ಭಾನುವಾರ, ಜನವರಿ 20, 2013

ಒಂದು ಅಪ್ರಕಟಿತ ಸಂಶೋಧನಾ ಲೇಖನ

ಒಂದು ಅಪ್ರಕಟಿತ ಸಂಶೋಧನಾ ಲೇಖನ

-ಗುರುರಾಜ ಕುಲಕರ್ಣಿ (ನಾಡಗೌಡ)


ನಾನು ಬೆಂಗಳೂರಿಗೆ ಬಂದ ಹೊಸತರೋಳಗ ನಡಿದಿರೋ ಕಥಿ ಇದು. ಆವಾಗ ಬೆಂಗಳೂರು ಈಗಿನಷ್ಟು ಹಾಳು ಆಗಿರಲ್ಲಿಲ್ಲ, ಕೆಂಪೇಗೌಡರು ಮ್ಯಾಲನಿಂದ ನೋಡಿದಾಗ ಸಂತೋಷ ವ್ಯಕ್ತ ಪಡಿಸದೇ ಇದ್ದರೂ ಈಗಿನಂಗ ಬೆಂಗಳೂರ ನೋಡಿ ದುಃಖ ಅಂತೂ ಪಡತಿರಲ್ಲಿಲ್ಲ ಅಂತ ನಾನು ಅನ್ಕೊತಿನಿ.


ಬ್ಯಾಸಿಗಿಗೂ, ಸಂಜಿ ಮುಂದ ನಾಲ್ಕು ಹನಿ ಉದುರಿ ಹವಾ ತಣ್ಣಗ ಇರ್ತಿತ್ತು. ರೋಡ ಮ್ಯಾಲ ಒಂದ ನಾಲ್ಕಾರು ಕಾರು ಓಡಾಡ್ತದ್ದಿವು. ಧೂಳ, ಕಸ ಅಂತ ಏನೂ ಇರ್ತಿರಿಲ್ಲ. ನಿಮಗ ಕಣ್ಣ ದೃಷ್ಟಿ ಸರಿ ಇದ್ದರ, ಬ್ರಿಗೆಡ್ ರಸ್ತಾ ಜಂಕ್ಷನ್ ಹತ್ತರ ನಿಂತರ, ಎಂ ಜಿ ರಸ್ತಾ ಕೊನಿನೂ ಕಾಣಿಸ್ತಿತ್ತು.

ಕಬ್ಬನ ಪಾರ್ಕ್ನಾಗ ಇನ್ನಾ ಹಸಿರು ಇರತ್ತಿತ್ತು, ಅಲ್ಲಲ್ಲಿ ಗುಲ್ ಮೊಹರ್ ಗಿಡಗಳು ಕೆಂಪು ಹಳದಿ ಹೂ ಬಿಟ್ಟು, “ನೀ ನಡೆವ ದಾರಿಯಲ್ಲಿ ನಗೆ ಹೂಬಾಡದಿರಲಿ” ಅಂತ ಹಾಡ ಹಾಡತ್ತಿದ್ದವು. ಲಾಲಬಾಗನಾಗ ರುಚಿ ಇದ್ದ ಹಣ್ಣು ಹಂಪಲ ತಿನ್ನಿಲ್ಲಿಕ್ಕಿ ಸಿಗಿತ್ತಿದ್ವು ಮತ್ತ ಅಲ್ಲಿ ಮಂದಿಗಿ ವಾಕಿಂಗ ಮಾಡ್ಲಿಕ್ಕಿ, ಗಾಡಿ ಪಾರ್ಕಿಂಗ್ ಮಾಡ್ಲಿಕ್ಕಿ ಜಾಗ ಇರತ್ತಿತ್ತು.

ಮೆಜೆಸ್ಟಿಕನಾಗ ಅಣ್ಣಾವ್ರುದು, ಸಾಹಸ ಸಿಂಹನವರದು ಕಟೌಟಗಳಿಗೆ ಖರೆ ಖರೆ ಅಭಿಮಾನಿಗಳು ಹಾಲು, ಹಾರ, ಜೈಕಾರ ಹಾಕ್ತಿದ್ದರು. ಈ ಫ್ಲೈ ಒವರಗಳು, ಸಬ್ ವೇ-ಗಳು, ಒನ್ ವೇ-ಗಳು ಒಂದೂ ಇರಲ್ಲಿಲ್ಲ. ಜಯನಗರ ಫೋರ್ಥ್ ಬ್ಲಾಕ ಶಾಪಿಂಗ್ ಕಾಂಪ್ಲೆಕ್ಸ್ ನಮ್ಮಂತಾವರಿಗೆ “ಹ್ಯಾಂಗ ಔಟ್” ಜಾಗ ಆಗಿತ್ತು.

ಗಣಪತಿ ಹಬ್ಬಕ್ಕ, ಇಲ್ಲಾ ರಾಜ್ಯೋತ್ಸವಕ್ಕ ಹಿರಣ್ಣಯ್ಯನಂತೋರು ಅಚ್ಚ ಕನ್ನಡದ ನಾಟಕ ಮಾಡ್ತಾ ಇದ್ದರು.

ರಾತ್ರಿ ೧೦ ಗಂಟೆಗೆ ಆಟೋ ಬೇಕು ಅಂದ್ರ..ಬಿಕೋ ಅನ್ನೋ ರೋಡನಾಗ ಯಾವ ಗಾಡಿನೂ ಸಿಗಲಾರದೆ ಹೈರಾಣ ಆಗತ್ತಿತ್ತು. ಮುಂಜಾನೆ ತಿಂಡಿಗಿ ಅಂತ ಒಂದು “ಸಿಂಗಲ್ ಇಡ್ಲಿ ವಡಾ” ತಿಂದರೆ ಸಾಯಂಕಾಲತನಕ ಹಸಿವಿನೆ ಅಗ್ತಿರಲ್ಲಿಲ್ಲ, ಅದು ಅಲ್ದೆ ಈ “..ದರ್ಶಿನಿ” ಅನ್ನೊ ಹೋಟೆಲಗಳ ಸುದ್ದಿನೇ ಇರಲ್ಲಿಲ್ಲರಿ. ಆಮೇಲೆ ಎಲ್ಲದಕ್ಕಿಂತಾ ಮುಖ್ಯವಾಗಿ ಬಿ ಟಿ ಎಸ್ ಬಸನಾಗ್ ವಯಸ್ಸಾದವ್ರಿಗಿ, ಹೆಣ್ಣ ಮಕ್ಕಳಿಗಿ ಕೂಡ್ಲಿಕ್ಕಿ ಜಾಗ ಸಿಗಿತ್ತಿತ್ತು,

ಒಟ್ಟಿನಾಗ ಆಗ ಬೆಂಗಳೂರನಾಗ ಭಾಳ ಸುಭಿಕ್ಷಾ ಇತ್ತು.

ಅಂದಂಗ ನಾ ಹೇಳೋದು ಎಲ್ಲಾ ಕೇಳಿ, ಇವೆಲ್ಲಾ ಎಲ್ಲೋ ಕೆಂಪೇಗೌಡರ ಕಾಲದ ಸುದ್ದಿ ಅನ್ಕೊಂಡಿರೇನೋ? ಇಲ್ರಿ ಇದು ಒಂದ ಹದಿನೈದು ಇಲ್ಲಾ ಇಪ್ಪತ್ತು ವರ್ಷದ ಹಿಂದಿಂದು ಕಥಿ. ಆದ್ರ ಇದು ಕನ್ನಡಮ್ಮನ ಕಥಿ, ಬೆಂಗಳೂರಿನ ಕನ್ನಡಮ್ಮನ ಕಥಿ.

ಒಂದು ಸರ್ತಿ ನಮ್ಮ ಮಾಮಾ ಅಂದ್ರ ಭಾವ, ಪುಣೆಯಿಂದ ಯಾವುದೋ ಕೆಲಸದ ಮ್ಯಾಲ ಬೆಂಗಳೂರಿಗೆ ಬಂದರು. ಕೆಲಸೆಲ್ಲಾ ಆದ ಮೇಲೆ ವಾಪಸ್ಸ ಹೋಗಲಿಕ್ಕೆ ಇನ್ನಾ ಒಂದು ದಿವಸ ಉಳಿದ್ದಿತ್ತು, ಹಿಂಗಾಗಿ ಬೆಂಗಳೂರ ಸುತ್ತಾಡಕೊಂಡು ಬರಲಿಕ್ಕೆ ಇಬ್ಬರೂ ಹೊರಟ್ವಿ. ಮೊದಲು ಎಂ ಜಿ ರೋಡ್ ಹೋಗಿ ಅಲ್ಲಿ ತಿರುಗಾಡಿ, ಆಮೇಲೆ ಬರುವಾಗ ಮಲ್ಲೇಶ್ವರಂಗ ಒಂದು ಭೇಟಿ ಕೊಟ್ಟು ಅಲ್ಲಿಂದ ರಾಜಾಜಿನಗರಕ್ಕ ಬಂದು ಆಮೇಲೆ ನಂದಿನಿ ಲೇ ಔಟ್ ನೊಳಗ ಇರೋ ನಮ್ಮ ಮನಿಗೆ ವಾಪಸ್ಸು ಬರೋ ಕಾರ್ಯಕ್ರಮ ಹಾಕೊಂಡು ಹೊರಟೆವು. ಹಂಗೆ ಸುತ್ತಾಡಕೊಂಡು ಬ್ರಿಗೇಡ್ ರೋಡನಾಗ ರಂಗನಾಥ ಕೆಫೆ ಅಂತ ಒಂದು ಹೋಟೆಲ್ ಇತ್ತು, ಅಲ್ಲಿ ಕಾಫಿ ಕುಡಿಲಿಕ್ಕಿ ಒಳಗ ಹೊಕ್ಕೆವು. ಚಹಾ ಕುಡಿಯೋದಷ್ಟೇ ರೂಢಿ ಇದ್ದ ನನಗ ಇನ್ನಾ ಬೆಂಗಳೂರಿನ ಕಾಫಿ ರುಚಿ ನಾಲಿಗಿಗಿ ಹಿಡಿದರಲ್ಲಿಲ್ಲ. ಕಾಫಿ ಯಾಕೋ ಕಹಿ ಅನ್ನಸ್ತು, ಸ್ವಲ್ಪ ಸಕ್ಕರಿ ಹಾಕೊಂಡರ ಒಳ್ಳೇದು ಅನ್ಕೊಂಡು ಕಾಫಿ ತಂದು ಕೊಟ್ಟ ಹುಡುಗಂಗೆನೆ ಕರದು “ಸ್ವಲ್ಪ ಸಕ್ಕರೆ ಬೇಕು” ಅಂದೆ.

ಅವನು “ಶುಗರ ಬೇಕಾ ಸಾರ್?” ಅಂದ,

ನಾನು “ಹೂಂ” ಅಂದೆ.

ಸಕ್ಕರೆ ತಂದು ಕೊಟ್ಟ, ಚಮಚ ಇರಲ್ಲಿಲ್ಲ, “ಚಮಚಾ ಬೇಕು” ಅಂದೆ...

ಅವನು “ಸ್ಪೂನ್ ಬೇಕಾ ಸಾರ್?” ಅಂದ,

ನಾನು “ಹೂಂ” ಅಂದೆ. ಅವನು ಚಮಚಾನೂ ತಂದು ಕೊಟ್ಟ.

ನಾನು ಸ್ವಲ್ಪ ಸಕ್ಕರೆ ಹಾಕೊಂಡು, ಕಾಫಿ ಕುಡಿಯೋಕೆ ಶುರು ಮಾಡಿದೆ.

ಆಗ ಮಾಮ ನಕ್ಕೋತ “....ಅಂತೂ ನಿನಗ ಸಕ್ಕರಿ ಮತ್ತ ಚಮಚಾ ಸಿಗಿಲ್ಲಿಲ್ಲಾ ಅಲ್ಲಾ?”

"ಹೂಂನ್ರಿ ಮಾಮ...ಎಲ್ಲಾ ಅವರವರ ಅದೃಷ್ಟ” ಅಂತ ನಾ ಅಂದೆ.

ಹೋಟೆಲನಿಂದ ಹೊರಗ ಬಂದ್ವಿ, ಸ್ವಲ್ಪ ಹೊತ್ತು ತಿರುಗಾಡಿದ್ವಿ, ಅಲ್ಲೊಂದಿಷ್ಟು ಸಾಮಾನು ಖರೀದಿ ಆಯಿತು. ಎಂ ಜಿ ರೋಡ್ನಾಗ ಇರೋ ಬೃಂದಾವನ ಹೋಟೆಲ್ ಹೋದ್ವಿ, ಮತ್ತ ಕಾಫಿ ತರಿಸಿದ್ವಿ..ಮ್ಯಾಲ ಹೇಳಿದ ಮಾತುಕತಿ ಮತ್ತೊಂದು ಸರ್ತಿ ಆಯಿತು. ನಾ ಸಕ್ಕರಿ, ಚಮಚಾ ಕೇಳಿದೆ, ಕಾಫಿ ಕೊಟ್ಟ ಹುಡುಗ ಶುಗರ್ ಮತ್ತ ಸ್ಪೂನ್ ತಂದು ಕೊಟ್ಟ. ನಾನೂ ಮತ್ತ ಮಾಮ,ಇದನ್ನ ನೋಡಿ ನಕ್ಕೊತ ಕಾಫಿ ಕುಡುದ್ವಿ.


ಹೋಟೆಲನಿಂದ ಹೊರಗ ಬರೋವಾಗ ನನ್ನ ತಲಿಯೋಳಗ ಒಂದು ಅಧ್ಭುತ ಯೋಜನಾ ತಯಾರ ಆಯಿತು. ನಾನು ಮಾಮಗ ಹೇಳಿದೆ “ಮನಿಗೆ ವಾಪಸ್ಸ್ ಹೋಗೋತನಾ..ನಾವು ಎಲ್ಲೆಲ್ಲಿ ಹೋಗತಿವೋ ಅಲ್ಲಿ ಕಾಫಿ ಕುಡಿಯೋಣ” ಅಂದೆ

ಮಾಮ “ಯಾಕೋ?” ಅಂತ ಕೇಳಿದ್ದಕ್ಕ

“ಒಂದು ಪ್ರಯೋಗ ಮಾಡೋಣರೀ ಮಾಮ...ಇವತ್ತ ಬೆಂಗಳೂರಿನ ಯಾವ ಹೋಟೆಲನಾಗ ನನಗ ಸಕ್ಕರಿ ಮತ್ತ ಚಮಚಾ ಸಿಗ್ತಾವ ಅಂತ ನೋಡೋಣು” ಅಂತ ಅಂದೆ. ಮಾಮ ನಕ್ಕೋತ "....ಅಂತೂ ನಿನ್ನ ಹತ್ರ ಭಾಳ ಪುರೋಸೋತ್ತ ಅದ ಗೊತ್ತಾಯಿತು" ಅಂದ್ರು..

ಶುರು ಆಯಿತು ನಮ್ಮ ಪ್ರಯೋಗ, ಅದಕ್ಕೆ ಎಂ ಜಿ ರೋಡ, ಮಲ್ಲೇಶ್ವರಂ, ರಾಜಾಜಿನಗರದ ಹೋಟೆಲಗಳೇ ಗಿನಿಪಿಗ್ ಆದವು. ನಾವು ಅನಕೊಂಡಂಗ, ಯಾವ ಹೋಟೆಲನಾಗೂ ನನಗೆ “ಸಕ್ಕರೆ ಮತ್ತು ಚಮಚಾ” ಸಿಗಲೇ ಇಲ್ಲ.


ಮನೆಗೆ ಬಂದ ಮೇಲೆ, ಮಾಮಾ ನನಗೆ ಕೇಳಿದರು “ನಿನ್ನ ಪ್ರಯೋಗದ ಫಲಿತಾಂಶ, ಏನಂತದ”?

ಅದಕ್ಕೆ ನಾನು ಹೇಳಿದೆ.....

 “ ಎರಡು ಥರದ ಫಲಿಶಾಂಶ ಅವರೀ ಮಾಮಾ...ಅವು ಯಾವವು ಅಂದ್ರ...  ಮೊದಲೆನೆದು, ಜಾಸ್ತಿ ಕಾಫಿ ಕುಡುದ್ರ ಪಿತ್ಥ ಜಾಸ್ತಿ ಆಗದತ ನನ್ನ ಹೊಟ್ಟಿ ಅಂತ ಹೇಳತದ...  ಎರಡನೇದು ಬೆಂಗಳೂರನಾಗ ಕಳೆದು ಹೋಗಿರೋ ಕನ್ನಡ ನೋಡಿ ಮನಸ್ಸು ಮರಗತದ..”

ಮಾಮಾ “ಮುಂದ ಏನು?”...

ಅದಕ್ಕ ನಾನ ಅಂದೆ “ಇದರ ಬಗ್ಗೆ ಒಂದು ಸಂಶೋಧನಾ ಲೇಖನ ಬರಿತಿನ್ರಿ”...

“ಆಯಿತು ಹಂಗಂದ್ರ ಲಗೂನೇ ಬರೀ”

ಮುಂದ ಇಪ್ಪತ್ತು ವರ್ಷ ಆದ ಮೇಲೆ ನಾನು ಈ ಸಂಶೋಧನಾ ಲೇಖನ ಬರೆದೆ. ಇನ್ನಾ ಎಲ್ಲೂ ಪ್ರಕಟ ಆಗಿಲ್ಲ.


-------------------------------------------------------------------------------------

ಉಪಸಂಹಾರ


ಒಂದೂರಾಗ ಒಬ್ಬ ವಿಜ್ಞಾನಿ ಇದ್ದನಂತ.....

“ಮ್ ಅಮ್.. ವಿಜ್ಞಾನಿ ಅಂದ್ರ”?

“ವಿಜ್ಞಾನಿ ಅಂದ್ರ “ಸೈಂಟಿಸ್ಟ್”....ಅಂವನ ಹತ್ತಿರ ಭಾಳ ಪುರುಸೊತ್ತು ಇತ್ತಂತ... “

“ಮ್ ಅಮ್.. ಪುರುಸೊತ್ತು ಅಂದ್ರ”?

“ಪುರುಸೊತ್ತು ಅಂದ್ರ ಟೈಮ್..ಅವನ ಹತ್ರ ಭಾಳ ಟೈಮ್ ಇತ್ತಂತ...”

“ಹುಂ”

"ಅದಕ್ಕ ಅಂವ ಒಂದು ಕಪ್ಪಿ ಮ್ಯಾಲ ಪ್ರಯೋಗ ಮಾಡಬೇಕು ಅಂತ ಅನಕೊಂಡನಂತ".

“ಮ್ ಆಮ್ ....???”

"ಅಯ್ಯಪಾ....ಕಪ್ಪಿ ಅಂದ್ರ ಫ್ರಾಗ್...ಪ್ರಯೋಗ ಅಂದ್ರ ಎಕ್ಸಪಿರಿಮೆಂಟ...ಗೊತ್ತಾಯಿತಲ್ಲಾ ? ನೀ ಹಿಂಗ ಎಲ್ಲದಾಕು, ಅದು ಅಂದ್ರ.. ಇದು ಅಂದ್ರ ಅಂತ ಅರ್ಥ ಕೇಳಿದ್ರ ನಾ ಕಥಿ ಹ್ಯಾಂಗ ಹೇಳಲಿ...ಕಥಿ ಮುಗಿಯೋ ತನ ಸುಮ್ಮನ ಕೂತಿರು..ತಿಳೀತು"?

“ಹುಂ”

"....ಎಲ್ಲಿದ್ದೆ ನಾನು?..ಹಾಂ... ವಿಜ್ಞಾನಿ, ಕಪ್ಪಿ ಮ್ಯಾಲ ಪ್ರಯೋಗ ಮಾಡಬೇಕು ಅಂತ ಅನಕೊಂಡನಂತ...ಮೊದಲು ಕಪ್ಪಿಗಿ “ಜಿಗಿ” ಅಂತ ಅಂದಕೂಡಲೇ..ಜಿಗಿಯುವಂಗ ಹೇಳಿ ಕೊಟ್ಟನಂತ...

ವಿಜ್ಞಾನಿ “ಜಿಗಿ” ಅನ್ನೋದೇ ತಡ, ಕಪ್ಪಿ “ಟಣ್” ಅಂತ ಜಿಗಿತಿತ್ತಂತ...

ಸ್ವಲ್ಪ ದಿವಸ ಆದ ಆಮೇಲೆ ಕಪ್ಪಿದು ಮುಂದಿನ ಎರಡೂ ಕಾಲ ಕತ್ತರಿಸಿ, “ಜಿಗಿ” ಅಂತ ಅಂದನಂತ, ಕಪ್ಪಿ ಕಷ್ಟಾ ಪಟ್ಟು ಹಿಂದಿನ ಎರಡೂ ಕಾಲಲ್ಲಿನೇ ಜಿಗಿತಂತ....

ಆಮೇಲೆ ವಿಜ್ಞಾನಿ ಕಪ್ಪಿದು ಹಿಂದಿಂದೂ ಎರಡೂ ಕಾಲ ಕತ್ತಿರಿಸಿ “ಜಿಗಿ” ಅಂದನಂತ...ಕಪ್ಪಿ ಜಿಗಿಲ್ಲಿಲ್ಲಂತ...

ಅದಕ ವಿಜ್ಞಾನಿ ತನ್ನ ಸಂಶೋಧನಾ ಲೇಖನದೊಳಗ, “ಕಪ್ಪಿಗಿ ಹಿಂದಿನ ಕಾಲು ಇರಲ್ಲಿಲ್ಲ ಅಂದ್ರ...ಅದಕ ಕಿವಿ ಕೇಳಸಂಗಿಲ್ಲಾ” ಅಂತ ಬರಕೊಂಡನಂತ.....

".........."

"ಹ್ಯಾಂಗದ ಕಥಿ....ಯಾಕೋ ನೀ ನಗಲೇ ಇಲ್ಲಲ್ಲೋ..? “ಜೋಕ್” ಅರ್ಥ ಆಗ್ಲಿಲ್ಲಾ? ....ಹೋಗ್ಲಿ ಬಿಡು...."