ಭಾನುವಾರ, ಜನವರಿ 20, 2013

ಒಂದು ಅಪ್ರಕಟಿತ ಸಂಶೋಧನಾ ಲೇಖನ

ಒಂದು ಅಪ್ರಕಟಿತ ಸಂಶೋಧನಾ ಲೇಖನ

-ಗುರುರಾಜ ಕುಲಕರ್ಣಿ (ನಾಡಗೌಡ)


ನಾನು ಬೆಂಗಳೂರಿಗೆ ಬಂದ ಹೊಸತರೋಳಗ ನಡಿದಿರೋ ಕಥಿ ಇದು. ಆವಾಗ ಬೆಂಗಳೂರು ಈಗಿನಷ್ಟು ಹಾಳು ಆಗಿರಲ್ಲಿಲ್ಲ, ಕೆಂಪೇಗೌಡರು ಮ್ಯಾಲನಿಂದ ನೋಡಿದಾಗ ಸಂತೋಷ ವ್ಯಕ್ತ ಪಡಿಸದೇ ಇದ್ದರೂ ಈಗಿನಂಗ ಬೆಂಗಳೂರ ನೋಡಿ ದುಃಖ ಅಂತೂ ಪಡತಿರಲ್ಲಿಲ್ಲ ಅಂತ ನಾನು ಅನ್ಕೊತಿನಿ.


ಬ್ಯಾಸಿಗಿಗೂ, ಸಂಜಿ ಮುಂದ ನಾಲ್ಕು ಹನಿ ಉದುರಿ ಹವಾ ತಣ್ಣಗ ಇರ್ತಿತ್ತು. ರೋಡ ಮ್ಯಾಲ ಒಂದ ನಾಲ್ಕಾರು ಕಾರು ಓಡಾಡ್ತದ್ದಿವು. ಧೂಳ, ಕಸ ಅಂತ ಏನೂ ಇರ್ತಿರಿಲ್ಲ. ನಿಮಗ ಕಣ್ಣ ದೃಷ್ಟಿ ಸರಿ ಇದ್ದರ, ಬ್ರಿಗೆಡ್ ರಸ್ತಾ ಜಂಕ್ಷನ್ ಹತ್ತರ ನಿಂತರ, ಎಂ ಜಿ ರಸ್ತಾ ಕೊನಿನೂ ಕಾಣಿಸ್ತಿತ್ತು.

ಕಬ್ಬನ ಪಾರ್ಕ್ನಾಗ ಇನ್ನಾ ಹಸಿರು ಇರತ್ತಿತ್ತು, ಅಲ್ಲಲ್ಲಿ ಗುಲ್ ಮೊಹರ್ ಗಿಡಗಳು ಕೆಂಪು ಹಳದಿ ಹೂ ಬಿಟ್ಟು, “ನೀ ನಡೆವ ದಾರಿಯಲ್ಲಿ ನಗೆ ಹೂಬಾಡದಿರಲಿ” ಅಂತ ಹಾಡ ಹಾಡತ್ತಿದ್ದವು. ಲಾಲಬಾಗನಾಗ ರುಚಿ ಇದ್ದ ಹಣ್ಣು ಹಂಪಲ ತಿನ್ನಿಲ್ಲಿಕ್ಕಿ ಸಿಗಿತ್ತಿದ್ವು ಮತ್ತ ಅಲ್ಲಿ ಮಂದಿಗಿ ವಾಕಿಂಗ ಮಾಡ್ಲಿಕ್ಕಿ, ಗಾಡಿ ಪಾರ್ಕಿಂಗ್ ಮಾಡ್ಲಿಕ್ಕಿ ಜಾಗ ಇರತ್ತಿತ್ತು.

ಮೆಜೆಸ್ಟಿಕನಾಗ ಅಣ್ಣಾವ್ರುದು, ಸಾಹಸ ಸಿಂಹನವರದು ಕಟೌಟಗಳಿಗೆ ಖರೆ ಖರೆ ಅಭಿಮಾನಿಗಳು ಹಾಲು, ಹಾರ, ಜೈಕಾರ ಹಾಕ್ತಿದ್ದರು. ಈ ಫ್ಲೈ ಒವರಗಳು, ಸಬ್ ವೇ-ಗಳು, ಒನ್ ವೇ-ಗಳು ಒಂದೂ ಇರಲ್ಲಿಲ್ಲ. ಜಯನಗರ ಫೋರ್ಥ್ ಬ್ಲಾಕ ಶಾಪಿಂಗ್ ಕಾಂಪ್ಲೆಕ್ಸ್ ನಮ್ಮಂತಾವರಿಗೆ “ಹ್ಯಾಂಗ ಔಟ್” ಜಾಗ ಆಗಿತ್ತು.

ಗಣಪತಿ ಹಬ್ಬಕ್ಕ, ಇಲ್ಲಾ ರಾಜ್ಯೋತ್ಸವಕ್ಕ ಹಿರಣ್ಣಯ್ಯನಂತೋರು ಅಚ್ಚ ಕನ್ನಡದ ನಾಟಕ ಮಾಡ್ತಾ ಇದ್ದರು.

ರಾತ್ರಿ ೧೦ ಗಂಟೆಗೆ ಆಟೋ ಬೇಕು ಅಂದ್ರ..ಬಿಕೋ ಅನ್ನೋ ರೋಡನಾಗ ಯಾವ ಗಾಡಿನೂ ಸಿಗಲಾರದೆ ಹೈರಾಣ ಆಗತ್ತಿತ್ತು. ಮುಂಜಾನೆ ತಿಂಡಿಗಿ ಅಂತ ಒಂದು “ಸಿಂಗಲ್ ಇಡ್ಲಿ ವಡಾ” ತಿಂದರೆ ಸಾಯಂಕಾಲತನಕ ಹಸಿವಿನೆ ಅಗ್ತಿರಲ್ಲಿಲ್ಲ, ಅದು ಅಲ್ದೆ ಈ “..ದರ್ಶಿನಿ” ಅನ್ನೊ ಹೋಟೆಲಗಳ ಸುದ್ದಿನೇ ಇರಲ್ಲಿಲ್ಲರಿ. ಆಮೇಲೆ ಎಲ್ಲದಕ್ಕಿಂತಾ ಮುಖ್ಯವಾಗಿ ಬಿ ಟಿ ಎಸ್ ಬಸನಾಗ್ ವಯಸ್ಸಾದವ್ರಿಗಿ, ಹೆಣ್ಣ ಮಕ್ಕಳಿಗಿ ಕೂಡ್ಲಿಕ್ಕಿ ಜಾಗ ಸಿಗಿತ್ತಿತ್ತು,

ಒಟ್ಟಿನಾಗ ಆಗ ಬೆಂಗಳೂರನಾಗ ಭಾಳ ಸುಭಿಕ್ಷಾ ಇತ್ತು.

ಅಂದಂಗ ನಾ ಹೇಳೋದು ಎಲ್ಲಾ ಕೇಳಿ, ಇವೆಲ್ಲಾ ಎಲ್ಲೋ ಕೆಂಪೇಗೌಡರ ಕಾಲದ ಸುದ್ದಿ ಅನ್ಕೊಂಡಿರೇನೋ? ಇಲ್ರಿ ಇದು ಒಂದ ಹದಿನೈದು ಇಲ್ಲಾ ಇಪ್ಪತ್ತು ವರ್ಷದ ಹಿಂದಿಂದು ಕಥಿ. ಆದ್ರ ಇದು ಕನ್ನಡಮ್ಮನ ಕಥಿ, ಬೆಂಗಳೂರಿನ ಕನ್ನಡಮ್ಮನ ಕಥಿ.

