಾನು ತಗದ ಬಾಯಿ ಒಂದಃತ್ತು ನಿಮಿಷ ಆದ ಮ್ಯಾಲ ಮುಚ್ಚಿದೆ.

ಇದು ಹಳೆ ಕಥಿ ಆಯಿತು ಬಿಡ್ರಿ..ಈಗೆಲ್ಲಾ ಹೀಂಗ ಹ್ಯಾಂಗ ಆಗ್ತದ ಅಂತಿರೇನೊ? ಆದ್ರ ಇದಕ್ಕಿಂತಾ ಮಜಾ ಕಥಿ ಇಲ್ಲಿ ಕೇಳ್ರಿ..

ಮದುವೆ ಅನುಬಂಧ ೨


ನನ್ನ ಜೋಡಿ ಕೆಲಸ ಮಾಡ್ತಿದ್ದ ಹುಡುಗ ಒಬ್ಬ ಉಡುಪಿ ಕಡೆಯಾಂವ. ಭಾಳ ಚೊಲೊ ಹುಡುಗ..ಸ್ವಲ್ಪ ಭೊಳೆ ಬ್ಯಾರೆ. ವಯಸ್ಸಿಗೆ ತಕ್ಕಂಗ ಮದುವೆ ಮಾಡೊಕೊಳೊ ತಯಾರಿ ನಡದಿತ್ತು. ಎರಡ ದಿವ್ಸ ರಜಾ ಬೇಕ್ರಿ...ಊರಿಗಿ ಹೋಗಿ ಹುಡುಗಿನ ನೋಡ್ಕೊಂಡು ಬರ್ತೀನಿ ಅಂದ..ರಜಾ ಕೊಟ್ಟೆ ಊರಿಗೆ ಹೋಗಿ ಬಂದ.

ಮಧ್ಯಾನ್ಹ ಖಾಲಿ ಸಿಕ್ಕಾಗ...ಸಾಂಧರ್ಬಿಕವಾಗಿ "ಹುಡಿಗಿದು ಎಲ್ಲಿಗಿ ಬಂತು?" ಅಂತ ಕೇಳಿದೆ. ಉಡುಪಿ ಗ್ರಾಂಥಿಕ ಭಾಷಾದಳೊಗ "ನಮ್ಮ ಮನೆಯವರಿಗೆ ಸ್ವಲ್ಪವೂ ಬುದ್ಧಿ ಇಲ್ಲ " ಅಂದ. ಓಹ್ ಬಹುಶಃ ಮನೆಯವ್ರು ಒಲ್ಲದ ಮದುವಿಗಿ ಫ಼ೊರ್ಸ್ ಮಾಡ್ತಿರಬೇಕು ಅನ್ಕೊಂಡೆ. "ಯಾಕೆ ಏನ ಅಯಿತು?" ಅಂದೆ. ಅರ್ಧ ಘಂಟೆ (ಒಂದ ನೂರಾ ಹನ್ನೆರಡು ಪ್ರಶ್ನೆ) ಆದ ಮೇಲೆ ನನಗೆ ಗೊತ್ತಾಗಿದ್ದು ಇಷ್ಟು:

ಇವನು, ತಮ್ಮ ಅಪ್ಪಾ, ಅಮ್ಮಾ ಮತ್ತೊಂದಿಬ್ಬರ ಜೋಡಿ ಹುಡುಗಿನ ನೋಡ್ಲಿಕ್ಕಿ ಅವರ ಮನಿಗಿ ಹೊಗ್ಯಾರ. ಮಾಮೂಲಿನಂಗ ಕೇಸರಿಭಾತು, ಉಪ್ಪಿಟ್ಟನಂತಾದ್ದು ಏನೊ ಆಗ್ಯೇದ. ಹುಡಿಗಿನ ನೊಡ್ಯಾರ..ಆ ಹುಡುಗಿ ನೋಡ್ಲಿಕ್ಕಿ ತುಸು ಜಾಸ್ತಿನೇ ದಪ್ಪ ಇದ್ದಾಳ..ಮತ್ತ ಓದಿದ್ದು ಕಮ್ಮಿ...ಹಿಂಗಾಂಗಿ..ಮನಿಗಿ ಬಂದ ಮ್ಯಾಲ ಹುಡಿಗಿ ನಮಗ ಒಪ್ಪಿಗಿ ಇಲ್ಲಾ ಅಂತಾ ತಿಳಿಸು ನಿರ್ಧಾರಕ್ಕ ಬಂದಾರ ..ಇಲ್ಲಿ ತನಕ ಎಲ್ಲಾ ಮಾಮೂಲಿನೇ ಹೌದಿಲ್ಲೊ?...ಮುಂದ ಕೇಳ್ರಿ.... ನಮ್ಮ ಹುಡುಗ ಮಾತ್ರ ಇಲ್ಲಾ ಆ ಹುಡುಗಿನೇ ಮದುವೆ ಆಗೊದು ಅಂತ ಹಟ ಹಿಡದಾನ. ಅವರ ಅಪ್ಪ ಕಾಲಲ್ಲಿರೋ ಚಪ್ಪಲಿ ಕೈಗೆ ತೊಗೊಂಡ್ರ.. ಇವನ ಅಮ್ಮ ತಮ್ಮ ಯಜಮಾನರಿಗೆ ಸಮಾಧಾನ ಮಾಡಿ, ನಮ್ಮ ಹುಡುಗನ್ನ "ಯಾಕೊ..?" ಅಂತ ಕೇಳ್ಯಾರ. ಅದಕ್ಕ ಇವನು "ಅಲ್ಲಾ ಅವರ ಮನೆಗೆ ಹೋಗಿ ಕಾಫಿ ತಿಂಡಿ ತಿಂದಬಿಟ್ಟು ನೀವು ಈಗ ಹುಡುಗಿ ಒಪ್ಪಿಗೆ ಇಲ್ಲಾ ಅಂತಾ ಹ್ಯಾಗ ಹೇಳ್ತಿರಾ? ಅವರ ಮನಸ್ಸಿಗಿ ಬೇಜಾರ ಆಗೊಲ್ವ" ಅಂತ ವಾದ ಹಾಕಿದ್ನಂತ. ಕೊನಿಗಿ ಆ ಹುಡಿಗಿ ಅಪ್ಪನೇ..ಬೇಜಾರ ಮಾಡ್ಕೊಳಂಗಿಲ್ಲಾ ಅಂತ ಹೇಳಿ...ಇವನ್ನ ಬೆಂಗಳೂರಿಗಿ ಕಳಿಸಿದರಂತ.

ಈಗ ಆ ಹುಡುಗ (ಬ್ಯಾರೆ ಹುಡಿಗಿನ) ಮದುವಿ ಮಾಡ್ಕೊಂಡು..ಒಂದು ಮಗುವಿನ ತಂದೆ ಆಗ್ಯಾನ. ಇವನ್ನ ಮದುವಿ ಮಾಡ್ಕೊಂಡ ಆ ಹುಡುಗಿ ಜವಾಬ್ದರಿ ಎಷ್ಟು ಅಂತ ನನಗೂ ಗೊತ್ತದ.

ಮದುವೆ ಅನುಭಂದ ೩


ಮುಟ್ಟಿದ್ದಕ್ಕ ಮೂರು ಅನ್ನೋವಂಗ, ಇನ್ನೊಂದು ಮಜುಕೂರ ಕಥಿ ಹೇಳಿ ಮಂಗಳ ಹಾಡ್ತೀನಿ.

ನಮ್ಮ ಗುಲ್ಬರ್ಗಾದ ಹುಡುಗಂಗ ಬೆಂಗಳೂರನಾಗ “ಕಂಪ್ಯೂಟರ್ ನೌಕರಿ” ಸಿಕ್ಕತು.

ನೌಕರಿ ಸಿಕ್ಕಿದ್ದೇ ತಡ ಆಕಾಶದಿಂದ ಪುಷ್ಪವೃಷ್ಟಿ ಆದವು, ದೇವಾನು-ದೇವತೆಗಳು ಉಘೆ ಉಘೆ ಅಂದರು, ಗಂಧರ್ವರು ಕಿಂಪುರುಷರು ಮಂಗಳ ವಾದ್ಯಗಳನ್ನು ನುಡಿಸಿದರು.ಗಾಳಿಯೊಳಗ ಕಂಪು ಸೇರಿತು, ಶರಣ ಬಸಪ್ಪನ ಗುಡಿಯೊಳಗ ಘಂಟೆಗಳು ಬಾರಿಸಿದ್ವು. ಅಮ್ಮ-ಆಪ್ಪ ಹಣಮಪ್ಪಗ, ಮನಿದೇವರಿಗಿ, ರಾಯರಿಗಿ ನೈವೇದ್ಯ ಅಭಿಷೇಕ ಮಾಡಿಸಿದರು. ಮಗ ಇನ್ನ ಬೆಂಗಳೂರನಾಗ ಒಬ್ಬನೇ ಇರ್ತಾನಲ್ಲ ಕಾಳಜಿ ಮಾಡಿದ್ರು, ಗೆಳೆಯಂದ್ರು, “ಕಳ್ಳ ನನ್ ಮಗ ಉದ್ಧಾರ ಆದ” ಅಂದ್ರು. ಈ ನಮ್ಮ ಹುಡುಗ ಊರಾಗ ಸ್ಲೋ ಮೊಶನನೊಳಗ ತಿರಗಾಡಲಿಕ್ಕತ್ತಿದ.

ಬೆಂಗಳೂರಿಗೆ ಹೋಗೋ ತಯಾರಿ ಶುರು ಆಯಿತು. ಸ್ಟೇಶನಗೆ ಬಂದರಷ್ಟೇ ಮಂದೀನ, ಬೆಂಗಳೂರಿಗಿ ಕರ್ಕೊಂಡು ಹೋಗೋ “ಉದ್ಯಾನ ಎಕ್ಸಪ್ರೆಸ್” ರೈಲ, ಇವನ್ನ ಕರ್ಕೊಂಡ್ ಹೋಗಲ್ಲಿಕ್ಕಿ ಮನಿತನ ಬಂತು. ಬೆಂಗಳೂರ ಮುಟ್ಟುತನ ಜೋಗಳ ಹಾಡಿ, ಜತನಲೇ ಒಯ್ದು ಮುಟ್ಟಿಸಿತು.

ನಮ್ಮೂರ ಕಡೆಯಿಂದ ಬೆಂಗಳೂರಿಗೆ ಬರೋ ಎಲ್ಲಾ ಹುಡುಗರಂಗ ಇವನೂ ವಿಜಯನಗರದಾಗ ನಾಲ್ಕು ಹುಡುಗರು ಜೋಡಿ “ಬ್ಯಾಚುಲರ್ಸ್ ಮನಿ” ಮಾಡಿದ.

ಇದೆಲ್ಲಾ ಆದ ಮುಂದ ಒಂದ ವರ್ಷ-ಎರಡೋರ್ಷಕ್ಕ ಮನ್ಯಾಗ ಮದುವಿ ಮಾಡಿಬಿಡೋಣು ಅಂತ ಅಪ್ಪ-ಅಮ್ಮ ನಿರ್ಧಾರಕ್ಕ ಬಂದರು. ಅಲ್ಲಿಯಿಂದ ನಮ್ಮ ಕಥಿ ಶುರು,

ಮದುವಿ ಮಾತುಕತೆ ಶುರು ಆದ ಕೂಡ್ಲೇ, ಈ ಹುಡುಗಂಗ ಕನ್ನಡಿಯೊಳಗ ಹೃತಿಕ್, ಶಾರುಕ್, ಮತ್ತ ಸಲ್ಮಾನ್ ಕಾಣಸಕೊಳ್ಳಿಕ್ಕಿತ್ತರು. ಅಷ್ಟೇ ಇದ್ದರ ನಡಿತಿತ್ತು, ಆದರ ಕನ್ನಡಿ ಮುಂದ ನಿಂತುಕೊಂಡರ ಹೃತಿಕ ಇಲ್ಲಾ ಶಾರುಕನ ಜೋಡಿ ಲೈನನಾಗ ಹೀರೋಯಿನ್ ಸೈತ ನಿಂತ್ಕೋಳ್ಳಿಕತ್ತರು. ಹುಡುಗ ಹಗಲಗನಸ ಕಾಣಲ್ಲಿಕ್ಕತ್ತದ.

ಅಪ್ಪಂಗ ಊರ ಕಡೆ ಒಳ್ಳೆ ಹೆಸರು ಇತ್ತು, ಅಮ್ಮ ಮಹಿಳಾ ಮಂಡಲ, ಅರಿಷಣ ಕುಂಕಮ ಅಂತಾ ಓಡಾಡತಿದ್ದರು, ಹಿಂಗಾಗಿ ಹುಡುಗೀರ ಜಾತಕ ತೊಂಗೊಂಡು ಹಿರಿಯರು ಬರ್ಲಿಕ್ಕತ್ತಿದ್ದರು. ಅಪ್ಪ-ಅಮ್ಮ ಶನಿವಾರ ಇಲ್ಲಾ ರವಿವಾರ “ಕನ್ಯಾ ನೋಡು” ಕಾರ್ಯಕ್ರಮ ಇಟ್ಕೊತ್ತಿದ್ದರು, ಈ ಹುಡುಗ ಶುಕ್ರವಾರ ರಾತ್ರಿ ಉದ್ಯಾನ ಎಕ್ಸಪ್ರೆಸ್ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ರವಿವಾರ ರಾತ್ರಿ ಮತ್ತ ಬೆಂಗಳೂರಿಗೆ ವಾಪಸ ಬರ್ತಿದ್ದ. ನೋಡಿದ ಹುಡುಗಿರನೆಲ್ಲಾ ಬ್ಯಾಡ ಅಂತ ಹೇಳಿ ರೈಲ ಹತ್ತಿದ್ದ. ಅಪ್ಪ ಅಮ್ಮ ಮುಂದಿನ ವಾರದ್ದು ತಯಾರಿ ಮಾಡ್ಕೊಳಿಕ್ಕಿ ಶುರು ಮಾಡ್ತಿದ್ದರು. ಹೀಂಗೆ ಆರ ತಿಂಗಳು ಕಳದ್ವು. ಊರಾಗ, ಇವರ ಅಪ್ಪ –ಅಮ್ಮನ ಹೆಸರು “ಒಳ್ಳೆಯವರು” ಅನ್ನೋ ಲಿಸ್ಟನಾಂದು ತೆಗದರು. ಅಪ್ಪ ಅಮ್ಮಂಗ ಚಿಂತಿ ಶುರು ಆಯಿತು.

ಮುಂದ ಒಂದು ಶನಿವಾರ, ಮಾಮೂಲಿನಿಂಗ ನಮ್ಮ ಹುಡುಗ “ಕನ್ಯಾ ನೋಡು” ಕಾರ್ಯಕ್ರಮಕ್ಕ ಹಾಜರ ಆದ. ಬಂದ ಕೂಡ್ಲೇ ಈ ಸರ್ತಿ ಯಾಕೋ ಮಾಹೋಲ್ ಸರಿ ಇಲ್ಲ ಅಂತ ಅನ್ನಸ್ತು. ಮನ್ಯಾಗ ಅಡಗಿಯವನ್ನ ಕರಿಸಿದ್ದರು, ಸೋಮವಾರಕ್ಕ ಅಡುಗಿಗೆ ಏನೇನು ಬೇಕು ಅಂತ ಲಿಸ್ಟ ತಯಾರಿ ನಡಿದ್ದಿತ್ತು. ಅಪ್ಪ ಕೂತು ಯಾರ್ಯಾರನ್ನ ಕರಿಬೇಕು ಅಂತ ಲಿಸ್ಟ ಮಾಡ್ಲಿಕ್ಕತ್ತಿದ್ದರು. ಹುಡುಗ ಶ್ಯಾಣೆ, ಏನೋ ಗಡಬಡ ಅದ ಅಂತ ಗೂತ್ತಾಯಿತು. ಅಮ್ಮ ಚಹಾದ ಕಪ್ಪ ಕೈಯಾಗಿ ಇಟ್ಟು, “’ಹಾಲ’ನಾಗಿನ ಟೇಬಲ್ ಮ್ಯಾಲ ಹುಡುಗಿ ಫೋಟೋ ಇಟ್ಟದ ನೋಡು” ಅಂದರು. ಇಂವ ಹೋಗಿ ಫೋಟೋ ನೋಡಿದ. ಅಲ್ಲೇ ಕೂತ್ತಿದ್ದ ಅಪ್ಪನ ಮಾರಿ ನೋಡಿದ,

