ಭಾನುವಾರ, ಏಪ್ರಿಲ್ 20, 2014

ಹೀಗಿದೆ ಭಟ್ಟರ (ಬಗ್ಗೆ, ನಮ್ಮ) ಉವಾಚ

ಅದು ಇಸವಿ ೨೦೦೬ ಕೊನೆ ಮತ್ತು ೦೭ ಶುರುವಾತು ಇರಬೇಕು, ಓತಪ್ರೋತವಾಗಿವಾಗಿ ಹರಿದು ಬರುತ್ತಿದ್ದ ಏಕತಾನತೆಯ ಸಿನಿಮಾಗಳ ಬೇಗೆಯಲ್ಲಿ ಬೇಯುತ್ತಿದ್ದ ಕನ್ನಡ ಸಿನಿಮಾ ಪ್ರೇಕ್ಷಕನ ಬೇಗುದಿಗೆ “ಮುಂಗಾರು ಮಳೆಯ” ಸಿಂಚನವಾಯಿತು.ಮನೆಯ ಅಂಗಳದಲ್ಲಿ ಹನಿಯುತ್ತಿದ್ದ ಮಳೆಯಲ್ಲಿ ಕುಣಿದು ಕುಪ್ಪಳಿಸುವ ಮಕ್ಕಳಂತೆ ಪ್ರೇಕ್ಷಕ ಪ್ರಭು ಸಿನೆಮಾ ನೋಡಿ ಕುಣಿದಾಡಿದ. ರಾತ್ರೋರಾತ್ರಿ ಸಿನೆಮಾಕ್ಕೆ ಸಂಭಂದಿಸಿದವರು, ಮೆಜೆಸ್ಟಿಕ್-ನಿಂದ ಹೊರಟು ನೇರ ಚಂದ್ರನಾಚೆಗಿರುವ ಲೋಕದಲ್ಲಿ ತಾರೆಗಳಾಗಿ ಮಿಂಚಲಾರಂಭಿಸಿದರು.

ಭೋರ್ಗರೆಯುವ “ಮುಂಗಾರು ಮಳೆ”ಯ ಪರಿಣಾಮ ನೋಡಿ ಯೋಗರಾಜ ಭಟ್ಟರು “...ಏನು ನಿನ್ನ ಹನಿಗಳ ಲೀಲೆ?” ಎಂದು ಗುನುಗಿದರು. ಈ ಹಾಡು ಅವರನ್ನು ಸಿನೆಮಾ-ಕವಿಯಾನ್ನಾಗಿ ಮಾಡಿದರೂ, ಅವರ ಕಾವ್ಯದ ಚಂಡೆ ಸದ್ದು, ಇನ್ನೂ ಕನ್ನಡ ಚಿತ್ರರಂಗದ ಹೊಸ್ತಿಲಾಚೆಯೇ ನಿಂತಿತ್ತು. ಮುಂದೆ ಬಂದ ಅವರ ಸಿನೆಮಾಗಳಲ್ಲಿ, ಪಾತ್ರಗಳ ಮೂಲಕ ಅವರಾಡಿಸುವ ತುಸು ಪೋಲಿತನ ಬೆರೆತ ಉಡಾಫೆಯ- ವೇದಾಂತದ ಮಾರುದ್ದನೆಯ ಮಾತುಗಳು, ಕನ್ನಡಿಗರ ಮನದಲ್ಲಿ ಚಿತ್ರ ನಿರ್ದೇಶಕ ಭಟ್ಟರಿಗೊಂದು ಬೆಚ್ಚನೆಯ ಜಾಗ ಮಾಡಿಕೊಟ್ಟವು. ಸಿಕ್ಕಾಪಟ್ಟೆ ಮಾತಾಡುವ ನಾಯಕನ ನಿರೀಕ್ಷೆಯಲ್ಲಿ ಜನ, ಭಟ್ಟರ ಸಿನಿಮಾ ನೋಡಲು ಸೇರುತಿದ್ದರು.ಇದರ ಮಧ್ಯೆ ನಿಧಾನವಾಗಿ ಏರುವ ನಶೆಯಂತೆ, ಭಟ್ಟರ ಸಿನೆಮಾದಲ್ಲಿನ ಅವರೇ ಬರೆದ ಹಾಡುಗಳು ಕೇಳುಗರ ಕಿವಿಯಲ್ಲಿ ರಿಂಗಣಿಸತೊಡಗಿದವು. ಭಟ್ಟರನ್ನ ಕುರಿತು ಅವರ ಪತ್ನಿ “ಅವರು ಕವಿಯಾಗಿಯೇ ನನಗೆ ಹೆಚ್ಚು ಇಷ್ಟ” ಎಂದದ್ದು ಕಿರು ಸುದ್ದಿಯಾಗಿ, ಪತ್ರಿಕೆಯ ಮೂಲೆಯಲ್ಲಿ ಪ್ರಕಟವಾಯಿತು.

ಪಡ್ಡೆ ಹುಡುಗರ ಆಡುವ ಮಾತುಗಳನ್ನೇ ಹಾಡುಗಳನ್ನಾಗಿಸಿವ ಭಟ್ಟರ ಕಲೆಗೆ, ಹರಿಕೃಷ್ಣರ ಪಕ್ಕವಾದ್ಯಗಳು ಸರಿಯಾಗಿಯೇ ಸಾಥ ಕೊಟ್ಟವು. “ಹಳೇ ಪಾತ್ರೆ...ಹಳೇ ಕಬ್ಬಿಣ”, “ಖಾಲಿ ಕ್ವಾಟರ್ ಹಂಗೆ ಲೈಫು”, ಅಥವಾ “ಬೋಲ್ಡು ಇರದ ಬಸ್” ..ಎನ್ನುವ ಅತಿ ಸಾಧಾರಣ, ಆದರೆ ಅತ್ಯಂತ ಜನಪ್ರಿಯ ಹಾಡುಗಳ ಮಧ್ಯೆಯೇ... “ಸೌಂದರ್ಯ ಸಮರ, ಸೋತವನೆ ಅಮರ” ಬೆರಗುಗೊಳಿಸುವಂತಹ  ಸಾಲುಗಳ ಸೃಷ್ಟಿ ನಡೆಯಿತು. “ಗಂಡ-ಹೆಂಡತಿ ಇಬ್ಬರೂ ದುಡಿದು, ಸಾಲಾ ಮಾಡಿ ಮನೆಯ ಕಟ್ಟಿ ಮಕ್ಕಳು ಎಲ್ಲಿ ಹೋದರೂ ಅಂತ ಹುಡುಕಿ, ..ಲೈಫು ಇಷ್ಟೇನೇ”  ಎಂಬ ಸಾಲುಗಳ ಮೂಲಕ ನಗರ ಜೀವನಕ್ಕೆ ಒಂದು ಚೌಕಟ್ಟು ಕಟ್ಟಿ ಕೊಟ್ರೆ, “ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲಮ್...ಹುಡುಗರ ನೋವಿಗೆ ಇಲ್ಲಾ ಮುಲಾಮು” ಎನ್ನುತ್ತಾ ಪ್ರತಿ ಭಗ್ನ ಪ್ರೇಮಿಗಳ(?) ಪ್ರತಿನಿಧಿಯಾದರು. “ನಿನ್ನ ಮೂತಿ ನೋಡಬೇಕು..ಸ್ವಲ್ಪಾ ಗಡ್ಡ ಬೋಳ್ಸ್-ಯ್ಯ” ಹುಡುಗೀರ ಬಾಯಲ್ಲಿ ಹೇಳಿಸಿ ಹುಡುಗರನ್ನ ಸಮಾಧಾನ ಮಾಡಿದ್ರು. ಪವರ್ ಸ್ಟಾರ್ ಬಾಯಲ್ಲಿ “ಹುಡುಗೀರೇ ಸ್ಟ್ರಾಂಗ್ ಗುರೂ...” ಎಂದು ಹೇಳಿಸಿ, ಮಹಿಳಾ ದಿನಾಚಾರಣೆ ಮಾಡಿದ್ರು. “ಹಳೇ ಹುಬ್ಬಳಿ ಬಸ್ಟ್ಯಾ೦ಡನಾಗ ನಿಂತಿದ್ದೆ...ಮಿರ್ಚಿ ಮಂಡಕ್ಕಿನಾ ತಿಂದು ನಾ ಚಹಾ ಕುಡಿದೆ” ಅಂತಾ ತಮ್ಮ ಹಳೇ ಪುರಾಣ ಬಿಚ್ಚಿಟ್ಟರು. ಒಂದ ಕಡೆ “ಚಿಟ್ಟೆಗೆ ಚಡ್ಡಿ ಹಾಕಿದ್ರೆ” ಹೆಂಗೆ ಅಂತ ಯೋಚನೆ ಮಾಡಿದ್ರೆ, ಇನ್ನೊಂದ ಕಡೆ “ಸೈಕಲಲ್ಲಿ ತೆಂಗಿನ ಮರ ಹತ್ಲಾ ?” ಅಂತಾ ನಮ್ಮಂತಹವರ ಹತ್ರ ಕೇಳದ್ರು. ಮೂಗ-ನತ್ತು ಆಗಿ ಹುಟ್ಟಿದ್ರೆ “ಅವಳ” ಹತ್ರಾನೆ ಇರಬಹುದಾಗಿತ್ತು ಅನ್ನೋ ಹೊಸಾ ವಿಚಾರ ಮಾಡಿದ್ರು.  “ಒಬ್ಬಳನ್ನೇ ಲವ್ ಮಾಡಿ ಚೆನ್ನಾಗಿರಿ” ಅಂತಾ ವಯಸ್ಸಿಗೆ ಬಂದ ಹುಡುಗರಿಗೆ ಆಶೀರ್ವಾದ ಮಾಡಿದ್ರೂನೂ, ಅದೇ ಉಸಿರಲ್ಲಿ “ಇನ್ನೊಬ್ಬಳ ಫೋನ್ ನಂಬರ್ ಇಟ್ಕೊಂಡಿರೀ” ಅಂತ ಕಿವೀಲಿ ಹಿತವಚನ ಹೇಳಿದ್ರು. ಒಟ್ಟಿನಲ್ಲಿ, ಹದಿಹರಿಯದ ಹುಡುಗ ಹುಡುಗಿಯರಿಗೆ ಪ್ರೀತಿ-ಪ್ರೇಮಗಳ ಹೊಸ ಹೊಸ ವಾಖ್ಯಾನ ಕೊಟ್ರು, ಅಂತಹವರನ್ನ ಮತ್ತೆ ಕನ್ನಡ ಸಿನೆಮಾ ನೋಡೋಕೆ ಕರ್ಕೊಂಡು ಬಂದ್ರು. ಪತ್ರಕರ್ತರ ಹತ್ತಿರ “ಸಿನಿಮಾ ನೋಡುವವರೆ ನಲವತ್ತರ ಕೆಳಗಿನವರು, ನಾನು ಅಂತಹವರಿಗೆ ಸಿನಿಮಾ ಮಾಡೋದು” ಅಂತ ಅಲವತ್ತುಕೊಂಡರು.

 ನಿಜ ಹೇಳಬೇಕೂಂದ್ರೆ, ಒಬ್ಬ ಸಿನಿಮಾ ನಿರ್ದೇಶಕ ಕೇವಲ ತಾನು ಬರೆದ ಹಾಡಿನಿಂದಲೇ ಬೇರೆಯವರ ಸಿನೆಮಾಗಳನ್ನೂ ಗೆಲ್ಲಿಸಿಕೊಟ್ಟ ದಾಖಲೆ ಭಟ್ಟರದಾಯಿತು. ಬೇರೆ-ಬೇರೆ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ಅನೇಕ ಕಲಾವಿದರು, ಹೆಸರಿನ ಮುಂದೆ ಅಭಿಮಾನಿಗಳು(?) ಕೊಟ್ಟ “ಸ್ಟಾರ್” ಅಂಟಿಸಿಕೊಂಡಿರುವವರು, ಪತ್ರಿಕಾಗೋಷ್ಠಿಯಲ್ಲಿ “ಭಟ್ಟರು ನಮ್ಮ ಸಿನೆಮಾಗೆ ಹಾಡು ಬರೆದಿದ್ದಾರೆ” ಎಂದು ಬಣ್ಣಿಸಿ ಸುದ್ದಿ ಹೇಳುವ ವಾತವರಣ ನಿರ್ಮಾಣವಾಯಿತು.ಎಲ್ಲಕ್ಕಿಂತಾ ಹೆಚ್ಚಾಗಿ ಸಿನಿಮಾ ಪತ್ರಕರ್ತರು ಭಟ್ಟರ ಕಾವ್ಯ ವಿಮರ್ಶೆಗೆ ತಮ್ಮ ತುಸು ಸಮಯ ಮತ್ತು ಪತ್ರಿಕೆಯ ಪುಟದಲ್ಲಿ ಒಂಚೂರು ಜಾಗ ಕೊಡತೊಡಗಿದರು. ಉತ್ಸಾಹಿ ನಿರ್ದೇಶಕರೊಬ್ಬರು ತಮ್ಮ ಹೊಸಾ ಸಿನೆಮಾಗೆ  “ಯೋಗರಾಜ” ಎಂಬ ಹೆಸರಿಟ್ಟು, ಕಳೆದು ಹೋದ ತಮ್ಮ ಯಶಸ್ಸನ್ನ ಹುಡುಕಲು ನೋಡಿದರು. ಕನ್ನಡ ಚಿತ್ರರಂಗದಲ್ಲಿ ನಡೆದ ಇದೆಲ್ಲಾ ಬೆಳವಣಿಗೆ ಭಟ್ಟರಿಗೆ ಕಿರೀಟ ಇಟ್ಟಂಗಾಯಿತು.

ಆದರೆ ಇನ್ನೊಂದು ಕಡೆ, ಪಡ್ಡೆ ಹುಡುಗರ ಮೊಬೈಲ್ ಗಳು ಸಾರ್ವಜನಿಕ ಸ್ಥಳಗಳಲ್ಲಿ , “ಎಕ್ಕ ರಾಜ ರಾಣಿ ನನ್ನ ಕೈಯೊಳಗೆ..ಹಿಡಿ ಮಣ್ಣು ನಿನ್ನ ಬಾಯೊಳಗೆ” ಎಂಬಂಥಾ ಹಾಡುಗಳು ಅರಚತೊಡಗಿದಾಗಲೋ, ಇಲ್ಲಾ, ಕೇವಲ ಇಂಗ್ಲಿಷ್-ಹಿಂದಿ ಸಿನೆಮಾಗಳನ್ನೇ ನೋಡುವ ಕನ್ನಡ FM ರೇಡಿಯೋ ಜಾಕಿ ಲಲನಾಮಣಿ  "ತನ್ನ ಇಂಗ್ಲೀಷ್ ಕನ್ನಡದಲ್ಲಿ “ಎಂಥಾ ಅಧ್ಭುತ ಹಾಡು ಗೊತ್ತಾ... ನಮ್ಮ ಭಟ್ಟರು ಬರೆದಿದ್ದು”  ಎಂದು ವರ್ಣನೆ ಮಾಡುತ್ತಾ “ಶಿವಾ ಅಂತ ಹೋಗುತಿದ್ದೆ...” ಎಂಬಂಥಾ ಹಾಡುಗಳನ್ನ ಕೇಳಿಸತೊಡಗಿದಾಗಲೋ, ಹಿರಿಯರು ಅಸಹನೆಯಿಂದ ಬೈದ ಬೈಗುಳಗಳನ್ನ ತಮ್ಮ ಎಂದಿನ ನಗುವಿನಲ್ಲಿಯೇ ಭಟ್ಟರು ಸ್ವೀಕರಿಸಿದರು, ಅದರ ಜೊತೆಯಲ್ಲಿಯೇ ಮಂಡಕ್ಕಿ ತಿನ್ನುತ್ತಾ, ಸಿಗರೇಟ್ ಹೊಗೆ ಹಾರಿಸುತ್ತಾ ತಮ್ಮ ಕಾವ್ಯ ರಚನೆ ಮುಂದುವರಿಸಿದರು,...”ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನ್ಸೋಕೆ ಹೋಗ್ಬಾರ್ದೂರಿ..” ಎಂಬ ಹೊಸ ವೇದಾಂತ ಹೇಳಿದರು.

ಒಮ್ಮೆ ಕನ್ನಡ ಚಿತ್ರರಂಗದ ಯುವ ನಿರ್ದೇಶಕರೊಬ್ಬರು ಭಟ್ಟರ ಬಳಿ ಹೋಗಿ ವಿಚಿತ್ರ ಶಬ್ದಗಳಲ್ಲಿ, ಅರ್ಥವೇ ಆಗದ ಸಾಲುಗಳನ್ನ ಬರೆದು, ಒಂದು ಹಾಡು ಸೃಷ್ಟಿ ಮಾಡಿ ಕೊಡಿ ಎಂದಾಗ, ಅವನ ಬೆನ್ನು ಚಪ್ಪರಿಸಿ ಸರಿಯಾದ ಜಾಗಕ್ಕೆ ಬಂದಿದಿಯಾ ಬಾರಯ್ಯಾ ಎಂದು ಕರೆದು ತಮ್ಮನ್ನೇ ಗೇಲಿ ಮಾಡಿಕೊಂಡು “ತಲೆ ಕೆಟ್ಟ ಭಟ್ಟ ಎಬಡಾ ತಬಡಾ” ಎಂದು ಬರೆದರಂತೆ. ಈ ಹಾಡಿನ ಪ್ರಯೋಗ ಒಂದು ರೀತಿ ಅಪರೂಪದ್ದು ಎನ್ನುವ ಅಭಿಪ್ರಾಯ ನನ್ನದು. ಬಹುಶಃ ಬೇರೆ ಭಾಷೆಯ ಸಿನೆಮಾಗಳಲ್ಲಿ ಈ ಥರದ ಪ್ರಯೋಗ ಆಗಿದೆಯೇ, ಎಂಬುದನ್ನ ನನ್ನ ಓದುಗ/ನೋಡುಗ ಮಿತ್ರರೇ ಹೇಳಬೇಕು.

ಭಟ್ಟರ ಕಾವ್ಯ ಸೃಷ್ಟಿ ಮುಂದುವರೆಯಲಿ... ಆಗಾಗಲಾದರೂ, ನಮ್ಮಂತ ಕಾವ್ಯ ಪ್ರೇಮಿಗಳಿಗೊಸ್ಕೊರ ಅಂದ್ರೆ ನಲವತ್ತರ ಮೇಲಿನವರಿಗೂ ಸಹ,  ಖಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ....” ಎನ್ನುವಂತಹ ಸಾಲುಗಳನ್ನ ಬರೆಯಲಿ ಎಂದು ಆಶಿಸುತ್ತಾ ಅವರೇ ಬರೆದು, ಓದಿದ ಒಂದು ಸಿನೆಮಾ ಕವನ ನಿಮಗಾಗಿ,

 

ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ? ಬರಿ ಪೋಲಿ ಕನಸ?
ಮಾಮೂಲಿ ಕೋತಿಯ-ತಾರುಣ್ಯ ಗೀತೆಯಲ್ಲಿ ಉತ್ತರ ಕಮ್ಮಿ ಪ್ರಶ್ನೆಯೇ ಜಾಸ್ತಿ
ದಾರೀಲಿ ಕೈಕಟ್ಟಿ ನಿಂತಿರಲೇ? ಹೃದಯಾನ ಸಂಪೂರ್ಣ ಬಿಚ್ಚಿಡಲೇ?
ಮುಂಗುರುಳ ಸ್ಪ್ರಿಂಗಲ್ಲಿ ಜೋತಾಡಲೇ? ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ?
ಆಸೆಗಳ ನೆನೆಸಿ ಕೈ ಬೆರಳು ಸವೆದಿದೆ, ಎಲ್ಲ ಹೇಳಿದರೂ ಇನ್ನೇನೋ ಉಳಿದಿದೆ
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ? ಬರಿ ಪೋಲಿ ಕನಸ?

 ಎಲ್ಲಿಯೂ ಹೋಗದ ನಿಂತ ಬಸಲ್ಲಿ ಸೀಟ-ಒಂದ ಹಿಡಿದವನು ನಾನು,
ಇಳಿ ಸಂಜೆಯಲ್ಲಿ ನನ್ನ ನಂಬರಿಗೆ ನಾನೇ ಮಾಡುವೆನು ಪೋನು
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು ಎಲ್ಲಿಗೋ ಹೋಗುವೇನು, ಏನ್ನನ್ನೋ ಕಾಯುವೆನು
ನೀ ಸಿಕ್ಕರೂ, ಸಿಗದಿದ್ದರೂ, ಎದೆ ತುಂಬಾ ಹಾಡು
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ? ಬರಿ ಪೋಲಿ ಕನಸ?

ಉಪಸಂಹಾರ

ಆಕಾಶ ಸ್ಟುಡಿಯೋನಲ್ಲಿ ನಾನು ನಿರ್ದೇಶಿಸಿದ ಚುಟುಕು ದೃಶ್ಯಗಳ ಡಬ್ಬಿಂಗ್ ಗೆ ಹೋದಾಗ ಭಟ್ಟರು ತಮ್ಮ “ಪಂಚರಂಗಿ” ಸಿನೆಮಾದ ಡಬ್ಬಿಂಗ್ ನಲ್ಲಿದ್ದರು. ಅವರ ಕೆಲಸ ಮುಗಿದ ಮೇಲೆ ನಮ್ಮ ಡಬ್ಬಿಂಗ್ ಇತ್ತು. ನಾನು, ರಾಜೇಂದ್ರ ಕಾರಂತ ಮತ್ತು ಇತರ ಸ್ನೇಹಿತರು ಕಾಯುತ್ತಿರುವಾಗ, ಆ ಸಿನೆಮಾದ ನಾಯಕ ತಾರಾ ಗತ್ತಿನ ಓರೇನೋಟಿನಲ್ಲಿ ಕೂತಿದ್ದ ನಮ್ಮಲ್ಲರನ್ನುಅಳೆದು ಮುಂದಿನ ಕೋಣೆಗೆ ಹೋದರೆ, ಆಮೇಲೆ ಬಂದ ಭಟ್ಟರು ನನ್ನನ್ನು ಮಾತಾಡಿಸಿ ನಾನು ಚಿತ್ರಿಸಿರುವ ದೃಶ್ಯಗಳ ಬಗ್ಗೆ ಕುತೂಹಲ ವ್ಯಕ್ತ ಪಡಿಸಿದರು. ಸಂಕೋಚದಿಂದ ದೂರ ನಿಂತಿದ್ದ ರಾಜೇಂದ್ರ ಕಾರಂತರನ್ನು ಪರಿಚಯ ಮಾಡಿಸಿದಾಗ, “ಅಯ್ಯೋ ನಂಗೊತ್ತು ಅಧ್ಭುತ ನಟ ಮತ್ತೆ ನಿರ್ದೇಶಕ..” ಎಂದೆಲ್ಲಾ  ಸೌಹಾರ್ದದ ಮಾತಾಡಿ, ಮತ್ತೆ ಎಂದಿನ ಶೈಲಿಯಲ್ಲಿ ಸಿಗರೇಟ್ ಅಂಟಿಸಿಕೊಂಡು ಹೊರಟು ಹೋದರು.
ಅಂದಂಗೆ, ರಾಜೇಂದ್ರ ಕಾರಂತ ಮತ್ತು ನಾನು, ಅಚಾನಕ್ ಆಗಬಹುದಾದ ಭಟ್ಟರ ಆ ಇನ್ನೊಂದು ಭೇಟಿಗೆ ಕಾಯುತ್ತಿದ್ದೇವೆ.

ಭಾನುವಾರ, ಜನವರಿ 20, 2013

ಒಂದು ಅಪ್ರಕಟಿತ ಸಂಶೋಧನಾ ಲೇಖನ

ಒಂದು ಅಪ್ರಕಟಿತ ಸಂಶೋಧನಾ ಲೇಖನ

-ಗುರುರಾಜ ಕುಲಕರ್ಣಿ (ನಾಡಗೌಡ)


ನಾನು ಬೆಂಗಳೂರಿಗೆ ಬಂದ ಹೊಸತರೋಳಗ ನಡಿದಿರೋ ಕಥಿ ಇದು. ಆವಾಗ ಬೆಂಗಳೂರು ಈಗಿನಷ್ಟು ಹಾಳು ಆಗಿರಲ್ಲಿಲ್ಲ, ಕೆಂಪೇಗೌಡರು ಮ್ಯಾಲನಿಂದ ನೋಡಿದಾಗ ಸಂತೋಷ ವ್ಯಕ್ತ ಪಡಿಸದೇ ಇದ್ದರೂ ಈಗಿನಂಗ ಬೆಂಗಳೂರ ನೋಡಿ ದುಃಖ ಅಂತೂ ಪಡತಿರಲ್ಲಿಲ್ಲ ಅಂತ ನಾನು ಅನ್ಕೊತಿನಿ.


ಬ್ಯಾಸಿಗಿಗೂ, ಸಂಜಿ ಮುಂದ ನಾಲ್ಕು ಹನಿ ಉದುರಿ ಹವಾ ತಣ್ಣಗ ಇರ್ತಿತ್ತು. ರೋಡ ಮ್ಯಾಲ ಒಂದ ನಾಲ್ಕಾರು ಕಾರು ಓಡಾಡ್ತದ್ದಿವು. ಧೂಳ, ಕಸ ಅಂತ ಏನೂ ಇರ್ತಿರಿಲ್ಲ. ನಿಮಗ ಕಣ್ಣ ದೃಷ್ಟಿ ಸರಿ ಇದ್ದರ, ಬ್ರಿಗೆಡ್ ರಸ್ತಾ ಜಂಕ್ಷನ್ ಹತ್ತರ ನಿಂತರ, ಎಂ ಜಿ ರಸ್ತಾ ಕೊನಿನೂ ಕಾಣಿಸ್ತಿತ್ತು.

ಕಬ್ಬನ ಪಾರ್ಕ್ನಾಗ ಇನ್ನಾ ಹಸಿರು ಇರತ್ತಿತ್ತು, ಅಲ್ಲಲ್ಲಿ ಗುಲ್ ಮೊಹರ್ ಗಿಡಗಳು ಕೆಂಪು ಹಳದಿ ಹೂ ಬಿಟ್ಟು, “ನೀ ನಡೆವ ದಾರಿಯಲ್ಲಿ ನಗೆ ಹೂಬಾಡದಿರಲಿ” ಅಂತ ಹಾಡ ಹಾಡತ್ತಿದ್ದವು. ಲಾಲಬಾಗನಾಗ ರುಚಿ ಇದ್ದ ಹಣ್ಣು ಹಂಪಲ ತಿನ್ನಿಲ್ಲಿಕ್ಕಿ ಸಿಗಿತ್ತಿದ್ವು ಮತ್ತ ಅಲ್ಲಿ ಮಂದಿಗಿ ವಾಕಿಂಗ ಮಾಡ್ಲಿಕ್ಕಿ, ಗಾಡಿ ಪಾರ್ಕಿಂಗ್ ಮಾಡ್ಲಿಕ್ಕಿ ಜಾಗ ಇರತ್ತಿತ್ತು.

ಮೆಜೆಸ್ಟಿಕನಾಗ ಅಣ್ಣಾವ್ರುದು, ಸಾಹಸ ಸಿಂಹನವರದು ಕಟೌಟಗಳಿಗೆ ಖರೆ ಖರೆ ಅಭಿಮಾನಿಗಳು ಹಾಲು, ಹಾರ, ಜೈಕಾರ ಹಾಕ್ತಿದ್ದರು. ಈ ಫ್ಲೈ ಒವರಗಳು, ಸಬ್ ವೇ-ಗಳು, ಒನ್ ವೇ-ಗಳು ಒಂದೂ ಇರಲ್ಲಿಲ್ಲ. ಜಯನಗರ ಫೋರ್ಥ್ ಬ್ಲಾಕ ಶಾಪಿಂಗ್ ಕಾಂಪ್ಲೆಕ್ಸ್ ನಮ್ಮಂತಾವರಿಗೆ “ಹ್ಯಾಂಗ ಔಟ್” ಜಾಗ ಆಗಿತ್ತು.

ಗಣಪತಿ ಹಬ್ಬಕ್ಕ, ಇಲ್ಲಾ ರಾಜ್ಯೋತ್ಸವಕ್ಕ ಹಿರಣ್ಣಯ್ಯನಂತೋರು ಅಚ್ಚ ಕನ್ನಡದ ನಾಟಕ ಮಾಡ್ತಾ ಇದ್ದರು.

ರಾತ್ರಿ ೧೦ ಗಂಟೆಗೆ ಆಟೋ ಬೇಕು ಅಂದ್ರ..ಬಿಕೋ ಅನ್ನೋ ರೋಡನಾಗ ಯಾವ ಗಾಡಿನೂ ಸಿಗಲಾರದೆ ಹೈರಾಣ ಆಗತ್ತಿತ್ತು. ಮುಂಜಾನೆ ತಿಂಡಿಗಿ ಅಂತ ಒಂದು “ಸಿಂಗಲ್ ಇಡ್ಲಿ ವಡಾ” ತಿಂದರೆ ಸಾಯಂಕಾಲತನಕ ಹಸಿವಿನೆ ಅಗ್ತಿರಲ್ಲಿಲ್ಲ, ಅದು ಅಲ್ದೆ ಈ “..ದರ್ಶಿನಿ” ಅನ್ನೊ ಹೋಟೆಲಗಳ ಸುದ್ದಿನೇ ಇರಲ್ಲಿಲ್ಲರಿ. ಆಮೇಲೆ ಎಲ್ಲದಕ್ಕಿಂತಾ ಮುಖ್ಯವಾಗಿ ಬಿ ಟಿ ಎಸ್ ಬಸನಾಗ್ ವಯಸ್ಸಾದವ್ರಿಗಿ, ಹೆಣ್ಣ ಮಕ್ಕಳಿಗಿ ಕೂಡ್ಲಿಕ್ಕಿ ಜಾಗ ಸಿಗಿತ್ತಿತ್ತು,

ಒಟ್ಟಿನಾಗ ಆಗ ಬೆಂಗಳೂರನಾಗ ಭಾಳ ಸುಭಿಕ್ಷಾ ಇತ್ತು.

ಅಂದಂಗ ನಾ ಹೇಳೋದು ಎಲ್ಲಾ ಕೇಳಿ, ಇವೆಲ್ಲಾ ಎಲ್ಲೋ ಕೆಂಪೇಗೌಡರ ಕಾಲದ ಸುದ್ದಿ ಅನ್ಕೊಂಡಿರೇನೋ? ಇಲ್ರಿ ಇದು ಒಂದ ಹದಿನೈದು ಇಲ್ಲಾ ಇಪ್ಪತ್ತು ವರ್ಷದ ಹಿಂದಿಂದು ಕಥಿ. ಆದ್ರ ಇದು ಕನ್ನಡಮ್ಮನ ಕಥಿ, ಬೆಂಗಳೂರಿನ ಕನ್ನಡಮ್ಮನ ಕಥಿ.

ಒಂದು ಸರ್ತಿ ನಮ್ಮ ಮಾಮಾ ಅಂದ್ರ ಭಾವ, ಪುಣೆಯಿಂದ ಯಾವುದೋ ಕೆಲಸದ ಮ್ಯಾಲ ಬೆಂಗಳೂರಿಗೆ ಬಂದರು. ಕೆಲಸೆಲ್ಲಾ ಆದ ಮೇಲೆ ವಾಪಸ್ಸ ಹೋಗಲಿಕ್ಕೆ ಇನ್ನಾ ಒಂದು ದಿವಸ ಉಳಿದ್ದಿತ್ತು, ಹಿಂಗಾಗಿ ಬೆಂಗಳೂರ ಸುತ್ತಾಡಕೊಂಡು ಬರಲಿಕ್ಕೆ ಇಬ್ಬರೂ ಹೊರಟ್ವಿ. ಮೊದಲು ಎಂ ಜಿ ರೋಡ್ ಹೋಗಿ ಅಲ್ಲಿ ತಿರುಗಾಡಿ, ಆಮೇಲೆ ಬರುವಾಗ ಮಲ್ಲೇಶ್ವರಂಗ ಒಂದು ಭೇಟಿ ಕೊಟ್ಟು ಅಲ್ಲಿಂದ ರಾಜಾಜಿನಗರಕ್ಕ ಬಂದು ಆಮೇಲೆ ನಂದಿನಿ ಲೇ ಔಟ್ ನೊಳಗ ಇರೋ ನಮ್ಮ ಮನಿಗೆ ವಾಪಸ್ಸು ಬರೋ ಕಾರ್ಯಕ್ರಮ ಹಾಕೊಂಡು ಹೊರಟೆವು. ಹಂಗೆ ಸುತ್ತಾಡಕೊಂಡು ಬ್ರಿಗೇಡ್ ರೋಡನಾಗ ರಂಗನಾಥ ಕೆಫೆ ಅಂತ ಒಂದು ಹೋಟೆಲ್ ಇತ್ತು, ಅಲ್ಲಿ ಕಾಫಿ ಕುಡಿಲಿಕ್ಕಿ ಒಳಗ ಹೊಕ್ಕೆವು. ಚಹಾ ಕುಡಿಯೋದಷ್ಟೇ ರೂಢಿ ಇದ್ದ ನನಗ ಇನ್ನಾ ಬೆಂಗಳೂರಿನ ಕಾಫಿ ರುಚಿ ನಾಲಿಗಿಗಿ ಹಿಡಿದರಲ್ಲಿಲ್ಲ. ಕಾಫಿ ಯಾಕೋ ಕಹಿ ಅನ್ನಸ್ತು, ಸ್ವಲ್ಪ ಸಕ್ಕರಿ ಹಾಕೊಂಡರ ಒಳ್ಳೇದು ಅನ್ಕೊಂಡು ಕಾಫಿ ತಂದು ಕೊಟ್ಟ ಹುಡುಗಂಗೆನೆ ಕರದು “ಸ್ವಲ್ಪ ಸಕ್ಕರೆ ಬೇಕು” ಅಂದೆ.

ಅವನು “ಶುಗರ ಬೇಕಾ ಸಾರ್?” ಅಂದ,

ನಾನು “ಹೂಂ” ಅಂದೆ.

ಸಕ್ಕರೆ ತಂದು ಕೊಟ್ಟ, ಚಮಚ ಇರಲ್ಲಿಲ್ಲ, “ಚಮಚಾ ಬೇಕು” ಅಂದೆ...

ಅವನು “ಸ್ಪೂನ್ ಬೇಕಾ ಸಾರ್?” ಅಂದ,

ನಾನು “ಹೂಂ” ಅಂದೆ. ಅವನು ಚಮಚಾನೂ ತಂದು ಕೊಟ್ಟ.

ನಾನು ಸ್ವಲ್ಪ ಸಕ್ಕರೆ ಹಾಕೊಂಡು, ಕಾಫಿ ಕುಡಿಯೋಕೆ ಶುರು ಮಾಡಿದೆ.

ಆಗ ಮಾಮ ನಕ್ಕೋತ “....ಅಂತೂ ನಿನಗ ಸಕ್ಕರಿ ಮತ್ತ ಚಮಚಾ ಸಿಗಿಲ್ಲಿಲ್ಲಾ ಅಲ್ಲಾ?”

"ಹೂಂನ್ರಿ ಮಾಮ...ಎಲ್ಲಾ ಅವರವರ ಅದೃಷ್ಟ” ಅಂತ ನಾ ಅಂದೆ.

ಹೋಟೆಲನಿಂದ ಹೊರಗ ಬಂದ್ವಿ, ಸ್ವಲ್ಪ ಹೊತ್ತು ತಿರುಗಾಡಿದ್ವಿ, ಅಲ್ಲೊಂದಿಷ್ಟು ಸಾಮಾನು ಖರೀದಿ ಆಯಿತು. ಎಂ ಜಿ ರೋಡ್ನಾಗ ಇರೋ ಬೃಂದಾವನ ಹೋಟೆಲ್ ಹೋದ್ವಿ, ಮತ್ತ ಕಾಫಿ ತರಿಸಿದ್ವಿ..ಮ್ಯಾಲ ಹೇಳಿದ ಮಾತುಕತಿ ಮತ್ತೊಂದು ಸರ್ತಿ ಆಯಿತು. ನಾ ಸಕ್ಕರಿ, ಚಮಚಾ ಕೇಳಿದೆ, ಕಾಫಿ ಕೊಟ್ಟ ಹುಡುಗ ಶುಗರ್ ಮತ್ತ ಸ್ಪೂನ್ ತಂದು ಕೊಟ್ಟ. ನಾನೂ ಮತ್ತ ಮಾಮ,ಇದನ್ನ ನೋಡಿ ನಕ್ಕೊತ ಕಾಫಿ ಕುಡುದ್ವಿ.


ಹೋಟೆಲನಿಂದ ಹೊರಗ ಬರೋವಾಗ ನನ್ನ ತಲಿಯೋಳಗ ಒಂದು ಅಧ್ಭುತ ಯೋಜನಾ ತಯಾರ ಆಯಿತು. ನಾನು ಮಾಮಗ ಹೇಳಿದೆ “ಮನಿಗೆ ವಾಪಸ್ಸ್ ಹೋಗೋತನಾ..ನಾವು ಎಲ್ಲೆಲ್ಲಿ ಹೋಗತಿವೋ ಅಲ್ಲಿ ಕಾಫಿ ಕುಡಿಯೋಣ” ಅಂದೆ

ಮಾಮ “ಯಾಕೋ?” ಅಂತ ಕೇಳಿದ್ದಕ್ಕ

“ಒಂದು ಪ್ರಯೋಗ ಮಾಡೋಣರೀ ಮಾಮ...ಇವತ್ತ ಬೆಂಗಳೂರಿನ ಯಾವ ಹೋಟೆಲನಾಗ ನನಗ ಸಕ್ಕರಿ ಮತ್ತ ಚಮಚಾ ಸಿಗ್ತಾವ ಅಂತ ನೋಡೋಣು” ಅಂತ ಅಂದೆ. ಮಾಮ ನಕ್ಕೋತ "....ಅಂತೂ ನಿನ್ನ ಹತ್ರ ಭಾಳ ಪುರೋಸೋತ್ತ ಅದ ಗೊತ್ತಾಯಿತು" ಅಂದ್ರು..

ಶುರು ಆಯಿತು ನಮ್ಮ ಪ್ರಯೋಗ, ಅದಕ್ಕೆ ಎಂ ಜಿ ರೋಡ, ಮಲ್ಲೇಶ್ವರಂ, ರಾಜಾಜಿನಗರದ ಹೋಟೆಲಗಳೇ ಗಿನಿಪಿಗ್ ಆದವು. ನಾವು ಅನಕೊಂಡಂಗ, ಯಾವ ಹೋಟೆಲನಾಗೂ ನನಗೆ “ಸಕ್ಕರೆ ಮತ್ತು ಚಮಚಾ” ಸಿಗಲೇ ಇಲ್ಲ.


ಮನೆಗೆ ಬಂದ ಮೇಲೆ, ಮಾಮಾ ನನಗೆ ಕೇಳಿದರು “ನಿನ್ನ ಪ್ರಯೋಗದ ಫಲಿತಾಂಶ, ಏನಂತದ”?

ಅದಕ್ಕೆ ನಾನು ಹೇಳಿದೆ.....

 “ ಎರಡು ಥರದ ಫಲಿಶಾಂಶ ಅವರೀ ಮಾಮಾ...ಅವು ಯಾವವು ಅಂದ್ರ...  ಮೊದಲೆನೆದು, ಜಾಸ್ತಿ ಕಾಫಿ ಕುಡುದ್ರ ಪಿತ್ಥ ಜಾಸ್ತಿ ಆಗದತ ನನ್ನ ಹೊಟ್ಟಿ ಅಂತ ಹೇಳತದ...  ಎರಡನೇದು ಬೆಂಗಳೂರನಾಗ ಕಳೆದು ಹೋಗಿರೋ ಕನ್ನಡ ನೋಡಿ ಮನಸ್ಸು ಮರಗತದ..”

ಮಾಮಾ “ಮುಂದ ಏನು?”...

ಅದಕ್ಕ ನಾನ ಅಂದೆ “ಇದರ ಬಗ್ಗೆ ಒಂದು ಸಂಶೋಧನಾ ಲೇಖನ ಬರಿತಿನ್ರಿ”...

“ಆಯಿತು ಹಂಗಂದ್ರ ಲಗೂನೇ ಬರೀ”

ಮುಂದ ಇಪ್ಪತ್ತು ವರ್ಷ ಆದ ಮೇಲೆ ನಾನು ಈ ಸಂಶೋಧನಾ ಲೇಖನ ಬರೆದೆ. ಇನ್ನಾ ಎಲ್ಲೂ ಪ್ರಕಟ ಆಗಿಲ್ಲ.


-------------------------------------------------------------------------------------

ಉಪಸಂಹಾರ


ಒಂದೂರಾಗ ಒಬ್ಬ ವಿಜ್ಞಾನಿ ಇದ್ದನಂತ.....

“ಮ್ ಅಮ್.. ವಿಜ್ಞಾನಿ ಅಂದ್ರ”?

“ವಿಜ್ಞಾನಿ ಅಂದ್ರ “ಸೈಂಟಿಸ್ಟ್”....ಅಂವನ ಹತ್ತಿರ ಭಾಳ ಪುರುಸೊತ್ತು ಇತ್ತಂತ... “

“ಮ್ ಅಮ್.. ಪುರುಸೊತ್ತು ಅಂದ್ರ”?

“ಪುರುಸೊತ್ತು ಅಂದ್ರ ಟೈಮ್..ಅವನ ಹತ್ರ ಭಾಳ ಟೈಮ್ ಇತ್ತಂತ...”

“ಹುಂ”

"ಅದಕ್ಕ ಅಂವ ಒಂದು ಕಪ್ಪಿ ಮ್ಯಾಲ ಪ್ರಯೋಗ ಮಾಡಬೇಕು ಅಂತ ಅನಕೊಂಡನಂತ".

“ಮ್ ಆಮ್ ....???”

"ಅಯ್ಯಪಾ....ಕಪ್ಪಿ ಅಂದ್ರ ಫ್ರಾಗ್...ಪ್ರಯೋಗ ಅಂದ್ರ ಎಕ್ಸಪಿರಿಮೆಂಟ...ಗೊತ್ತಾಯಿತಲ್ಲಾ ? ನೀ ಹಿಂಗ ಎಲ್ಲದಾಕು, ಅದು ಅಂದ್ರ.. ಇದು ಅಂದ್ರ ಅಂತ ಅರ್ಥ ಕೇಳಿದ್ರ ನಾ ಕಥಿ ಹ್ಯಾಂಗ ಹೇಳಲಿ...ಕಥಿ ಮುಗಿಯೋ ತನ ಸುಮ್ಮನ ಕೂತಿರು..ತಿಳೀತು"?

“ಹುಂ”

"....ಎಲ್ಲಿದ್ದೆ ನಾನು?..ಹಾಂ... ವಿಜ್ಞಾನಿ, ಕಪ್ಪಿ ಮ್ಯಾಲ ಪ್ರಯೋಗ ಮಾಡಬೇಕು ಅಂತ ಅನಕೊಂಡನಂತ...ಮೊದಲು ಕಪ್ಪಿಗಿ “ಜಿಗಿ” ಅಂತ ಅಂದಕೂಡಲೇ..ಜಿಗಿಯುವಂಗ ಹೇಳಿ ಕೊಟ್ಟನಂತ...

ವಿಜ್ಞಾನಿ “ಜಿಗಿ” ಅನ್ನೋದೇ ತಡ, ಕಪ್ಪಿ “ಟಣ್” ಅಂತ ಜಿಗಿತಿತ್ತಂತ...

ಸ್ವಲ್ಪ ದಿವಸ ಆದ ಆಮೇಲೆ ಕಪ್ಪಿದು ಮುಂದಿನ ಎರಡೂ ಕಾಲ ಕತ್ತರಿಸಿ, “ಜಿಗಿ” ಅಂತ ಅಂದನಂತ, ಕಪ್ಪಿ ಕಷ್ಟಾ ಪಟ್ಟು ಹಿಂದಿನ ಎರಡೂ ಕಾಲಲ್ಲಿನೇ ಜಿಗಿತಂತ....

ಆಮೇಲೆ ವಿಜ್ಞಾನಿ ಕಪ್ಪಿದು ಹಿಂದಿಂದೂ ಎರಡೂ ಕಾಲ ಕತ್ತಿರಿಸಿ “ಜಿಗಿ” ಅಂದನಂತ...ಕಪ್ಪಿ ಜಿಗಿಲ್ಲಿಲ್ಲಂತ...

ಅದಕ ವಿಜ್ಞಾನಿ ತನ್ನ ಸಂಶೋಧನಾ ಲೇಖನದೊಳಗ, “ಕಪ್ಪಿಗಿ ಹಿಂದಿನ ಕಾಲು ಇರಲ್ಲಿಲ್ಲ ಅಂದ್ರ...ಅದಕ ಕಿವಿ ಕೇಳಸಂಗಿಲ್ಲಾ” ಅಂತ ಬರಕೊಂಡನಂತ.....

".........."

"ಹ್ಯಾಂಗದ ಕಥಿ....ಯಾಕೋ ನೀ ನಗಲೇ ಇಲ್ಲಲ್ಲೋ..? “ಜೋಕ್” ಅರ್ಥ ಆಗ್ಲಿಲ್ಲಾ? ....ಹೋಗ್ಲಿ ಬಿಡು...."

ಭಾನುವಾರ, ಜನವರಿ 6, 2013

ಚೂಡಾ ಮಾಡು ಸಂಗಪ್ಪನೂ, ಪಿಜ್ಜಾ ಹುಡುಕೊಂಡ ಹೋದ ಆಮೇರಿಕನ್ನೂ..


ಚೂಡಾ ಮಾಡು ಸಂಗಪ್ಪನೂ, ಪಿಜ್ಜಾ ಹುಡುಕೊಂಡ ಹೋದ ಆಮೇರಿಕನ್ನೂ..

ಗುರುರಾಜ ಕುಲಕರ್ಣಿ (ನಾಡಗೌಡ)


ನಾ ಈಗ ಹೇಳುದು ಸುಮಾರು ೨೦-೨೫ ವರ್ಷದ ಹಿಂದಿಂದು. ನಮ್ಮೂರ ಸಿಂದಗಿ, ಹೆಸರಿಗಿ ತಾಲೂಕ ಆಗಿದ್ದರೂ, ಜನಸಂಖ್ಯಾನೂ ಕಮ್ಮಿ ಬಾಕಿ ಸೌಲಭ್ಯಗಳೂ ಕಮ್ಮಿ. ಏನೇನು ಇತ್ತು ನಿಮ್ಮ ಊರಾಗ ಅಂತ ಕೇಳಿದ್ರ, ಒಂದು ಸರಕಾರಿ ಕನ್ನಡ ಸಾಲಿ, ಒಂದು ಪ್ರೈವೆಟ್ ಹೈಸ್ಕೂಲು, ಊರಿಂದ ದೂರ ಇರೊ ಒಂದು "ಮ್ಯಾಲಿನ" ಕಾಲೇಜ್, ಇನ್ನೊಂದು ಊರ ಮುಂದ ಇರೊ "ಕೆಳಗಿನ" ಕಾಲೇಜ್. ಇದು ಬಿಟ್ರೆ ಒಂದೆರಡು ಬ್ಯಾಂಕಗಳು ಮತ್ತ ಒಂದೆರಡು ಸಿನೆಮಾ ಥಿಯೇಟರಗಳು. ಊರ ಮುಂದ ಇರೋ ಸಂಗಪ್ಪನ ಗುಡಿ, ಊರಾಗಿರೊ ಸಣ್ಣ ಸಣ್ಣ ಹಣಮಪ್ಪನ ಗುಡಿಗೊಳು ಮತ್ತ ಮಠಗೊಳು. ಊರಾನ ಮಂದಿಗಿ ಎಲ್ಲಾರಿಗೂ ಒಬ್ಬೋರಿಗೊಬ್ಬರಿಗೆ ಆತ್ಮೀಯತೆ ಮತ್ತು ಗೌರವ. ಮಗನೋ ಮಗಳೋ ೧೦ನೇ ಅಂತಾದ್ದು ಪಾಸಾದ್ರ ನಾಲ್ಕು ಓಣಿಗಿ ಪೇಡೆ ಹಂಚತ್ತಿದ್ದರು. ಆಕಳೊ ಇಲ್ಲಾ ಎಮ್ಮಿನೊ ಕರ ಹಾಕಿದರ ಗಿಣ್ಣದ ಹಾಲು ಮನಿ ಮನಿಗಿ ಕಳಸತ್ತಿದ್ದರು.ಹೊಲದಾಗಿನ ಸದಿ/ಕಸ ತಗಸ್ಲಿಕ್ಕಿ ಹೋದವರು, ಸಂಜಿ ಮುಂದ ಬರು ಮುಂದಾಗ "ಹತ್ತರಕಿ" ಹಿಡಕೊಂಡು ಬಂದು ಆಜು-ಬಾಜು ಮನಿಯವರಿಗೆಲ್ಲಾ ಕೊಡೊರು. ಇಂತಾ ಊರಾಗ ಕಳೆದ ನಮ್ಮ ಬಾಲ್ಯದ, ಸುಖದ ಅನುಭೂತಿನೇ ಬ್ಯಾರೆ. ಈಗ ನಿಮ್ಮ ಮುಂದ ಹೇಳೂದು ಅಂತಾ ಒಂದು ಕಥಿನೇ. ಅದು ಸಂಗಪ್ಪ ಮಾಡೋ ಚೂಡಾದ ಕಥಿ, ಸಾವಕಾಶವಾಗಿ ಕೇಳುವವರಂತವರಾಗಿ.


ಊರು ಅಂದ ಮ್ಯಾಲ ಹೋಟೆಲಗಳು ಇರಬೇಕಲ್ಲ. ಹೂಂ, ಅವು ಇದ್ದವು. ಬಜ಼ಾರಾನಾಗ ಉಡುಪಿಯವರದು ಎರಡು ಹೋಟೆಲ ಇದ್ದವು.ಬಜ಼ಾರದ್ದು ಒಂದೊಂದು ತುದಿಗಿ ಒಂದೊಂದು ಇದ್ದವು.ಬಜ಼ಾರಕ ಅಡ್ಡ ಇರು ರಸ್ತಾದೊಳಗ ಕುಲ್ಕರ್ಣಿ ಬಿಂದುಂದು ಒಂದು ಚಹಾದು ಅಂಗಡಿ ಇರತ್ತಿತ್ತು. ಅದು ಬಿಂದುನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಆಗಾಗ ಅಂಗಡಿ ಶುರು ಆಗುದು ಇಲ್ಲಾ ಬಂದ್ ಆಗುದು. ಬಸ-ಸ್ಟ್ಯಾಂಡ್ ಸುತ್ತಮುತ್ತಲು ಒಂದು ನಾಲ್ಕಾರು ಚಾ ಅಂಗಡಿ ಇದ್ದವು. ಸಂಗಮದವರ ಚಾ ಅಂಗಡಿಯೊಳಗ ನಮ್ಮೂರ ಮಂದಿ ಕೂತು ಚಾ ಕುಡುಕೊತ್, ಬೀಡಿ ಅಡಿಕಿ ಜೋಡಿ ಹರಟಿ ಹೊಡಕೊತ ಕೂತಿರ್ದಿದ್ದರು. ಮಸೀದಿ ಮುಂದಿನ ರಸ್ತಾದಾಗ, "ಉಮ ಹೋಟೇಲ" ಅಂತ ಕನ್ನಡ-ಇಂಗ್ಲೀಷನಾಗ ಬರ್ದಿರೊ ಬೋರ್ಡ ಇರುವಂತಾ ಉಡುಪಿಯವರದು ಇನ್ನೊಂದು ಚಾ ಅಂಗಡಿ ಇತ್ತು. ಎಲ್ಲಾ ಚಾ ಅಂಗಡಿಯೊಳಗ ಸಿಗತಿದ್ದದ್ದು, ಮುಂಜಾನೆ ಅವಲಕ್ಕಿ ಸುಸಲ, ಉಪ್ಪಿಟ,ಪುರಿ-ಪಿಟ್ಲ, ಭಜ್ಜಿ ಸಂಜಿ ಆದ್ರ ಚುರುಮುರಿ ಚೂಡ. ಇಡ್ಲಿ-ವಡಾ ಇಲ್ಲಾ ದೋಸಾದಂತಾ ಸ್ಪೇಶಲ್ ತಿನಿಸು ಬೇಕು ಅಂದ್ರ ಉಡುಪಿ ಜಯಂತನವರ ಹೋಟೇಲಗೆ ಹೋಗಬೇಕಿತ್ತು.ಆದ್ರ ಪೂರಿ-ಭಾಜಿಯೊಳಗ ಇಲ್ಲಾ ಚೂಡಾದೊಳಗೇ ಸ್ಪೇಶಲ್ ಬೇಕು ಅಂದ್ರ ಬಜ಼ಾರ ನಡುವ, ಪೊಸ್ಟ ಆಫೀಸ್ ಹತ್ತರ, ಹೆಣ್ಣ ಮಕ್ಕಳ ಸಾಲಿ ಮುಂದ ಇರು ಬಮ್ಮಣ್ಣಿಯವರ ಹೋಟೇಲಗಿ ಹೋಗಬೇಕಿತ್ತು.

