ಮಂಗಳವಾರ, ಜನವರಿ 1, 2013

ಬೀಡಿ ಸೇದು ಮುದುಕಿ


ಬೀಡಿ ಸೇದು ಮುದುಕಿ

 

ಗುರುರಾಜ ಕುಲಕರ್ಣಿ (ನಾಡಗೌಡ)


ನಾನು ಸಿಂದಿಗಿಯೊಳಗ ಸಾಲಿ ಕಲಿ ಮುಂದಾಗ, ಎರಡ್ನೆತ್ತೆ ತನಾ ಬಜ಼ಾರನಾಗ ಇರು, ಹೆಣ್ಣಮಕ್ಕಳ ಸಾಲಿಗಿ ಹೋಗ್ತತ್ತಿದ್ದೆ. ಮೂರನೆತ್ತೆಕ್ಕ ಬಂದ ಮ್ಯಾಲ್ ಊರ ಹೊರಗಿದ್ದ ಗಂಡ ಹುಡುಗರ ಸಾಲಿಗಿ ಹೆಸರ ಹಚ್ಚಿದ್ದರು. ನನಗ ಅಷ್ಟ ದೂರ ನಡ್ಕೊತ ಹೋಗುದು ಆಗ್ತದೊ ಇಲ್ಲ ಅಂತ,ಅಮ್ಮಮೈಬುಬಗ ಸಾಯಿಕಲ್ ಮ್ಯಾಲ್ ಕರ್ಕೋಂಡು ಹೋಗಿ ಕರ್ಕೋಂಡ ಬರೋ ಕೆಲಸ ಕೊಟ್ಟಿದ್ದಳು. ನನಗೂ ಬಾಕಿ ಎಲ್ಲಾ ಹುಡುಗ್ರಂಗ ನಡಕೊತ, ಊರಾಗಿನ ಬ್ಯಾರೆ ಬ್ಯಾರೆ ರಸ್ತಾ-ಸಂದಿ ತಿರುಗೊಕೊತ ಸಾಲಿಗಿ ಹೋಗಿ ಬರಬೇಕು ಅಂತ ಭಾಳ ಆಸೆ ಆಗ್ತಿತ್ತು. ಆದ್ರ ದಾದಾನ ಹೆದ್ರಿಕಿಗಿ ಮೈಬುಬುನ ಜೊಡಿ ಸಾಯಿಕಲ್ಲ ಮ್ಯಾಲ್ ಸುಮ್ಮನ ಹೋಗ್ತಿದ್ದೆ. ಸಾಲಿಗಿ ಹೋದ ಸುರು ಸುರುವಿಗಿ ಗೆಳೆಯಂದ್ರು ಯಾರು ಇರ್ಲಾದೆ ಬ್ಯಾಸರ ಆಗ್ತಿತ್ತು. ಆದ್ರ ಮುಂದ ನಾಕನೇತ್ತೆಕ್ಕ ಬರುದರಾಗ, ಒಂದ ನಾಲ್ಕಾರು ಗೆಳೆಯಂದ್ರು ಸಿಕ್ಕರು.


ಮುಂದ ಐದನೇತ್ತಕ್ಕ ಬಂದಾಗ, ತಾನೇ ನಡಕೊತ ಸಾಲಿಗಿ ಹೋಗಿ ಬರ್ತಾನ ಬಿಡು ಅಂತ ನಮ್ಮ ಅಮ್ಮ ಮೈಬುಬುಗ ನಿನಗ ದವಾಖಾನಿ ಕೆಲ್ಸಾನೆ ಸಾಕು ಅಂತ ಹೇಳಿದ್ಳು. ಹಿಂಗಾಗಿ ನಾನೂ ಇದ್ದ ಗೆಳೆಯಂದ್ರ ಜೋಡಿ ನಡಕೊತ ಸಾಲಿಗಿ ಹೋಗಿ ಬರೋದು ಸುರು ಮಾಡಿದೆ. ಆವಾಗಿಂದ ಗೆಳೆಯಂದ್ರು ಭಾಳ ಮಂದಿ ಆದ್ರು... ಹಂಗೇ ಸಿಂದಗಿಯೊಳಗಿನ ಸಂದಿಗೊಂದಿಗೋಳು ಗೊತ್ತಾಗ್ಲಿಕತ್ತುವು. ಭೀಮಾಶಂಕರ ಮಠದ ಮುಂದ ಹಾದು, ಒಳಗಿನ ಸಂದ್ಯಾಗಿಂದ ಬಂದ್ರ ಸೀದಾ ಬಜ಼ಾರನಾಗಿನ ಉಪ್ಪಿನವರ ಅಂಗಡಿ ಮುಂದೆ ಬರ್ತಿವಿ ಅನ್ನುವಂತಾ ಜ್ಞಾನ ಸಿಗಿಲ್ಲಿಕ್ಕಿ ಶುರು ಆಯಿತು.

ನಮ್ಮ ಮನಿ ಆವಾಗ ನೀಲಗಂಗಮ್ಮನ ಗುಡಿ ಮುಂದ ಇತ್ತು. ಮನಿ ಸುತ್ತಮುತ್ತಲು ಗೆಳೆಯಂದ್ರು ಇದ್ದರು. ಅವರೂ ಗಂಡ ಸಾಲಿಗಿ ಬರ್ತಿದ್ರು. ಮುಂಜಾನೆ ಸಾಲಿಗಿ ಹೋಗು ಮುಂದಾಗ, ನೀಲಗಂಗಮ್ಮನ ಗುಡಿಗಿ ಎಲ್ಲಾರಂಗ ಹೊರಗಿಂದ ನಮಸ್ಕಾರ ಮಾಡಿ..ಹಂಗೆ ಊರಾನ ಮಠದ ಒಳಗಿಂದ ಹಾಯಿದು, ಬಿಂದುನ ಚಾ ಅಂಗಡಿ (ಅದಕ ಜೈ ಹನುಮಾನ್ ಟೀ ಕ್ಲಬ್ ಅಂತ ಬೋರ್ಡ್ ಇತ್ತು) ಮುಂದ ಕೂತ ಮಂದಿನ ನೋಡ್ಕೊತ್, ಮಸೀದಿ ಮುಂದ ಇರು ಪವಾರ್‌ನ ಬೀಡಿ ಅಂಗಡಿಯೊಳಗಿನ ಕನ್ನಡಿಯೊಳಗ ಹಣಿಕಿ ಹಾಕೊತ, ಸಿಂಡಿಕೇಟ ಬ್ಯಾಂಕ ಮುಂದ ನಿಂತಿರತ್ತಿದ್ದ ರಾಜದೂತ ಮೋಟರ ಸೈಕಲ್ ಸೀಟ ಮ್ಯಾಲ್ ಕೈ ಆಡಿಸಿ, ಮುಂದ ಇರೋ ಕಟ್ಟಿಗಿ ಅಡ್ಡೆ, ತಾರಾಪುರದವರ ಅಡತಿ ಅಂಗಡಿ ಮುಂದ ನಡಕೊಂಡು, ಕುಂಟ ಹಣಮಪ್ಪನ ಗುಡಿ ಮುಂದ ಕೂತಿರೊ ಭಿಕ್ಷಾದಂವನ ಮುಂದ ಬಿದ್ದಿರೊ ಚಿಲ್ಲರ ರೊಕ್ಕ್ ನೋಡ್ಕೊತ, ಶೇಟಜಿ ಪೆಟ್ರೊಲ್ ಬಂಕ ಮುಂದ ನಿಂದ್ರಿಸ್ಸಿದ್ದ ದೆವ್ವಿನಂತಾ ಟ್ರಕ್ ಒಳಗ ಕಾಜಿಗಿ ಅಂಟಿಸಿರು ಲಕ್ಷ್ಮೀ, ಗಣಪತಿ, ಶಿವನ ಸ್ಟಿಕರ್ಸ್ ನೋಡಿ, ಬಸ್ ಸ್ಟ್ಯಾಂಡಿಗಿ ಬರು ಬಸಗೋಳ ನಡುವ ಹಾರಕೊತ, ಅದರ ಎದ್ರುಗಿದ್ದ ನಮ್ಮ ಕನ್ನಡ ಸಾಲಿಗಿ ಹೋಗ್ತಿದ್ವಿ.

ಸಾಲಿಗಿ ಹೋಗು ಮುಂದಾಗ ನಾವು ಹುಡುಗರೆಲ್ಲಾ ಗುಂಪು ಗುಂಪಾಗಿ ಹೊಗ್ತಿದ್ದಿವ್ವಿ. ಹೋಗು ಮುಂದಾಗ, ನೀಲಗಂಗಮ್ಮನ ಜಾತ್ರಿಗಿ ಈ ಸರ್ತಿ ಏನೇನು ತೊಗೊ ಬೇಕು, ಮಣ್ಣೆತ್ತಿನ ಅಮ್ಯಾಸಿಗಿ ಮಣ್ಣೆತ್ತ ತೋಗೊಳ್ಳಿಕ್ಕಿ ಯಾವ ಕುಂಬಾರ ಮನಿಗಿ ಹೋಗಬೇಕು, ಬೀದಿ ಬಾಂವಿ ಹತ್ತಿರ ಇರು ಹೆಂಣ್ಣ ನಾಯಿಗಿ ಮರಿ ಆಗಿದ್ದು, ಬಡಿಗೇರ ಶ್ಯಾಮ್‍ ಮಾಡಿಕೊಟ್ಟ ಬಗರಿ ಎಷ್ಟು ಜೋರ್ ತಿರಗತ್ದದ, ಯಾರ್ಯಾರು ದೊಸ್ತಗೋಳು ನೂರಕ್ಕಿಂತಾ ಹೆಚ್ಚಿಗಿ ಗೊಲಿ-ಗುಂಡ ಇಟ್ಟಾರ, ಚೌಡಮ್ಮನ ಜಾತ್ರ್ಯಾಗ "ಅಗ್ಗಿ" ಹ್ಯಾಂಗ ಹಾರತಾರ, ಗಣೇಶ ಚೌತಿಗಿ ಲೇಜ಼ಿಮ ಆಡ್ಲಿಕ್ಕಿ ಸೊಲಾಪುರದಿಂದ ಬರ್ತಾರ ಅಂತ, ಇಂತಾ ನೂರಾರು-ಸಾವಿರಾರು ಸುದ್ದಿ ಮಾತಾಡಕೋತ ಹೊಂಟ್ರ ಸಾಲಿ ಬಂದ್ದದ್ದೇ ಗೊತ್ತಾಗ್ತಿರಲ್ಲಿಲ್ಲ.

ಹೀಂಗೆ ಒಂದ ದಿವ್ಸ ಮಾತಡ್ಕೊತ ಸಾಲಿಗಿ ಹೋಗು ಮುಂದಾಗ, ಊರಾನ ಮಠದ ಹತ್ತರ ಇರು ಹುಡುಗೊಬ್ಬ ಒಂದು ಆಶ್ಚರ್ಯಕರವಾದ ಸುದ್ದಿ ಹೇಳಿದ. ನಾವು ಯಾರು ಅಂತಾದ್ದು ನೋಡಿರಲ್ಲಿಲ್ಲ ಇಲ್ಲಾ ಕೇಳಿರಲ್ಲಿಲ್ಲ. ನನಗಂತೂ ನಂಬ್ಲಿಕ್ಕೆ ಆಗ್ಲಿಲ್ಲ...ಹೇ ಸುಳ್ಳ ಹೇಳ್ತಾನ ಇಂವ್ ಅಂತ ನಾ ಅಂದೆ..ಆದ್ರ ಅದನ್ನು ನೋಡಿದ್ದ ಇನ್ನೊಂದಿಬ್ರು ದೋಸ್ತರು, “ ಆ ಹುಡುಗ ಹೇಳೋದು ಖರೆ ಮತ್ತ ಅದನ್ನ ನಾವೂ ನೋಡಿವಿ” ಅಂತ ಆಣಿ ಮಾಡಿ ಹೇಳಿದ್ರು.. ಅದು ಸುದ್ದಿ ಏನು ಅಂದ್ರ ಊರಾನ ಮಠದ ಹತ್ರ ಇರು ನಮ್ಮ ದೋಸ್ತನ ಮನಿ ಮುಂದಿನ, ಮನ್ಯಾಗ ಇರು ಒಂದು ಮುದುಕಿ ಬೀಡಿ ಸೇದತಾಳ ಅಂತ ಅನ್ನು ವಿಷಯ. ನನಗೋ ಇದು ಪರಮಾಶ್ಚರ್ಯದ ಸುದ್ದಿ.

ನಾನು ಆಶ್ಚರ್ಯ ಪಡೋದು, ಸುದ್ದಿ ಹೇಳೋ ಹುಡುಗನಿಗಿ ಹುರುಪ ಕೊಟ್ಟತು. ಮುದುಕಿ ಬೀಡಿ ಹ್ಯಾಂಗ ಸೇದತಾಳ ಅನ್ನೋದರ ಬಗ್ಗೆ ಅವನ ವರ್ಣನಾ ಇನ್ನು ಹೆಚ್ಚಾಯಿತು. ಅದಕ್ಕ ತಕ್ಕಂತೆ ನನ್ನ ಕುತೂಹಲ ಬೆಳ್ಕೊಂಡು ಹೋಯಿತು. ಬೀಡಿ ಸೇದು ಮುದುಕಿನ್ನ ನೋಡ್ಲೇ ಬೇಕು ಅನ್ನು ತಹ ತಹಿಕಿ ಶುರು ಅಯಿತು. ಬೀಡಿ-ಸಿಗರೇಟ ಸೇದುದು ಬರೆ ಗಂಡಸರ ಕೆಲಸ ಅಂತ ತಿಳ್ಕೊಂಡ್ಡಿದ್ದ ನಮ್ಮಂತಹಾ ಹುಡುಗರಿಗಿ ಇದು ಭಾಳೇ ಆಶ್ಚರ್ಯದ ವಿಷಯವಾಗಿತ್ತು.

ಮುದುಕಿ ಬೀಡಿ ಸೇದುದು ನೋಡೆ ಬಿಡುಣು ಅಂತ, ಮಧ್ಯಾನ್ಹದ ಸಾಲಿ ಬಿಟ್ಟು ಓಡಿ ಊರಾನ ಮಠದ ಕಡೆ ಹೋದೆವು. ಆ ಮುದುಕಿ ತನ್ನ ಗುಡಿಸಿಲ ಹೊರಗ ಕೂತಿದ್ದಳು. ಕತ್ತಲಿ ಆಗುತನ ನಾವಿಬ್ಬರು ಅಲ್ಲೇ ಠಳಾಯಿಸಿದ್ವಿ ಆವಾಗವಾಗ ತನ್ನ ಸಂಚಿ ತಗುದು ತಂಬಾಕ ಹಾಕೊಂಡ್ಲೆ ಹೊರತು ಆಕಿ ಏನೂ ಬೀಡಿ ಹಚ್ಚಲ್ಲಿಲ್ಲ. ತಡಾ ಮಾಡಿ ಮನಿಗಿ ಹೊದ್ರ ಏಟು ಬಿಳ್ತಾವ ಅಂತ ನಾ ಮನಿಗಿ ಹೋದೆ. ಮುಂದ ಈ ವಿಷಯಾ ಮರತೂ ಹೋದೆ. ಮುದುಕಿ ಬೀಡಿ ಸೇದುದು ನಾ ನೋಡಲಿಲ್ಲ.

--------------------------------------------------------

ಉಪಸಂಹಾರ


ಮುಂದ ಸರಿ ಸುಮಾರು ಮುವತ್ತು ವರ್ಷದ ಮ್ಯಾಲೆ, ಟೊರೊಂಟೊದ ಆಫೀಸಿನಾಗ, ಒಂದ ಮುಂಜಾನೆಯಿಂದ ಕೆಲಸ ಮಾಡ್ಕೊತ ಕೂತವನಿಗಿ, ಸೊಂಟ ಮತ್ತ ಕುತ್ತಿಗಿ ಹಿಡಿದಂಗ ಆಗಿತ್ತು. ಅದಕ ಸಂಜಿ ಎಳಿ ಬಿಸಿಲನಾಗ ಆಫೀಸಿನ ಮಗ್ಗಲ್ಲಕೇ ಇರು ಬಗೀಚನಾಗ ಕಾಲ ಆಡಿಸ್ಕೊತ ತಿರುಗಾಡತಿದ್ದೆ.

ಅಲ್ಲಿ ಇರೋ ಸಣ್ಣ ಕೆರಿಯೊಳಗಿನ ತಿಳಿ ನೀರ, ನೀಲಿ ಮುಗಿಲನಾಗ ಹಾರತ್ತಿದ ಬಿಳಿ ಮೋಡ ನೋಡ್ಕೋತ, ಆ ಕಡಿ ಈ ಕಡಿ ಗೊಣು ತಿರುಗಿಸದವನಿಗೆ, ಎದುರಿಗಿನ ಬೆಂಚ ಮ್ಯಾಲ ಕೂತು ಸಿಗರೇಟು ಸೇದತ್ತಿದ್ದ ಬಿಳಿ ಮುದುಕಿನ ನೋಡಿದಾಗ....ನಿಮಗ ಮ್ಯಾಲ ಹೇಳಿದ್ದಲ್ಲಾ ಮನಸ್ಸಿನಾಗ ಸಿನೆಮಾದಂಗ ಓಡಿದ್ದು ಸುಳ್ಳಲ್ಲ.

1 ಕಾಮೆಂಟ್‌:

Satish Pattar ಹೇಳಿದರು...

ಭಾಳ ದಿನಾ ಆತ್ರಿ ಸರ್.. ನಿಮ್ಮಿಂದ ಒಂದೂ ಬ್ಲಾಗ್'ಪೋಸ್ಟ್ ಬಂದೇ ಇಲ್ಲಾ.. ಮತ್ತ ಮತ್ತ ಬರೀರಿ.. ನೀವು ಬರದಿದ್ದು ಓದಾಕ್ ಮಸ್ತ್ ಅನಸ್ತದರಿ.. ಸಿಂದಗಿಯ ನಮ್ಮ ನೆನಪುಗಳು ಮರುಕಳಿಸ್ತಾವ.. ದಯವಿಟ್ಟು ಬರೀತಾ ಇರ್ರಿ..