ಒಂದು ಸರ್ತಿ ನಮ್ಮ ಮಾಮಾ ಅಂದ್ರ ಭಾವ, ಪುಣೆಯಿಂದ ಯಾವುದೋ ಕೆಲಸದ ಮ್ಯಾಲ ಬೆಂಗಳೂರಿಗೆ ಬಂದರು. ಕೆಲಸೆಲ್ಲಾ ಆದ ಮೇಲೆ ವಾಪಸ್ಸ ಹೋಗಲಿಕ್ಕೆ ಇನ್ನಾ ಒಂದು ದಿವಸ ಉಳಿದ್ದಿತ್ತು, ಹಿಂಗಾಗಿ ಬೆಂಗಳೂರ ಸುತ್ತಾಡಕೊಂಡು ಬರಲಿಕ್ಕೆ ಇಬ್ಬರೂ ಹೊರಟ್ವಿ. ಮೊದಲು ಎಂ ಜಿ ರೋಡ್ ಹೋಗಿ ಅಲ್ಲಿ ತಿರುಗಾಡಿ, ಆಮೇಲೆ ಬರುವಾಗ ಮಲ್ಲೇಶ್ವರಂಗ ಒಂದು ಭೇಟಿ ಕೊಟ್ಟು ಅಲ್ಲಿಂದ ರಾಜಾಜಿನಗರಕ್ಕ ಬಂದು ಆಮೇಲೆ ನಂದಿನಿ ಲೇ ಔಟ್ ನೊಳಗ ಇರೋ ನಮ್ಮ ಮನಿಗೆ ವಾಪಸ್ಸು ಬರೋ ಕಾರ್ಯಕ್ರಮ ಹಾಕೊಂಡು ಹೊರಟೆವು. ಹಂಗೆ ಸುತ್ತಾಡಕೊಂಡು ಬ್ರಿಗೇಡ್ ರೋಡನಾಗ ರಂಗನಾಥ ಕೆಫೆ ಅಂತ ಒಂದು ಹೋಟೆಲ್ ಇತ್ತು, ಅಲ್ಲಿ ಕಾಫಿ ಕುಡಿಲಿಕ್ಕಿ ಒಳಗ ಹೊಕ್ಕೆವು. ಚಹಾ ಕುಡಿಯೋದಷ್ಟೇ ರೂಢಿ ಇದ್ದ ನನಗ ಇನ್ನಾ ಬೆಂಗಳೂರಿನ ಕಾಫಿ ರುಚಿ ನಾಲಿಗಿಗಿ ಹಿಡಿದರಲ್ಲಿಲ್ಲ. ಕಾಫಿ ಯಾಕೋ ಕಹಿ ಅನ್ನಸ್ತು, ಸ್ವಲ್ಪ ಸಕ್ಕರಿ ಹಾಕೊಂಡರ ಒಳ್ಳೇದು ಅನ್ಕೊಂಡು ಕಾಫಿ ತಂದು ಕೊಟ್ಟ ಹುಡುಗಂಗೆನೆ ಕರದು “ಸ್ವಲ್ಪ ಸಕ್ಕರೆ ಬೇಕು” ಅಂದೆ.

ಅವನು “ಶುಗರ ಬೇಕಾ ಸಾರ್?” ಅಂದ,

ನಾನು “ಹೂಂ” ಅಂದೆ.

ಸಕ್ಕರೆ ತಂದು ಕೊಟ್ಟ, ಚಮಚ ಇರಲ್ಲಿಲ್ಲ, “ಚಮಚಾ ಬೇಕು” ಅಂದೆ...

ಅವನು “ಸ್ಪೂನ್ ಬೇಕಾ ಸಾರ್?” ಅಂದ,

ನಾನು “ಹೂಂ” ಅಂದೆ. ಅವನು ಚಮಚಾನೂ ತಂದು ಕೊಟ್ಟ.

ನಾನು ಸ್ವಲ್ಪ ಸಕ್ಕರೆ ಹಾಕೊಂಡು, ಕಾಫಿ ಕುಡಿಯೋಕೆ ಶುರು ಮಾಡಿದೆ.

ಆಗ ಮಾಮ ನಕ್ಕೋತ “....ಅಂತೂ ನಿನಗ ಸಕ್ಕರಿ ಮತ್ತ ಚಮಚಾ ಸಿಗಿಲ್ಲಿಲ್ಲಾ ಅಲ್ಲಾ?”

"ಹೂಂನ್ರಿ ಮಾಮ...ಎಲ್ಲಾ ಅವರವರ ಅದೃಷ್ಟ” ಅಂತ ನಾ ಅಂದೆ.

ಹೋಟೆಲನಿಂದ ಹೊರಗ ಬಂದ್ವಿ, ಸ್ವಲ್ಪ ಹೊತ್ತು ತಿರುಗಾಡಿದ್ವಿ, ಅಲ್ಲೊಂದಿಷ್ಟು ಸಾಮಾನು ಖರೀದಿ ಆಯಿತು. ಎಂ ಜಿ ರೋಡ್ನಾಗ ಇರೋ ಬೃಂದಾವನ ಹೋಟೆಲ್ ಹೋದ್ವಿ, ಮತ್ತ ಕಾಫಿ ತರಿಸಿದ್ವಿ..ಮ್ಯಾಲ ಹೇಳಿದ ಮಾತುಕತಿ ಮತ್ತೊಂದು ಸರ್ತಿ ಆಯಿತು. ನಾ ಸಕ್ಕರಿ, ಚಮಚಾ ಕೇಳಿದೆ, ಕಾಫಿ ಕೊಟ್ಟ ಹುಡುಗ ಶುಗರ್ ಮತ್ತ ಸ್ಪೂನ್ ತಂದು ಕೊಟ್ಟ. ನಾನೂ ಮತ್ತ ಮಾಮ,ಇದನ್ನ ನೋಡಿ ನಕ್ಕೊತ ಕಾಫಿ ಕುಡುದ್ವಿ.


ಹೋಟೆಲನಿಂದ ಹೊರಗ ಬರೋವಾಗ ನನ್ನ ತಲಿಯೋಳಗ ಒಂದು ಅಧ್ಭುತ ಯೋಜನಾ ತಯಾರ ಆಯಿತು. ನಾನು ಮಾಮಗ ಹೇಳಿದೆ “ಮನಿಗೆ ವಾಪಸ್ಸ್ ಹೋಗೋತನಾ..ನಾವು ಎಲ್ಲೆಲ್ಲಿ ಹೋಗತಿವೋ ಅಲ್ಲಿ ಕಾಫಿ ಕುಡಿಯೋಣ” ಅಂದೆ

ಮಾಮ “ಯಾಕೋ?” ಅಂತ ಕೇಳಿದ್ದಕ್ಕ

“ಒಂದು ಪ್ರಯೋಗ ಮಾಡೋಣರೀ ಮಾಮ...ಇವತ್ತ ಬೆಂಗಳೂರಿನ ಯಾವ ಹೋಟೆಲನಾಗ ನನಗ ಸಕ್ಕರಿ ಮತ್ತ ಚಮಚಾ ಸಿಗ್ತಾವ ಅಂತ ನೋಡೋಣು” ಅಂತ ಅಂದೆ. ಮಾಮ ನಕ್ಕೋತ "....ಅಂತೂ ನಿನ್ನ ಹತ್ರ ಭಾಳ ಪುರೋಸೋತ್ತ ಅದ ಗೊತ್ತಾಯಿತು" ಅಂದ್ರು..

ಶುರು ಆಯಿತು ನಮ್ಮ ಪ್ರಯೋಗ, ಅದಕ್ಕೆ ಎಂ ಜಿ ರೋಡ, ಮಲ್ಲೇಶ್ವರಂ, ರಾಜಾಜಿನಗರದ ಹೋಟೆಲಗಳೇ ಗಿನಿಪಿಗ್ ಆದವು. ನಾವು ಅನಕೊಂಡಂಗ, ಯಾವ ಹೋಟೆಲನಾಗೂ ನನಗೆ “ಸಕ್ಕರೆ ಮತ್ತು ಚಮಚಾ” ಸಿಗಲೇ ಇಲ್ಲ.


ಮನೆಗೆ ಬಂದ ಮೇಲೆ, ಮಾಮಾ ನನಗೆ ಕೇಳಿದರು “ನಿನ್ನ ಪ್ರಯೋಗದ ಫಲಿತಾಂಶ, ಏನಂತದ”?

ಅದಕ್ಕೆ ನಾನು ಹೇಳಿದೆ.....

 “ ಎರಡು ಥರದ ಫಲಿಶಾಂಶ ಅವರೀ ಮಾಮಾ...ಅವು ಯಾವವು ಅಂದ್ರ...  ಮೊದಲೆನೆದು, ಜಾಸ್ತಿ ಕಾಫಿ ಕುಡುದ್ರ ಪಿತ್ಥ ಜಾಸ್ತಿ ಆಗದತ ನನ್ನ ಹೊಟ್ಟಿ ಅಂತ ಹೇಳತದ...  ಎರಡನೇದು ಬೆಂಗಳೂರನಾಗ ಕಳೆದು ಹೋಗಿರೋ ಕನ್ನಡ ನೋಡಿ ಮನಸ್ಸು ಮರಗತದ..”

ಮಾಮಾ “ಮುಂದ ಏನು?”...

ಅದಕ್ಕ ನಾನ ಅಂದೆ “ಇದರ ಬಗ್ಗೆ ಒಂದು ಸಂಶೋಧನಾ ಲೇಖನ ಬರಿತಿನ್ರಿ”...

“ಆಯಿತು ಹಂಗಂದ್ರ ಲಗೂನೇ ಬರೀ”

ಮುಂದ ಇಪ್ಪತ್ತು ವರ್ಷ ಆದ ಮೇಲೆ ನಾನು ಈ ಸಂಶೋಧನಾ ಲೇಖನ ಬರೆದೆ. ಇನ್ನಾ ಎಲ್ಲೂ ಪ್ರಕಟ ಆಗಿಲ್ಲ.


-------------------------------------------------------------------------------------

ಉಪಸಂಹಾರ


ಒಂದೂರಾಗ ಒಬ್ಬ ವಿಜ್ಞಾನಿ ಇದ್ದನಂತ.....

“ಮ್ ಅಮ್.. ವಿಜ್ಞಾನಿ ಅಂದ್ರ”?

“ವಿಜ್ಞಾನಿ ಅಂದ್ರ “ಸೈಂಟಿಸ್ಟ್”....ಅಂವನ ಹತ್ತಿರ ಭಾಳ ಪುರುಸೊತ್ತು ಇತ್ತಂತ... “

“ಮ್ ಅಮ್.. ಪುರುಸೊತ್ತು ಅಂದ್ರ”?

“ಪುರುಸೊತ್ತು ಅಂದ್ರ ಟೈಮ್..ಅವನ ಹತ್ರ ಭಾಳ ಟೈಮ್ ಇತ್ತಂತ...”

“ಹುಂ”

"ಅದಕ್ಕ ಅಂವ ಒಂದು ಕಪ್ಪಿ ಮ್ಯಾಲ ಪ್ರಯೋಗ ಮಾಡಬೇಕು ಅಂತ ಅನಕೊಂಡನಂತ".

“ಮ್ ಆಮ್ ....???”

"ಅಯ್ಯಪಾ....ಕಪ್ಪಿ ಅಂದ್ರ ಫ್ರಾಗ್...ಪ್ರಯೋಗ ಅಂದ್ರ ಎಕ್ಸಪಿರಿಮೆಂಟ...ಗೊತ್ತಾಯಿತಲ್ಲಾ ? ನೀ ಹಿಂಗ ಎಲ್ಲದಾಕು, ಅದು ಅಂದ್ರ.. ಇದು ಅಂದ್ರ ಅಂತ ಅರ್ಥ ಕೇಳಿದ್ರ ನಾ ಕಥಿ ಹ್ಯಾಂಗ ಹೇಳಲಿ...ಕಥಿ ಮುಗಿಯೋ ತನ ಸುಮ್ಮನ ಕೂತಿರು..ತಿಳೀತು"?

“ಹುಂ”

"....ಎಲ್ಲಿದ್ದೆ ನಾನು?..ಹಾಂ... ವಿಜ್ಞಾನಿ, ಕಪ್ಪಿ ಮ್ಯಾಲ ಪ್ರಯೋಗ ಮಾಡಬೇಕು ಅಂತ ಅನಕೊಂಡನಂತ...ಮೊದಲು ಕಪ್ಪಿಗಿ “ಜಿಗಿ” ಅಂತ ಅಂದಕೂಡಲೇ..ಜಿಗಿಯುವಂಗ ಹೇಳಿ ಕೊಟ್ಟನಂತ...

ವಿಜ್ಞಾನಿ “ಜಿಗಿ” ಅನ್ನೋದೇ ತಡ, ಕಪ್ಪಿ “ಟಣ್” ಅಂತ ಜಿಗಿತಿತ್ತಂತ...

ಸ್ವಲ್ಪ ದಿವಸ ಆದ ಆಮೇಲೆ ಕಪ್ಪಿದು ಮುಂದಿನ ಎರಡೂ ಕಾಲ ಕತ್ತರಿಸಿ, “ಜಿಗಿ” ಅಂತ ಅಂದನಂತ, ಕಪ್ಪಿ ಕಷ್ಟಾ ಪಟ್ಟು ಹಿಂದಿನ ಎರಡೂ ಕಾಲಲ್ಲಿನೇ ಜಿಗಿತಂತ....

ಆಮೇಲೆ ವಿಜ್ಞಾನಿ ಕಪ್ಪಿದು ಹಿಂದಿಂದೂ ಎರಡೂ ಕಾಲ ಕತ್ತಿರಿಸಿ “ಜಿಗಿ” ಅಂದನಂತ...ಕಪ್ಪಿ ಜಿಗಿಲ್ಲಿಲ್ಲಂತ...

ಅದಕ ವಿಜ್ಞಾನಿ ತನ್ನ ಸಂಶೋಧನಾ ಲೇಖನದೊಳಗ, “ಕಪ್ಪಿಗಿ ಹಿಂದಿನ ಕಾಲು ಇರಲ್ಲಿಲ್ಲ ಅಂದ್ರ...ಅದಕ ಕಿವಿ ಕೇಳಸಂಗಿಲ್ಲಾ” ಅಂತ ಬರಕೊಂಡನಂತ.....

".........."

"ಹ್ಯಾಂಗದ ಕಥಿ....ಯಾಕೋ ನೀ ನಗಲೇ ಇಲ್ಲಲ್ಲೋ..? “ಜೋಕ್” ಅರ್ಥ ಆಗ್ಲಿಲ್ಲಾ? ....ಹೋಗ್ಲಿ ಬಿಡು...."

ಭಾನುವಾರ, ಜನವರಿ 6, 2013

ಚೂಡಾ ಮಾಡು ಸಂಗಪ್ಪನೂ, ಪಿಜ್ಜಾ ಹುಡುಕೊಂಡ ಹೋದ ಆಮೇರಿಕನ್ನೂ..


ಚೂಡಾ ಮಾಡು ಸಂಗಪ್ಪನೂ, ಪಿಜ್ಜಾ ಹುಡುಕೊಂಡ ಹೋದ ಆಮೇರಿಕನ್ನೂ..

ಗುರುರಾಜ ಕುಲಕರ್ಣಿ (ನಾಡಗೌಡ)


ನಾ ಈಗ ಹೇಳುದು ಸುಮಾರು ೨೦-೨೫ ವರ್ಷದ ಹಿಂದಿಂದು. ನಮ್ಮೂರ ಸಿಂದಗಿ, ಹೆಸರಿಗಿ ತಾಲೂಕ ಆಗಿದ್ದರೂ, ಜನಸಂಖ್ಯಾನೂ ಕಮ್ಮಿ ಬಾಕಿ ಸೌಲಭ್ಯಗಳೂ ಕಮ್ಮಿ. ಏನೇನು ಇತ್ತು ನಿಮ್ಮ ಊರಾಗ ಅಂತ ಕೇಳಿದ್ರ, ಒಂದು ಸರಕಾರಿ ಕನ್ನಡ ಸಾಲಿ, ಒಂದು ಪ್ರೈವೆಟ್ ಹೈಸ್ಕೂಲು, ಊರಿಂದ ದೂರ ಇರೊ ಒಂದು "ಮ್ಯಾಲಿನ" ಕಾಲೇಜ್, ಇನ್ನೊಂದು ಊರ ಮುಂದ ಇರೊ "ಕೆಳಗಿನ" ಕಾಲೇಜ್. ಇದು ಬಿಟ್ರೆ ಒಂದೆರಡು ಬ್ಯಾಂಕಗಳು ಮತ್ತ ಒಂದೆರಡು ಸಿನೆಮಾ ಥಿಯೇಟರಗಳು. ಊರ ಮುಂದ ಇರೋ ಸಂಗಪ್ಪನ ಗುಡಿ, ಊರಾಗಿರೊ ಸಣ್ಣ ಸಣ್ಣ ಹಣಮಪ್ಪನ ಗುಡಿಗೊಳು ಮತ್ತ ಮಠಗೊಳು. ಊರಾನ ಮಂದಿಗಿ ಎಲ್ಲಾರಿಗೂ ಒಬ್ಬೋರಿಗೊಬ್ಬರಿಗೆ ಆತ್ಮೀಯತೆ ಮತ್ತು ಗೌರವ. ಮಗನೋ ಮಗಳೋ ೧೦ನೇ ಅಂತಾದ್ದು ಪಾಸಾದ್ರ ನಾಲ್ಕು ಓಣಿಗಿ ಪೇಡೆ ಹಂಚತ್ತಿದ್ದರು. ಆಕಳೊ ಇಲ್ಲಾ ಎಮ್ಮಿನೊ ಕರ ಹಾಕಿದರ ಗಿಣ್ಣದ ಹಾಲು ಮನಿ ಮನಿಗಿ ಕಳಸತ್ತಿದ್ದರು.ಹೊಲದಾಗಿನ ಸದಿ/ಕಸ ತಗಸ್ಲಿಕ್ಕಿ ಹೋದವರು, ಸಂಜಿ ಮುಂದ ಬರು ಮುಂದಾಗ "ಹತ್ತರಕಿ" ಹಿಡಕೊಂಡು ಬಂದು ಆಜು-ಬಾಜು ಮನಿಯವರಿಗೆಲ್ಲಾ ಕೊಡೊರು. ಇಂತಾ ಊರಾಗ ಕಳೆದ ನಮ್ಮ ಬಾಲ್ಯದ, ಸುಖದ ಅನುಭೂತಿನೇ ಬ್ಯಾರೆ. ಈಗ ನಿಮ್ಮ ಮುಂದ ಹೇಳೂದು ಅಂತಾ ಒಂದು ಕಥಿನೇ. ಅದು ಸಂಗಪ್ಪ ಮಾಡೋ ಚೂಡಾದ ಕಥಿ, ಸಾವಕಾಶವಾಗಿ ಕೇಳುವವರಂತವರಾಗಿ.


ಊರು ಅಂದ ಮ್ಯಾಲ ಹೋಟೆಲಗಳು ಇರಬೇಕಲ್ಲ. ಹೂಂ, ಅವು ಇದ್ದವು. ಬಜ಼ಾರಾನಾಗ ಉಡುಪಿಯವರದು ಎರಡು ಹೋಟೆಲ ಇದ್ದವು.ಬಜ಼ಾರದ್ದು ಒಂದೊಂದು ತುದಿಗಿ ಒಂದೊಂದು ಇದ್ದವು.ಬಜ಼ಾರಕ ಅಡ್ಡ ಇರು ರಸ್ತಾದೊಳಗ ಕುಲ್ಕರ್ಣಿ ಬಿಂದುಂದು ಒಂದು ಚಹಾದು ಅಂಗಡಿ ಇರತ್ತಿತ್ತು. ಅದು ಬಿಂದುನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಆಗಾಗ ಅಂಗಡಿ ಶುರು ಆಗುದು ಇಲ್ಲಾ ಬಂದ್ ಆಗುದು. ಬಸ-ಸ್ಟ್ಯಾಂಡ್ ಸುತ್ತಮುತ್ತಲು ಒಂದು ನಾಲ್ಕಾರು ಚಾ ಅಂಗಡಿ ಇದ್ದವು. ಸಂಗಮದವರ ಚಾ ಅಂಗಡಿಯೊಳಗ ನಮ್ಮೂರ ಮಂದಿ ಕೂತು ಚಾ ಕುಡುಕೊತ್, ಬೀಡಿ ಅಡಿಕಿ ಜೋಡಿ ಹರಟಿ ಹೊಡಕೊತ ಕೂತಿರ್ದಿದ್ದರು. ಮಸೀದಿ ಮುಂದಿನ ರಸ್ತಾದಾಗ, "ಉಮ ಹೋಟೇಲ" ಅಂತ ಕನ್ನಡ-ಇಂಗ್ಲೀಷನಾಗ ಬರ್ದಿರೊ ಬೋರ್ಡ ಇರುವಂತಾ ಉಡುಪಿಯವರದು ಇನ್ನೊಂದು ಚಾ ಅಂಗಡಿ ಇತ್ತು. ಎಲ್ಲಾ ಚಾ ಅಂಗಡಿಯೊಳಗ ಸಿಗತಿದ್ದದ್ದು, ಮುಂಜಾನೆ ಅವಲಕ್ಕಿ ಸುಸಲ, ಉಪ್ಪಿಟ,ಪುರಿ-ಪಿಟ್ಲ, ಭಜ್ಜಿ ಸಂಜಿ ಆದ್ರ ಚುರುಮುರಿ ಚೂಡ. ಇಡ್ಲಿ-ವಡಾ ಇಲ್ಲಾ ದೋಸಾದಂತಾ ಸ್ಪೇಶಲ್ ತಿನಿಸು ಬೇಕು ಅಂದ್ರ ಉಡುಪಿ ಜಯಂತನವರ ಹೋಟೇಲಗೆ ಹೋಗಬೇಕಿತ್ತು.ಆದ್ರ ಪೂರಿ-ಭಾಜಿಯೊಳಗ ಇಲ್ಲಾ ಚೂಡಾದೊಳಗೇ ಸ್ಪೇಶಲ್ ಬೇಕು ಅಂದ್ರ ಬಜ಼ಾರ ನಡುವ, ಪೊಸ್ಟ ಆಫೀಸ್ ಹತ್ತರ, ಹೆಣ್ಣ ಮಕ್ಕಳ ಸಾಲಿ ಮುಂದ ಇರು ಬಮ್ಮಣ್ಣಿಯವರ ಹೋಟೇಲಗಿ ಹೋಗಬೇಕಿತ್ತು.

ನಾನು ಎಂಟನೇತ್ತಕ್ಕ ಬಂದಾಗ, ಬಜ಼ಾರ ಹತ್ತರ ಇರು ಎಂಟು ಮನಿ ಇರು ವಠಾರದಂತಹ “ರಮಾ ನಿವಾಸ”ದೊಳಗ, ಒಂದ ಮನಿಗಿ ಬಾಡಿಗಿಗಿ ಬಂದ್ವಿ. ಅರ್ಜೆಂಟಗಿ ಇಲ್ಲಾ ಗಡಿಬಿಡಿ ಆದಾಗ ಮುಂಜಾನೆ ಹೋಟೆಲಗಿ ಹೋಗಿ ನಮಗೆಲ್ಲಾರಗೂ ಪೂರಿ-ಭಾಜಿ ಮುಂಜಾನೆ ಟಿಫಿನಗಿ ಕಟ್ಟಸಕೊಂಡು ಬರುವಂತಾ ಪರ್ಮಿಷನ ದಾದಾ ಕೊಟ್ಟಿದ್ದರು. ಸಾಮಾನ್ಯವಾಗಿ ಈ ಕೆಲಸ ನಮ್ಮ ಅಣ್ಣ ಮಾಡತಿದ್ದ, ನಡು ನಡುವ ನನಗೂ ಒಂದರೆಡು ಅವಕಾಶ ಸಿಗುತ್ತಿದ್ದವು. ಒಂದು ಕೈ ಚೀಲ ಅದರೊಳಗ ಪೀಟ್ಲಾಕ್ಕ ಒಂದು ಸಣ್ಣ ಡಬ್ಬಿ ತಗೊಂಡು, ಕಿಸೆಯೊಳಗ ದಾದಾ ಕೊಟ್ಟಿದ್ದು ರೊಕ್ಕ ಇಟ್ಕೊಂಡು ಹೋಗಿ, ಬಮ್ಮಣ್ಣಿಯವರ ಅಂಗಡಿ ಹೋದರ ಅಲ್ಲಿ ಕೂತವರು "ಯಾಕೊ ನೀ ಚಾ ಅಂಗಡಿಗಿ ಬಂದೀ?" ಅಂತ ನನಗ ಕೇಳು ಟೊಪ್ಪಿಗಿ-ಧೋತರ ಮಂದಿಗಿ, ಅಂಗಡಿ ಗಲ್ಲಾದಾಗ ಕೂತಿರೊ ಬಮ್ಮಣ್ಣಿ ಮಾಲಕ, "ಡಾಕ್ಟರೇ ಕಳಿಸಿರ್ತಾರ ನಾಷ್ಟಾ ತೊಂಗೊಂಡು ಬರ್ಲಿಕ್ಕಿ" ಅಂತ ಅಲ್ಲಿ ಕೂತವರಿಗಿ ಹೇಳವರು.

ಇಲ್ಲಿ ಒಂದು ವಿಷಯಾ ಭಾಳ ಸ್ಪಷ್ಟ ಹೇಳಬೇಕು ನಿಮಗ, ನಮ್ಮಂತಾ ಸಣ್ಣ ಸಣ್ಣ ಹುಡುಗರು ‘ಚಾ’ದ ಅಂಗಡಿ ಹೋಗುದು ಆವಾಗಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿತ್ತು. ಹಿರಿಯ ವಯಸ್ಸಿನ ಯಾರಿಗೆ ಆಗಲಿ ಇಂತಾಹ ಯಾವುದೇ ಅಪರಾಧಿಗಳಿಗೆ ಸ್ಥಳದಲ್ಲಿಯೇ ಶಿಕ್ಷೆ ವಿಧಿಸುವ ಅಧಿಕಾರವಿರುತ್ತಿತ್ತು. ಇಂತಾ ಅಪರಾಧ ಮಾಡುವ ಧೈರ್ಯ ಇದ್ದ ನನ್ನ ದೊಸ್ತರು ತಮ್ಮ ಪಾಲಿನ ಶಿಕ್ಷಾ, ಹೋಟೆಲನಿಂದ ಮನೆ ಮುಟ್ಟೂವರೆಗೂ ಅನುಭವಿಸಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಇಂತಾ ರಾಮ ರಾಜ್ಯದೊಳಗ ನನ್ನಂತೊನು ಬಜ಼ಾರನೊಳಗ ಇರುವಂತಾ, ಚಾ ಅಂಗಡಿಯೊಳಗ ಹೊಕ್ಕಿ ನಾಷ್ಟಾ ಮಾಡುದು ದುಸ್ಸಾಹಸದ ಮಾತಾಗಿತ್ತು.

ನಾನು ೯ ಇಲ್ಲಾ ೧೦ನೇತ್ತೆ ಬಂದಾಗ, ಖಾಸಾ ಖಾಸಾ ದೋಸ್ತ ಸಂಗಯ್ಯನ ಜೋಡಿ ಬಮ್ಮಣ್ಣಿವರ ‘ಚಾ’ದ ಅಂಗಡಿವೋಳಗ ಕಳ್ಳ ಬೆಕ್ಕಿನ ಹೆಜ್ಜಿ ಇಟ್ಟೆ. ಅಲ್ಲಿ ಖಾರಾ-ಬೆಳ್ಳುಳ್ಳಿದು ಚುರುಮುರಿ ಚೂಡಾ ರುಚಿ ನೋಡಿದೆ. ಕೆಂಪು ಹಳದಿ ಮಿಶ್ರಿತ ಚುರುಮುರಿ, ನಡುವ ನಡುವ ಹಣಿಕಿ ಹಾಕೊ ಕೆಂಪನ ಶೇಂಗಾ, ಮ್ಯಾಲ ದಪ್ಪ ದಾರದಂಗ ಸೇವು. ಮುಷ್ಟಿಯೊಳಗ ಸ್ವಲ್ಪ ತೊಗೊಂಡು, ಬಾಯಿಗಿ ಹಾಕೊಂಡ್ರೆ ಆ ...ಆಹಾಃ...ಏನು ರುಚಿ ಇರ್ತಿತ್ತು ಅಂತೀರಿ. ಇವತ್ತಿಗೂ ನನ್ನ ಪ್ರಕಾರ ಅಮೃತ ಅಂತಾ ಏನಾದ್ರು ಇದ್ದರ ಅದರ ರುಚಿನೂ ಆ ಚೂಡಾದ ರುಚಿನೇ ಇರ್ತದ. ಯಾವಾಗ, ಯಾವಾಗ .. ನಮ್ಮಿಬ್ಬರ ಹತ್ತಿರ ೭೦ ಪೈಸಾ ಒಟ್ಟ ಆಗತಿದ್ದೋ ಅವಾಗ, ಆವಾಗ... ಬಮ್ಮಣ್ಣಿವರ ಚಾ’ದ ಅಂಗಡಿಗೆ ನಮ್ಮ ಪ್ರವೇಶ ಆಗತ್ತಿತ್ತು. ಬೋನಸ್ ಏನರೆ ಸಿಕ್ಕಿದ್ದರ ಚೂಡಾದ ಮ್ಯಾಲ ಸ್ಪೆಷಲ್ ಚಾ ಆಗ್ತಿತ್ತು. ನಮ್ಮಿಬ್ಬರಿಗೂ ಒಳಗಿನ ಖೋಲಿಯೊಳಗ ಕೂಡಿಸಿ (ಯಾಕಂದ್ರ ಯಾರಿಗೂ ಕಾಣಿಸಬಾರ್ದಲ್ಲ), ಎಕ್ಸಟ್ರಾ ಶೇಂಗಾ, ಸೇವು, ಮ್ಯಾಲ ಸಣ್ಣಗ ಹೆಚ್ಚಿದ ಉಳ್ಳಾಗಡ್ಡಿ ಹಾಕಿ ಕೊಡ್ತಿದ್ದರು. ಈ ಚಹಾ ಚೂಡದ ಕಾರ್ಯಕ್ರಮ ಸುಮಾರು ಎರಡು ಮೂರು ವರ್ಷ ನಡೀತು.

ಮುಂದ ನಾನು ಓದಲಿಕ್ಕಿಂತ ಧಾರವಾಡಕ ಬಂದೆ. ಸಿಂದಗಿಗೆ ಸೂಟಿಗಿ ಹೋದಾಗ ಚೂಡಾದ ರುಚಿ ಆವಾಗಾವಾಗ ಸಿಗ್ತಿತ್ತು. ವರ್ಷ ಕಳೆದಂಗ ಕ್ರಮೇಣ ಅದು ಕಡಿಮಿ ಆಯಿತು. ಆದ್ರೂ ನಾನು, ಸಂಗಯ್ಯ ಚೂಡಾ ತಿನ್ನು ಪ್ರೋಗ್ರಾಮ್ ನೆನಸಕೊಳೋದು ತಪ್ಪಲ್ಲಿಲ್ಲ.

ಮತ್ತಿಷ್ಟು ವರ್ಷಗಳು ಕಳದು ಹೋದವು.ನಾವು ಬಸ್ ಸ್ಟಾಂಡ್ ಹತ್ತಿರ, ಕೋರ್ಟ್ ಹಿಂದಿನ ರೋಡನಾಗ ಇರೋ ನಮ್ಮ ಹೊಸಾ ಮನಿಗಿ ಬಂದೆವು. ನಾನು  ಬದುಕು ಹುಡುಕೊಂಡು ಬೆಂಗಳೂರಿಗೆ ಬಂದೆ..... ನೌಕರಿ,ಮದುವಿ, ಮಕ್ಕಳು ಸಂಸಾರ ಅನ್ನಕೊತ, ಬದುಕು ಬೆಳಕೊತ-ಬದಲಾಕೊತ ಹೋಯಿತು. ಈ ಕಡೆ ಊರಾಗಿನ ಬಮ್ಮಣ್ಣಿವರ ಅಂಗಡಿ ಬದಲಾಯಿತು, ಬಜಾರ ಬದಲಾಯಿತು, ಮಂದಿ ಬದಲಾದರು. ಹೋಟೆಲನಾಗ ಕೊಡು ನಾಷ್ಟನೂ ಬದಲಾಯಿತು. ಇಡ್ಲಿ, ದೋಸಾ, ಗೋಬಿ ಮಂಚೂರಿ, ಅದು ಎಂತಾದೋ ಫ್ರೈಡ್ ರೈಸ್ ಅಂತ ಎಲ್ಲಾ ಬಂದವು.

ಸರಿ ಸುಮಾರು ೨೦-೨೫ ವರ್ಷದ ಮ್ಯಾಲ ಪ್ರತಿ ವರ್ಷದಂಗ ನಾನು ದೀಪವಾಳಿಗಿ ಊರಿಗಿ ಹೋದಾಗ, ಒಂದ ಸರ್ತಿ ಲಕ್ಷ್ಮೀ ಪೂಜಾ ಮುಗದ ಮ್ಯಾಲ ನನ್ನ ಮಗ ಶೌರಿನ ಕರ್ಕೊಂಡು ಊರೊಳಿಗಿನ ಬಜಾರದಾಗಿನ ಅಂಗಡಿಗೋಳನ್ನ ತೋರಿಸಿಲ್ಲಿಕ್ಕಿ ಕರ್ಕೊಂಡು ಹೋದೆ. ಮಗನಿಗೆ ನನ್ನ ಬಾಲ್ಯ ತೋರಿಸೋ ಹಂಬಲದಿಂದ ನಾನು ಆಟ ಆಡಿದ ಜಾಗ, ಗೆಳೆಯಂದ್ರ ಮನೆಗೊಳು, ದೀಪಾವಳಿಗೆ ಬಣ್ಣ ಹಚ್ಚಿದ ಅಂಗಡಿಗೋಳು, ಪ್ರತಿ ಅಂಗಡಿ ಮುಂದ ಕಟ್ಟಿದ ಚೆಂಡು ಹೂವ, ತೆಂಗಿನ ಗರಿ, ಸಣ್ಣ ಸಣ್ಣ ಹುಡುಗುರು ಹೊಸ ಬಟ್ಟಿ ಮ್ಯಾಲ ಬಿಳಿ ಟೋಪಿಗೆ ಹಾಕೊಂಡು ಪಟಾಕಿ ಹೊಡಿಯೋದು, ಅವನಿಗೆ ತೋರೋಸ್ಕೊತ ನಮ್ಮ ಬಮ್ಮಣ್ಣಿವರ ಅಂಗಡಿ ಕಡೆ ಬಂದೆ. ಅಲ್ಲಿ ಅಂಗಡಿ ಮುಂದ ನಿಂತು, ಚೂಡಾದ ಬಗ್ಗೆ.... ನಾನು ಗೆಳೆಯನ ಜೊತೆ ಬಂದು ಕದ್ದು ಚೂಡಾ ತಿನ್ನ್ನೋದರ ಬಗ್ಗೆ ಹೇಳಿದೆ. ಅವನು ಎಷ್ಟರ ಮಟ್ಟಿಗೆ ಕೇಳಸ್ಕೊಂಡನೋ ಏನೋ ಅಂತ ಗೊತ್ತ ಸಹಿತ ಮಾಡ್ಕೊಳದೆ.. ನನ್ನ ಮಾತು ನಾನು ಹೇಳೇ ಹೇಳಿದೆ. ನನ್ನ ಮಾತಿನ ರಭಸ ಕಮ್ಮಿ ಆಗಿ ಸ್ವಲ್ಪ ಹೊತ್ತ ಆದ ಮೇಲೆ ಶೌರಿ “ ನೀ ಈಗ ಚೂಡಾ ತಿಂತಿಯಾ?” ಅಂದ. “ಇಷ್ಟು ರಾತ್ರಿ ಆದ ಮೇಲೆ ಹೋಟೆಲಗಿ ಹೋಗಿದ್ದು ಗೊತ್ತಾದರ ಅಮ್ಮಮ್ಮ ಬೈತಾಳೆ..” ಅಂತ ಬೇರೆ ಸೇರಸ್ದ.

ಚೂಡಾದ ಸಲುವಾಗಿ ಕಳ್ಳ ಬೆಕ್ಕ ಆಗಿರಿತ್ತದ್ದ ನನಗೆ, ಈಗಲೂ ಒಂದು ಕೈ ನೋಡೆ ಬಿಡೋಣ ಅಂತ ಅಂಗಡಿಯೋಳಗ ಅವನ ಕೈ ಹಿಡಕೊಂಡು ಹೊಕ್ಕೆ.

ಅಂಗಡಿ ಹುಡುಗುರು ಹೊಸಾ ಬಟ್ಟಿ ಹಾಕೊಂಡು ಲಕ್ಷ್ಮೀ ಪೂಜಾ ತಯಾರಿ ನಡಿಸಿದ್ರು. ನಾ ಅಂದುಕೊಂಡಗ ಅಂಗಡಿ ಗಲ್ಲಾದ ಮ್ಯಾಲ ಕೂತ ಹೊಸಾ ಸಣ್ಣ ಮಾಲೀಕ ನನಗ ಗುರುತ ಹಿಡಿಲ್ಲಿಲ್ಲ. ಆದ್ರೂ ದೇಶವಾರಿ ನಗು ನಕ್ಕು “ಏನ್ ಬೇಕ್ರಿ?” ಅಂತ ಅಂದ. ನಾನು “ಎರೆಡು ಚೂಡಾ ಪಾರ್ಸೆಲ್ ಮಾಡ್ರಿ” ಅಂದೆ. “ಸರ್ ಇವತ್ತ ಲಕ್ಷ್ಮೀ ಪೂಜಾ,ರೀ... ಹಿಂಗಾಗಿ ನಾಷ್ಟಾ ಏನೂ ಇಲ್ಲರಿ...” ಅಂದ. ಅದಕ್ಕ ನಾನು ಅವನಿಗೆ ನನ್ನ ಚೂಡಾದ ದಿನಗೋಳ ಬಗ್ಗೆ ಮಾತ ಹೇಳಿ, ಇರ್ಲಿ ಬಿಡ್ರಿ ಮತ್ತೊಂದು ಸರ್ತಿ ಬರ್ತಿನ್ರಿ ಅಂದೆ. ಅವನಿಗೆ ಏನು ಅನ್ಸತ್ತೋ ಏನೋ, ನನ್ನ ಮಗ್ಗಲಿಗ ನಿಂತ ಶೌರಿನೊಮ್ಮೆ ಮತ್ತ ನನ್ನೊಮ್ಮೆ ನೋಡಿ “ಪಾರ್ಸೆಲ್ ಮಾಡ್ಸಿತಿನಿ ನಿಂದಿರ್ರೀ” ಅಂದ. ಒಳಗ ಎತ್ತಿ ಇಟ್ಟಿದ್ದ ಬುಟ್ಟಿಯೊಳಗಿನ ಚೂಡಾ ತೆಗೆಸಿ ಪಾರ್ಸೆಲ್ ಮಾಡಿ ಕೊಟ್ಟು “ಆ ಟೈಮನಾಗ ಸಂಗಪ್ಪ ಅನ್ನೋವ ಚೂಡಾ ಮಾಡ್ತಿದ್ದರಿ...ಅವ ಸತ್ತು ೧೦-೧೫ ವರ್ಷ ಆಯಿತರಿ...ಆಮೇಲೆ ಅವನಂಗ ಚೂಡಾ ಮಾಡೋರೆ ಸಿಕ್ಕಿಲ್ಲರಿ ... ಇವತ್ತಿಗೂ ನಿಮ್ಮಂಗ ಮಂದಿ ಆವಾಗಿನ ಚೂಡಾ ನೆನೆಸತಾರಿ” ಅಂತ ಅಂದ.

ನಾನು ಎಂದೂ ಕಂಡಿರದ ಸಂಗಪ್ಪನ ಬಗ್ಗೆ ನನಗೆ ಗೌರವ ಭಾವನೆ ಮೂಡಿತು. ತನಗೆ ಗೊತ್ತಿರೋ ಕಸುಬುದಾರಿಕೆಯಿಂದ ಇನ್ನೂ ಮಂದಿ ನೆನಪಿನೋಳಗ ಉಳಿದ್ದಿದ್ದು ನೋಡಿ ಅವನ ಬದುಕು ಸಾರ್ಥ್ಯಕ್ಯ ಆಯಿತು ಅಂತ ಅನ್ನಸ್ತು.

ಕಟ್ಟಿಸಿಕೊಂಡಿರೋ ಚೂಡಾ ತೊಗೊಂಡು ಮನಿಗೆ ಬಂದೆವು. ಶೌರಿ ಮೊದ್ಲೇ ಹೇಳಿದಂಗ, ರಾತ್ರಿ ಹೋಟೆಲ ಚೂಡಾ ತಂದ್ದಿದದ್ದಕ್ಕ ನಮ್ಮಮ್ಮನ ಹತ್ರ ಬೈಸಿಕೊಂಡಿದ್ದು ಆಯಿತು.

ಶೌರಿ, ಪಲ್ಲವಿ ಚೂಡಾ ತಿಂದರು, "ಮಸ್ತ ಅವ" ಅಂದ್ರು. ನಾನೂ ತಿಂದೆ, ಮಜಾ ಬರ್ಲಿಲ್ಲ..ಆದ್ರ ಅವರಿಗೆ ಹೇಳಿಲ್ಲ..

-------------------------------------------------------------

ಉಪ ಸಂಹಾರ


ಸಿಂದಗಿಯಿಂದ ವಾಪಸ್ಸು ಬಂದು ತಿಂಗಳಾದ ಮೇಲೆ ಮನ್ಯಾಗ ಒಂದು ರವಿವಾರ ಮಧ್ಯಾನ್ಹ, ನಾನು ಶೌರಿ ಟಿ ವಿ ಯೊಳಗ ಡಿಸ್ಕವರಿ ಚಾನೆಲ್ ನೋಡಕೊತ ಕೂತಿದ್ದಿವಿ. ಇಟಲಿ ಮೂಲದ ಆಮೆರಿಕನ್ ಒಬ್ಬನ ಬಗ್ಗೆ ಡಾಕ್ಯುಮೆಂಟರಿ ಅದು. ತೀರಿ ಹೋಗಿರೋ ತನ್ನ ಅಜ್ಜಿನೋ ಇಲ್ಲಾ ಮುತ್ತಜ್ಜಿನೋ ಬರಿದಿಟ್ಟಿರೋ ಡೈರಿ ಪ್ರಕಾರ ಅವಳ ಹುಟ್ಟಿದೂರಿನಲ್ಲಿನ ಹೋಟೆಲ್ ಒಂದರ ಪಿಜ್ಜಾದ ರುಚಿ ಹುಡಕೊಂಡು, ಅವನು ಹೋಗಿರ್ತಾನೆ.

ಅವನು ಹೋಟೆಲ್ ಹುಡ್ಕೊಂಡು ಹೋಗೋ ದಾರಿ ಬಗ್ಗೆ, ಆ ಹೋಟೆಲ್ ಸಿಕ್ಕ ಮೇಲೆ, ಈಗ ಅದೇ ರೀತಿ ಪಿಜ್ಜಾ ಮಾಡೋರ ಬಗ್ಗೆ, ಆ ಮನೆಯವರೆಲ್ಲಾ ಪಿತ್ರಾರ್ಜಿತ ಆಸ್ತಿಯಾಗಿ ಬಂದ ಆ ರೆಸಿಪಿ ಬಗೆಗಿನ ವ್ಯಕ್ತ ಪಡಿಸೋ ಹೆಮ್ಮೆ ಬಗ್ಗೆ,  ಎಲ್ಲಾ ಸಣ್ಣ ಸಣ್ಣ ವಿಷಯಗಳನ್ನು ವಿವರವಾಗಿ, ಎಲ್ಲವನ್ನು ಅದ್ಭುತವಾಗಿ ತೋರಿಸಿದರು.

ಪ್ರೋಗ್ರಾಮ್ ಮುಗಿದ ಮ್ಯಾಲ ಶೌರಿ “ನಾವೂ ಅಲ್ಲಿ ಹೋಗೋಣಾ ಅಪ್ಪಾ? ಅಲ್ಲಿ ಪಿಜ್ಜಾ ಮಸ್ತ ಇರತದ” ಅಂದ. ನಾನು ಹೂಂ ಹೋಗೋಣ ಅಂದೆ.