ನಾನು ಎಂಟನೇತ್ತಕ್ಕ ಬಂದಾಗ, ಬಜ಼ಾರ ಹತ್ತರ ಇರು ಎಂಟು ಮನಿ ಇರು ವಠಾರದಂತಹ “ರಮಾ ನಿವಾಸ”ದೊಳಗ, ಒಂದ ಮನಿಗಿ ಬಾಡಿಗಿಗಿ ಬಂದ್ವಿ. ಅರ್ಜೆಂಟಗಿ ಇಲ್ಲಾ ಗಡಿಬಿಡಿ ಆದಾಗ ಮುಂಜಾನೆ ಹೋಟೆಲಗಿ ಹೋಗಿ ನಮಗೆಲ್ಲಾರಗೂ ಪೂರಿ-ಭಾಜಿ ಮುಂಜಾನೆ ಟಿಫಿನಗಿ ಕಟ್ಟಸಕೊಂಡು ಬರುವಂತಾ ಪರ್ಮಿಷನ ದಾದಾ ಕೊಟ್ಟಿದ್ದರು. ಸಾಮಾನ್ಯವಾಗಿ ಈ ಕೆಲಸ ನಮ್ಮ ಅಣ್ಣ ಮಾಡತಿದ್ದ, ನಡು ನಡುವ ನನಗೂ ಒಂದರೆಡು ಅವಕಾಶ ಸಿಗುತ್ತಿದ್ದವು. ಒಂದು ಕೈ ಚೀಲ ಅದರೊಳಗ ಪೀಟ್ಲಾಕ್ಕ ಒಂದು ಸಣ್ಣ ಡಬ್ಬಿ ತಗೊಂಡು, ಕಿಸೆಯೊಳಗ ದಾದಾ ಕೊಟ್ಟಿದ್ದು ರೊಕ್ಕ ಇಟ್ಕೊಂಡು ಹೋಗಿ, ಬಮ್ಮಣ್ಣಿಯವರ ಅಂಗಡಿ ಹೋದರ ಅಲ್ಲಿ ಕೂತವರು "ಯಾಕೊ ನೀ ಚಾ ಅಂಗಡಿಗಿ ಬಂದೀ?" ಅಂತ ನನಗ ಕೇಳು ಟೊಪ್ಪಿಗಿ-ಧೋತರ ಮಂದಿಗಿ, ಅಂಗಡಿ ಗಲ್ಲಾದಾಗ ಕೂತಿರೊ ಬಮ್ಮಣ್ಣಿ ಮಾಲಕ, "ಡಾಕ್ಟರೇ ಕಳಿಸಿರ್ತಾರ ನಾಷ್ಟಾ ತೊಂಗೊಂಡು ಬರ್ಲಿಕ್ಕಿ" ಅಂತ ಅಲ್ಲಿ ಕೂತವರಿಗಿ ಹೇಳವರು.

ಇಲ್ಲಿ ಒಂದು ವಿಷಯಾ ಭಾಳ ಸ್ಪಷ್ಟ ಹೇಳಬೇಕು ನಿಮಗ, ನಮ್ಮಂತಾ ಸಣ್ಣ ಸಣ್ಣ ಹುಡುಗರು ‘ಚಾ’ದ ಅಂಗಡಿ ಹೋಗುದು ಆವಾಗಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿತ್ತು. ಹಿರಿಯ ವಯಸ್ಸಿನ ಯಾರಿಗೆ ಆಗಲಿ ಇಂತಾಹ ಯಾವುದೇ ಅಪರಾಧಿಗಳಿಗೆ ಸ್ಥಳದಲ್ಲಿಯೇ ಶಿಕ್ಷೆ ವಿಧಿಸುವ ಅಧಿಕಾರವಿರುತ್ತಿತ್ತು. ಇಂತಾ ಅಪರಾಧ ಮಾಡುವ ಧೈರ್ಯ ಇದ್ದ ನನ್ನ ದೊಸ್ತರು ತಮ್ಮ ಪಾಲಿನ ಶಿಕ್ಷಾ, ಹೋಟೆಲನಿಂದ ಮನೆ ಮುಟ್ಟೂವರೆಗೂ ಅನುಭವಿಸಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಇಂತಾ ರಾಮ ರಾಜ್ಯದೊಳಗ ನನ್ನಂತೊನು ಬಜ಼ಾರನೊಳಗ ಇರುವಂತಾ, ಚಾ ಅಂಗಡಿಯೊಳಗ ಹೊಕ್ಕಿ ನಾಷ್ಟಾ ಮಾಡುದು ದುಸ್ಸಾಹಸದ ಮಾತಾಗಿತ್ತು.

ನಾನು ೯ ಇಲ್ಲಾ ೧೦ನೇತ್ತೆ ಬಂದಾಗ, ಖಾಸಾ ಖಾಸಾ ದೋಸ್ತ ಸಂಗಯ್ಯನ ಜೋಡಿ ಬಮ್ಮಣ್ಣಿವರ ‘ಚಾ’ದ ಅಂಗಡಿವೋಳಗ ಕಳ್ಳ ಬೆಕ್ಕಿನ ಹೆಜ್ಜಿ ಇಟ್ಟೆ. ಅಲ್ಲಿ ಖಾರಾ-ಬೆಳ್ಳುಳ್ಳಿದು ಚುರುಮುರಿ ಚೂಡಾ ರುಚಿ ನೋಡಿದೆ. ಕೆಂಪು ಹಳದಿ ಮಿಶ್ರಿತ ಚುರುಮುರಿ, ನಡುವ ನಡುವ ಹಣಿಕಿ ಹಾಕೊ ಕೆಂಪನ ಶೇಂಗಾ, ಮ್ಯಾಲ ದಪ್ಪ ದಾರದಂಗ ಸೇವು. ಮುಷ್ಟಿಯೊಳಗ ಸ್ವಲ್ಪ ತೊಗೊಂಡು, ಬಾಯಿಗಿ ಹಾಕೊಂಡ್ರೆ ಆ ...ಆಹಾಃ...ಏನು ರುಚಿ ಇರ್ತಿತ್ತು ಅಂತೀರಿ. ಇವತ್ತಿಗೂ ನನ್ನ ಪ್ರಕಾರ ಅಮೃತ ಅಂತಾ ಏನಾದ್ರು ಇದ್ದರ ಅದರ ರುಚಿನೂ ಆ ಚೂಡಾದ ರುಚಿನೇ ಇರ್ತದ. ಯಾವಾಗ, ಯಾವಾಗ .. ನಮ್ಮಿಬ್ಬರ ಹತ್ತಿರ ೭೦ ಪೈಸಾ ಒಟ್ಟ ಆಗತಿದ್ದೋ ಅವಾಗ, ಆವಾಗ... ಬಮ್ಮಣ್ಣಿವರ ಚಾ’ದ ಅಂಗಡಿಗೆ ನಮ್ಮ ಪ್ರವೇಶ ಆಗತ್ತಿತ್ತು. ಬೋನಸ್ ಏನರೆ ಸಿಕ್ಕಿದ್ದರ ಚೂಡಾದ ಮ್ಯಾಲ ಸ್ಪೆಷಲ್ ಚಾ ಆಗ್ತಿತ್ತು. ನಮ್ಮಿಬ್ಬರಿಗೂ ಒಳಗಿನ ಖೋಲಿಯೊಳಗ ಕೂಡಿಸಿ (ಯಾಕಂದ್ರ ಯಾರಿಗೂ ಕಾಣಿಸಬಾರ್ದಲ್ಲ), ಎಕ್ಸಟ್ರಾ ಶೇಂಗಾ, ಸೇವು, ಮ್ಯಾಲ ಸಣ್ಣಗ ಹೆಚ್ಚಿದ ಉಳ್ಳಾಗಡ್ಡಿ ಹಾಕಿ ಕೊಡ್ತಿದ್ದರು. ಈ ಚಹಾ ಚೂಡದ ಕಾರ್ಯಕ್ರಮ ಸುಮಾರು ಎರಡು ಮೂರು ವರ್ಷ ನಡೀತು.

ಮುಂದ ನಾನು ಓದಲಿಕ್ಕಿಂತ ಧಾರವಾಡಕ ಬಂದೆ. ಸಿಂದಗಿಗೆ ಸೂಟಿಗಿ ಹೋದಾಗ ಚೂಡಾದ ರುಚಿ ಆವಾಗಾವಾಗ ಸಿಗ್ತಿತ್ತು. ವರ್ಷ ಕಳೆದಂಗ ಕ್ರಮೇಣ ಅದು ಕಡಿಮಿ ಆಯಿತು. ಆದ್ರೂ ನಾನು, ಸಂಗಯ್ಯ ಚೂಡಾ ತಿನ್ನು ಪ್ರೋಗ್ರಾಮ್ ನೆನಸಕೊಳೋದು ತಪ್ಪಲ್ಲಿಲ್ಲ.

ಮತ್ತಿಷ್ಟು ವರ್ಷಗಳು ಕಳದು ಹೋದವು.ನಾವು ಬಸ್ ಸ್ಟಾಂಡ್ ಹತ್ತಿರ, ಕೋರ್ಟ್ ಹಿಂದಿನ ರೋಡನಾಗ ಇರೋ ನಮ್ಮ ಹೊಸಾ ಮನಿಗಿ ಬಂದೆವು. ನಾನು  ಬದುಕು ಹುಡುಕೊಂಡು ಬೆಂಗಳೂರಿಗೆ ಬಂದೆ..... ನೌಕರಿ,ಮದುವಿ, ಮಕ್ಕಳು ಸಂಸಾರ ಅನ್ನಕೊತ, ಬದುಕು ಬೆಳಕೊತ-ಬದಲಾಕೊತ ಹೋಯಿತು. ಈ ಕಡೆ ಊರಾಗಿನ ಬಮ್ಮಣ್ಣಿವರ ಅಂಗಡಿ ಬದಲಾಯಿತು, ಬಜಾರ ಬದಲಾಯಿತು, ಮಂದಿ ಬದಲಾದರು. ಹೋಟೆಲನಾಗ ಕೊಡು ನಾಷ್ಟನೂ ಬದಲಾಯಿತು. ಇಡ್ಲಿ, ದೋಸಾ, ಗೋಬಿ ಮಂಚೂರಿ, ಅದು ಎಂತಾದೋ ಫ್ರೈಡ್ ರೈಸ್ ಅಂತ ಎಲ್ಲಾ ಬಂದವು.

ಸರಿ ಸುಮಾರು ೨೦-೨೫ ವರ್ಷದ ಮ್ಯಾಲ ಪ್ರತಿ ವರ್ಷದಂಗ ನಾನು ದೀಪವಾಳಿಗಿ ಊರಿಗಿ ಹೋದಾಗ, ಒಂದ ಸರ್ತಿ ಲಕ್ಷ್ಮೀ ಪೂಜಾ ಮುಗದ ಮ್ಯಾಲ ನನ್ನ ಮಗ ಶೌರಿನ ಕರ್ಕೊಂಡು ಊರೊಳಿಗಿನ ಬಜಾರದಾಗಿನ ಅಂಗಡಿಗೋಳನ್ನ ತೋರಿಸಿಲ್ಲಿಕ್ಕಿ ಕರ್ಕೊಂಡು ಹೋದೆ. ಮಗನಿಗೆ ನನ್ನ ಬಾಲ್ಯ ತೋರಿಸೋ ಹಂಬಲದಿಂದ ನಾನು ಆಟ ಆಡಿದ ಜಾಗ, ಗೆಳೆಯಂದ್ರ ಮನೆಗೊಳು, ದೀಪಾವಳಿಗೆ ಬಣ್ಣ ಹಚ್ಚಿದ ಅಂಗಡಿಗೋಳು, ಪ್ರತಿ ಅಂಗಡಿ ಮುಂದ ಕಟ್ಟಿದ ಚೆಂಡು ಹೂವ, ತೆಂಗಿನ ಗರಿ, ಸಣ್ಣ ಸಣ್ಣ ಹುಡುಗುರು ಹೊಸ ಬಟ್ಟಿ ಮ್ಯಾಲ ಬಿಳಿ ಟೋಪಿಗೆ ಹಾಕೊಂಡು ಪಟಾಕಿ ಹೊಡಿಯೋದು, ಅವನಿಗೆ ತೋರೋಸ್ಕೊತ ನಮ್ಮ ಬಮ್ಮಣ್ಣಿವರ ಅಂಗಡಿ ಕಡೆ ಬಂದೆ. ಅಲ್ಲಿ ಅಂಗಡಿ ಮುಂದ ನಿಂತು, ಚೂಡಾದ ಬಗ್ಗೆ.... ನಾನು ಗೆಳೆಯನ ಜೊತೆ ಬಂದು ಕದ್ದು ಚೂಡಾ ತಿನ್ನ್ನೋದರ ಬಗ್ಗೆ ಹೇಳಿದೆ. ಅವನು ಎಷ್ಟರ ಮಟ್ಟಿಗೆ ಕೇಳಸ್ಕೊಂಡನೋ ಏನೋ ಅಂತ ಗೊತ್ತ ಸಹಿತ ಮಾಡ್ಕೊಳದೆ.. ನನ್ನ ಮಾತು ನಾನು ಹೇಳೇ ಹೇಳಿದೆ. ನನ್ನ ಮಾತಿನ ರಭಸ ಕಮ್ಮಿ ಆಗಿ ಸ್ವಲ್ಪ ಹೊತ್ತ ಆದ ಮೇಲೆ ಶೌರಿ “ ನೀ ಈಗ ಚೂಡಾ ತಿಂತಿಯಾ?” ಅಂದ. “ಇಷ್ಟು ರಾತ್ರಿ ಆದ ಮೇಲೆ ಹೋಟೆಲಗಿ ಹೋಗಿದ್ದು ಗೊತ್ತಾದರ ಅಮ್ಮಮ್ಮ ಬೈತಾಳೆ..” ಅಂತ ಬೇರೆ ಸೇರಸ್ದ.

ಚೂಡಾದ ಸಲುವಾಗಿ ಕಳ್ಳ ಬೆಕ್ಕ ಆಗಿರಿತ್ತದ್ದ ನನಗೆ, ಈಗಲೂ ಒಂದು ಕೈ ನೋಡೆ ಬಿಡೋಣ ಅಂತ ಅಂಗಡಿಯೋಳಗ ಅವನ ಕೈ ಹಿಡಕೊಂಡು ಹೊಕ್ಕೆ.

ಅಂಗಡಿ ಹುಡುಗುರು ಹೊಸಾ ಬಟ್ಟಿ ಹಾಕೊಂಡು ಲಕ್ಷ್ಮೀ ಪೂಜಾ ತಯಾರಿ ನಡಿಸಿದ್ರು. ನಾ ಅಂದುಕೊಂಡಗ ಅಂಗಡಿ ಗಲ್ಲಾದ ಮ್ಯಾಲ ಕೂತ ಹೊಸಾ ಸಣ್ಣ ಮಾಲೀಕ ನನಗ ಗುರುತ ಹಿಡಿಲ್ಲಿಲ್ಲ. ಆದ್ರೂ ದೇಶವಾರಿ ನಗು ನಕ್ಕು “ಏನ್ ಬೇಕ್ರಿ?” ಅಂತ ಅಂದ. ನಾನು “ಎರೆಡು ಚೂಡಾ ಪಾರ್ಸೆಲ್ ಮಾಡ್ರಿ” ಅಂದೆ. “ಸರ್ ಇವತ್ತ ಲಕ್ಷ್ಮೀ ಪೂಜಾ,ರೀ... ಹಿಂಗಾಗಿ ನಾಷ್ಟಾ ಏನೂ ಇಲ್ಲರಿ...” ಅಂದ. ಅದಕ್ಕ ನಾನು ಅವನಿಗೆ ನನ್ನ ಚೂಡಾದ ದಿನಗೋಳ ಬಗ್ಗೆ ಮಾತ ಹೇಳಿ, ಇರ್ಲಿ ಬಿಡ್ರಿ ಮತ್ತೊಂದು ಸರ್ತಿ ಬರ್ತಿನ್ರಿ ಅಂದೆ. ಅವನಿಗೆ ಏನು ಅನ್ಸತ್ತೋ ಏನೋ, ನನ್ನ ಮಗ್ಗಲಿಗ ನಿಂತ ಶೌರಿನೊಮ್ಮೆ ಮತ್ತ ನನ್ನೊಮ್ಮೆ ನೋಡಿ “ಪಾರ್ಸೆಲ್ ಮಾಡ್ಸಿತಿನಿ ನಿಂದಿರ್ರೀ” ಅಂದ. ಒಳಗ ಎತ್ತಿ ಇಟ್ಟಿದ್ದ ಬುಟ್ಟಿಯೊಳಗಿನ ಚೂಡಾ ತೆಗೆಸಿ ಪಾರ್ಸೆಲ್ ಮಾಡಿ ಕೊಟ್ಟು “ಆ ಟೈಮನಾಗ ಸಂಗಪ್ಪ ಅನ್ನೋವ ಚೂಡಾ ಮಾಡ್ತಿದ್ದರಿ...ಅವ ಸತ್ತು ೧೦-೧೫ ವರ್ಷ ಆಯಿತರಿ...ಆಮೇಲೆ ಅವನಂಗ ಚೂಡಾ ಮಾಡೋರೆ ಸಿಕ್ಕಿಲ್ಲರಿ ... ಇವತ್ತಿಗೂ ನಿಮ್ಮಂಗ ಮಂದಿ ಆವಾಗಿನ ಚೂಡಾ ನೆನೆಸತಾರಿ” ಅಂತ ಅಂದ.

ನಾನು ಎಂದೂ ಕಂಡಿರದ ಸಂಗಪ್ಪನ ಬಗ್ಗೆ ನನಗೆ ಗೌರವ ಭಾವನೆ ಮೂಡಿತು. ತನಗೆ ಗೊತ್ತಿರೋ ಕಸುಬುದಾರಿಕೆಯಿಂದ ಇನ್ನೂ ಮಂದಿ ನೆನಪಿನೋಳಗ ಉಳಿದ್ದಿದ್ದು ನೋಡಿ ಅವನ ಬದುಕು ಸಾರ್ಥ್ಯಕ್ಯ ಆಯಿತು ಅಂತ ಅನ್ನಸ್ತು.

ಕಟ್ಟಿಸಿಕೊಂಡಿರೋ ಚೂಡಾ ತೊಗೊಂಡು ಮನಿಗೆ ಬಂದೆವು. ಶೌರಿ ಮೊದ್ಲೇ ಹೇಳಿದಂಗ, ರಾತ್ರಿ ಹೋಟೆಲ ಚೂಡಾ ತಂದ್ದಿದದ್ದಕ್ಕ ನಮ್ಮಮ್ಮನ ಹತ್ರ ಬೈಸಿಕೊಂಡಿದ್ದು ಆಯಿತು.

ಶೌರಿ, ಪಲ್ಲವಿ ಚೂಡಾ ತಿಂದರು, "ಮಸ್ತ ಅವ" ಅಂದ್ರು. ನಾನೂ ತಿಂದೆ, ಮಜಾ ಬರ್ಲಿಲ್ಲ..ಆದ್ರ ಅವರಿಗೆ ಹೇಳಿಲ್ಲ..