ಅಪ್ಪ ಹುಡುಗಂಗ ಹೇಳಿದರು

“ನಾವೆಲ್ಲಾ ಹುಡುಗಿನ ನೋಡಿವಿ..ಛಂದ ಇದ್ದಾಳ..ಮೂಗ ಕಣ್ಣ ಎಲ್ಲಾ ಬರೋಬರಿ ಅವ...ಸೋಮವಾರ ನಿಂದು ನಿಶ್ಚಾ (Engagement) ಮಾಡಿತಿವಿ “

ಹುಡುಗಂಗ ಇನ್ನೇನ ಹೇಳಬೇಕು ಗೊತ್ತಾಗಲ್ಲಿಲ್ಲ ಸಾವಕಾಶ ಗಂಟಲು ಕೆರ್ಕೊಂಡು “ನಾ ಸೋಮವಾರ ರಜಾ ತೊಗೊಂಡಿಲ್ಲಾ ನಮ್ಮ ಮ್ಯಾನೇಜರಗ ಹೇಳಿಲ್ಲ” ಅಂತಂದ.

ಅವರ ಅಪ್ಪ “ಹೌದ? ನಿಮ್ಮ ಮ್ಯಾನೇಜರಗ ಫೋನ ಮಾಡು, ನಂದು ನಿಶ್ಚಾ ಅದರಿ..ಅದಕ ಸೋಮವಾರ ರಜಾ ಕೊಡ್ರಿ ಅಂತ ಹೇಳು...ಇಲ್ಲಾ ಅವಂದು ಫೋನ ನಂಬರ್ ಕೊಡು ನಾನೇ ಮಾತಾಡ್ತೀನಿ”

ಹುಡುಗ ಶ್ಯಾಣೆ, ಅಪ್ಪನ ಒಂದೇ ಮಾತಿಗಿ ....ಎಲ್ಲಾ...ತಿಳ್ಕೊಂಡ..ಅರ್ಥ ಮಾಡ್ಕೊಂಡ.

ಹುಡುಗ ತಾಬಡ-ತೋಬಡ ಮ್ಯಾನೇಜರಗಿ ಫೋನ ಮಾಡಿದ,

“ನಿಂದು ಎಂಗೆಜಮೆಂಟ್ ನಿಂಗೆ ಗೊತ್ತಿರಲ್ಲಿಲ್ಲಾ ಅಂದ್ರ ..ನಾ ನಂಬಗಿಲ್ಲಾ...ಲಿವ್ ಪ್ಲ್ಯಾನ್ ಮೊದ್ಲೇ ಮಾಡ್ಕೊಬೇಕಿತ್ತು...” ಅಂತಾ ಮ್ಯಾನೇಜರ್ ಕೂಗಾಡಿದ.....

ಈಗ ನಮ್ಮ ಹುಡುಗ, ಊರ ಹೊರಗ ಒಂದು ಅಪಾರ್ಟ್ಮೆಂಟ್ ತೊಗೊಂಡಾನ. ಇನ್ನೊಂದ ಎರಡು ತಿಂಗಳಿಗೆ ಅಪ್ಪ ಆಗವನಿದ್ದಾನ. ಆದ್ರ ಎಂಗೆಜಮೆಂಟ್ ಆಗೋದು ಗೊತ್ತಿರಲ್ಲಿಲ್ಲ ಅಂತ “ಸುಳ್ಳ” ಹೇಳಿದ್ದಕ್ಕ ಅವನ ಮ್ಯಾನೇಜರನ ಸಿಟ್ಟ ಮಾತ್ರ ಇನ್ನಾ ಕಮ್ಮಿ ಆಗಿಲ್ಲಂತ.