ಮಂಗಳವಾರ, ಜನವರಿ 1, 2013

ಬೀಡಿ ಸೇದು ಮುದುಕಿ


ಬೀಡಿ ಸೇದು ಮುದುಕಿ

 

ಗುರುರಾಜ ಕುಲಕರ್ಣಿ (ನಾಡಗೌಡ)


ನಾನು ಸಿಂದಿಗಿಯೊಳಗ ಸಾಲಿ ಕಲಿ ಮುಂದಾಗ, ಎರಡ್ನೆತ್ತೆ ತನಾ ಬಜ಼ಾರನಾಗ ಇರು, ಹೆಣ್ಣಮಕ್ಕಳ ಸಾಲಿಗಿ ಹೋಗ್ತತ್ತಿದ್ದೆ. ಮೂರನೆತ್ತೆಕ್ಕ ಬಂದ ಮ್ಯಾಲ್ ಊರ ಹೊರಗಿದ್ದ ಗಂಡ ಹುಡುಗರ ಸಾಲಿಗಿ ಹೆಸರ ಹಚ್ಚಿದ್ದರು. ನನಗ ಅಷ್ಟ ದೂರ ನಡ್ಕೊತ ಹೋಗುದು ಆಗ್ತದೊ ಇಲ್ಲ ಅಂತ,ಅಮ್ಮಮೈಬುಬಗ ಸಾಯಿಕಲ್ ಮ್ಯಾಲ್ ಕರ್ಕೋಂಡು ಹೋಗಿ ಕರ್ಕೋಂಡ ಬರೋ ಕೆಲಸ ಕೊಟ್ಟಿದ್ದಳು. ನನಗೂ ಬಾಕಿ ಎಲ್ಲಾ ಹುಡುಗ್ರಂಗ ನಡಕೊತ, ಊರಾಗಿನ ಬ್ಯಾರೆ ಬ್ಯಾರೆ ರಸ್ತಾ-ಸಂದಿ ತಿರುಗೊಕೊತ ಸಾಲಿಗಿ ಹೋಗಿ ಬರಬೇಕು ಅಂತ ಭಾಳ ಆಸೆ ಆಗ್ತಿತ್ತು. ಆದ್ರ ದಾದಾನ ಹೆದ್ರಿಕಿಗಿ ಮೈಬುಬುನ ಜೊಡಿ ಸಾಯಿಕಲ್ಲ ಮ್ಯಾಲ್ ಸುಮ್ಮನ ಹೋಗ್ತಿದ್ದೆ. ಸಾಲಿಗಿ ಹೋದ ಸುರು ಸುರುವಿಗಿ ಗೆಳೆಯಂದ್ರು ಯಾರು ಇರ್ಲಾದೆ ಬ್ಯಾಸರ ಆಗ್ತಿತ್ತು. ಆದ್ರ ಮುಂದ ನಾಕನೇತ್ತೆಕ್ಕ ಬರುದರಾಗ, ಒಂದ ನಾಲ್ಕಾರು ಗೆಳೆಯಂದ್ರು ಸಿಕ್ಕರು.


ಮುಂದ ಐದನೇತ್ತಕ್ಕ ಬಂದಾಗ, ತಾನೇ ನಡಕೊತ ಸಾಲಿಗಿ ಹೋಗಿ ಬರ್ತಾನ ಬಿಡು ಅಂತ ನಮ್ಮ ಅಮ್ಮ ಮೈಬುಬುಗ ನಿನಗ ದವಾಖಾನಿ ಕೆಲ್ಸಾನೆ ಸಾಕು ಅಂತ ಹೇಳಿದ್ಳು. ಹಿಂಗಾಗಿ ನಾನೂ ಇದ್ದ ಗೆಳೆಯಂದ್ರ ಜೋಡಿ ನಡಕೊತ ಸಾಲಿಗಿ ಹೋಗಿ ಬರೋದು ಸುರು ಮಾಡಿದೆ. ಆವಾಗಿಂದ ಗೆಳೆಯಂದ್ರು ಭಾಳ ಮಂದಿ ಆದ್ರು... ಹಂಗೇ ಸಿಂದಗಿಯೊಳಗಿನ ಸಂದಿಗೊಂದಿಗೋಳು ಗೊತ್ತಾಗ್ಲಿಕತ್ತುವು. ಭೀಮಾಶಂಕರ ಮಠದ ಮುಂದ ಹಾದು, ಒಳಗಿನ ಸಂದ್ಯಾಗಿಂದ ಬಂದ್ರ ಸೀದಾ ಬಜ಼ಾರನಾಗಿನ ಉಪ್ಪಿನವರ ಅಂಗಡಿ ಮುಂದೆ ಬರ್ತಿವಿ ಅನ್ನುವಂತಾ ಜ್ಞಾನ ಸಿಗಿಲ್ಲಿಕ್ಕಿ ಶುರು ಆಯಿತು.

ನಮ್ಮ ಮನಿ ಆವಾಗ ನೀಲಗಂಗಮ್ಮನ ಗುಡಿ ಮುಂದ ಇತ್ತು. ಮನಿ ಸುತ್ತಮುತ್ತಲು ಗೆಳೆಯಂದ್ರು ಇದ್ದರು. ಅವರೂ ಗಂಡ ಸಾಲಿಗಿ ಬರ್ತಿದ್ರು. ಮುಂಜಾನೆ ಸಾಲಿಗಿ ಹೋಗು ಮುಂದಾಗ, ನೀಲಗಂಗಮ್ಮನ ಗುಡಿಗಿ ಎಲ್ಲಾರಂಗ ಹೊರಗಿಂದ ನಮಸ್ಕಾರ ಮಾಡಿ..ಹಂಗೆ ಊರಾನ ಮಠದ ಒಳಗಿಂದ ಹಾಯಿದು, ಬಿಂದುನ ಚಾ ಅಂಗಡಿ (ಅದಕ ಜೈ ಹನುಮಾನ್ ಟೀ ಕ್ಲಬ್ ಅಂತ ಬೋರ್ಡ್ ಇತ್ತು) ಮುಂದ ಕೂತ ಮಂದಿನ ನೋಡ್ಕೊತ್, ಮಸೀದಿ ಮುಂದ ಇರು ಪವಾರ್‌ನ ಬೀಡಿ ಅಂಗಡಿಯೊಳಗಿನ ಕನ್ನಡಿಯೊಳಗ ಹಣಿಕಿ ಹಾಕೊತ, ಸಿಂಡಿಕೇಟ ಬ್ಯಾಂಕ ಮುಂದ ನಿಂತಿರತ್ತಿದ್ದ ರಾಜದೂತ ಮೋಟರ ಸೈಕಲ್ ಸೀಟ ಮ್ಯಾಲ್ ಕೈ ಆಡಿಸಿ, ಮುಂದ ಇರೋ ಕಟ್ಟಿಗಿ ಅಡ್ಡೆ, ತಾರಾಪುರದವರ ಅಡತಿ ಅಂಗಡಿ ಮುಂದ ನಡಕೊಂಡು, ಕುಂಟ ಹಣಮಪ್ಪನ ಗುಡಿ ಮುಂದ ಕೂತಿರೊ ಭಿಕ್ಷಾದಂವನ ಮುಂದ ಬಿದ್ದಿರೊ ಚಿಲ್ಲರ ರೊಕ್ಕ್ ನೋಡ್ಕೊತ, ಶೇಟಜಿ ಪೆಟ್ರೊಲ್ ಬಂಕ ಮುಂದ ನಿಂದ್ರಿಸ್ಸಿದ್ದ ದೆವ್ವಿನಂತಾ ಟ್ರಕ್ ಒಳಗ ಕಾಜಿಗಿ ಅಂಟಿಸಿರು ಲಕ್ಷ್ಮೀ, ಗಣಪತಿ, ಶಿವನ ಸ್ಟಿಕರ್ಸ್ ನೋಡಿ, ಬಸ್ ಸ್ಟ್ಯಾಂಡಿಗಿ ಬರು ಬಸಗೋಳ ನಡುವ ಹಾರಕೊತ, ಅದರ ಎದ್ರುಗಿದ್ದ ನಮ್ಮ ಕನ್ನಡ ಸಾಲಿಗಿ ಹೋಗ್ತಿದ್ವಿ.