-------------------------------------------------------------

ಉಪ ಸಂಹಾರ


ಸಿಂದಗಿಯಿಂದ ವಾಪಸ್ಸು ಬಂದು ತಿಂಗಳಾದ ಮೇಲೆ ಮನ್ಯಾಗ ಒಂದು ರವಿವಾರ ಮಧ್ಯಾನ್ಹ, ನಾನು ಶೌರಿ ಟಿ ವಿ ಯೊಳಗ ಡಿಸ್ಕವರಿ ಚಾನೆಲ್ ನೋಡಕೊತ ಕೂತಿದ್ದಿವಿ. ಇಟಲಿ ಮೂಲದ ಆಮೆರಿಕನ್ ಒಬ್ಬನ ಬಗ್ಗೆ ಡಾಕ್ಯುಮೆಂಟರಿ ಅದು. ತೀರಿ ಹೋಗಿರೋ ತನ್ನ ಅಜ್ಜಿನೋ ಇಲ್ಲಾ ಮುತ್ತಜ್ಜಿನೋ ಬರಿದಿಟ್ಟಿರೋ ಡೈರಿ ಪ್ರಕಾರ ಅವಳ ಹುಟ್ಟಿದೂರಿನಲ್ಲಿನ ಹೋಟೆಲ್ ಒಂದರ ಪಿಜ್ಜಾದ ರುಚಿ ಹುಡಕೊಂಡು, ಅವನು ಹೋಗಿರ್ತಾನೆ.

ಅವನು ಹೋಟೆಲ್ ಹುಡ್ಕೊಂಡು ಹೋಗೋ ದಾರಿ ಬಗ್ಗೆ, ಆ ಹೋಟೆಲ್ ಸಿಕ್ಕ ಮೇಲೆ, ಈಗ ಅದೇ ರೀತಿ ಪಿಜ್ಜಾ ಮಾಡೋರ ಬಗ್ಗೆ, ಆ ಮನೆಯವರೆಲ್ಲಾ ಪಿತ್ರಾರ್ಜಿತ ಆಸ್ತಿಯಾಗಿ ಬಂದ ಆ ರೆಸಿಪಿ ಬಗೆಗಿನ ವ್ಯಕ್ತ ಪಡಿಸೋ ಹೆಮ್ಮೆ ಬಗ್ಗೆ,  ಎಲ್ಲಾ ಸಣ್ಣ ಸಣ್ಣ ವಿಷಯಗಳನ್ನು ವಿವರವಾಗಿ, ಎಲ್ಲವನ್ನು ಅದ್ಭುತವಾಗಿ ತೋರಿಸಿದರು.

ಪ್ರೋಗ್ರಾಮ್ ಮುಗಿದ ಮ್ಯಾಲ ಶೌರಿ “ನಾವೂ ಅಲ್ಲಿ ಹೋಗೋಣಾ ಅಪ್ಪಾ? ಅಲ್ಲಿ ಪಿಜ್ಜಾ ಮಸ್ತ ಇರತದ” ಅಂದ. ನಾನು ಹೂಂ ಹೋಗೋಣ ಅಂದೆ.

ಮಂಗಳವಾರ, ಜನವರಿ 1, 2013

ಬೀಡಿ ಸೇದು ಮುದುಕಿ


ಬೀಡಿ ಸೇದು ಮುದುಕಿ

 

ಗುರುರಾಜ ಕುಲಕರ್ಣಿ (ನಾಡಗೌಡ)


ನಾನು ಸಿಂದಿಗಿಯೊಳಗ ಸಾಲಿ ಕಲಿ ಮುಂದಾಗ, ಎರಡ್ನೆತ್ತೆ ತನಾ ಬಜ಼ಾರನಾಗ ಇರು, ಹೆಣ್ಣಮಕ್ಕಳ ಸಾಲಿಗಿ ಹೋಗ್ತತ್ತಿದ್ದೆ. ಮೂರನೆತ್ತೆಕ್ಕ ಬಂದ ಮ್ಯಾಲ್ ಊರ ಹೊರಗಿದ್ದ ಗಂಡ ಹುಡುಗರ ಸಾಲಿಗಿ ಹೆಸರ ಹಚ್ಚಿದ್ದರು. ನನಗ ಅಷ್ಟ ದೂರ ನಡ್ಕೊತ ಹೋಗುದು ಆಗ್ತದೊ ಇಲ್ಲ ಅಂತ,ಅಮ್ಮಮೈಬುಬಗ ಸಾಯಿಕಲ್ ಮ್ಯಾಲ್ ಕರ್ಕೋಂಡು ಹೋಗಿ ಕರ್ಕೋಂಡ ಬರೋ ಕೆಲಸ ಕೊಟ್ಟಿದ್ದಳು. ನನಗೂ ಬಾಕಿ ಎಲ್ಲಾ ಹುಡುಗ್ರಂಗ ನಡಕೊತ, ಊರಾಗಿನ ಬ್ಯಾರೆ ಬ್ಯಾರೆ ರಸ್ತಾ-ಸಂದಿ ತಿರುಗೊಕೊತ ಸಾಲಿಗಿ ಹೋಗಿ ಬರಬೇಕು ಅಂತ ಭಾಳ ಆಸೆ ಆಗ್ತಿತ್ತು. ಆದ್ರ ದಾದಾನ ಹೆದ್ರಿಕಿಗಿ ಮೈಬುಬುನ ಜೊಡಿ ಸಾಯಿಕಲ್ಲ ಮ್ಯಾಲ್ ಸುಮ್ಮನ ಹೋಗ್ತಿದ್ದೆ. ಸಾಲಿಗಿ ಹೋದ ಸುರು ಸುರುವಿಗಿ ಗೆಳೆಯಂದ್ರು ಯಾರು ಇರ್ಲಾದೆ ಬ್ಯಾಸರ ಆಗ್ತಿತ್ತು. ಆದ್ರ ಮುಂದ ನಾಕನೇತ್ತೆಕ್ಕ ಬರುದರಾಗ, ಒಂದ ನಾಲ್ಕಾರು ಗೆಳೆಯಂದ್ರು ಸಿಕ್ಕರು.


ಮುಂದ ಐದನೇತ್ತಕ್ಕ ಬಂದಾಗ, ತಾನೇ ನಡಕೊತ ಸಾಲಿಗಿ ಹೋಗಿ ಬರ್ತಾನ ಬಿಡು ಅಂತ ನಮ್ಮ ಅಮ್ಮ ಮೈಬುಬುಗ ನಿನಗ ದವಾಖಾನಿ ಕೆಲ್ಸಾನೆ ಸಾಕು ಅಂತ ಹೇಳಿದ್ಳು. ಹಿಂಗಾಗಿ ನಾನೂ ಇದ್ದ ಗೆಳೆಯಂದ್ರ ಜೋಡಿ ನಡಕೊತ ಸಾಲಿಗಿ ಹೋಗಿ ಬರೋದು ಸುರು ಮಾಡಿದೆ. ಆವಾಗಿಂದ ಗೆಳೆಯಂದ್ರು ಭಾಳ ಮಂದಿ ಆದ್ರು... ಹಂಗೇ ಸಿಂದಗಿಯೊಳಗಿನ ಸಂದಿಗೊಂದಿಗೋಳು ಗೊತ್ತಾಗ್ಲಿಕತ್ತುವು. ಭೀಮಾಶಂಕರ ಮಠದ ಮುಂದ ಹಾದು, ಒಳಗಿನ ಸಂದ್ಯಾಗಿಂದ ಬಂದ್ರ ಸೀದಾ ಬಜ಼ಾರನಾಗಿನ ಉಪ್ಪಿನವರ ಅಂಗಡಿ ಮುಂದೆ ಬರ್ತಿವಿ ಅನ್ನುವಂತಾ ಜ್ಞಾನ ಸಿಗಿಲ್ಲಿಕ್ಕಿ ಶುರು ಆಯಿತು.

ನಮ್ಮ ಮನಿ ಆವಾಗ ನೀಲಗಂಗಮ್ಮನ ಗುಡಿ ಮುಂದ ಇತ್ತು. ಮನಿ ಸುತ್ತಮುತ್ತಲು ಗೆಳೆಯಂದ್ರು ಇದ್ದರು. ಅವರೂ ಗಂಡ ಸಾಲಿಗಿ ಬರ್ತಿದ್ರು. ಮುಂಜಾನೆ ಸಾಲಿಗಿ ಹೋಗು ಮುಂದಾಗ, ನೀಲಗಂಗಮ್ಮನ ಗುಡಿಗಿ ಎಲ್ಲಾರಂಗ ಹೊರಗಿಂದ ನಮಸ್ಕಾರ ಮಾಡಿ..ಹಂಗೆ ಊರಾನ ಮಠದ ಒಳಗಿಂದ ಹಾಯಿದು, ಬಿಂದುನ ಚಾ ಅಂಗಡಿ (ಅದಕ ಜೈ ಹನುಮಾನ್ ಟೀ ಕ್ಲಬ್ ಅಂತ ಬೋರ್ಡ್ ಇತ್ತು) ಮುಂದ ಕೂತ ಮಂದಿನ ನೋಡ್ಕೊತ್, ಮಸೀದಿ ಮುಂದ ಇರು ಪವಾರ್‌ನ ಬೀಡಿ ಅಂಗಡಿಯೊಳಗಿನ ಕನ್ನಡಿಯೊಳಗ ಹಣಿಕಿ ಹಾಕೊತ, ಸಿಂಡಿಕೇಟ ಬ್ಯಾಂಕ ಮುಂದ ನಿಂತಿರತ್ತಿದ್ದ ರಾಜದೂತ ಮೋಟರ ಸೈಕಲ್ ಸೀಟ ಮ್ಯಾಲ್ ಕೈ ಆಡಿಸಿ, ಮುಂದ ಇರೋ ಕಟ್ಟಿಗಿ ಅಡ್ಡೆ, ತಾರಾಪುರದವರ ಅಡತಿ ಅಂಗಡಿ ಮುಂದ ನಡಕೊಂಡು, ಕುಂಟ ಹಣಮಪ್ಪನ ಗುಡಿ ಮುಂದ ಕೂತಿರೊ ಭಿಕ್ಷಾದಂವನ ಮುಂದ ಬಿದ್ದಿರೊ ಚಿಲ್ಲರ ರೊಕ್ಕ್ ನೋಡ್ಕೊತ, ಶೇಟಜಿ ಪೆಟ್ರೊಲ್ ಬಂಕ ಮುಂದ ನಿಂದ್ರಿಸ್ಸಿದ್ದ ದೆವ್ವಿನಂತಾ ಟ್ರಕ್ ಒಳಗ ಕಾಜಿಗಿ ಅಂಟಿಸಿರು ಲಕ್ಷ್ಮೀ, ಗಣಪತಿ, ಶಿವನ ಸ್ಟಿಕರ್ಸ್ ನೋಡಿ, ಬಸ್ ಸ್ಟ್ಯಾಂಡಿಗಿ ಬರು ಬಸಗೋಳ ನಡುವ ಹಾರಕೊತ, ಅದರ ಎದ್ರುಗಿದ್ದ ನಮ್ಮ ಕನ್ನಡ ಸಾಲಿಗಿ ಹೋಗ್ತಿದ್ವಿ.

ಸಾಲಿಗಿ ಹೋಗು ಮುಂದಾಗ ನಾವು ಹುಡುಗರೆಲ್ಲಾ ಗುಂಪು ಗುಂಪಾಗಿ ಹೊಗ್ತಿದ್ದಿವ್ವಿ. ಹೋಗು ಮುಂದಾಗ, ನೀಲಗಂಗಮ್ಮನ ಜಾತ್ರಿಗಿ ಈ ಸರ್ತಿ ಏನೇನು ತೊಗೊ ಬೇಕು, ಮಣ್ಣೆತ್ತಿನ ಅಮ್ಯಾಸಿಗಿ ಮಣ್ಣೆತ್ತ ತೋಗೊಳ್ಳಿಕ್ಕಿ ಯಾವ ಕುಂಬಾರ ಮನಿಗಿ ಹೋಗಬೇಕು, ಬೀದಿ ಬಾಂವಿ ಹತ್ತಿರ ಇರು ಹೆಂಣ್ಣ ನಾಯಿಗಿ ಮರಿ ಆಗಿದ್ದು, ಬಡಿಗೇರ ಶ್ಯಾಮ್‍ ಮಾಡಿಕೊಟ್ಟ ಬಗರಿ ಎಷ್ಟು ಜೋರ್ ತಿರಗತ್ದದ, ಯಾರ್ಯಾರು ದೊಸ್ತಗೋಳು ನೂರಕ್ಕಿಂತಾ ಹೆಚ್ಚಿಗಿ ಗೊಲಿ-ಗುಂಡ ಇಟ್ಟಾರ, ಚೌಡಮ್ಮನ ಜಾತ್ರ್ಯಾಗ "ಅಗ್ಗಿ" ಹ್ಯಾಂಗ ಹಾರತಾರ, ಗಣೇಶ ಚೌತಿಗಿ ಲೇಜ಼ಿಮ ಆಡ್ಲಿಕ್ಕಿ ಸೊಲಾಪುರದಿಂದ ಬರ್ತಾರ ಅಂತ, ಇಂತಾ ನೂರಾರು-ಸಾವಿರಾರು ಸುದ್ದಿ ಮಾತಾಡಕೋತ ಹೊಂಟ್ರ ಸಾಲಿ ಬಂದ್ದದ್ದೇ ಗೊತ್ತಾಗ್ತಿರಲ್ಲಿಲ್ಲ.

ಹೀಂಗೆ ಒಂದ ದಿವ್ಸ ಮಾತಡ್ಕೊತ ಸಾಲಿಗಿ ಹೋಗು ಮುಂದಾಗ, ಊರಾನ ಮಠದ ಹತ್ತರ ಇರು ಹುಡುಗೊಬ್ಬ ಒಂದು ಆಶ್ಚರ್ಯಕರವಾದ ಸುದ್ದಿ ಹೇಳಿದ. ನಾವು ಯಾರು ಅಂತಾದ್ದು ನೋಡಿರಲ್ಲಿಲ್ಲ ಇಲ್ಲಾ ಕೇಳಿರಲ್ಲಿಲ್ಲ. ನನಗಂತೂ ನಂಬ್ಲಿಕ್ಕೆ ಆಗ್ಲಿಲ್ಲ...ಹೇ ಸುಳ್ಳ ಹೇಳ್ತಾನ ಇಂವ್ ಅಂತ ನಾ ಅಂದೆ..ಆದ್ರ ಅದನ್ನು ನೋಡಿದ್ದ ಇನ್ನೊಂದಿಬ್ರು ದೋಸ್ತರು, “ ಆ ಹುಡುಗ ಹೇಳೋದು ಖರೆ ಮತ್ತ ಅದನ್ನ ನಾವೂ ನೋಡಿವಿ” ಅಂತ ಆಣಿ ಮಾಡಿ ಹೇಳಿದ್ರು.. ಅದು ಸುದ್ದಿ ಏನು ಅಂದ್ರ ಊರಾನ ಮಠದ ಹತ್ರ ಇರು ನಮ್ಮ ದೋಸ್ತನ ಮನಿ ಮುಂದಿನ, ಮನ್ಯಾಗ ಇರು ಒಂದು ಮುದುಕಿ ಬೀಡಿ ಸೇದತಾಳ ಅಂತ ಅನ್ನು ವಿಷಯ. ನನಗೋ ಇದು ಪರಮಾಶ್ಚರ್ಯದ ಸುದ್ದಿ.

ನಾನು ಆಶ್ಚರ್ಯ ಪಡೋದು, ಸುದ್ದಿ ಹೇಳೋ ಹುಡುಗನಿಗಿ ಹುರುಪ ಕೊಟ್ಟತು. ಮುದುಕಿ ಬೀಡಿ ಹ್ಯಾಂಗ ಸೇದತಾಳ ಅನ್ನೋದರ ಬಗ್ಗೆ ಅವನ ವರ್ಣನಾ ಇನ್ನು ಹೆಚ್ಚಾಯಿತು. ಅದಕ್ಕ ತಕ್ಕಂತೆ ನನ್ನ ಕುತೂಹಲ ಬೆಳ್ಕೊಂಡು ಹೋಯಿತು. ಬೀಡಿ ಸೇದು ಮುದುಕಿನ್ನ ನೋಡ್ಲೇ ಬೇಕು ಅನ್ನು ತಹ ತಹಿಕಿ ಶುರು ಅಯಿತು. ಬೀಡಿ-ಸಿಗರೇಟ ಸೇದುದು ಬರೆ ಗಂಡಸರ ಕೆಲಸ ಅಂತ ತಿಳ್ಕೊಂಡ್ಡಿದ್ದ ನಮ್ಮಂತಹಾ ಹುಡುಗರಿಗಿ ಇದು ಭಾಳೇ ಆಶ್ಚರ್ಯದ ವಿಷಯವಾಗಿತ್ತು.

ಮುದುಕಿ ಬೀಡಿ ಸೇದುದು ನೋಡೆ ಬಿಡುಣು ಅಂತ, ಮಧ್ಯಾನ್ಹದ ಸಾಲಿ ಬಿಟ್ಟು ಓಡಿ ಊರಾನ ಮಠದ ಕಡೆ ಹೋದೆವು. ಆ ಮುದುಕಿ ತನ್ನ ಗುಡಿಸಿಲ ಹೊರಗ ಕೂತಿದ್ದಳು. ಕತ್ತಲಿ ಆಗುತನ ನಾವಿಬ್ಬರು ಅಲ್ಲೇ ಠಳಾಯಿಸಿದ್ವಿ ಆವಾಗವಾಗ ತನ್ನ ಸಂಚಿ ತಗುದು ತಂಬಾಕ ಹಾಕೊಂಡ್ಲೆ ಹೊರತು ಆಕಿ ಏನೂ ಬೀಡಿ ಹಚ್ಚಲ್ಲಿಲ್ಲ. ತಡಾ ಮಾಡಿ ಮನಿಗಿ ಹೊದ್ರ ಏಟು ಬಿಳ್ತಾವ ಅಂತ ನಾ ಮನಿಗಿ ಹೋದೆ. ಮುಂದ ಈ ವಿಷಯಾ ಮರತೂ ಹೋದೆ. ಮುದುಕಿ ಬೀಡಿ ಸೇದುದು ನಾ ನೋಡಲಿಲ್ಲ.

--------------------------------------------------------

ಉಪಸಂಹಾರ


ಮುಂದ ಸರಿ ಸುಮಾರು ಮುವತ್ತು ವರ್ಷದ ಮ್ಯಾಲೆ, ಟೊರೊಂಟೊದ ಆಫೀಸಿನಾಗ, ಒಂದ ಮುಂಜಾನೆಯಿಂದ ಕೆಲಸ ಮಾಡ್ಕೊತ ಕೂತವನಿಗಿ, ಸೊಂಟ ಮತ್ತ ಕುತ್ತಿಗಿ ಹಿಡಿದಂಗ ಆಗಿತ್ತು. ಅದಕ ಸಂಜಿ ಎಳಿ ಬಿಸಿಲನಾಗ ಆಫೀಸಿನ ಮಗ್ಗಲ್ಲಕೇ ಇರು ಬಗೀಚನಾಗ ಕಾಲ ಆಡಿಸ್ಕೊತ ತಿರುಗಾಡತಿದ್ದೆ.

ಅಲ್ಲಿ ಇರೋ ಸಣ್ಣ ಕೆರಿಯೊಳಗಿನ ತಿಳಿ ನೀರ, ನೀಲಿ ಮುಗಿಲನಾಗ ಹಾರತ್ತಿದ ಬಿಳಿ ಮೋಡ ನೋಡ್ಕೋತ, ಆ ಕಡಿ ಈ ಕಡಿ ಗೊಣು ತಿರುಗಿಸದವನಿಗೆ, ಎದುರಿಗಿನ ಬೆಂಚ ಮ್ಯಾಲ ಕೂತು ಸಿಗರೇಟು ಸೇದತ್ತಿದ್ದ ಬಿಳಿ ಮುದುಕಿನ ನೋಡಿದಾಗ....ನಿಮಗ ಮ್ಯಾಲ ಹೇಳಿದ್ದಲ್ಲಾ ಮನಸ್ಸಿನಾಗ ಸಿನೆಮಾದಂಗ ಓಡಿದ್ದು ಸುಳ್ಳಲ್ಲ.

ಮಂಗಳವಾರ, ಡಿಸೆಂಬರ್ 25, 2012

ಮದುವೆಯ ಅನುಬಂಧಾ....


 ಮದುವೆಯ ಅನುಬಂಧಾ....

- ಗುರುರಾಜ ಕುಲಕರ್ಣಿ (ನಾಡಗೌಡ)

“ಮದುವೆಗಳು ಸ್ವರ್ಗದಾಗ ನಡಿತಾವ”, ಅನ್ನೋದು ಪಾಶ್ಚಿಮಾತ್ಯರ ನಂಬಿಕೆ. ಗಂಡ-ಹೆಂಡತಿ ಸಂಬಂಧ ಏಳೇಳು ಜನ್ಮದ ಸಂಬಂಧ ಅಂತ ನಾವು ಸನಾತನಿಗಳು ನಂಬೊ ಮಾತು.

ಅದ್ರೂನು ಈ ಮದುವಿ ಅನ್ನೊ ಸಿಸ್ಟಮ್ ಹ್ಯಾಂಗ ಕೆಲಸ ಮಾಡ್ತದ ಅನ್ನೊದು, ಇಡೀ ಯುನಿವರ್ಸ ಸೃಷ್ಟಿ ಮಾಡಿರೋ ಪರಬ್ರಹ್ಮಗೂ ತಿಳಿಲಾರ್ದದ ಮಾತು ಇರಬೇಕು ಅಂತ ನನ್ನ ಅಭಿಪ್ರಾಯ. ಅಲ್ಲಾ ನೀವೆ ಸ್ವಲ್ಪ ಸುತ್ತ-ಮುತ್ತ ಕಣ್ಣಾಡಿಸಿ ನೋಡ್ರಿ, ಆಜುಬಾಜುನವರು ತಮ್ಮ ಸಂಸಾರಗೊಳು ಹ್ಯಾಂಗ ತೂಗಿಸಿಕೊಂಡು ಹೊಗ್ತಾರ ಅಂತ...ಎಂಥಾ ನಾಸ್ತಿಕನಿಗೂ ದೇವರ ಮ್ಯಾಲ ನಂಬುಕೆ ಹುಟ್ಟಲ್ಲಿಲ್ಲಾ ಅಂದ್ರ ..ನನಗ ನೀವು ಕೇಳ್ರಿ...

...ಆಮ್ಯಾಲೆ ಇನ್ನೊಂದು ಮಾತು..ಆಜುಬಾಜು ಸಂಸಾರ ಮಾತ್ರ ನೊಡ್ರಿ...ನಿಮ್ಮ ನಿಮ್ಮ ಸಂಸಾರ ನೋಡಕೊ ಬ್ಯಾಡ್ರಿ....ಅದರ ಮುಂದಿನ ಜವಾಬ್ದಾರಿ ನಂದಲ್ಲಾ....ಏನ್ರೆಪಾ?

ಮದುವೆ ಅಂತ ಅಂದ ಕೂಡ್ಲೇ ನನಗ, ಸುಮಾರು ೧೯೯೯ರ ಸುಮಾರು ನಾವು (ಮತ್ತ್ಯಾರು....?... ನಾನು ನನ್ನ ಹೆಂಡತಿ ಪಲ್ಲವಿ) ಆಮೇರಿಕಾದಾಗ ಇದ್ದಾಗ, ಅದರ ಬಗ್ಗೆ ನಡಿತ್ತಿದ್ದ ಮಾತು-ಕಥಿ ನೆನಪಾಗ್ತದ.

ಆ ಟೈಮ್ನಾಗ ಕಂಪ್ಯೂಟರ್ ಕೀ ಬೋರ್ಡ್ ಗೊತ್ತಿದ್ದವರಿಗೆಲ್ಲಾ, ನ್ಯೂಯಾರ್ಕ್ ಸ್ವಾತಂತ್ರ್ಯ ದೇವತೆ ಕೈ ಬೀಸಿ ಕರಿತ್ತಿದ್ದಳು. ಹಿಂಡ ಹಿಂಡಗಟ್ಟಲೆ ಕಾಲೇಜ್ ಮುಗಿಸಿದ ಹುಡುಗರು ನೌಕರಿಗಿ ಹೋಗತ್ತಿದ್ದರು ಮತ್ತ ವರ್ಷ ಕಳಿದರೊಳಗ ವಾಪಸ್ಸ್ ತಮ್ಮ ತಮ್ಮ ಊರಿಗಿ ಬಂದು ಮದುವಿ ಮಾಡಕೊಂಡು ಆಮೇರಿಕಾಕ್ಕ ಹೆಂಡತಿ ಜೊಡಿ ಕುಕ್ಕರನೂ ತೊಗೊಂಡು ಬರ್ತಿದ್ದರು. ಈ ಭಾರತದದ ಹುಡುಗರು ಮಾಡಕೊಳೊ ಮದುವಿ ಕಾರ್ಯಕ್ರಮ ಅಲ್ಲಿ ಮಂದಿಗಿ ಭಾಳಾ ಆಶ್ಚರ್ಯ ತರಿಸೊದು.

ಅಲ್ರಿ ತಿಂಗಳಾನಾಗ ಹುಡುಗಿನ ಹುಡ್ಕೊಂಡು..ಮದುವಿನೂ ಮಾಡ್ಕೊಂಡು..ಬಂದು ಬಿಡ್ತಿರಲ್ಲಾ...ಇದು ಹ್ಯಾಂಗ..? ಅಂತ ಹುಬ್ಬ ಮತ್ತ ಗೋಣ ಹಾರ್ಸೊಕೊತ ನಮ್ಮಂತೊರಿಗಿ ಕೇಳೊರು.

ನಮಗ ಸಿಕ್ಕಿದೆ ಛಾನ್ಸ್ ಅಂತ ನಮ್ಮ ಪರಂಪರಾ..ನಮ್ಮ ಸಂಸ್ಕೃತಿ ಬಗ್ಗೆ.... , ತಲಿ ಮ್ಯಾಲ ಕೋಡು ಇಟ್ಕೊಂಡು, ಎದಿ ಉಬ್ಬಸ್ಕೊಂಡು ಉತ್ತರಾ ಹೇಳಿದ್ದೆ ಹೇಳಿದ್ದು...ಅವರು ಬಿಟ್ಟ ಕಣ್ಣ ಬಿಟ್ಟಕೊಂಡು ಕೇಳಿದ್ದೆ ಕೇಳಿದ್ದು...

ಈಗ ಟೈಮ್ ಬದ್ಲಾಗ್ಯದ. ಜಗತ್ತಾನಗ ಎಲ್ಲಾರಿಗೂ..ನಮ್ಮ "ಪರಂಪರಾ".."ಪರಾಕ್ರಮ"..ಗೊತ್ತಾಗೆದ.

ಆದ್ರ ಈಗ ನಾ ಹೇಳು ಖರೆ ಖರೆ ಘಟನಾಗೊಳು ಕೇಳಿದ ಮ್ಯಾಲ...ಮದುವಿ ಹೀಂಗೂ ನಡಿತಾವಾ? ಅಂತ ನಿಮಗೂ ಅನ್ನಸ್ಲಿಲ್ಲಾ ಅಂದ್ರ..ನನಗ ಕೇಳ್ರಿ..

ಮದುವೆ ಅನುಬಂಧ ೧


ಇದು ನಡೆದ್ದದ್ದು, ಸುಮಾರು ೩೦-೩೫ ವರ್ಷದ ಹಿಂದೆ. "ವರ" ನಮ್ಮೂರ ಹತ್ತರ ಹಳ್ಳಿಯವರು. ಕೆಲಸ ಬೆಂಗಳೂರನಾಗ.. ಉತ್ತರ ಕರ್ನಾಟಕದ ನಮ್ಮ ಮಂದಿಗಿ, ಬೆಂಗಳೂರನಾಗ ಕೆಲಸ ಮಾಡೊದು ಒಂದೇ.. Onsite ನಾಗ ಕೆಲಸ ಮಾಡೊದು ಒಂದೇ.

ಆ ಕಾಲದಾಗ ನಮಗ ಬೆಂಗಳೂರ ನಿಲುಕದ ನಕ್ಷತ್ರ, ಯಾಕಂದ್ರ ಬೆಂಗಳೂರಿಗೆ ಹೊಗಲಿಕ್ಕಿ ಬಸ್, ಟ್ರೈನ್, ಇಲ್ಲಾ ಒಂದು ಸರಳ ರೋಡ್ನೂ ಇರಲ್ಲಿಲ್ಲ. ಹೀಂಗಾಂಗಿ ಈ ಹುಡುಗ ಬೆಂಗಳೂರನಾಗ ಒಬ್ಬನೇ ಪರದೇಶಿಯಂಗ ಇದ್ದ.

ಒಬ್ಬನೇ ಇದ್ದನಾ..? ಹೀಂಗಾಗಿ, ವಯಸ್ಸಿಗೆ ತಕ್ಕಂತೆ...ದಿನಕ್ಕೆ ಒಂದ ನಾಲ್ಕು ಜ಼ುರುಕಿ ಹೋಡಿಯೊದು, ಆವಾಗಾವಗ ತಣ್ಣಗಂದು ಮಲ್ಲ್ಯ ಸ್ಪೇಶಿಯಲ್ ಕುಡಿಯೊದು ಮಾಡ್ತಿದ್ದ..ಇಂಥಾ ಸುದ್ದಿ ಮನ್ಯಾಗಿನ ಹಿರ್ಯಾರಿಗಿ ಮುಟ್ಟಿಸಲ್ಲಿಕ್ಕಿಂತಾನೇ ಇರೋರು, ಸ್ವಲ್ಪ ಹೆಚ್ಚಿಗೆ ಖಾರ ಉಪ್ಪ ಹಚ್ಚಿ, ಊರಾಗಿರೊ ಈ ಹುಡುಗನ ಅಣ್ಣಗ ಹೇಳಿದರು. ಅಪ್ಪ-ಅಮ್ಮ ಇಲ್ಲದ ಈ ಹುಡುಗಗ, ಹಿರಿ ಅಣ್ಣನೇ ಎಲ್ಲಾ. ಅಣ್ಣನ ಪ್ರಕಾರ ಇವನಿಗೊಂದು ಮದುವಿ ಮಾಡಿದ್ರ ಎಲ್ಲಾ ಸರಿ ಹೊಗ್ತಾನ ಅಂತ..ಮದುವಿ ಮಾಡ್ಲಿಕ್ಕಿ ನಿಶ್ಚಯ ಮಾಡಿದ್ರು.

ಈ ಕಡೇ ಬೆಂಗಳೂರನಾಗ, ಮುಂಜಾನೆ ನೌಕರಿಗಿ ಹೊಗಲಿಕ್ಕಿ ತಯಾರಿ ನಡಿಸಿದ್ದ ಹುಡುಗನಿಗೆ, ಊರಿಂದ ಕಾರ್ಡ (ಪತ್ರ- ೧೫ ಪೈಸಾದ್ದು) ಬಂತು.


ಅಣ್ಣ ಪತ್ರ ಬರದ್ದಿದ್ದರು.



ಚಿ|| "ಹುಡುಗನ ಹೆಸರು"

ನಿನ್ನ ಹಿರಿಯ ಅಣ್ಣ ಮಾಡು ಆಶೀರ್ವಾದಗಳು,

ಇತ್ತ ಸಕಲವೂ ಕುಶಲ. ನಾವೆಲ್ಲರೂ ಕ್ಷೇಮವಾಗಿದ್ದೇವೆ. ನಿನ್ನ ಕ್ಷೇಮ ಸಮಚಾರ ತಿಳಿಸುತ್ತ ಇರಬೇಕು. ನಿನ್ನ ಆರೋಗ್ಯದ ಕಡೆ ಗಮನವಿರಲಿ.ಮಳೆ ಸಮಯಕ್ಕ ಸರಿಯಾಗಿ ಆಗಿದ್ದು, ಬಿತ್ತನೆ ಕೆಲ್ಸ ಚೆನ್ನಾಗಿ ನಡೆದಿದೆ. ಕೆರೆಯ ಬಾಜು ಇರುವ ಹೊಲದಲ್ಲಿ ಈ ಬಾರಿ ಶೇಂಗಾ ಹಾಕುವ ಯೋಚನೆ ಇದೆ. ಅಮಲ್ದಾರ ಮಾಮನ ಮಗಳಿಗೆ ಗಂಡು ಮಗು ಹುಟ್ಟಿದೆ. ತಾಯಿ ಮತ್ತು ಮಗು ಇಬ್ಬರೂ ಆರಾಮಾವಾಗಿ ಇದ್ದಾರೆ. ಬಾಳಣ್ಣನ ಮಗ ಬಿಜಾಪುರದಲ್ಲಿ ಐ ಟಿ ಐ ಕಾಲೇಜ ಸೇರಿದ್ದಾನೆ.

ಬರುವ ೧೭ ತಾರೀಖಿಗೆ ನಿನ್ನ ಮದುವೆ ತೇರದಾಳ ಸಂಗಮೇಶ್ವರ ಗುಡಿಯಲ್ಲಿ ನಡೆಸಲು ನಿಶ್ಚಯಲಿಸಲಾಗಿದೆ. ತಪ್ಪದೆ ಬರಬೇಕು.


ಇತಿ ಆಶೀರ್ವಾದಗಳೊಂದಿಗೆ.



ಕಡಿ ವಾಕ್ಯಕ್ಕ ಜಾಗ ಸಾಕಾಗಲಾರ್ದಕ್ಕ, ಹ್ಯಾಂಗ ಹ್ಯಾಂಗೋ ಬರದಿದ್ದರು. ಇವನು ಕಷ್ಟ ಪಟ್ಟು ಓದಿ ಅರ್ಥ ಮಾಡ್ಕೊಳ್ಳಿಕ್ಕಿ ನಾಲ್ಕು ನಾಲ್ಕು ಸರ್ತಿ ಓದಿದ ಪತ್ರ ಓದ್ದಿದ್ದೇ ತಡ...ಹುಡುಗ ಆಫೀಸಿಗೆ ಓಡಿದ...ಹೆಡ ಕ್ಲರ್ಕ ಹತ್ರ ಕಾಡಿ ಬೇಡಿ ರಜಾ ಹಾಕಿದ.. ಪತ್ರದಾಗ ಬರದ್ದಿದ್ದ ಪ್ರಕಾರ ೧೭ ತಾರೀಖಿಗಿ ಊರಿಗೆ ಹೋಗಿ ಮದುವಿ ಆದ.. ಇದನ್ನ ಭಾತೃ ಪ್ರೇಮ ಅಂತಿರೊ..ಅಥವಾ ಆವಾಗಿನ ರೀತಿ ರೀವಾಜ಼್ ಅಂತಿರೊ.. ಅಂತು ಮದುವಿ ಮಾಡ್ಕೊಂಡ್ರು, ಸಂಸಾರನೂ ನಡಿಸಿದ್ರು.

ಇದನ್ನ ಖುದ್ದು ಆ "ಹುಡುಗ".. ತಮ್ಮದೇ ಮಗನ ಮದುವಿ ದಿವ್ಸ ನಮಗೆಲ್ಲಾ ಹೇಳಿದ್ರು. ನಾನು ಬಿಟ್ಟ ಕಣ್ಣ ಬಿಟ್ಟಕೊಂಡು ಈ ಮದುವಿ ಕಥಿ ಕೇಳಿದೆ.ಕಡೀಕ ತಡಿಲಾರ್ದೆ ಒಂದು ಮಾತು ಕೇಳಿದೆ..

"ಅಲ್ರಿ ಕಾಕಾ..ಆ ಕಾರ್ಡ ನಿಮಗ ಮುಟ್ಟಿರದ್ದಿದ್ದರ...ಇಲ್ಲಾ…. ನೀವು ಒಲ್ಲೆ ಅಂದ್ರಿದ್ರ..."

ಅದಕ ಅವರು ನಕ್ಕೊತ ಅಂದ್ರು

"ನಾ ಲಗ್ನಕ್ಕ ಹೋಗ್ಲಿ... ಹೋಗಲಾರದೆ ಇರ್ಲಿ.... ನಂದು ಲಗ್ನ ಅಂತೂ ಆಗಿರ್ತಿತ್ತು..ಹೆಂಡತಿ ಮನಿಗಿ ಬಂದಿರ್ತಿದ್ದಲು"

ನಾನು ತಗದ ಬಾಯಿ ಒಂದಃತ್ತು ನಿಮಿಷ ಆದ ಮ್ಯಾಲ ಮುಚ್ಚಿದೆ.

ಇದು ಹಳೆ ಕಥಿ ಆಯಿತು ಬಿಡ್ರಿ..ಈಗೆಲ್ಲಾ ಹೀಂಗ ಹ್ಯಾಂಗ ಆಗ್ತದ ಅಂತಿರೇನೊ? ಆದ್ರ ಇದಕ್ಕಿಂತಾ ಮಜಾ ಕಥಿ ಇಲ್ಲಿ ಕೇಳ್ರಿ..

ಮದುವೆ ಅನುಬಂಧ ೨


ನನ್ನ ಜೋಡಿ ಕೆಲಸ ಮಾಡ್ತಿದ್ದ ಹುಡುಗ ಒಬ್ಬ ಉಡುಪಿ ಕಡೆಯಾಂವ. ಭಾಳ ಚೊಲೊ ಹುಡುಗ..ಸ್ವಲ್ಪ ಭೊಳೆ ಬ್ಯಾರೆ. ವಯಸ್ಸಿಗೆ ತಕ್ಕಂಗ ಮದುವೆ ಮಾಡೊಕೊಳೊ ತಯಾರಿ ನಡದಿತ್ತು. ಎರಡ ದಿವ್ಸ ರಜಾ ಬೇಕ್ರಿ...ಊರಿಗಿ ಹೋಗಿ ಹುಡುಗಿನ ನೋಡ್ಕೊಂಡು ಬರ್ತೀನಿ ಅಂದ..ರಜಾ ಕೊಟ್ಟೆ ಊರಿಗೆ ಹೋಗಿ ಬಂದ.

ಮಧ್ಯಾನ್ಹ ಖಾಲಿ ಸಿಕ್ಕಾಗ...ಸಾಂಧರ್ಬಿಕವಾಗಿ "ಹುಡಿಗಿದು ಎಲ್ಲಿಗಿ ಬಂತು?" ಅಂತ ಕೇಳಿದೆ. ಉಡುಪಿ ಗ್ರಾಂಥಿಕ ಭಾಷಾದಳೊಗ "ನಮ್ಮ ಮನೆಯವರಿಗೆ ಸ್ವಲ್ಪವೂ ಬುದ್ಧಿ ಇಲ್ಲ " ಅಂದ. ಓಹ್ ಬಹುಶಃ ಮನೆಯವ್ರು ಒಲ್ಲದ ಮದುವಿಗಿ ಫ಼ೊರ್ಸ್ ಮಾಡ್ತಿರಬೇಕು ಅನ್ಕೊಂಡೆ. "ಯಾಕೆ ಏನ ಅಯಿತು?" ಅಂದೆ. ಅರ್ಧ ಘಂಟೆ (ಒಂದ ನೂರಾ ಹನ್ನೆರಡು ಪ್ರಶ್ನೆ) ಆದ ಮೇಲೆ ನನಗೆ ಗೊತ್ತಾಗಿದ್ದು ಇಷ್ಟು:

ಇವನು, ತಮ್ಮ ಅಪ್ಪಾ, ಅಮ್ಮಾ ಮತ್ತೊಂದಿಬ್ಬರ ಜೋಡಿ ಹುಡುಗಿನ ನೋಡ್ಲಿಕ್ಕಿ ಅವರ ಮನಿಗಿ ಹೊಗ್ಯಾರ. ಮಾಮೂಲಿನಂಗ ಕೇಸರಿಭಾತು, ಉಪ್ಪಿಟ್ಟನಂತಾದ್ದು ಏನೊ ಆಗ್ಯೇದ. ಹುಡಿಗಿನ ನೊಡ್ಯಾರ..ಆ ಹುಡುಗಿ ನೋಡ್ಲಿಕ್ಕಿ ತುಸು ಜಾಸ್ತಿನೇ ದಪ್ಪ ಇದ್ದಾಳ..ಮತ್ತ ಓದಿದ್ದು ಕಮ್ಮಿ...ಹಿಂಗಾಂಗಿ..ಮನಿಗಿ ಬಂದ ಮ್ಯಾಲ ಹುಡಿಗಿ ನಮಗ ಒಪ್ಪಿಗಿ ಇಲ್ಲಾ ಅಂತಾ ತಿಳಿಸು ನಿರ್ಧಾರಕ್ಕ ಬಂದಾರ ..ಇಲ್ಲಿ ತನಕ ಎಲ್ಲಾ ಮಾಮೂಲಿನೇ ಹೌದಿಲ್ಲೊ?...ಮುಂದ ಕೇಳ್ರಿ.... ನಮ್ಮ ಹುಡುಗ ಮಾತ್ರ ಇಲ್ಲಾ ಆ ಹುಡುಗಿನೇ ಮದುವೆ ಆಗೊದು ಅಂತ ಹಟ ಹಿಡದಾನ. ಅವರ ಅಪ್ಪ ಕಾಲಲ್ಲಿರೋ ಚಪ್ಪಲಿ ಕೈಗೆ ತೊಗೊಂಡ್ರ.. ಇವನ ಅಮ್ಮ ತಮ್ಮ ಯಜಮಾನರಿಗೆ ಸಮಾಧಾನ ಮಾಡಿ, ನಮ್ಮ ಹುಡುಗನ್ನ "ಯಾಕೊ..?" ಅಂತ ಕೇಳ್ಯಾರ. ಅದಕ್ಕ ಇವನು "ಅಲ್ಲಾ ಅವರ ಮನೆಗೆ ಹೋಗಿ ಕಾಫಿ ತಿಂಡಿ ತಿಂದಬಿಟ್ಟು ನೀವು ಈಗ ಹುಡುಗಿ ಒಪ್ಪಿಗೆ ಇಲ್ಲಾ ಅಂತಾ ಹ್ಯಾಗ ಹೇಳ್ತಿರಾ? ಅವರ ಮನಸ್ಸಿಗಿ ಬೇಜಾರ ಆಗೊಲ್ವ" ಅಂತ ವಾದ ಹಾಕಿದ್ನಂತ. ಕೊನಿಗಿ ಆ ಹುಡಿಗಿ ಅಪ್ಪನೇ..ಬೇಜಾರ ಮಾಡ್ಕೊಳಂಗಿಲ್ಲಾ ಅಂತ ಹೇಳಿ...ಇವನ್ನ ಬೆಂಗಳೂರಿಗಿ ಕಳಿಸಿದರಂತ.

ಈಗ ಆ ಹುಡುಗ (ಬ್ಯಾರೆ ಹುಡಿಗಿನ) ಮದುವಿ ಮಾಡ್ಕೊಂಡು..ಒಂದು ಮಗುವಿನ ತಂದೆ ಆಗ್ಯಾನ. ಇವನ್ನ ಮದುವಿ ಮಾಡ್ಕೊಂಡ ಆ ಹುಡುಗಿ ಜವಾಬ್ದರಿ ಎಷ್ಟು ಅಂತ ನನಗೂ ಗೊತ್ತದ.

ಮದುವೆ ಅನುಭಂದ ೩


ಮುಟ್ಟಿದ್ದಕ್ಕ ಮೂರು ಅನ್ನೋವಂಗ, ಇನ್ನೊಂದು ಮಜುಕೂರ ಕಥಿ ಹೇಳಿ ಮಂಗಳ ಹಾಡ್ತೀನಿ.

ನಮ್ಮ ಗುಲ್ಬರ್ಗಾದ ಹುಡುಗಂಗ ಬೆಂಗಳೂರನಾಗ “ಕಂಪ್ಯೂಟರ್ ನೌಕರಿ” ಸಿಕ್ಕತು.

ನೌಕರಿ ಸಿಕ್ಕಿದ್ದೇ ತಡ ಆಕಾಶದಿಂದ ಪುಷ್ಪವೃಷ್ಟಿ ಆದವು, ದೇವಾನು-ದೇವತೆಗಳು ಉಘೆ ಉಘೆ ಅಂದರು, ಗಂಧರ್ವರು ಕಿಂಪುರುಷರು ಮಂಗಳ ವಾದ್ಯಗಳನ್ನು ನುಡಿಸಿದರು.ಗಾಳಿಯೊಳಗ ಕಂಪು ಸೇರಿತು, ಶರಣ ಬಸಪ್ಪನ ಗುಡಿಯೊಳಗ ಘಂಟೆಗಳು ಬಾರಿಸಿದ್ವು. ಅಮ್ಮ-ಆಪ್ಪ ಹಣಮಪ್ಪಗ, ಮನಿದೇವರಿಗಿ, ರಾಯರಿಗಿ ನೈವೇದ್ಯ ಅಭಿಷೇಕ ಮಾಡಿಸಿದರು. ಮಗ ಇನ್ನ ಬೆಂಗಳೂರನಾಗ ಒಬ್ಬನೇ ಇರ್ತಾನಲ್ಲ ಕಾಳಜಿ ಮಾಡಿದ್ರು, ಗೆಳೆಯಂದ್ರು, “ಕಳ್ಳ ನನ್ ಮಗ ಉದ್ಧಾರ ಆದ” ಅಂದ್ರು. ಈ ನಮ್ಮ ಹುಡುಗ ಊರಾಗ ಸ್ಲೋ ಮೊಶನನೊಳಗ ತಿರಗಾಡಲಿಕ್ಕತ್ತಿದ.

ಬೆಂಗಳೂರಿಗೆ ಹೋಗೋ ತಯಾರಿ ಶುರು ಆಯಿತು. ಸ್ಟೇಶನಗೆ ಬಂದರಷ್ಟೇ ಮಂದೀನ, ಬೆಂಗಳೂರಿಗಿ ಕರ್ಕೊಂಡು ಹೋಗೋ “ಉದ್ಯಾನ ಎಕ್ಸಪ್ರೆಸ್” ರೈಲ, ಇವನ್ನ ಕರ್ಕೊಂಡ್ ಹೋಗಲ್ಲಿಕ್ಕಿ ಮನಿತನ ಬಂತು. ಬೆಂಗಳೂರ ಮುಟ್ಟುತನ ಜೋಗಳ ಹಾಡಿ, ಜತನಲೇ ಒಯ್ದು ಮುಟ್ಟಿಸಿತು.

ನಮ್ಮೂರ ಕಡೆಯಿಂದ ಬೆಂಗಳೂರಿಗೆ ಬರೋ ಎಲ್ಲಾ ಹುಡುಗರಂಗ ಇವನೂ ವಿಜಯನಗರದಾಗ ನಾಲ್ಕು ಹುಡುಗರು ಜೋಡಿ “ಬ್ಯಾಚುಲರ್ಸ್ ಮನಿ” ಮಾಡಿದ.

ಇದೆಲ್ಲಾ ಆದ ಮುಂದ ಒಂದ ವರ್ಷ-ಎರಡೋರ್ಷಕ್ಕ ಮನ್ಯಾಗ ಮದುವಿ ಮಾಡಿಬಿಡೋಣು ಅಂತ ಅಪ್ಪ-ಅಮ್ಮ ನಿರ್ಧಾರಕ್ಕ ಬಂದರು. ಅಲ್ಲಿಯಿಂದ ನಮ್ಮ ಕಥಿ ಶುರು,

ಮದುವಿ ಮಾತುಕತೆ ಶುರು ಆದ ಕೂಡ್ಲೇ, ಈ ಹುಡುಗಂಗ ಕನ್ನಡಿಯೊಳಗ ಹೃತಿಕ್, ಶಾರುಕ್, ಮತ್ತ ಸಲ್ಮಾನ್ ಕಾಣಸಕೊಳ್ಳಿಕ್ಕಿತ್ತರು. ಅಷ್ಟೇ ಇದ್ದರ ನಡಿತಿತ್ತು, ಆದರ ಕನ್ನಡಿ ಮುಂದ ನಿಂತುಕೊಂಡರ ಹೃತಿಕ ಇಲ್ಲಾ ಶಾರುಕನ ಜೋಡಿ ಲೈನನಾಗ ಹೀರೋಯಿನ್ ಸೈತ ನಿಂತ್ಕೋಳ್ಳಿಕತ್ತರು. ಹುಡುಗ ಹಗಲಗನಸ ಕಾಣಲ್ಲಿಕ್ಕತ್ತದ.

ಅಪ್ಪಂಗ ಊರ ಕಡೆ ಒಳ್ಳೆ ಹೆಸರು ಇತ್ತು, ಅಮ್ಮ ಮಹಿಳಾ ಮಂಡಲ, ಅರಿಷಣ ಕುಂಕಮ ಅಂತಾ ಓಡಾಡತಿದ್ದರು, ಹಿಂಗಾಗಿ ಹುಡುಗೀರ ಜಾತಕ ತೊಂಗೊಂಡು ಹಿರಿಯರು ಬರ್ಲಿಕ್ಕತ್ತಿದ್ದರು. ಅಪ್ಪ-ಅಮ್ಮ ಶನಿವಾರ ಇಲ್ಲಾ ರವಿವಾರ “ಕನ್ಯಾ ನೋಡು” ಕಾರ್ಯಕ್ರಮ ಇಟ್ಕೊತ್ತಿದ್ದರು, ಈ ಹುಡುಗ ಶುಕ್ರವಾರ ರಾತ್ರಿ ಉದ್ಯಾನ ಎಕ್ಸಪ್ರೆಸ್ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ರವಿವಾರ ರಾತ್ರಿ ಮತ್ತ ಬೆಂಗಳೂರಿಗೆ ವಾಪಸ ಬರ್ತಿದ್ದ. ನೋಡಿದ ಹುಡುಗಿರನೆಲ್ಲಾ ಬ್ಯಾಡ ಅಂತ ಹೇಳಿ ರೈಲ ಹತ್ತಿದ್ದ. ಅಪ್ಪ ಅಮ್ಮ ಮುಂದಿನ ವಾರದ್ದು ತಯಾರಿ ಮಾಡ್ಕೊಳಿಕ್ಕಿ ಶುರು ಮಾಡ್ತಿದ್ದರು. ಹೀಂಗೆ ಆರ ತಿಂಗಳು ಕಳದ್ವು. ಊರಾಗ, ಇವರ ಅಪ್ಪ –ಅಮ್ಮನ ಹೆಸರು “ಒಳ್ಳೆಯವರು” ಅನ್ನೋ ಲಿಸ್ಟನಾಂದು ತೆಗದರು. ಅಪ್ಪ ಅಮ್ಮಂಗ ಚಿಂತಿ ಶುರು ಆಯಿತು.

ಮುಂದ ಒಂದು ಶನಿವಾರ, ಮಾಮೂಲಿನಿಂಗ ನಮ್ಮ ಹುಡುಗ “ಕನ್ಯಾ ನೋಡು” ಕಾರ್ಯಕ್ರಮಕ್ಕ ಹಾಜರ ಆದ. ಬಂದ ಕೂಡ್ಲೇ ಈ ಸರ್ತಿ ಯಾಕೋ ಮಾಹೋಲ್ ಸರಿ ಇಲ್ಲ ಅಂತ ಅನ್ನಸ್ತು. ಮನ್ಯಾಗ ಅಡಗಿಯವನ್ನ ಕರಿಸಿದ್ದರು, ಸೋಮವಾರಕ್ಕ ಅಡುಗಿಗೆ ಏನೇನು ಬೇಕು ಅಂತ ಲಿಸ್ಟ ತಯಾರಿ ನಡಿದ್ದಿತ್ತು. ಅಪ್ಪ ಕೂತು ಯಾರ್ಯಾರನ್ನ ಕರಿಬೇಕು ಅಂತ ಲಿಸ್ಟ ಮಾಡ್ಲಿಕ್ಕತ್ತಿದ್ದರು. ಹುಡುಗ ಶ್ಯಾಣೆ, ಏನೋ ಗಡಬಡ ಅದ ಅಂತ ಗೂತ್ತಾಯಿತು. ಅಮ್ಮ ಚಹಾದ ಕಪ್ಪ ಕೈಯಾಗಿ ಇಟ್ಟು, “’ಹಾಲ’ನಾಗಿನ ಟೇಬಲ್ ಮ್ಯಾಲ ಹುಡುಗಿ ಫೋಟೋ ಇಟ್ಟದ ನೋಡು” ಅಂದರು. ಇಂವ ಹೋಗಿ ಫೋಟೋ ನೋಡಿದ. ಅಲ್ಲೇ ಕೂತ್ತಿದ್ದ ಅಪ್ಪನ ಮಾರಿ ನೋಡಿದ,

ಅಪ್ಪ ಹುಡುಗಂಗ ಹೇಳಿದರು

“ನಾವೆಲ್ಲಾ ಹುಡುಗಿನ ನೋಡಿವಿ..ಛಂದ ಇದ್ದಾಳ..ಮೂಗ ಕಣ್ಣ ಎಲ್ಲಾ ಬರೋಬರಿ ಅವ...ಸೋಮವಾರ ನಿಂದು ನಿಶ್ಚಾ (Engagement) ಮಾಡಿತಿವಿ “

ಹುಡುಗಂಗ ಇನ್ನೇನ ಹೇಳಬೇಕು ಗೊತ್ತಾಗಲ್ಲಿಲ್ಲ ಸಾವಕಾಶ ಗಂಟಲು ಕೆರ್ಕೊಂಡು “ನಾ ಸೋಮವಾರ ರಜಾ ತೊಗೊಂಡಿಲ್ಲಾ ನಮ್ಮ ಮ್ಯಾನೇಜರಗ ಹೇಳಿಲ್ಲ” ಅಂತಂದ.

ಅವರ ಅಪ್ಪ “ಹೌದ? ನಿಮ್ಮ ಮ್ಯಾನೇಜರಗ ಫೋನ ಮಾಡು, ನಂದು ನಿಶ್ಚಾ ಅದರಿ..ಅದಕ ಸೋಮವಾರ ರಜಾ ಕೊಡ್ರಿ ಅಂತ ಹೇಳು...ಇಲ್ಲಾ ಅವಂದು ಫೋನ ನಂಬರ್ ಕೊಡು ನಾನೇ ಮಾತಾಡ್ತೀನಿ”

ಹುಡುಗ ಶ್ಯಾಣೆ, ಅಪ್ಪನ ಒಂದೇ ಮಾತಿಗಿ ....ಎಲ್ಲಾ...ತಿಳ್ಕೊಂಡ..ಅರ್ಥ ಮಾಡ್ಕೊಂಡ.

ಹುಡುಗ ತಾಬಡ-ತೋಬಡ ಮ್ಯಾನೇಜರಗಿ ಫೋನ ಮಾಡಿದ,

“ನಿಂದು ಎಂಗೆಜಮೆಂಟ್ ನಿಂಗೆ ಗೊತ್ತಿರಲ್ಲಿಲ್ಲಾ ಅಂದ್ರ ..ನಾ ನಂಬಗಿಲ್ಲಾ...ಲಿವ್ ಪ್ಲ್ಯಾನ್ ಮೊದ್ಲೇ ಮಾಡ್ಕೊಬೇಕಿತ್ತು...” ಅಂತಾ ಮ್ಯಾನೇಜರ್ ಕೂಗಾಡಿದ.....

ಈಗ ನಮ್ಮ ಹುಡುಗ, ಊರ ಹೊರಗ ಒಂದು ಅಪಾರ್ಟ್ಮೆಂಟ್ ತೊಗೊಂಡಾನ. ಇನ್ನೊಂದ ಎರಡು ತಿಂಗಳಿಗೆ ಅಪ್ಪ ಆಗವನಿದ್ದಾನ. ಆದ್ರ ಎಂಗೆಜಮೆಂಟ್ ಆಗೋದು ಗೊತ್ತಿರಲ್ಲಿಲ್ಲ ಅಂತ “ಸುಳ್ಳ” ಹೇಳಿದ್ದಕ್ಕ ಅವನ ಮ್ಯಾನೇಜರನ ಸಿಟ್ಟ ಮಾತ್ರ ಇನ್ನಾ ಕಮ್ಮಿ ಆಗಿಲ್ಲಂತ.

ಭಾನುವಾರ, ಡಿಸೆಂಬರ್ 23, 2012

ದೀಪಾವಳಿ ಹಬ್ಬಾ ಮಾಡೊಣು


ದೀಪಾವಳಿ ಹಬ್ಬಾ ಮಾಡೊಣು

-ಗುರುರಾಜ ಕುಲಕರ್ಣಿ (ನಾಡಗೌಡ)



ಅಮಾವಸಿ ಕತ್ತಲಿಯೊಳಗ ಸಾಲ-ಸಾಲಾಗಿ ದೀಪ ಹಚ್ಚಿ
ಬೆಳಕು ತರೊಣು
ದೀಪಾವಳಿ ಹಬ್ಬಾ ಮಾಡೊಣು ||

ಮನಿಯೊಳಗಿನ ಧೂಳ-ಕಸ ಹೊರಗ ಚೆಲ್ಲೊಣು
ಬಾಳಿಗಿಡ, ತೆಂಗಿನ ಗರಿ,ಹೂವಿನ ಮಾಲಿ, ಬಾಗಿಲಿಗಿ ಕಟ್ಟೊಣು
ದೀಪಾವಳಿ ಹಬ್ಬಾ ಮಾಡೊಣು ||

ಅಕ್ಕನ ತದಿಗಿ, ಭಾವನ ಬಿದಿಗಿ, ನೀರು ತುಂಬು ಹಬ್ಬಾ ಮಾಡೊಣು,
ಮನಿಯವರಿಗೆಲ್ಲಾ ಆರತಿ, ದೇವರಿಗಿ ಮಂಗಾಳರತಿ ಮಾಡೊಣು,
ದೀಪಾವಳಿ ಹಬ್ಬಾ ಮಾಡೊಣು ||

ಅಮ್ಮ ಮಾಡಿಟ್ಟಿದ್ದ ಚಕ್ಕಲಿ ಉಂಡಿ ಫರಾಳ ತಿನ್ನೊಣು,
ಭೂಚಕ್ರ, ಸುರುಸುರು ಬತ್ತಿ, ಪಟಾಕಿ ಹೊಡಿಯೊಣು,
ದೀಪಾವಳಿ ಹಬ್ಬಾ ಮಾಡೊಣು||

ದೊಡ್ಡವರು, ಸಣ್ಣವರು, ಎಲ್ಲಾರು ಅಂಗಡಿಗಿ ಹೊಗೊಣು,
ಹೊಸಾ ಹೊಸಾ ಬಟ್ಟೆ ತಂದು-ಹಾಕೊಂಡು, ಗತ್ತು ತೊರಿಸೊಣು
ದೀಪಾವಳಿ ಹಬ್ಬಾ ಮಾಡೊಣು||

ಸಿಟ್ಟ ಸೆಡವ ಮಾಡ್ಕೊಂಡು ದೂರ ಇದ್ದವರಿಗೆ ಹತ್ತರ ಕರಿಯೋಣು
ಅಕ್ಕ ಪಕ್ಕದವರು, ಮನಿವರೆಲ್ಲಾ ಕಡಬು ತಿಂದು ಸಂತೋಷ ಪಡೋಣು
ದೀಪಾವಳಿ ಹಬ್ಬಾ ಮಾಡೊಣು||

ಚಿಂತೆ-ದುಃಖ ಮರೆತು,ಲಕ್ಷ್ಮೀ ಪೂಜಾ ಮಾಡೊಣು,
ನಾಳೆ ನಮ್ಮದೇ ಅಂತಾ ಸೆಡ್ಡು ಹೊಡ್ಕೊಂಡು
ದೀಪಾವಳಿ ಹಬ್ಬಾ ಮಾಡೊಣು||    
******
-೨೦೧೨ ವರ್ಷದ ದೀಪಾವಳಿಗಿ ಬ್ರಸಲ್ಸ್ ನಿಂದ ಸಿಂದಗಿಗೆ ಹೊಗೊ ತಯಾರಿ ನಡೆಸಿದಾಗ ಅನ್ಸಿದ್ದನ್ನ ಕವನದ ರೂಪದಾಗ ಬರೆದ್ದಿದ್ದು. ಸಿಂದಗಿಯೊಳಗೆ ದೀಪಾವಳಿ ಮಾಡೊದು ಅಂದ್ರ...ಸಂತೋಷನೊ ಸಂತೋಷ...ಕಳೆದ ಇಪ್ಪತ್ತು - ಇಪ್ಪೈತ್ತೈದು ವರ್ಷದೊಳಗ ಒಂದೊ-ಎರಡೊ ಸರ್ತಿ ತಪ್ಪಸಕೊಂಡಿನಿ ಅಷ್ಟೆ.

ಸಿಂದಗಿ ಬ್ಯಾಸಗಿ ಅಂದ್ರ...

ಸಿಂದಗಿ ಬ್ಯಾಸಗಿ ಅಂದ್ರ..

 


-ಗುರುರಾಜ ಕುಲಕರ್ಣಿ(ನಾಡಗೌಡ) 



ಸಿಂದಗಿ ಬ್ಯಾಸಗಿ ಅಂದ್ರ,
ಮುಂಜಾನೇನೆ ಶುರು ಆಗೊ ರಣ ರಣ ಬಿಸಿಲು,
ರಾತ್ರಿ ಆದ್ರೂನು ಸುಡು ಸುಡು ನೆಲ,
ಟೇಬಲ್ ಮ್ಯಾಲ್ ಸುಮ್ಮನೆ ಕೂತಿರೊ ಫ಼್ಯಾನು,
ಅಲ್ಲಾಡದೆ ನಿಂತಿರೊ ಗಿಡದ ಟೊಂಗೆ,
ಬೆವರಿನೊಳಗ ನೆಂದಿರೊ ಕರಿ, ಬಿಳಿ ಟೊಪಿಗೆಗಳು;

ಸಿಂದಗಿ ಬ್ಯಾಸಗಿ ಅಂದ್ರ,
ಮಣ್ಣೂರ ಸರ್, ವಾಡೆ ಸರ್ ಪುಸ್ತಕದ ಅಂಗಡಿ ಮುಂದ ನಿಂತಿರೊ ಹುಡುಗ್ರು,
ಪರೀಕ್ಷಾ ತಯಾರಿ, ಕ್ಲಿಪ್ ಬೋರ್ಡ, ಹೊಸಾ ಪೆನ್, ಕೆಂಪ ಮಸಿ ಬಾಟಲಿ,
ನಟರಾಜ್ ಪೆನ್ಸಿಲ್, ಲೇಖಕ್ ನೋಟ ಬುಕ್, ಬಿಳಿ ಹಾಳಿ ಖರೀದಿ;

ಸಿಂದಗಿ ಬ್ಯಾಸಗಿ ಅಂದ್ರ, 
ಜೋಗೂರ ಬಸುನ ಹೊಲದ್ದು ಮಾವಿನ ಹಣ್ಣ್,
ಸಿದಗೊಂಡಪ್ಪನವರ್ ತ್ವಾಟದಾಗಿನ ದ್ರಾಕ್ಷಿ,
ಬಜ಼ಾರದಾಗ ಕೂತು, ಬುಡ್ಡಿ-ಮಾ ಮಾರೊ "ಕಾಶಿ" ಬಾರಿಹಣ್ಣ್,
ಗಾರೆಗಾರ್- ಲಾಲ್‍ವಾಲದೊನ್ ಒತ್ತು ಬಂಡಿ;

ಸಿಂದಗಿ ಬ್ಯಾಸಗಿ ಅಂದ್ರ,
 ಅಂಗಡಿಗೋಳ ಮುಂದ ’ಚಾ’ದ ಜೋಡಿ ಬೀಡಿ ಸೇದೊರು,
ಹಣಮಂತ್ ದೇವರ್ ಗುಡಿ ಕಟ್ಟಿಗಿ ಮಲ್ಕೊಂಡ ಮುದುಕ,
ಚಡ್ಡಿ ಹಾಕ್ಕೊಳಾರದೆ ಆಡು ಸಣ್ಣ್ ಸಣ್ಣ್ ಚಿಕ್ಕೊಳು,
ಮೆಲಕಾಡಸ್ಕೊತ್ ಕೂತ ದನಗೊಳು,
ಮನಿ ಮಗ್ಗಲಾಗಿನ್ ಬೇವಿನ ಗಿಡದ ನೆರಳ;

ಸಿಂದಗಿ ಬ್ಯಾಸಗಿ ಅಂದ್ರ,
 ಎಂಟೆನೆ ಸರ್ತಿ "ಮಯೂರ" ಸಿನೆಮಾ ನೋಡ್ಲಿಕ್ಕಿ ಬಂದೊರು,
ಸೆಖಿ ತಡಿಲಾರ್ದೆ ಶರ್ಟ್ ಬಿಚ್ಚಕೊಂಡು ಕೂತು, ಸೀಟಿ ಹೊಡಿಯೊ ಹುಡುಗ್ರು,
ಕಠಾರಿ ವೀರ, ಬಾಲನಾಗಮ್ಮ, ತಾಯಿಯ ಮಡಿಲ್ಲಲ್ಲಿ ಪೋಸ್ಟರಗಳು,
ಇಂಟರವಲ್ಲ್ನಾಗ್, ನಾಸಿ ಉಮೇಶ ಮಾರೊ ಪೆಪ್ಪರಮಿಂಟು;

ಸಿಂದಗಿ ಬ್ಯಾಸಗಿ ಅಂದ್ರ,
ಜಂಬಗಿ ಸರ್ ಹೇಳಿ ಕೊಡೊ ಭಾಷಾಂತರ ಪಾಠಮಾಲೆ ಒಂದು, ಎರಡು, ಮೂರು,
ಕಪಾಟನಾಗಿರೊ ಹಳೇ ಕಸ್ತೂರಿ, ಕರ್ಮವೀರ
ಶೆಲ್ಫ್ನಾಗಿರೊ ಬೇಂದ್ರೆ, ಕಾರಂತ, ಭೈರಪ್ಪ, ಡಿವಿಜಿಯವರ ಪುಸ್ತಕಗೊಳು,
ತೊಡಿಮ್ಯಾಲಿರೊ "ಬೊಂಬೆಮನೆ", ಕೈಯೊಳಗಿರೊ "ಚಂದಮಾಮ",
"ಸುಧಾ"ದಾಗಿನ ಫ್ಯಾಂಟಮ್, "ಕರ್ಮವೀರ"ನಾಗಿನ ವಿಕ್ರಮ;

ಸಿಂದಗಿ ಬ್ಯಾಸಗಿ ಅಂದ್ರ, 
 ಅಮ್ಮ ಮಾಡಿದ ಉಳ್ಳಾಗಡ್ಡಿ, ಟೊಮೇಟೊ ಹುಳಿ,
ಗೊಲಿಗುಂಡ ಆಡಿದ್ದಕ್ಕ ದಾದಾ ಕೊಟ್ಟ ಏಟು,
ಅಕ್ಕ-ಅಣ್ಣನ ಜೋಡಿ ಆಡಿದ್ದ ಕೆರಂಬೊರ್ಡು,
ಧಾರವಾಡ ಆಕಾಶವಾಣಿಯೊಳಗ ಬರೊ ಗಿಳಿವಿಂಡು;

ಸಿಂದಗಿ ಬ್ಯಾಸಗಿ ಅಂದ್ರ,
ಮುಂಜಾನೆ ಜಕ್ಕಪ್ಪಯ್ಯನೊರ ತ್ವಾಟದ ಬಾವಿ ಈಜು,
ಸಂತಿಯೊಳಗ ಮೈಬು ತಂದ ತಾಜ಼ಾ ಬೆಣ್ಣಿ,
ಬಿಸಿ ಬಿಸಿ ಭಕ್ಕರಿ ಪಲ್ಯ ಊಟ-ಮಧ್ಯಾಹ್ನದ ನಿದ್ದಿ,
ಸಂಜಿಮುಂದ ಆಡೊ, ಬುಗುರಿ, ಚಿಣದಾಂಡ, ಗೊಲಿಗುಂಡ,
ರಾತ್ರಿ ಮುಗಿಲಾನಾಗ ಕಾಣೊ ಬೆಳ್ಳಗಿನ ಚಂದ್ರಾಮ;

ಸಿಂದಗಿ ಬ್ಯಾಸಗಿ ಅಂದ್ರ,
ಅಮ್ಮ ಮಾಡೊ ನಿಂಬೆ ಹಣ್ಣಿನ ಶರಭತ್,
ದಾದಾ ಹೇಳೊ ಹಿಪ್ಪರಗಿ ಹಳೇ ಸುದ್ದಿಗಳು, ಕಥಿಗೊಳು,
ಅಣ್ಣನ ಜೋಡಿ ಆಡೊ ಬಾಡಿಗಿ ಸೈಕಲ ಆಟ,
ಗಡಿಗಿಯೊಳಗ ಇರೊ ತಣ್ಣಗಿನ ನೀರು;

ಸಿಂದಗಿ ಬ್ಯಾಸಗಿ ಅಂದ್ರ,
ಹೋಳಿಹುಣ್ಣಿವಿಗಿ ಮಾಡೊ ಕುಳ್ಳ ಕಟ್ಟಿಗಿ ಕಳ್ಳತನ,
ಮರುದಿನ ಲಬೊ ಲಬೊ ಹೊಯ್ಕೊತ ಬಣ್ಣ ಹಾಕೊ ಗೆಳೆಯಂದ್ರು,
ಬಡಿಗೇರ ಭಗವಂತ, ಪತ್ತಾರ ಉಮೇಶ, ನಾಗೂರ ಅನಿಲ್,
ಗೋಲಾ ರವಿ, ಜೋಶಿ ರಾಮಾಚಾರಿ, ಗುಣಾರಿ ಶಿವು,
ಕುಲ್ಕರ್ಣಿ ಸಂಜೀವ, ಪಾಟೀಲ ವಿಜು,ಸಂಗಯ್ಯ, ಮನಗೂಳಿ ಅಶೋಕ

ಶಬ್ದಾರ್ಥ

ಬುಡ್ಡಿ ಮಾ - ಸಂತಿಯೊಳಗ ತರಕಾರಿ-ಹಣ್ಣು ಮಾರುತಿದ್ದ ಮುಸಲ್ಮಾನರ
ಮುದುಕಿ, ಮಕ್ಕಳಿಗೆಲ್ಲಾ ಬುಡ್ಡಿ-ಮಾ ಎಂದೇ ಪರಿಚಿತ

ಗಾರೆಗಾರ್ವಾಲ್ - ಐಸ್ ಮಾರೊನಿಗೆ ಮಕ್ಕಳು ಕೂಗೊ ಹೆಸರು

ಚಿಕ್ಕೊಳು - ಚಿಕ್ಕ ಮಕ್ಕಳು

ಕುಳ್ಳು - ಬೆರಣಿ  


ವಿನಯ ಕೃಷ್ಣಸ್ವಾಮಿ  ಫ಼ೇಸ್ ಬುಕ್ ನಾಗ "ಗುರುವಾಯುರನ ಕೆರೆ" ಬಗ್ಗೆ ಓದಿ ಅಪ್‍ಡೇಟ್ ಮಾಡಿದ್ದು ನೋಡಿ, ನನ್ನೂರ ಸಿಂದಗಿ ನೆನಪಾಯಿತು.

ಮಲೆನಾಡಿನವರಿಗಿ ಬರಿಲ್ಲಿಕ್ಕಿ ಹಸಿರ ಹುಲ್ಲ, ಗುಡ್ಡ ಮತ್ತ ನೀರು ಅವ, ಕಾಡು ಅದ...ಆದ್ರ ಬಯಲ ಸೀಮಿಯೊಳಗ ಹುಟ್ಟಿ ಬೆಳೆದ ನನ್ನಂತಹವರಿಗಿ...ಬ್ಯಾಸಗಿ ಬಿಸಿಲ ಬಿಟ್ಟು ಬರಿಲಿಕ್ಕಿ ಏನೂ ಇಲ್ಲಾ...

ಏನೂ ಇಲ್ಲಾ ಅಂದ್ರೂನು...ನನ್ನೂರಾಗ ನನ್ನ ಬಾಲ್ಯ ಅದ..ಗೆಳೆಯಿಂದ್ರು ಇದ್ದಾರ...ಗೆಳೆತನ ಅದ..ಮಜ಼ಾ ಅದ...ಅದನ್ನೇ ಬರೆದೆ..ಕವನ ಆಯಿತು...