ಭಾನುವಾರ, ಡಿಸೆಂಬರ್ 23, 2012

ದೀಪಾವಳಿ ಹಬ್ಬಾ ಮಾಡೊಣು


ದೀಪಾವಳಿ ಹಬ್ಬಾ ಮಾಡೊಣು

-ಗುರುರಾಜ ಕುಲಕರ್ಣಿ (ನಾಡಗೌಡ)



ಅಮಾವಸಿ ಕತ್ತಲಿಯೊಳಗ ಸಾಲ-ಸಾಲಾಗಿ ದೀಪ ಹಚ್ಚಿ
ಬೆಳಕು ತರೊಣು
ದೀಪಾವಳಿ ಹಬ್ಬಾ ಮಾಡೊಣು ||

ಮನಿಯೊಳಗಿನ ಧೂಳ-ಕಸ ಹೊರಗ ಚೆಲ್ಲೊಣು
ಬಾಳಿಗಿಡ, ತೆಂಗಿನ ಗರಿ,ಹೂವಿನ ಮಾಲಿ, ಬಾಗಿಲಿಗಿ ಕಟ್ಟೊಣು
ದೀಪಾವಳಿ ಹಬ್ಬಾ ಮಾಡೊಣು ||

ಅಕ್ಕನ ತದಿಗಿ, ಭಾವನ ಬಿದಿಗಿ, ನೀರು ತುಂಬು ಹಬ್ಬಾ ಮಾಡೊಣು,
ಮನಿಯವರಿಗೆಲ್ಲಾ ಆರತಿ, ದೇವರಿಗಿ ಮಂಗಾಳರತಿ ಮಾಡೊಣು,
ದೀಪಾವಳಿ ಹಬ್ಬಾ ಮಾಡೊಣು ||

ಅಮ್ಮ ಮಾಡಿಟ್ಟಿದ್ದ ಚಕ್ಕಲಿ ಉಂಡಿ ಫರಾಳ ತಿನ್ನೊಣು,
ಭೂಚಕ್ರ, ಸುರುಸುರು ಬತ್ತಿ, ಪಟಾಕಿ ಹೊಡಿಯೊಣು,
ದೀಪಾವಳಿ ಹಬ್ಬಾ ಮಾಡೊಣು||

ದೊಡ್ಡವರು, ಸಣ್ಣವರು, ಎಲ್ಲಾರು ಅಂಗಡಿಗಿ ಹೊಗೊಣು,
ಹೊಸಾ ಹೊಸಾ ಬಟ್ಟೆ ತಂದು-ಹಾಕೊಂಡು, ಗತ್ತು ತೊರಿಸೊಣು
ದೀಪಾವಳಿ ಹಬ್ಬಾ ಮಾಡೊಣು||

ಸಿಟ್ಟ ಸೆಡವ ಮಾಡ್ಕೊಂಡು ದೂರ ಇದ್ದವರಿಗೆ ಹತ್ತರ ಕರಿಯೋಣು
ಅಕ್ಕ ಪಕ್ಕದವರು, ಮನಿವರೆಲ್ಲಾ ಕಡಬು ತಿಂದು ಸಂತೋಷ ಪಡೋಣು
ದೀಪಾವಳಿ ಹಬ್ಬಾ ಮಾಡೊಣು||

ಚಿಂತೆ-ದುಃಖ ಮರೆತು,ಲಕ್ಷ್ಮೀ ಪೂಜಾ ಮಾಡೊಣು,
ನಾಳೆ ನಮ್ಮದೇ ಅಂತಾ ಸೆಡ್ಡು ಹೊಡ್ಕೊಂಡು
ದೀಪಾವಳಿ ಹಬ್ಬಾ ಮಾಡೊಣು||    
******
-೨೦೧೨ ವರ್ಷದ ದೀಪಾವಳಿಗಿ ಬ್ರಸಲ್ಸ್ ನಿಂದ ಸಿಂದಗಿಗೆ ಹೊಗೊ ತಯಾರಿ ನಡೆಸಿದಾಗ ಅನ್ಸಿದ್ದನ್ನ ಕವನದ ರೂಪದಾಗ ಬರೆದ್ದಿದ್ದು. ಸಿಂದಗಿಯೊಳಗೆ ದೀಪಾವಳಿ ಮಾಡೊದು ಅಂದ್ರ...ಸಂತೋಷನೊ ಸಂತೋಷ...ಕಳೆದ ಇಪ್ಪತ್ತು - ಇಪ್ಪೈತ್ತೈದು ವರ್ಷದೊಳಗ ಒಂದೊ-ಎರಡೊ ಸರ್ತಿ ತಪ್ಪಸಕೊಂಡಿನಿ ಅಷ್ಟೆ.

ಸಿಂದಗಿ ಬ್ಯಾಸಗಿ ಅಂದ್ರ...

ಸಿಂದಗಿ ಬ್ಯಾಸಗಿ ಅಂದ್ರ..

 


-ಗುರುರಾಜ ಕುಲಕರ್ಣಿ(ನಾಡಗೌಡ) 



ಸಿಂದಗಿ ಬ್ಯಾಸಗಿ ಅಂದ್ರ,
ಮುಂಜಾನೇನೆ ಶುರು ಆಗೊ ರಣ ರಣ ಬಿಸಿಲು,
ರಾತ್ರಿ ಆದ್ರೂನು ಸುಡು ಸುಡು ನೆಲ,
ಟೇಬಲ್ ಮ್ಯಾಲ್ ಸುಮ್ಮನೆ ಕೂತಿರೊ ಫ಼್ಯಾನು,
ಅಲ್ಲಾಡದೆ ನಿಂತಿರೊ ಗಿಡದ ಟೊಂಗೆ,
ಬೆವರಿನೊಳಗ ನೆಂದಿರೊ ಕರಿ, ಬಿಳಿ ಟೊಪಿಗೆಗಳು;

ಸಿಂದಗಿ ಬ್ಯಾಸಗಿ ಅಂದ್ರ,
ಮಣ್ಣೂರ ಸರ್, ವಾಡೆ ಸರ್ ಪುಸ್ತಕದ ಅಂಗಡಿ ಮುಂದ ನಿಂತಿರೊ ಹುಡುಗ್ರು,
ಪರೀಕ್ಷಾ ತಯಾರಿ, ಕ್ಲಿಪ್ ಬೋರ್ಡ, ಹೊಸಾ ಪೆನ್, ಕೆಂಪ ಮಸಿ ಬಾಟಲಿ,
ನಟರಾಜ್ ಪೆನ್ಸಿಲ್, ಲೇಖಕ್ ನೋಟ ಬುಕ್, ಬಿಳಿ ಹಾಳಿ ಖರೀದಿ;

ಸಿಂದಗಿ ಬ್ಯಾಸಗಿ ಅಂದ್ರ, 
ಜೋಗೂರ ಬಸುನ ಹೊಲದ್ದು ಮಾವಿನ ಹಣ್ಣ್,
ಸಿದಗೊಂಡಪ್ಪನವರ್ ತ್ವಾಟದಾಗಿನ ದ್ರಾಕ್ಷಿ,
ಬಜ಼ಾರದಾಗ ಕೂತು, ಬುಡ್ಡಿ-ಮಾ ಮಾರೊ "ಕಾಶಿ" ಬಾರಿಹಣ್ಣ್,
ಗಾರೆಗಾರ್- ಲಾಲ್‍ವಾಲದೊನ್ ಒತ್ತು ಬಂಡಿ;

ಸಿಂದಗಿ ಬ್ಯಾಸಗಿ ಅಂದ್ರ,
 ಅಂಗಡಿಗೋಳ ಮುಂದ ’ಚಾ’ದ ಜೋಡಿ ಬೀಡಿ ಸೇದೊರು,
ಹಣಮಂತ್ ದೇವರ್ ಗುಡಿ ಕಟ್ಟಿಗಿ ಮಲ್ಕೊಂಡ ಮುದುಕ,
ಚಡ್ಡಿ ಹಾಕ್ಕೊಳಾರದೆ ಆಡು ಸಣ್ಣ್ ಸಣ್ಣ್ ಚಿಕ್ಕೊಳು,
ಮೆಲಕಾಡಸ್ಕೊತ್ ಕೂತ ದನಗೊಳು,
ಮನಿ ಮಗ್ಗಲಾಗಿನ್ ಬೇವಿನ ಗಿಡದ ನೆರಳ;

ಸಿಂದಗಿ ಬ್ಯಾಸಗಿ ಅಂದ್ರ,
 ಎಂಟೆನೆ ಸರ್ತಿ "ಮಯೂರ" ಸಿನೆಮಾ ನೋಡ್ಲಿಕ್ಕಿ ಬಂದೊರು,
ಸೆಖಿ ತಡಿಲಾರ್ದೆ ಶರ್ಟ್ ಬಿಚ್ಚಕೊಂಡು ಕೂತು, ಸೀಟಿ ಹೊಡಿಯೊ ಹುಡುಗ್ರು,
ಕಠಾರಿ ವೀರ, ಬಾಲನಾಗಮ್ಮ, ತಾಯಿಯ ಮಡಿಲ್ಲಲ್ಲಿ ಪೋಸ್ಟರಗಳು,
ಇಂಟರವಲ್ಲ್ನಾಗ್, ನಾಸಿ ಉಮೇಶ ಮಾರೊ ಪೆಪ್ಪರಮಿಂಟು;

ಸಿಂದಗಿ ಬ್ಯಾಸಗಿ ಅಂದ್ರ,
ಜಂಬಗಿ ಸರ್ ಹೇಳಿ ಕೊಡೊ ಭಾಷಾಂತರ ಪಾಠಮಾಲೆ ಒಂದು, ಎರಡು, ಮೂರು,
ಕಪಾಟನಾಗಿರೊ ಹಳೇ ಕಸ್ತೂರಿ, ಕರ್ಮವೀರ
ಶೆಲ್ಫ್ನಾಗಿರೊ ಬೇಂದ್ರೆ, ಕಾರಂತ, ಭೈರಪ್ಪ, ಡಿವಿಜಿಯವರ ಪುಸ್ತಕಗೊಳು,
ತೊಡಿಮ್ಯಾಲಿರೊ "ಬೊಂಬೆಮನೆ", ಕೈಯೊಳಗಿರೊ "ಚಂದಮಾಮ",
"ಸುಧಾ"ದಾಗಿನ ಫ್ಯಾಂಟಮ್, "ಕರ್ಮವೀರ"ನಾಗಿನ ವಿಕ್ರಮ;

ಸಿಂದಗಿ ಬ್ಯಾಸಗಿ ಅಂದ್ರ, 
 ಅಮ್ಮ ಮಾಡಿದ ಉಳ್ಳಾಗಡ್ಡಿ, ಟೊಮೇಟೊ ಹುಳಿ,
ಗೊಲಿಗುಂಡ ಆಡಿದ್ದಕ್ಕ ದಾದಾ ಕೊಟ್ಟ ಏಟು,
ಅಕ್ಕ-ಅಣ್ಣನ ಜೋಡಿ ಆಡಿದ್ದ ಕೆರಂಬೊರ್ಡು,
ಧಾರವಾಡ ಆಕಾಶವಾಣಿಯೊಳಗ ಬರೊ ಗಿಳಿವಿಂಡು;

ಸಿಂದಗಿ ಬ್ಯಾಸಗಿ ಅಂದ್ರ,
ಮುಂಜಾನೆ ಜಕ್ಕಪ್ಪಯ್ಯನೊರ ತ್ವಾಟದ ಬಾವಿ ಈಜು,
ಸಂತಿಯೊಳಗ ಮೈಬು ತಂದ ತಾಜ಼ಾ ಬೆಣ್ಣಿ,
ಬಿಸಿ ಬಿಸಿ ಭಕ್ಕರಿ ಪಲ್ಯ ಊಟ-ಮಧ್ಯಾಹ್ನದ ನಿದ್ದಿ,
ಸಂಜಿಮುಂದ ಆಡೊ, ಬುಗುರಿ, ಚಿಣದಾಂಡ, ಗೊಲಿಗುಂಡ,
ರಾತ್ರಿ ಮುಗಿಲಾನಾಗ ಕಾಣೊ ಬೆಳ್ಳಗಿನ ಚಂದ್ರಾಮ;

ಸಿಂದಗಿ ಬ್ಯಾಸಗಿ ಅಂದ್ರ,
ಅಮ್ಮ ಮಾಡೊ ನಿಂಬೆ ಹಣ್ಣಿನ ಶರಭತ್,
ದಾದಾ ಹೇಳೊ ಹಿಪ್ಪರಗಿ ಹಳೇ ಸುದ್ದಿಗಳು, ಕಥಿಗೊಳು,
ಅಣ್ಣನ ಜೋಡಿ ಆಡೊ ಬಾಡಿಗಿ ಸೈಕಲ ಆಟ,
ಗಡಿಗಿಯೊಳಗ ಇರೊ ತಣ್ಣಗಿನ ನೀರು;

ಸಿಂದಗಿ ಬ್ಯಾಸಗಿ ಅಂದ್ರ,
ಹೋಳಿಹುಣ್ಣಿವಿಗಿ ಮಾಡೊ ಕುಳ್ಳ ಕಟ್ಟಿಗಿ ಕಳ್ಳತನ,
ಮರುದಿನ ಲಬೊ ಲಬೊ ಹೊಯ್ಕೊತ ಬಣ್ಣ ಹಾಕೊ ಗೆಳೆಯಂದ್ರು,
ಬಡಿಗೇರ ಭಗವಂತ, ಪತ್ತಾರ ಉಮೇಶ, ನಾಗೂರ ಅನಿಲ್,
ಗೋಲಾ ರವಿ, ಜೋಶಿ ರಾಮಾಚಾರಿ, ಗುಣಾರಿ ಶಿವು,
ಕುಲ್ಕರ್ಣಿ ಸಂಜೀವ, ಪಾಟೀಲ ವಿಜು,ಸಂಗಯ್ಯ, ಮನಗೂಳಿ ಅಶೋಕ

ಶಬ್ದಾರ್ಥ

ಬುಡ್ಡಿ ಮಾ - ಸಂತಿಯೊಳಗ ತರಕಾರಿ-ಹಣ್ಣು ಮಾರುತಿದ್ದ ಮುಸಲ್ಮಾನರ
ಮುದುಕಿ, ಮಕ್ಕಳಿಗೆಲ್ಲಾ ಬುಡ್ಡಿ-ಮಾ ಎಂದೇ ಪರಿಚಿತ

ಗಾರೆಗಾರ್ವಾಲ್ - ಐಸ್ ಮಾರೊನಿಗೆ ಮಕ್ಕಳು ಕೂಗೊ ಹೆಸರು

ಚಿಕ್ಕೊಳು - ಚಿಕ್ಕ ಮಕ್ಕಳು

ಕುಳ್ಳು - ಬೆರಣಿ  


ವಿನಯ ಕೃಷ್ಣಸ್ವಾಮಿ  ಫ಼ೇಸ್ ಬುಕ್ ನಾಗ "ಗುರುವಾಯುರನ ಕೆರೆ" ಬಗ್ಗೆ ಓದಿ ಅಪ್‍ಡೇಟ್ ಮಾಡಿದ್ದು ನೋಡಿ, ನನ್ನೂರ ಸಿಂದಗಿ ನೆನಪಾಯಿತು.

ಮಲೆನಾಡಿನವರಿಗಿ ಬರಿಲ್ಲಿಕ್ಕಿ ಹಸಿರ ಹುಲ್ಲ, ಗುಡ್ಡ ಮತ್ತ ನೀರು ಅವ, ಕಾಡು ಅದ...ಆದ್ರ ಬಯಲ ಸೀಮಿಯೊಳಗ ಹುಟ್ಟಿ ಬೆಳೆದ ನನ್ನಂತಹವರಿಗಿ...ಬ್ಯಾಸಗಿ ಬಿಸಿಲ ಬಿಟ್ಟು ಬರಿಲಿಕ್ಕಿ ಏನೂ ಇಲ್ಲಾ...

ಏನೂ ಇಲ್ಲಾ ಅಂದ್ರೂನು...ನನ್ನೂರಾಗ ನನ್ನ ಬಾಲ್ಯ ಅದ..ಗೆಳೆಯಿಂದ್ರು ಇದ್ದಾರ...ಗೆಳೆತನ ಅದ..ಮಜ಼ಾ ಅದ...ಅದನ್ನೇ ಬರೆದೆ..ಕವನ ಆಯಿತು...

