ಭಾನುವಾರ, ಡಿಸೆಂಬರ್ 23, 2012

ಸಿಂದಗಿ ಬ್ಯಾಸಗಿ ಅಂದ್ರ...

ಸಿಂದಗಿ ಬ್ಯಾಸಗಿ ಅಂದ್ರ..

 


-ಗುರುರಾಜ ಕುಲಕರ್ಣಿ(ನಾಡಗೌಡ) 



ಸಿಂದಗಿ ಬ್ಯಾಸಗಿ ಅಂದ್ರ,
ಮುಂಜಾನೇನೆ ಶುರು ಆಗೊ ರಣ ರಣ ಬಿಸಿಲು,
ರಾತ್ರಿ ಆದ್ರೂನು ಸುಡು ಸುಡು ನೆಲ,
ಟೇಬಲ್ ಮ್ಯಾಲ್ ಸುಮ್ಮನೆ ಕೂತಿರೊ ಫ಼್ಯಾನು,
ಅಲ್ಲಾಡದೆ ನಿಂತಿರೊ ಗಿಡದ ಟೊಂಗೆ,
ಬೆವರಿನೊಳಗ ನೆಂದಿರೊ ಕರಿ, ಬಿಳಿ ಟೊಪಿಗೆಗಳು;

ಸಿಂದಗಿ ಬ್ಯಾಸಗಿ ಅಂದ್ರ,
ಮಣ್ಣೂರ ಸರ್, ವಾಡೆ ಸರ್ ಪುಸ್ತಕದ ಅಂಗಡಿ ಮುಂದ ನಿಂತಿರೊ ಹುಡುಗ್ರು,
ಪರೀಕ್ಷಾ ತಯಾರಿ, ಕ್ಲಿಪ್ ಬೋರ್ಡ, ಹೊಸಾ ಪೆನ್, ಕೆಂಪ ಮಸಿ ಬಾಟಲಿ,
ನಟರಾಜ್ ಪೆನ್ಸಿಲ್, ಲೇಖಕ್ ನೋಟ ಬುಕ್, ಬಿಳಿ ಹಾಳಿ ಖರೀದಿ;

ಸಿಂದಗಿ ಬ್ಯಾಸಗಿ ಅಂದ್ರ, 
ಜೋಗೂರ ಬಸುನ ಹೊಲದ್ದು ಮಾವಿನ ಹಣ್ಣ್,
ಸಿದಗೊಂಡಪ್ಪನವರ್ ತ್ವಾಟದಾಗಿನ ದ್ರಾಕ್ಷಿ,
ಬಜ಼ಾರದಾಗ ಕೂತು, ಬುಡ್ಡಿ-ಮಾ ಮಾರೊ "ಕಾಶಿ" ಬಾರಿಹಣ್ಣ್,
ಗಾರೆಗಾರ್- ಲಾಲ್‍ವಾಲದೊನ್ ಒತ್ತು ಬಂಡಿ;

ಸಿಂದಗಿ ಬ್ಯಾಸಗಿ ಅಂದ್ರ,
 ಅಂಗಡಿಗೋಳ ಮುಂದ ’ಚಾ’ದ ಜೋಡಿ ಬೀಡಿ ಸೇದೊರು,
ಹಣಮಂತ್ ದೇವರ್ ಗುಡಿ ಕಟ್ಟಿಗಿ ಮಲ್ಕೊಂಡ ಮುದುಕ,
ಚಡ್ಡಿ ಹಾಕ್ಕೊಳಾರದೆ ಆಡು ಸಣ್ಣ್ ಸಣ್ಣ್ ಚಿಕ್ಕೊಳು,
ಮೆಲಕಾಡಸ್ಕೊತ್ ಕೂತ ದನಗೊಳು,
ಮನಿ ಮಗ್ಗಲಾಗಿನ್ ಬೇವಿನ ಗಿಡದ ನೆರಳ;

ಸಿಂದಗಿ ಬ್ಯಾಸಗಿ ಅಂದ್ರ,
 ಎಂಟೆನೆ ಸರ್ತಿ "ಮಯೂರ" ಸಿನೆಮಾ ನೋಡ್ಲಿಕ್ಕಿ ಬಂದೊರು,
ಸೆಖಿ ತಡಿಲಾರ್ದೆ ಶರ್ಟ್ ಬಿಚ್ಚಕೊಂಡು ಕೂತು, ಸೀಟಿ ಹೊಡಿಯೊ ಹುಡುಗ್ರು,
ಕಠಾರಿ ವೀರ, ಬಾಲನಾಗಮ್ಮ, ತಾಯಿಯ ಮಡಿಲ್ಲಲ್ಲಿ ಪೋಸ್ಟರಗಳು,
ಇಂಟರವಲ್ಲ್ನಾಗ್, ನಾಸಿ ಉಮೇಶ ಮಾರೊ ಪೆಪ್ಪರಮಿಂಟು;

ಸಿಂದಗಿ ಬ್ಯಾಸಗಿ ಅಂದ್ರ,
ಜಂಬಗಿ ಸರ್ ಹೇಳಿ ಕೊಡೊ ಭಾಷಾಂತರ ಪಾಠಮಾಲೆ ಒಂದು, ಎರಡು, ಮೂರು,
ಕಪಾಟನಾಗಿರೊ ಹಳೇ ಕಸ್ತೂರಿ, ಕರ್ಮವೀರ
ಶೆಲ್ಫ್ನಾಗಿರೊ ಬೇಂದ್ರೆ, ಕಾರಂತ, ಭೈರಪ್ಪ, ಡಿವಿಜಿಯವರ ಪುಸ್ತಕಗೊಳು,
ತೊಡಿಮ್ಯಾಲಿರೊ "ಬೊಂಬೆಮನೆ", ಕೈಯೊಳಗಿರೊ "ಚಂದಮಾಮ",
"ಸುಧಾ"ದಾಗಿನ ಫ್ಯಾಂಟಮ್, "ಕರ್ಮವೀರ"ನಾಗಿನ ವಿಕ್ರಮ;

ಸಿಂದಗಿ ಬ್ಯಾಸಗಿ ಅಂದ್ರ, 
 ಅಮ್ಮ ಮಾಡಿದ ಉಳ್ಳಾಗಡ್ಡಿ, ಟೊಮೇಟೊ ಹುಳಿ,
ಗೊಲಿಗುಂಡ ಆಡಿದ್ದಕ್ಕ ದಾದಾ ಕೊಟ್ಟ ಏಟು,
ಅಕ್ಕ-ಅಣ್ಣನ ಜೋಡಿ ಆಡಿದ್ದ ಕೆರಂಬೊರ್ಡು,
ಧಾರವಾಡ ಆಕಾಶವಾಣಿಯೊಳಗ ಬರೊ ಗಿಳಿವಿಂಡು;

ಸಿಂದಗಿ ಬ್ಯಾಸಗಿ ಅಂದ್ರ,
ಮುಂಜಾನೆ ಜಕ್ಕಪ್ಪಯ್ಯನೊರ ತ್ವಾಟದ ಬಾವಿ ಈಜು,
ಸಂತಿಯೊಳಗ ಮೈಬು ತಂದ ತಾಜ಼ಾ ಬೆಣ್ಣಿ,
ಬಿಸಿ ಬಿಸಿ ಭಕ್ಕರಿ ಪಲ್ಯ ಊಟ-ಮಧ್ಯಾಹ್ನದ ನಿದ್ದಿ,
ಸಂಜಿಮುಂದ ಆಡೊ, ಬುಗುರಿ, ಚಿಣದಾಂಡ, ಗೊಲಿಗುಂಡ,
ರಾತ್ರಿ ಮುಗಿಲಾನಾಗ ಕಾಣೊ ಬೆಳ್ಳಗಿನ ಚಂದ್ರಾಮ;

ಸಿಂದಗಿ ಬ್ಯಾಸಗಿ ಅಂದ್ರ,
ಅಮ್ಮ ಮಾಡೊ ನಿಂಬೆ ಹಣ್ಣಿನ ಶರಭತ್,
ದಾದಾ ಹೇಳೊ ಹಿಪ್ಪರಗಿ ಹಳೇ ಸುದ್ದಿಗಳು, ಕಥಿಗೊಳು,
ಅಣ್ಣನ ಜೋಡಿ ಆಡೊ ಬಾಡಿಗಿ ಸೈಕಲ ಆಟ,
ಗಡಿಗಿಯೊಳಗ ಇರೊ ತಣ್ಣಗಿನ ನೀರು;

ಸಿಂದಗಿ ಬ್ಯಾಸಗಿ ಅಂದ್ರ,
ಹೋಳಿಹುಣ್ಣಿವಿಗಿ ಮಾಡೊ ಕುಳ್ಳ ಕಟ್ಟಿಗಿ ಕಳ್ಳತನ,
ಮರುದಿನ ಲಬೊ ಲಬೊ ಹೊಯ್ಕೊತ ಬಣ್ಣ ಹಾಕೊ ಗೆಳೆಯಂದ್ರು,
ಬಡಿಗೇರ ಭಗವಂತ, ಪತ್ತಾರ ಉಮೇಶ, ನಾಗೂರ ಅನಿಲ್,
ಗೋಲಾ ರವಿ, ಜೋಶಿ ರಾಮಾಚಾರಿ, ಗುಣಾರಿ ಶಿವು,
ಕುಲ್ಕರ್ಣಿ ಸಂಜೀವ, ಪಾಟೀಲ ವಿಜು,ಸಂಗಯ್ಯ, ಮನಗೂಳಿ ಅಶೋಕ

ಶಬ್ದಾರ್ಥ

ಬುಡ್ಡಿ ಮಾ - ಸಂತಿಯೊಳಗ ತರಕಾರಿ-ಹಣ್ಣು ಮಾರುತಿದ್ದ ಮುಸಲ್ಮಾನರ
ಮುದುಕಿ, ಮಕ್ಕಳಿಗೆಲ್ಲಾ ಬುಡ್ಡಿ-ಮಾ ಎಂದೇ ಪರಿಚಿತ

ಗಾರೆಗಾರ್ವಾಲ್ - ಐಸ್ ಮಾರೊನಿಗೆ ಮಕ್ಕಳು ಕೂಗೊ ಹೆಸರು

ಚಿಕ್ಕೊಳು - ಚಿಕ್ಕ ಮಕ್ಕಳು

ಕುಳ್ಳು - ಬೆರಣಿ  


ವಿನಯ ಕೃಷ್ಣಸ್ವಾಮಿ  ಫ಼ೇಸ್ ಬುಕ್ ನಾಗ "ಗುರುವಾಯುರನ ಕೆರೆ" ಬಗ್ಗೆ ಓದಿ ಅಪ್‍ಡೇಟ್ ಮಾಡಿದ್ದು ನೋಡಿ, ನನ್ನೂರ ಸಿಂದಗಿ ನೆನಪಾಯಿತು.

ಮಲೆನಾಡಿನವರಿಗಿ ಬರಿಲ್ಲಿಕ್ಕಿ ಹಸಿರ ಹುಲ್ಲ, ಗುಡ್ಡ ಮತ್ತ ನೀರು ಅವ, ಕಾಡು ಅದ...ಆದ್ರ ಬಯಲ ಸೀಮಿಯೊಳಗ ಹುಟ್ಟಿ ಬೆಳೆದ ನನ್ನಂತಹವರಿಗಿ...ಬ್ಯಾಸಗಿ ಬಿಸಿಲ ಬಿಟ್ಟು ಬರಿಲಿಕ್ಕಿ ಏನೂ ಇಲ್ಲಾ...

ಏನೂ ಇಲ್ಲಾ ಅಂದ್ರೂನು...ನನ್ನೂರಾಗ ನನ್ನ ಬಾಲ್ಯ ಅದ..ಗೆಳೆಯಿಂದ್ರು ಇದ್ದಾರ...ಗೆಳೆತನ ಅದ..ಮಜ಼ಾ ಅದ...ಅದನ್ನೇ ಬರೆದೆ..ಕವನ ಆಯಿತು...

1 ಕಾಮೆಂಟ್‌:

Harsha ಹೇಳಿದರು...

ನಿಮ್ಮ ಬಾಲ್ಯ ಛಲೋ ಐತ್ರಿ..ನೀವು ಕಟ್ಟಿಕೊಟ್ಟ ನೆನಪುಗಳ ಬುತ್ತಿ ಬಿಚ್ಚಿ ಉಂಡಷ್ಟು ಖುಷಿ ಆಗ್ತದ ನೋಡ್ರಿ.ಸಿಂದಗಿ ಬ್ಯಾಸಗಿ ನೀವ‍್ ಈಗ ಕಂಡದ್ದಕಿಂತಾ ಹೆಚ್ಚ ಐತಿ.
ರವಿಚಂದ್ರ ಹಣಮಂತ ಮಲ್ಲೇದ
ವಿಜಯಕರ್ನಾಟಕ ಸಿಂದಗಿ
88843111234