ಸಾಲಿಗಿ ಹೋಗು ಮುಂದಾಗ ನಾವು ಹುಡುಗರೆಲ್ಲಾ ಗುಂಪು ಗುಂಪಾಗಿ ಹೊಗ್ತಿದ್ದಿವ್ವಿ. ಹೋಗು ಮುಂದಾಗ, ನೀಲಗಂಗಮ್ಮನ ಜಾತ್ರಿಗಿ ಈ ಸರ್ತಿ ಏನೇನು ತೊಗೊ ಬೇಕು, ಮಣ್ಣೆತ್ತಿನ ಅಮ್ಯಾಸಿಗಿ ಮಣ್ಣೆತ್ತ ತೋಗೊಳ್ಳಿಕ್ಕಿ ಯಾವ ಕುಂಬಾರ ಮನಿಗಿ ಹೋಗಬೇಕು, ಬೀದಿ ಬಾಂವಿ ಹತ್ತಿರ ಇರು ಹೆಂಣ್ಣ ನಾಯಿಗಿ ಮರಿ ಆಗಿದ್ದು, ಬಡಿಗೇರ ಶ್ಯಾಮ್‍ ಮಾಡಿಕೊಟ್ಟ ಬಗರಿ ಎಷ್ಟು ಜೋರ್ ತಿರಗತ್ದದ, ಯಾರ್ಯಾರು ದೊಸ್ತಗೋಳು ನೂರಕ್ಕಿಂತಾ ಹೆಚ್ಚಿಗಿ ಗೊಲಿ-ಗುಂಡ ಇಟ್ಟಾರ, ಚೌಡಮ್ಮನ ಜಾತ್ರ್ಯಾಗ "ಅಗ್ಗಿ" ಹ್ಯಾಂಗ ಹಾರತಾರ, ಗಣೇಶ ಚೌತಿಗಿ ಲೇಜ಼ಿಮ ಆಡ್ಲಿಕ್ಕಿ ಸೊಲಾಪುರದಿಂದ ಬರ್ತಾರ ಅಂತ, ಇಂತಾ ನೂರಾರು-ಸಾವಿರಾರು ಸುದ್ದಿ ಮಾತಾಡಕೋತ ಹೊಂಟ್ರ ಸಾಲಿ ಬಂದ್ದದ್ದೇ ಗೊತ್ತಾಗ್ತಿರಲ್ಲಿಲ್ಲ.

ಹೀಂಗೆ ಒಂದ ದಿವ್ಸ ಮಾತಡ್ಕೊತ ಸಾಲಿಗಿ ಹೋಗು ಮುಂದಾಗ, ಊರಾನ ಮಠದ ಹತ್ತರ ಇರು ಹುಡುಗೊಬ್ಬ ಒಂದು ಆಶ್ಚರ್ಯಕರವಾದ ಸುದ್ದಿ ಹೇಳಿದ. ನಾವು ಯಾರು ಅಂತಾದ್ದು ನೋಡಿರಲ್ಲಿಲ್ಲ ಇಲ್ಲಾ ಕೇಳಿರಲ್ಲಿಲ್ಲ. ನನಗಂತೂ ನಂಬ್ಲಿಕ್ಕೆ ಆಗ್ಲಿಲ್ಲ...ಹೇ ಸುಳ್ಳ ಹೇಳ್ತಾನ ಇಂವ್ ಅಂತ ನಾ ಅಂದೆ..ಆದ್ರ ಅದನ್ನು ನೋಡಿದ್ದ ಇನ್ನೊಂದಿಬ್ರು ದೋಸ್ತರು, “ ಆ ಹುಡುಗ ಹೇಳೋದು ಖರೆ ಮತ್ತ ಅದನ್ನ ನಾವೂ ನೋಡಿವಿ” ಅಂತ ಆಣಿ ಮಾಡಿ ಹೇಳಿದ್ರು.. ಅದು ಸುದ್ದಿ ಏನು ಅಂದ್ರ ಊರಾನ ಮಠದ ಹತ್ರ ಇರು ನಮ್ಮ ದೋಸ್ತನ ಮನಿ ಮುಂದಿನ, ಮನ್ಯಾಗ ಇರು ಒಂದು ಮುದುಕಿ ಬೀಡಿ ಸೇದತಾಳ ಅಂತ ಅನ್ನು ವಿಷಯ. ನನಗೋ ಇದು ಪರಮಾಶ್ಚರ್ಯದ ಸುದ್ದಿ.

ನಾನು ಆಶ್ಚರ್ಯ ಪಡೋದು, ಸುದ್ದಿ ಹೇಳೋ ಹುಡುಗನಿಗಿ ಹುರುಪ ಕೊಟ್ಟತು. ಮುದುಕಿ ಬೀಡಿ ಹ್ಯಾಂಗ ಸೇದತಾಳ ಅನ್ನೋದರ ಬಗ್ಗೆ ಅವನ ವರ್ಣನಾ ಇನ್ನು ಹೆಚ್ಚಾಯಿತು. ಅದಕ್ಕ ತಕ್ಕಂತೆ ನನ್ನ ಕುತೂಹಲ ಬೆಳ್ಕೊಂಡು ಹೋಯಿತು. ಬೀಡಿ ಸೇದು ಮುದುಕಿನ್ನ ನೋಡ್ಲೇ ಬೇಕು ಅನ್ನು ತಹ ತಹಿಕಿ ಶುರು ಅಯಿತು. ಬೀಡಿ-ಸಿಗರೇಟ ಸೇದುದು ಬರೆ ಗಂಡಸರ ಕೆಲಸ ಅಂತ ತಿಳ್ಕೊಂಡ್ಡಿದ್ದ ನಮ್ಮಂತಹಾ ಹುಡುಗರಿಗಿ ಇದು ಭಾಳೇ ಆಶ್ಚರ್ಯದ ವಿಷಯವಾಗಿತ್ತು.

ಮುದುಕಿ ಬೀಡಿ ಸೇದುದು ನೋಡೆ ಬಿಡುಣು ಅಂತ, ಮಧ್ಯಾನ್ಹದ ಸಾಲಿ ಬಿಟ್ಟು ಓಡಿ ಊರಾನ ಮಠದ ಕಡೆ ಹೋದೆವು. ಆ ಮುದುಕಿ ತನ್ನ ಗುಡಿಸಿಲ ಹೊರಗ ಕೂತಿದ್ದಳು. ಕತ್ತಲಿ ಆಗುತನ ನಾವಿಬ್ಬರು ಅಲ್ಲೇ ಠಳಾಯಿಸಿದ್ವಿ ಆವಾಗವಾಗ ತನ್ನ ಸಂಚಿ ತಗುದು ತಂಬಾಕ ಹಾಕೊಂಡ್ಲೆ ಹೊರತು ಆಕಿ ಏನೂ ಬೀಡಿ ಹಚ್ಚಲ್ಲಿಲ್ಲ. ತಡಾ ಮಾಡಿ ಮನಿಗಿ ಹೊದ್ರ ಏಟು ಬಿಳ್ತಾವ ಅಂತ ನಾ ಮನಿಗಿ ಹೋದೆ. ಮುಂದ ಈ ವಿಷಯಾ ಮರತೂ ಹೋದೆ. ಮುದುಕಿ ಬೀಡಿ ಸೇದುದು ನಾ ನೋಡಲಿಲ್ಲ.

--------------------------------------------------------

ಉಪಸಂಹಾರ


ಮುಂದ ಸರಿ ಸುಮಾರು ಮುವತ್ತು ವರ್ಷದ ಮ್ಯಾಲೆ, ಟೊರೊಂಟೊದ ಆಫೀಸಿನಾಗ, ಒಂದ ಮುಂಜಾನೆಯಿಂದ ಕೆಲಸ ಮಾಡ್ಕೊತ ಕೂತವನಿಗಿ, ಸೊಂಟ ಮತ್ತ ಕುತ್ತಿಗಿ ಹಿಡಿದಂಗ ಆಗಿತ್ತು. ಅದಕ ಸಂಜಿ ಎಳಿ ಬಿಸಿಲನಾಗ ಆಫೀಸಿನ ಮಗ್ಗಲ್ಲಕೇ ಇರು ಬಗೀಚನಾಗ ಕಾಲ ಆಡಿಸ್ಕೊತ ತಿರುಗಾಡತಿದ್ದೆ.

ಅಲ್ಲಿ ಇರೋ ಸಣ್ಣ ಕೆರಿಯೊಳಗಿನ ತಿಳಿ ನೀರ, ನೀಲಿ ಮುಗಿಲನಾಗ ಹಾರತ್ತಿದ ಬಿಳಿ ಮೋಡ ನೋಡ್ಕೋತ, ಆ ಕಡಿ ಈ ಕಡಿ ಗೊಣು ತಿರುಗಿಸದವನಿಗೆ, ಎದುರಿಗಿನ ಬೆಂಚ ಮ್ಯಾಲ ಕೂತು ಸಿಗರೇಟು ಸೇದತ್ತಿದ್ದ ಬಿಳಿ ಮುದುಕಿನ ನೋಡಿದಾಗ....ನಿಮಗ ಮ್ಯಾಲ ಹೇಳಿದ್ದಲ್ಲಾ ಮನಸ್ಸಿನಾಗ ಸಿನೆಮಾದಂಗ ಓಡಿದ್ದು ಸುಳ್ಳಲ್ಲ.