ಹುಣಸಿ ಗಿಡಗೊಳ ಸಾಲು



ಹುಣಸಿ ಗಿಡಗೊಳ ಸಾಲು



- ಗುರುರಾಜ ಕುಲಕರ್ಣಿ (ನಾಡಗೌಡ)



ಎಲ್ಲಿ ಹೋದ್ವು ಆ ಹುಣಸಿ ಗಿಡಗೊಳು?


ನಮ್ಮೂರಿಗಿ ಬರೊ ಮಂದಿಗೆ ಟೊಂಗೆ ಅಲ್ಲಾಡ್ಸ್ಕೊತ
ಬರ್ರಿ ಬರ್ರಿ ಅಂತ ಕರಿತಿದ್ದ ಗಿಡಗೊಳು;


ಅಪ್ಪಿ-ತಪ್ಪಿ ಊರಕಡೆ ಬರೊ ಮಂಗ್ಯಾಗಳಿಗಿ,
ಧರ್ಮಸಾಲಿಯಂಗ ಇದ್ದ ಗಿಡಗೊಳು;


ಹೊಡದ ಕಲ್ಲಿಗಿ ಬೊಗಸಿಗಟ್ಟಲೆ ಚಿಗರ ಹುಣಸಿ ಕೊಟ್ಟು,
ಹುಡುಗರಿಗೆಲ್ಲಾ ಸಮಾಧಾನ ಮಾಡ್ತಿದ್ದ ಗಿಡಗೊಳು;


ತಿಳಿ ಹಸಿರ ಬಣ್ಣದ ಎಲಿ, ಬಿಳಿ ಬಣ್ಣದ್ದ ಹೂವ ಇಟ್ಕೊಂಡು,
ಡೌಲು ಮಾಡ್ಕೊಂಡು ನಿಂದರ್‌ತಿದ್ದ ಗಿಡಗೊಳು;


ಮುಗಿಲನಷ್ಟು ಎತ್ತರಾ, ಗುಡ್ಡದಂತಾ ಬೊಡ್ಡಿ,
ಊರ ಕಾಯೋ ಕ್ವಾಟಿ ಬಾಗಿಲನಂಗ ಇದ್ದ ಗಿಡಗೊಳು;


ಬಸ್ ತಪ್ಸ್ಕೊಂಡ ಮಂದಿಗಿ, ನೆರಳ ಕೊಟ್ಟು,
ಗಾಳಿ ಬೀಸಿ, ಜೋಗಳ ಹಾಡ್ತಿದ್ದ ಗಿಡಗೊಳು;
 

ಸಾಲಿಗಿ ಬಂದ ಹುಡುಗರಿಗಿ, ಕೈ ಮಾಡಿ ಕರದು,
ಗಿಡ-ಮಂಗ್ಯಾ ಆಟ ಕಲಸತ್ತಿದ್ದ ಗಿಡಗೊಳು;


ಯಾರೋ ಪುಣ್ಯಾತ್ಮ, ಊರ ಮುಂದಿನ ರಸ್ತಾದುದ್ದಕ್ಕ
ನಮ್ಮಂತಹವರ ಸಲುವಾಗಿ ಬೆಳೆಸಿದ್ದ ಗಿಡಗೊಳು;



ಎಲ್ಲಿ ಹೋದ್ವು ಆ ಹುಣಸಿ ಗಿಡಗೊಳು?




-------------------------------------------------------------

ನನ್ನ ಮೆಚ್ಚಿನ ಕವಿ ಗುಲ್ಜಾರ್ ಅವರ “ಇಮ್ಲಿ ಕಾ ಪೇಡ್”
ಕಾವ್ಯ ವಾಚನ (ಯು ಟ್ಯೂಬ್ ನೊಳಿಗ) ನೋಡಿ ನನಗೆ ನಮ್ಮ ಸಾಲಿ ಮುಂದ... ಪಿ ಡಬ್ಲು ಡಿ ಮುಂದ........ ಇದ್ದ ಹುಣುಸಿ ಗಿಡಗೋಳು ನೆನಪಾದು.   ಆವಾಗ ಈ ಕವನ ಅನ್ನುವಂತಾದ್ದದ್ದು ಹೊರಗ ಬಂತು.

ತ್ರಾಸು ತೊಗೊಂಡು ಈ ಕವನ ಓದಿದ್ದ ಸುಚಿನ್, ಜ್ಯೋತಿ, ಪಲ್ಲವಿ, ರಾಜೀವ ಮತ್ತು ನಮ್ಮಣ್ಣ ಶರದ...ಎಲ್ಲಾರಿಗೂ ಧನ್ಯವಾದಗಳು.

ಈ ಸಾಲುಗಳನ್ನು ಓದಿ, “ಗುರುರಾಜಾ...ನಿನ್ನ ಗದ್ಯ ಭಾಳ ಚೊಲೋ ಅದ, ಅದರಾಗಿ ಬರಿ” ಅಂತ ಆಶೀರ್ವಾದ ಮಾಡಿದ ನಮ್ಮಕ್ಕ ಸೌ ।। ಮಿತ್ರವಿಂದಾಗೂ ನನ್ನ ನಮಸ್ಕಾರ ಅದ