ಭಾನುವಾರ, ಡಿಸೆಂಬರ್ 23, 2012

ಹುಣಸಿ ಗಿಡಗೊಳ ಸಾಲು



ಹುಣಸಿ ಗಿಡಗೊಳ ಸಾಲು



- ಗುರುರಾಜ ಕುಲಕರ್ಣಿ (ನಾಡಗೌಡ)



ಎಲ್ಲಿ ಹೋದ್ವು ಆ ಹುಣಸಿ ಗಿಡಗೊಳು?


ನಮ್ಮೂರಿಗಿ ಬರೊ ಮಂದಿಗೆ ಟೊಂಗೆ ಅಲ್ಲಾಡ್ಸ್ಕೊತ
ಬರ್ರಿ ಬರ್ರಿ ಅಂತ ಕರಿತಿದ್ದ ಗಿಡಗೊಳು;


ಅಪ್ಪಿ-ತಪ್ಪಿ ಊರಕಡೆ ಬರೊ ಮಂಗ್ಯಾಗಳಿಗಿ,
ಧರ್ಮಸಾಲಿಯಂಗ ಇದ್ದ ಗಿಡಗೊಳು;


ಹೊಡದ ಕಲ್ಲಿಗಿ ಬೊಗಸಿಗಟ್ಟಲೆ ಚಿಗರ ಹುಣಸಿ ಕೊಟ್ಟು,
ಹುಡುಗರಿಗೆಲ್ಲಾ ಸಮಾಧಾನ ಮಾಡ್ತಿದ್ದ ಗಿಡಗೊಳು;


ತಿಳಿ ಹಸಿರ ಬಣ್ಣದ ಎಲಿ, ಬಿಳಿ ಬಣ್ಣದ್ದ ಹೂವ ಇಟ್ಕೊಂಡು,
ಡೌಲು ಮಾಡ್ಕೊಂಡು ನಿಂದರ್‌ತಿದ್ದ ಗಿಡಗೊಳು;


ಮುಗಿಲನಷ್ಟು ಎತ್ತರಾ, ಗುಡ್ಡದಂತಾ ಬೊಡ್ಡಿ,
ಊರ ಕಾಯೋ ಕ್ವಾಟಿ ಬಾಗಿಲನಂಗ ಇದ್ದ ಗಿಡಗೊಳು;


ಬಸ್ ತಪ್ಸ್ಕೊಂಡ ಮಂದಿಗಿ, ನೆರಳ ಕೊಟ್ಟು,
ಗಾಳಿ ಬೀಸಿ, ಜೋಗಳ ಹಾಡ್ತಿದ್ದ ಗಿಡಗೊಳು;
 

ಸಾಲಿಗಿ ಬಂದ ಹುಡುಗರಿಗಿ, ಕೈ ಮಾಡಿ ಕರದು,
ಗಿಡ-ಮಂಗ್ಯಾ ಆಟ ಕಲಸತ್ತಿದ್ದ ಗಿಡಗೊಳು;


ಯಾರೋ ಪುಣ್ಯಾತ್ಮ, ಊರ ಮುಂದಿನ ರಸ್ತಾದುದ್ದಕ್ಕ
ನಮ್ಮಂತಹವರ ಸಲುವಾಗಿ ಬೆಳೆಸಿದ್ದ ಗಿಡಗೊಳು;



ಎಲ್ಲಿ ಹೋದ್ವು ಆ ಹುಣಸಿ ಗಿಡಗೊಳು?




-------------------------------------------------------------

ನನ್ನ ಮೆಚ್ಚಿನ ಕವಿ ಗುಲ್ಜಾರ್ ಅವರ “ಇಮ್ಲಿ ಕಾ ಪೇಡ್”
ಕಾವ್ಯ ವಾಚನ (ಯು ಟ್ಯೂಬ್ ನೊಳಿಗ) ನೋಡಿ ನನಗೆ ನಮ್ಮ ಸಾಲಿ ಮುಂದ... ಪಿ ಡಬ್ಲು ಡಿ ಮುಂದ........ ಇದ್ದ ಹುಣುಸಿ ಗಿಡಗೋಳು ನೆನಪಾದು.   ಆವಾಗ ಈ ಕವನ ಅನ್ನುವಂತಾದ್ದದ್ದು ಹೊರಗ ಬಂತು.

ತ್ರಾಸು ತೊಗೊಂಡು ಈ ಕವನ ಓದಿದ್ದ ಸುಚಿನ್, ಜ್ಯೋತಿ, ಪಲ್ಲವಿ, ರಾಜೀವ ಮತ್ತು ನಮ್ಮಣ್ಣ ಶರದ...ಎಲ್ಲಾರಿಗೂ ಧನ್ಯವಾದಗಳು.

ಈ ಸಾಲುಗಳನ್ನು ಓದಿ, “ಗುರುರಾಜಾ...ನಿನ್ನ ಗದ್ಯ ಭಾಳ ಚೊಲೋ ಅದ, ಅದರಾಗಿ ಬರಿ” ಅಂತ ಆಶೀರ್ವಾದ ಮಾಡಿದ ನಮ್ಮಕ್ಕ ಸೌ ।। ಮಿತ್ರವಿಂದಾಗೂ ನನ್ನ ನಮಸ್ಕಾರ ಅದ

ಕಾಮೆಂಟ್‌ಗಳಿಲ್ಲ: